ಬುಧವಾರ, ಆಗಸ್ಟ್ 29, 2007

ಬೋಡಿಲಿಂಗ

ಭರ್ರೆನ್ನುತ್ತಾ ಬರುತ್ತದೆ ಬಿ.ಎಂ.ಟಿ.ಸಿ ಬಸ್ಸು. ತಕ್ಷಣವೇ ಏನೋ ಆಯಿತೆನ್ನುವ ಹಾಗೆ ಜನರ ಗುಂಪು ಆ ಕಡೆಗೆ ಓಡುತ್ತದೆ. ಒಂದೇ ಸಮನೆ ಬಾಗಿಲಲ್ಲಿ ನೂಕಾಟ, ತಳ್ಳಾಟ, ತಿಕ್ಕಾಟ. ಎಲ್ಲರಿಗೂ ಸೀಟು ಹಿಡಿಯುವ ತವಕ. ಡ್ರೈವರ್ರು, ಕಂಡಕ್ಟರ್ರು ಮೂಕ ಪ್ರೇಕ್ಷಕರು. ದಿನಾ ಸಾಯುವವರಿಗೆ ಅತ್ತೂ ಅತ್ತೂ ಅವರೂ ಸತ್ತಿದ್ದಾರೆ. ಹೇಗೋ ಸಾವರಿಸಿಕೊಂಡು ಈತನೂ ಹತ್ತುತ್ತಾನೆ. ಬಾಗಿಲಲ್ಲೇ ಮುಕುರಿಕೊಂಡ ಜನ. ಒಳಗೆ ಜಾಗವಿದ್ದರೂ ಅಲ್ಲೇ ಅಂಟು ಹಾಕಿಕೊಂಡು ನಿಂತಿದ್ದಾರೆ. ಕೇಳಿದರೆ ಎಲ್ಲರೂ ನೆಕ್ಸ್ಟ್ ಸ್ಟಾಪು ! “ಒಳಗೆ ಹೋಗ್ರಿ, ಹಿಂದಕ್ಕೆ ಹೋಗ್ರಿ ಖಾಲಿ ಇದೆ....” ಕಂಡಕ್ಟರನ ಕೂಗು ಅರಣ್ಯ ರೋದನ. ಇವನ ದುರಾದೃಷ್ಟ . ಸೀಟಂತೂ ಇಲ್ಲ. ಸೀಟು ಸಿಕ್ಕವರಿಗೆಲ್ಲಾ ಏನೋ ತೃಪ್ತಿ. ಇನ್ನು ಕೆಲವೆ ಹೊತ್ತಿನಲ್ಲಿ ಆ ಸೀಟಿಗೂ ನಮಗೂ ಸಂಬಂಧವಿಲ್ಲವೆಂದು ಗೊತ್ತಿದ್ದರೂ ತಾವು ಹಿಡಿದಿರುವುದು ಸಿಂಹಾಸನವೇನೋ ಎಂಬಂತ ಭಾವ.“ಯೋ ನಿಂಗ್ಯಾವನಯ್ಯ ಬ್ಯಾಗ್ ಇಡಕ್ಕೇಳಿದ್ದು ? ಸಿಟಿ ಬಸ್ಸಲ್ಲಿ ರಿಸರ್ವೇಷನ್ ಇಲ್ಲ ಹೋಗಯ್ಯ” ಮೂರನೇ ಸಾಲಿನಲ್ಲೇನೋ ಜಗಳ. ಅದರೆಡೆಗೊಂದು ಈತನ ನಿಸ್ತೇಜ ನೋಟ. ನಿಂತುಕೊಳ್ಳಲಾದರೂ ಒಳ್ಳೆ ಜಾಗ ಸಿಗುತ್ತದೆಯೊ ಎಂದು ನೋಡಿದವನಿಗೆ ಹಿಂದುಗಡೆ ಕೊನೆ ಕಂಬವೊಂದು ಆಶಾಕಿರಣ. ಅವಸವಸರವಾಗಿ ಹೋಗಿ ಆ ಕಂಬಕ್ಕೆ ಬೆನ್ನು ಚೆಲ್ಲಿದವನಿಂದ ಒಂದು ಸಣ್ಣ ನಿಟ್ಟುಸಿರು.

ಕಂಬಕ್ಕೊರಗಿಯೇ ಈತ ಒಮ್ಮೆ ಸುತ್ತಲೂ ಕಣ್ಣು ಹಾಯಿಸುತ್ತಾನೆ. ಯಾರಾದರೂ ಮುಂದಿನ ಸ್ಟಾಪಿನಲ್ಲಿ ಇಳಿಯಬಹುದಾ, ತನಗೆ ಸೀಟು ಸಿಗುತ್ತದಾ? ಅವನ್ಯಾವನದೋ ಕೈಯಲ್ಲಿ ದೊಡ್ಡ ಚೀಲ, ಅವನು ಖಂಡಿತ ಇಳಿಯುವುದಿಲ್ಲ, ಬ್ಯಾಗಿನೊಳಗೆ ಕೈಹಾಕಿ ನೋಟ್ಸು ತೆಗೆಯುತ್ತಿರುವ ಕಾಲೇಜು ಹುಡುಗ, ಕೈಯಲ್ಲಿ ವಿಜಯ ಕರ್ನಾಟಕ ಹಿಡಿದು ಸೆಟ್ಲಾಗಿರುವ ಅಂಕಲ್ಲು, ಎಪ್ಫೆಮ್ ಕೇಳಲು ಕಿವಿಗೆ ಇಯರ್ ಫೋನ್ ತುರುಕಿಕೊಳ್ಳುತ್ತಿರುವ ಯುವಕ, ಕೊನೆಯ ಸಾಲಿನ ಅಷ್ಟೂ ಸೀಟುಗಳನ್ನು ಆಕ್ರಮಿಸಿ ಯುದ್ಧ ಗೆದ್ದವರಂತೆ ಕೂತು “ಲೇ ಕಿಟ್ಕಿ ತೆಗಿಲೇ, ಸರಿಲೇ ಆಕಡಿ, ಮಂದಾಕಿನಿ ಸಾಂಗ್ ಹಾಕ್ಲೇ....” ಎಂದು ಗದ್ದಲ ಮಾಡುತ್ತಿರುವ ಉತ್ತರ ಕರ್ನಾಟಕದ ಹುಡುಗರು... ಉಹೂಂ ಯಾರೂ ಹತ್ತಿರದಲ್ಲಿ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಅವನಿಗೆ ಆ ಕಂಬವೇ ಗತಿ.

ರೈಟ್ ರೈಟ್ ..... ಎಂಟ್ರಿ ಹಾಕಿಸಿ ದಡಬಡಾಯಿಸಿ ಹತ್ತಿದ ಕಂಡಕ್ಟರ್ ಕೂಗಿನ ಬೆನ್ನಲ್ಲೇ ಬಸ್ಸು ಸ್ಟಾರ್ಟಾಗುತ್ತದೆ. ತುಂಬಿ ಹರಿಯುತ್ತಿರುವ ಟ್ರಾಫಿಕ್ಕಿಗೆ ಬಸ್ಸಿನ ಸೇರ್ಪಡೆಯಾಗುತ್ತದೆ. "ಯಾರ್ರೀ ಟಿಕೆಟ್, ಪಾಸ್ ನವ್ರೆಲ್ಲಾ ಕೈಯಲ್ಲಿ ಹಿಡ್ಕಳ್ರಿ.. ಎಲ್ಲಿಗ್ರೀ ನಿಮ್ದು...ಚಿಲ್ರೆ ಕೊಡ್ರಿ... " ಅನ್ನುತ್ತಾ ಕಂಡಕ್ಟರನ ಆಗಮನ, ಅಬ್ಬರ. "ಪಾಸ್ ಪಾಸ್ ಪಾಸ್ ಪಾಸ್ ...." ಹಿಂದಿನ ಸಾಲಿನ ಹುಡುಗರೆಲ್ಲಾ ಕೈ ಎತ್ತುತ್ತಾರೆ. “ತೆಗ್ದು ತೋರ್ಸ್ಬೇಕು ಎಲ್ರೂ” ಅನ್ನುತ್ತಲೇ ಉಳಿದವರಿಗೆಲ್ಲಾ ಟಿಕೆಟ್ ಕೊಟ್ಟು ಕಂಡಕ್ಟರ್ ನಿರ್ಗಮನ ಮುಂದೆ ಹೆಂಗಸರ ಕಡೆಗೆ. ಬಾಗಿಲಲ್ಲಿ ನಿಂತವರಿಗೆ ರೂಢಿಯಂತ “ಒಳಗೋಗ್ರಿ ಖಾಲಿ ಇದೆ, ಇಲ್ಲಿ ನಿಂತ್ಕಂಡ್ಯಾಕ್ರೀ ಸಾಯ್ತೀರಾ” ಎಂಬ ಬೈಗುಳ.


೧೦ ನಿಮಿಷ, ೧೫ ನಿಮಿಷ, ೨೦ ನಿಮಿಷ ಆಯಿತು...ಬಸ್ಸು ಹೋಗುತ್ತಿದೆ..... ಸ್ಟಾಪುಗಳಲ್ಲಿ ನಿಂತು ಜನರನ್ನು ಹತ್ತಿಸಿಕೊಳ್ಳುತ್ತಾ, ಇಳಿಸುತ್ತಾ. ಈತ ಕೊನೆ ಕಂಬದಲ್ಲಿ ಅಂಟಿಕೊಂಡಿದ್ದಾನೆ. ಕಾಲುಗಳಲ್ಲಿ ಸಣ್ಣ ನೋವು. ಅದನ್ನು ಮರೆಯಲು ಹಾಡು ಕೇಳೋಣವೆಂದು ಎಪ್ಫೆಮ್ ಕಿವಿಗಿಟ್ಟುಕೊಳ್ಳುತ್ತಾನೆ. 'ಓನ್ಲಿ ಕನ್ನಡ ಸಾಂಗ್ಸ್ ಅಷ್ಟೆ' ಎಂದು ಇಂಗ್ಲೀಷಿನಲ್ಲಿ ಅರಚುತ್ತಿರುವ ಚಾನೆಲ್ ಒಂದನ್ನು ಟ್ಯೂನ್ ಮಾಡುತ್ತಾನೆ. ಅದರಲ್ಲಿ ಅದೇ “ಏನೋ ಒಂಥರಾಆಆಆಆಆಆಆಅ....” ಹಾಡು. ದಿನಾ ಅದನ್ನೇ ಕೇಳಿ ಕೇಳಿ ಬೇಜಾರಾಗಿ ಏನೋ ಒಂಥರಾ ಆಗುತ್ತಿದೆ. ಬಸ್ಸು ಸಾಗುತ್ತಿದೆ.

ಹಾಡು ಬೇಜಾರಾಗಿದೆ. ಕಂಬಕ್ಕೊರಗಿಕೊಂಡೇ ಸುತ್ತಲಿನ ಜನರನ್ನು ನೋಡುತ್ತಾನೆ. ಕಿಟಕಿಯಿಂದ ಹೊರಗೆ ನೋಡುತ್ತಾ ಸುಮ್ಮನೇ ಕುಳಿತವರ ಮುಖದಲ್ಲಿ ಶೂನ್ಯಭಾವ, ಇಯರ್ ಫೋನ್ ಕಿವಿಗಿಟ್ಟಿಕೊಂಡು ಸುಮ್ಮನೇ ಕಣ್ಣು ಮುಚ್ಚಿದ್ದಾರೊ ಅಥವಾ ನಿದ್ದೆ ಮಾಡಿದ್ದಾರೋ ಗೊತ್ತಾಗದ ಜನ,ವಿಜಯ ಕರ್ನಾಟಕ ಹಿಡಿದುಕೊಂಡವನು ಕೊನೆಯ ಪುಟಕ್ಕೆ ಬಂದಿದ್ದಾನೆ, ಅವನು ಮುಗಿಸಿದ ಕೂಡಲೇ ಇಸಿದುಕೊಳ್ಳಲು ಪಕ್ಕದವನ ತವಕ, ನೋಟ್ಸು ತಿರುವಿ ಹಾಕುತ್ತಿರುವ ಕಾಲೇಜು ಹುಡುಗನ ಮುಖದಲ್ಲಿ ಯಾವುದೋ ಪರೀಕ್ಷೆಯ ಆತಂಕ, ಜೋಲು ಮುಖಗಳು, ತನಗ್ಯಾರಾದರೂ ಸೀಟು ಬಿಟ್ಟು ಕೊಡುವರೇನೋ ಎಂದು ಎಲ್ಲಾ ಕಡೆ ತಿರುತಿರುಗಿ ನೋಡುತ್ತಿರುವ ಮುದುಕ, ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಾ, ನಗುತ್ತಿರುವವರು, ಸೀಟೊಂದಕ್ಕೆ ಒರಗಿ ನಿಂತವನ ಜೋಳಿಗೆಯಂತಾ ಚೀಲದಿಂದ ಏನೋ ಸೋರುತ್ತಿದೆ, ಬಹುಶಃ ಊಟದ ಡಬ್ಬಿಯಿಂದ ಸಾರೋ ನೀರೋ ಇರಬೇಕು, ಹಿಂದೆ ಕೇಕೆ ಮುಂದುವರಿಸಿರುವ ಹುಡುಗರು.... ಹೀಗೇ ಏನೇನೋ , ಯಾರ್ಯಾರೋ . ಎಲ್ಲಾ ದಿನಾ ಕಾಣುವಂತವೇ ಅಂದುಕೊಂಡು ಮುಖ ಕೆಳಕ್ಕೆ ಹಾಕುತ್ತಿರುವಾಗ ಎಫ್ಫೆಮ್ ನಲ್ಲಿ ಅಣ್ಣಾವ್ರ ಹಾಡು..."ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ, ಸಾಯೋತನಕ..... " ಅವನ ಮನಸ್ಸಿಗೆ ಖುಷಿಯೆನಿಸಿ ಮತ್ತೆ ಎಪ್ಫೆಮ್ನಲ್ಲಿ ತಲ್ಲೀನನಾಗುತ್ತಾನೆ.

ಇದ್ದಕ್ಕಿದ್ದಂತೇ ಬಾಗಿಲಿನ ಪಕ್ಕದ ಸೀಟಿನಲ್ಲಿ ಏನೋ ಜಗಳ, ಕೂಗಾಟ. ಎಲ್ಲರೂ ಅಲ್ಲಿ ನೋಡುತ್ತಾರೆ. ೪ ಜನ ತಮಿಳಿನಲ್ಲಿ ಏನೊ ಮಾತಾಡುತ್ತಿದ್ದಾರೆ. ಈತನಿಗೆ ತಿಳಿಯುತ್ತಿಲ್ಲ. ಆದರೂ ಅದು ಜಗಳವಲ್ಲ. ಅವರು ಮಾತಾಡುವುದೇ ಹಾಗೇ ಎಂದು ತಿಳಿಯುತ್ತದೆ, ಸಮಾಧಾನವಾಗುತ್ತದೆ. ಬಾಗಿಲಿನಲ್ಲಿ ಬಿಹಾರಿಯೊಬ್ಬ ಕೂಗುತ್ತಿದ್ದಾನೆ. ಒಳಗೆಲ್ಲೋ ಕುಳಿತ ಅವನ ಸ್ನೇಹಿತನನ್ನು ಕರೆಯುತ್ತಿದ್ದಾನೆ. ಅವರಿಗೆ ತಾವು ಹತ್ತಿದ್ದೆಲ್ಲಿ, ಇಳಿಯುವುದೆಲ್ಲಿ ಎನ್ನುವುದೂ ಗೊತ್ತಿಲ್ಲ. ಸ್ವಲ್ಪ ಹೊತ್ತು ಕಿರುಚಾಡಿ ಸುಮ್ಮನಾಗುತ್ತಾರೆ. ಯಾರದ್ದೋ ನೋಕಿಯಾ ಫೋನು ಕಿವಿ ಕೊರೆಯುವಂತೆ ಮೊಳಗುತ್ತದೆ. ಎತ್ತಿಕೊಂಡವನಿಂದ ತನ್ನ ಬಾಸಿಗೆ ಇಂಗ್ಲೀಷಿನಲ್ಲಿ ಸುಳ್ಳುಗಳ ಸುರಿಮಳೆ. ಅವನ ಮಾತಿನಿಂದ ಅವನ್ಯಾವುದೋ ವ್ಯಾಪಾರ ಮಾಡುವವನೆಂದು ತಿಳಿಯುತ್ತದೆ. ಅದೋ ಆ ೧ ಸಾಲು ಆಚೆ ಇಬ್ಬರು ಇಳಿಯಲು ಏಳುತ್ತಿದ್ದಾರೆ. ತಕ್ಷಣವೇ ಸೀಟಿಗೆ ಪೈಪೋಟಿ. ಈತನೂ ವಿಫಲ ಯತ್ನ ನೆಡೆಸುತ್ತಾನೆ. ಮತ್ತೆ ಅದೇ ಕಂಬವೇ ಗತಿಯಾಗುತ್ತದೆ. ಮತ್ತೆ ಪ್ರಯಾಣ ಮುಂದುವರೆಯುತ್ತದೆ. ಕಾಲು ನೋವು ಜೋರಾಗುತ್ತಿದೆ. ಕೈಗಳು ಸೋಲುತ್ತಿವೆ. ನಿಲ್ಲುತ್ತಾ, ಓಡುತ್ತಾ, ಮುಗ್ಗರಿಸುತ್ತಾ ಬಸ್ಸು ಸಾಗುತ್ತಿದೆ.


ನಂತರದ್ದು ಯಾವುದೋ ಮುಖ್ಯ ಸ್ಟಾಪು. ಬಸ್ಸು ನಿಲ್ಲುತ್ತಿದ್ದಂತೇ ಸುಮಾರು ಜನ ಇಳಿಯುತ್ತಾರೆ. ಈತನಿಗೆ ಕಂಬದಿಂದ ಮುಕ್ತಿ. ಕಿಟಕಿ ಪಕ್ಕದ ಸೀಟಿನಲ್ಲಿ ನೆಮ್ಮದಿಯಿಂದ ಪವಡಿಸುತ್ತಾನೆ. ಇಳಿದಷ್ಟೆ ಜನ ಮತ್ತೆ ಹತ್ತುತ್ತಾರೆ. ಬಸ್ಸು ಹೊರಡುತ್ತದೆ. ಸಹಜವಾಗಿ ದೃಷ್ಟಿ ಬಸ್ಸಿನ ಮುಂಭಾಗದತ್ತ ಹೊರಳುತ್ತದೆ. ಕಣ್ಣು ಅರಳುತ್ತದೆ. ರೇಷ್ಮೆ ಕೂದಲ ಹುಡುಗಿ !. ಮುಂದಕ್ಕೆ ಮುಖ ಮಾಡಿಕೊಂಡು ನಿಂತಿದ್ದಾಳೆ, ಹಿಂದಿನಿಂದ ಸಕತ್ ಫಿಗರ್ ! ಮುಖ ನೋಡುವ ಆಸೆಯಾಗುತ್ತದೆ. ಅರೆ, ಇಷ್ಟು ಹೊತ್ತು ಇವಳ್ಯಾಕೆ ಕಾಣಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಡ್ರೈವರ್ ಕೆಟ್ಟದಾಗಿ ಬ್ರೇಕು ಹಾಕುತ್ತಾನೆ ಯಾರನ್ನೋ ಬೈಯುತ್ತಾನೆ, ಮುಂದೆ ಸಾಗುತ್ತಾನೆ. ಈತನಿಗೆ ಆ ಹುಡುಗಿಯ ಮುಖ ನೋಡುವ ಕುತೂಹಲ. ಆಕೆ ಒಂದು ಸ್ವಲ್ಪವೂ ಹಿಂದೆ ತಿರುಗುತ್ತಿಲ್ಲ. ಗೊಂಬೆಯಂತೆ ನಿಂತಿದ್ದಾಳೆ. ಹೊತ್ತು ಕಳೆದಂತೆ ಕುತೂಹಲ ಜಾಸ್ತಿಯಾಗುತ್ತದೆ. ಕಾಯುತ್ತಾನೆ. ಕಾದೂ ಕಾದು ಬೇಸರ ಶುರುವಾಗುತ್ತದೆ. ಇದ್ದಕ್ಕಿದ್ದ ಹಾಗೇ ಯಾವುದೋ ಹುಡುಗಿ ಯಾರನ್ನೋ ಕರೆಯುತ್ತಾಳೆ. ಅಲ್ಲಿವರೆಗೆ ಮುಂದೆ ನೋಡುತ್ತಾ ನಿಂತಿದ್ದ ಹುಡುಗಿ ಹಿಂದಕ್ಕೆ ತಿರುಗುತ್ತಾಳೆ. ಈತನಿಗೆ ನಿರಾಸೆ. ಆ ಹುಡುಗಿ ನೋಡಲೂ ಚೂರೂ ಚೆನ್ನಾಗಿಲ್ಲ. ಹಿಂದಿನಿಂದ ಮಾತ್ರ ಸೊಗಸು. ಮನಸ್ಸಿನಲ್ಲೇ ಥತ್ ಎಂದುಕೊಂಡು ಕೂರುತ್ತಾನೆ.



ಹೊರಗೆ ತಲೆಕೆಡಿಸುವ ಟ್ರಾಫಿಕ್ಕು. ದಿನಾ ನೋಡಿ ಅಭ್ಯಾಸವಿರುವುದರಿಂದ ಅದರೆಡೆಗೆ ವಿಶೇಷ ಗಮನ ಹೋಗುವುದಿಲ್ಲ. ಆಗ ನೆನಪಾಗುತ್ತದೆ ತಾನು ಟೈಂಪಾಸಿಗೆ ಓದಲು ತಂದಿರುವ ಪುಸ್ತಕ. ಕವರಿನಿಂದ ಪುಸ್ತಕ ತೆಗೆದು ಓದಲು ತೊಡಗುತ್ತಾನೆ. ಕಥೆ ಆಸಕ್ತಿ ಕೆರಳಿಸುತ್ತಿದೆ. ಬಸ್ಸಿನಲ್ಲಿ ಏನಾಗುತ್ತಿದೆ ಎಂಬ ಪರಿವೆಯಿಲ. ಅದರ ಅಗತ್ಯವೂ ಇಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲೇ ಕಣ್ಣುಗಳೇಕೋ ಸೋಲುತ್ತವೆ. ಗಮನವಿಟ್ಟು ಓದಲಾಗುತ್ತಿಲ್ಲ. ಹಾಗೆಯೇ ಸೀಟಿಗೆ ತಲೆಯಾನಿಸುತ್ತಾನೆ. ಕಣ್ಣುಗಳು ತಾನಾಗೇ ಮುಚ್ಚಿಕೊಳ್ಳುತ್ತವೆ. ನಿದ್ದೆಗೆ ಜಾರುತ್ತಾನೆ. ಯಾವುದೋ ಸಿಗ್ನಲ್ಲಿನಲ್ಲಿ ಹಾಕಿದ ಬ್ರೇಕಿಗೆ ತಟ್ಟನೇ ಎಚ್ಚರಾಗುತ್ತದೆ. ತೊಡೆಮೇಲಿದ್ದ ಪುಸ್ತಕ ಬಿಡಿಸಿ ಮತ್ತೆ ಓದಲು ತೊಡಗುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಆತ ಇಳಿಯುವ ಸ್ಟಾಪು ಬರುತ್ತದೆ. ಮುಖ ಒರೆಸಿಕೊಂಡು ಬಾಗಿಲಿನ ಹತ್ತಿರ ಹೋಗುತ್ತಾನೆ. ಬಸ್ಸು ನಿಲ್ಲುತ್ತದೆ. 'ಸ್ವಯಂಚಾಲಿತ ಬಾಗಿಲು, ಕೈಯಿಂದ ತೆಗೆಯಲು ಪ್ರಯತ್ನಿಸಬೇಡಿ' ಎಂದು ಬರೆದಿರುವ ಬಾಗಿಲುಗಳು ತೆರೆದುಕೊಳ್ಳುತ್ತದೆ. ಆತನು ಇಳಿಯುತ್ತಾನೆ. ಬಸ್ಸು ಮುಂದೆ ಸಾಗುತ್ತದೆ.


ಹೀಗೆ ಆತನ ಒಂದು ಪ್ರಯಾಣ, ಒಂದು ಬೆಳಗ್ಗೆ ಈ ಬರಹದಂತೆಯೇ ಯಾವುದೇ ವಿಶೇಷವಿಲ್ಲದೇ ಮುಗಿದುಹೋಗುತ್ತದೆ.

ಕೋಟಿ ಲಿಂಗಗಳ ಮಧ್ಯದಲ್ಲೆಲ್ಲೋ ಒಂದು ಬೋಡಿ ಲಿಂಗ ಪೂಜೆಯಿಲ್ಲದೇ ಕೊರಗುತ್ತಿದೆ...ಸೊರಗುತ್ತಿದೆ.

ಬಲಿಷ್ಠ ರೂಪಾಯಿ=ಬಲಿಷ್ಠ ಭಾರತ

ಆಗಸ್ಟ ೦೭, ೨೦೦೭ ರಂದು thatskannada.com ನಲ್ಲಿ ಪ್ರಕಟವಾದ ನನ್ನದೊಂದು ಅನುವಾದಿತ ಲೇಖನ : ಭಾರತ ಆರ್ಥಿಕವಾಗಿ ಬಲಾಡ್ಯವಾಗುವುದು ಇವರಿಗೇಕೆ ಬೇಡ?

ಮೂಲ ಲೇಖಕರು: ಶ್ರೀ ಗುರುದೇವ್
ಮೂಲ ಲೇಖನ: Stronger Rupee = Stronger India


ಇವತ್ತಿನ ದಿನಗಳಲ್ಲಿ ಡಾಲರ್ ಬೆಲೆ ರೂಪಾಯಿಯ ಮುಂದೆ ಗಣನೀಯವಾಗಿ ಕುಸಿದಿದೆ. ಮೊದಲು ೧ ಡಾಲರ್ ಗೆ ಸುಮಾರು ೪೭ ರೂಪಾಯಿಗಳಷ್ಟಿದ್ದದ್ದು ಈಗ ಸುಮಾರು ೪೦ ರೂಪಾಯಿಯಾಗಿದೆ.

ಹೀಗಾಗುತ್ತಿದ್ದಂತೆ ಭಾರತದ ಐ.ಟಿ. ಕಂಪನಿಗಳು ಹಾವು ತುಳಿದಂತೆ ಬೆಚ್ಚಿಬಿದ್ದು ಆತಂಕಕ್ಕೊಳಗಾಗಿವೆ. ರೂಪಾಯಿಯ ಬೆಲೆ ಜಗತ್ತಿನ ಮಾರುಕಟ್ಟೆಯಲ್ಲಿ ಹೆಚ್ಚಾದಾಗ ಖುಷಿಯಾಗುವುದನ್ನು ಬಿಟ್ಟು ಐ.ಟಿ. ಕಂಪನಿಗಳು ಹೀಗೇಕೆ ದುಗುಡಗೊಂಡಿವೆ ಎಂಬುದನ್ನು ನೋಡಿದರೆ ಈ ಕಂಪನಿಗಳ ಲಾಭವು ನೇರವಾಗಿ ಅಮೆರಿಕದ ಕಂಪನಿಗಳು ಕೊಡುವ ಡಾಲರಗಳ ಮೇಲೆ ನಿಂತಿರುವುದು ತಿಳಿಯುತ್ತದೆ. ಈಗ ರೂಪಾಯಿಯ ಬೆಲೆ ಜಾಸ್ತಿಯಾದುದರಿಂದ ಕಂಪನಿಗಳಿಗೆ ಸಿಗುತ್ತಿದ್ದ ಡಾಲರುಗಳು ರೂಪಾಯಿಗಳಿಗೆ ಪರಿವರ್ತಿತವಾದಾಗ ಸಿಗುತ್ತಿದ್ದ ಲಾಭ ಕಡಿಮೆಯಾಗಿದೆ. ದೇಶದ ಆರ್ಥಿಕತೆಯು ಗಟ್ಟಿಯಾಗುತ್ತಿರುವುದರಿಂದ ದೇಶವು ಸಂಭ್ರಮಮಿಸುತ್ತಿರುವಾಗ ಈ ಐ.ಟಿ ಕಂಪನಿಗಳು ಈ ಬೆಳವಣಿಗೆಯಿಂದ ತಮ್ಮ ಲಾಭಕ್ಕಾದ ಅಲ್ಪಹಾನಿಯನ್ನು ತುಂಬಿಕೊಳ್ಳುವುದಕ್ಕೋಸ್ಕರ ತಮ್ಮ ಉದ್ಯೋಗಿಗಳನ್ನು ವಾರಕ್ಕೆ ಇನ್ನೂ ಒಂದು ದಿನ ಹೆಚ್ಚು ದುಡಿಸಿಕೊಳ್ಳಲು ಯೋಜನೆ ರೂಪಿಸುತ್ತಿವೆ. ಈ ಮೂಲಕ ಹೆಚ್ಚಿನ ಕೆಲಸ ಮಾಡಿ ತಮ್ಮ ಲಾಭವನ್ನು ಸರಿದೂಗಿಸಿಕೊಳ್ಳುವುದು ಅವುಗಳ ತಂತ್ರ.

ನಾವು ಯೋಚಿಸಬೇಕಾದುದೇನೆಂದರೆ ಈ ಐ.ಟಿ. ಕಂಪನಿಗಳು ಡಾಲರಿನ ಬೆಲೆ ಬಿದ್ದುದಕ್ಕೆ ಆತಂಕಗೊಂಡು ಹುಯಿಲಿಡುವ ಬದಲು ನಮ್ಮ ದೇಶಕ್ಕೆ ಸದೃಢ ಆರ್ಥಿಕತೆಯನ್ನು (strong economy) ತಂದುಕೊಳ್ಳುವಂತ ಸ್ವಾಭಿಮಾನಿ ಕೆಲಸಗಳಲ್ಲೇಕೆ ತೊಡಗುತ್ತಿಲ್ಲ ಎನ್ನುವುದು !

ಇದೆಲ್ಲಕ್ಕಿಂದ ಮೊದಲು ನಮ್ಮ ದೇಶಕ್ಕೆ ಯಾವರೀತಿ ಆರ್ಥಿಕ ಸಧೃಡತೆ (economic strength) ಬೇಕು ಎಂಬುದನ್ನು ಯೋಚಿಸೋಣ.

ಅ) ವಿದೇಶಿ ಕಂಪನಿಗಳು ಕೊಡುವ ಕೆಲಸಗಳನ್ನು ಮಾಡುತ್ತಾ , ಅವರು ಉನ್ನತ ತಂತ್ರಜ್ಞಾನದ ಕೆಲಸದಲ್ಲಿ ತೊಡಗಿರುವಾಗ ಅವರ ಕೆಲಸಗಳಿಗೆ support, service, maintenance ಕೆಲಸಗಳನ್ನು ಮಾಡುತ್ತಾ, ಅವರು ಹೇಳಿದ ಬದಲಾವಣೆಗಳನ್ನು ಮಾಡುತ್ತಾ, ಅವರಿಗೆ ಬೇಕಾದ software ಇತ್ಯಾದಿ product ಗಳಿಗೆ coding ಮಾಡುತ್ತಾ, ತಡರಾತ್ರಿಯವರೆಗೆ, ರಾತ್ರಿ ಪಾಳಿಯಲ್ಲಿ ದುಡಿಯುತ್ತಾ , ಒಟ್ಟಾರೆ ಇಂತಹ low profile ಕೆಲಸಗಳಿಗೆ ತಕ್ಕುದಾದ ಅಗ್ಗದ ಮಾನವ ಸಂಪನ್ಮೂಲಗಳಿಂದ ನಿರ್ಮಾಣಗೊಳ್ಳುವ ಆರ್ಥಿಕತೆ ಬೇಕೆ?

ಅಥವಾ

ಬ) ನಮ್ಮದೇ ಆದ ಸೃಜನಶೀಲ, ಕ್ರಿಯಾತ್ಮಕ ಕೆಲಸಗಳನ್ನು ಮಾಡುತ್ತಾ, ಹೊಸ ಹೊಸ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಾ, ಭಾರತದ ಉತ್ಪನ್ನಗಳಿಗೆ (software / product) ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಬರುವಂತೆ ಮಾಡಿ , ಎಷ್ಟು ಡಾಲರುಗಳಿಗೆ ಎಷ್ಟು ರೂಪಾಯಿಯೆಂದು ತಲೆಕೆಡಿಸಿಕೊಳ್ಳದೇ ದಿನದ ಸಮಯದಲ್ಲಿ ದುಡಿದು ಉಳಿದ ಸಮಯವನ್ನು ವೈಯಕ್ತಿಕ, ಸಾಮಾಜಿಕ ಜೀವನಕ್ಕೆ ತೊಡಗಿಸಿಕೊಂಡು ಬದುಕುವ ಸ್ವಾವಲಂಬೀ ಆರ್ಥಿಕತೆ ಬೇಕೆ?

ನಿಜವಾಗಿಯೂ ನೋಡಿದರೆ ಇವತ್ತಿನ ಅರ್ಥಿಕತೆ ಬೆಳೆದು ನಿಂತಿದ್ದು , ಭಾರತ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವುದು ಎಲ್ಲವೂ ಮೊದಲನೆಯ (ಅ) ರೀತಿಯ ಆರ್ಥಿಕತೆಯಿಂದ ಅನ್ನುವುದರಲ್ಲಿ ಸಂಶಯವಿಲ್ಲ. ಬೇರೆ ದೇಶಗಳಿಂದ ನಮಗೆ ಕೆಲಸಗಳು, ಗುತ್ತಿಗೆಗಳು ಹರಿದು ಬಂದಿದ್ದು, ಬರುತ್ತಿರುವುದು ಎಲ್ಲವೂ ಇಲ್ಲಿ ಸಿಗುವ ಅಗ್ಗದ ಮಾನವ ಸಂಪನ್ಮೂಲದಿಂದ ಎಂಬುದೂ ಸತ್ಯ. ಇಷ್ಟು ದಿನವೇನೋ ಹೀಗಾಯಿತು. ಆದರೆ ನಾವು ಶಾಶ್ವತವಾಗಿ ಇದೇ ರೀತಿಯಲ್ಲೆ ಉಳಿಯಬೇಕೆ? ನಾವು ಅಗ್ಗದ ಸಂಪನ್ಮೂಲವೆಂದು ಅನಿಸಿಕೊಂಡಿರುವುದಕ್ಕೇ ಕಾರಣವೇ ನಮ್ಮ ದುರ್ಬಲ ಆರ್ಥಿಕತೆ. ಇವತ್ತು ನಾವು ಅಮೆರಿಕದಲ್ಲಿ ಏನಾದರೂ ಆದರೆ ಅಲ್ಲಿನ ನೇರ ಪರಿಣಾಮ ಇಲ್ಲಿ ಅನುಭವಿಸುತ್ತೇವೆ, ಡಾಲರ್ ಎದುರು ರೂಪಾಯಿ ಚಿಗಿತುಕೊಂಡರೆ ಆತಂಕಕ್ಕೊಳಗಾಗುತ್ತೇವೆ !

ಎಂತಾ ವಿಪರ್ಯಾಸ !!

೧೯೪೭ ರಲ್ಲಿ ಸ್ವಾತಂತ್ರ್ಯ ಬಂದಾಗ ಒಂದು ಡಾಲರು = ಒಂದು ರೂಪಾಯಿ ಆಗಿತ್ತು ಎಂಬುದು ಎಷ್ಟು ಜನರಿಗೆ ಗೊತ್ತು? ಆದರೆ ಅದೇ ಆರ್ಥಿಕತೆಯನ್ನು ನಾವೇಕೆ ಉಳಿಸಿಕೊಳ್ಳಲು ಆಗಲಿಲ್ಲ?

ನಮ್ಮಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ, ನಮಗೆ ಬೇಕಾಗುವ ಎಲ್ಲಾ ವಸ್ತುಗಳನ್ನು / ತಂತ್ರಜ್ಞಾನಗಳನ್ನು ನಾವೇ ತಯಾರು ಮಾಡಿಕೊಳ್ಳುವಷ್ಟು ಮಟ್ಟಿಗೆ ನಮ್ಮಲ್ಲಿ skilled , unskilled resource ಇದೆ. ಈ ಐ.ಟಿ ಕಂಪನಿಗಳು ಈಗಲಾದರೂ ಡಾಲರ್ ಬೆಲೆ ಮೇಲೆ ಅವಲಂಬಿತವಾಗುವುದನ್ನು ಬಿಟ್ಟು ಇಲ್ಲಿಯೇ ಹೊಸ ಸಾಫ್ಟ್ ವೇರ್/ ಟೆಕ್ನಾಲಜಿ ಗಳನ್ನು ತಯಾರಿಸುವ ಕೆಲಸಗಳಲ್ಲಿ ತೊಡಗಬೇಕು. ಇದುವರೆಗೂ ಈ ಕಂಪನಿಗಳು ಇಂತಹ ಹೊಸದನ್ನು ಮಾಡಿರುವುದು ಬಹಳ ಕಡಿಮೆ. ನಮ್ಮಲ್ಲೇಕೆ ಇದುವರೆಗೂ Operating Systems, Compilers, database systems, development platforms ಇತ್ಯಾದಿಗಳು ತಯಾರಾಗುತ್ತಿಲ್ಲ? ನಮ್ಮಲ್ಲೇಕೆ Photoshop, Flash ಇತ್ಯಾದಿ Tool ಗಳು ಹೊರಬರುತ್ತಿಲ್ಲ?

ನಮ್ಮಲ್ಲಿ ಇದನ್ನೆಲ್ಲಾ ಮಾಡುವ ಪ್ರತಿಭೆ, ತಾಕತ್ತು, ಸವಲತ್ತು ಎಲ್ಲವೂ ಇದೆ. ಆದರೆ ನಾವು ಮಾಡುತ್ತಿರುವುದು ಅಮೆರಿಕದ ಕಂಪನಿಗಳಿಗೆ. ನಮ್ಮಿಂದ ಅಗ್ಗದ ಬೆಲೆಗೆ ಮಾಡಿಸಿಕೊಂಡು ಅವರು ಅದೇ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಿ ಹೆಚ್ಚಿನ ಲಾಭ ತಂದುಕೊಳ್ಳುತ್ತಾರೆ. ಉದಾಹರಣೆಗೆ: ಬೋಯಿಂಗ್, ಏರ್ ಬಸ್ ವಿಮಾನಗಳ low end ಕೆಲಸಗಳು ಭಾರತದ ಕಂಪನಿಗಳಲ್ಲಿ ನೆಡೆಯುತ್ತಿವೆ. ಆದರೆ ಅದೇ ವಿಮಾನಗಳ high end ಕೆಲಸಗಳು ನೆಡೆಯುತ್ತಿರುವುದು ವಿದೇಶಗಳಲ್ಲಿ. ನಮಗೆ ಅಂತಹ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದ್ದರೂ ಸಹ ಅವರ ಕೆಲಸಗಳನ್ನು ಮಾಡಿಕೊಟ್ಟು ನಂತರ ಅದನ್ನೇ ನಾವು ದುಬಾರಿ ಬೆಲೆಗೆ ಕೊಂಡುಕೊಳ್ಳುತ್ತಿದ್ದೇವೆ. ಅದರ ಬದಲು ನಮ್ಮ ಕಂಪನಿಗಳೇ ತಮ್ಮಲ್ಲೇ ಇಂತಹ ಉತ್ಪನ್ನ (software, other product) ಗಳನ್ನು ತಯಾರು ಮಾಡುವ ಕೆಲಸದಲ್ಲೇಕೆ ತೊಡಗಬಾರದು. ಕೊನೆ ಪಕ್ಷ ಈ ಕೆಲಸಕ್ಕಾಗಿ ತಮ್ಮ ಕಂಪನಿಗಳಲ್ಲಿ ಒಂದು ಸಣ್ಣ ವಿಭಾಗವನ್ನೇಕೆ ತೆರೆಯಬಾರದು.?

ಭಾರತವು ಸೂಪರ್ ಪವರ್ ಆಗಬೇಕು , ವಿಶ್ವದ ಮುಂಚೂಣಿಯಲ್ಲಿರುವ ದೇಶಗಳ ಸಾಲಿನಲ್ಲಿ ನಿಲ್ಲಬೇಕೆಂದು ಬಯಸುತ್ತೇವೆ. ಹೀಗೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಒಂದು ಬಲಿಷ್ಠ economy ಹೊರತು ಬೇರೇನಲ್ಲ. ಆದರೆ ಹೀಗೆ ನಮ್ಮ week currencyಯನ್ನೆ ಬಂಡವಾಳ ಮಾಡಿಕೊಂಡು ಮುಂದುವರೆಯುತ್ತಾ ಹೋದರೆ ನಮ್ಮ ಆರ್ಥಿಕತೆ ಬೆಳೆಯುವುದು ಸಾಧ್ಯವೇ ಇರುವುದಿಲ್ಲ. ನಮ್ಮ ರೂಪಾಯಿ ಮೌಲ್ಯ ದಿನೇ ದಿನೇ ಹೆಚ್ಚ ಬೇಕು. Low profile ಕೆಲಸಗಳಲ್ಲಿ ತೊಡಗುವುದನ್ನು ಬಿಟ್ಟು ಕ್ರಿಯಾತ್ಮಕ ಕೆಲಸಗಳಲ್ಲಿ, ಉನ್ನತ ತಂತ್ರಜ್ಞಾನದ ಕೆಲಸಗಳಲ್ಲಿ, ನಮ್ಮ ದೇಶಕ್ಕೆ, ನಮ್ಮ ಆರ್ಥಿಕತೆಗೆ ಉಪಯೋಗವಾಗುವಂತಹ ಕೆಲಸಗಳಲ್ಲಿ ತೊಡಗಬೇಕು. ಇವು ಬರೀ ಸಾಫ್ಟ್ ವೇರ್ ಗೆ ಸೀಮಿತವಾಗಬೇಕಿಲ್ಲ. ಕೃಷಿಯಿಂದ ಹಿಡಿದು ಬಾಹ್ಯಾಕಾಶದವರೆಗೂ ಹೀಗಾಗಬೇಕು. ನಮ್ಮ ಉತ್ಪನ್ನಗಳನ್ನು , ನಮ್ಮ software, tool ಗಳನ್ನು ಕೊಳ್ಳಲು , ನಮ್ಮಲ್ಲಿ ತಯಾರಾದ ಮೊಬೈಲು, ವಿಮಾನ, ಆಟೊಮೊಬೈಲುಗಳನ್ನು ಕೊಳ್ಳಲು ಇತರ ರಾಷ್ಟ್ರಗಳು ತವಕಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು.

ರೂಪಾಯಿ ಬೆಲೆ ಹೆಚ್ಚಾದಾಗ ನಾವು ಬೋಯಿಂಗ್ ವಿಮಾನ ಕೊಳ್ಳಲು ಕೋಟ್ಯಂತರ ರೂಪಾಯಿ ಸುರಿಯಬೇಕಿಲ್ಲ. ವಿದೇಶ ಪ್ರಯಾಣಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿಲ್ಲ. ಸುಲಭವಾಗಿ ಯಾವ ದೇಶಕ್ಕಾದರೂ ಹೋಗಬಹುದು. ಜಗತ್ತಿನ ಯಾವುದೇ ವಸ್ತುವಿನ ಬೆಲೆಯಾದರೂ ನಮ್ಮ ಕೈಗೆಟುಕುವ ಮಟ್ಟ ತಲುಪುತ್ತದೆ. ಮಾರುತಿ ಕಾರು ಹಾಗೂ ಬೆಂಜ್ ಕಾರು ಕೊಳ್ಳುವುದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಾವು ಕುಲು ಮನಾಲಿಗೆ ಪ್ರವಾಸ ಹೋಗುವಂತೆ ಸ್ವಿಡ್ಜರ್ಲ್ಯಾಂಡಿಗೂ ಪ್ರವಾಸ ಹೋಗಬಹುದು. ಅಮೆರಿಕಾದ ಜನರು ಸುಲಭ ವಿಶ್ವ ಪ್ರವಾಸ ಮಾಡಲು ಕಾರಣವಾಗಿರುವುದು ಅವರು ಹೆಚ್ಚು ದುಡಿಯುತ್ತಾರೆ, ಗಳಿಸುತ್ತಾರೆ ಎಂಬುದು ಅಲ್ಲ. ಬದಲಾಗಿ ಅವರ ಕರೆನ್ಸಿಗಿರುವ ಮೌಲ್ಯದಿಂದ. ರೂಪಾಯಿಯ ಮೌಲ್ಯವು ಹೆಚ್ಚಾದಾಗ ನಮಗೆ ಇವೆಲ್ಲವೂ ಸಾಧ್ಯವಾಗುತ್ತದೆ.

Low End ಕೆಲಸಗಳನ್ನು ಮಾಡುವುದು ತಪ್ಪಲ್ಲ. ಆದರೆ ಅದರ ಮೇಲೆ ಅವಲಂಬಿತವಾಗಿ ಉಳಿದು ಬಿಡುವ ಬದಲು ಕ್ರಿಯಾತ್ಮಕ ಕೆಲಸಗಳಿಂದ, ಸಂಶೋಧನೆಗಳಿಂದ, ಉತ್ಪನ್ನಗಳಿಂದ ನಮ್ಮ ಸ್ವಾವಲಂಬಿ ಬಲಿಷ್ಠ ಆರ್ಥಿಕತೆಯನ್ನು ನಿರ್ಮಿಸಿಕೊಳ್ಳುವ ಯಶಸ್ಸಿನ ಪಥದಲ್ಲಿ ಸಾಗೋಣ.

ಆ ನಿಟ್ಟಿನಲ್ಲಿ ಪ್ರಯಾಣ ಈಗ ಆರಂಭಗೊಂಡಿದೆ.
ಇದು ಎಲ್ಲದಕ್ಕೂ ನಾಂದಿಯಾಗಲಿ.