ಶುಕ್ರವಾರ, ಜೂನ್ 20, 2008

ಊರಿಗೇ ಒಂದು ದಾರಿಯಾದ್ರೆ ಪೋರನಿಗೇ ಒಂದು ದಾರಿ !


ಚಿತ್ರ ನೋಡಿ. ಆಟೋ ಸಿಸ್ಯ ಏನೋ ಸಂದೇಶ ಕೊಡ್ತಿದ್ದಾನೆ. ನಿನ್ನೆ ಟ್ರಾಫಿಕ್ ಸಿಗ್ನಲ್ಲಲ್ಲಿ ನಿಂತಾಗ ಎದುರುಗಡೆ ಕಾಣಿಸಿತು. ತಕ್ಷಣ ಕಟ್ಟೆ ಶಂಕ್ರ ಅವರು ಮೈಮೇಲೆ ಬಂದಂತಾಗಿ ಫೋನ್ ಕ್ಯಾಮೆರಾದಿಂದ ಫೋಟೋ ತೆಗೆದುಕೊಂಡೆ. :) "ಊರಿಗೇ ಒಂದು ದಾರಿಯಾದರೆ ಈ ಪೋರನಿಗೇ ಒಂದು ದಾರಿಯಂತೆ " ಅನ್ನುವ ಹಾಗಿದೆ ಇದು. ಹಿಂಗಾದ್ರೆ ಆ ತಿರುಪತಿ ಎಂಕಟ್ರಮಣನೇ ಕಾಪಾಡ್ಬೇಕು.

ಆದ್ರೂ...ಟ್ರಾಫಿಕ್ ಸಿಗ್ನಲ್ಲಲ್ಲಿ ಇಂತವೆಲ್ಲ ಇದ್ರೆ ಕಾಯೋದಕ್ಕೂ ಬೇಜಾರಾಗೋಲ್ಲ ಅಲ್ವಾ? :)

(ಫೋಟೋ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣುತ್ತದೆ)

ಮಂಗಳವಾರ, ಜೂನ್ 3, 2008

ನಕ್ಸಲೀಯರೇ ಬೆಂಗಳೂರಿಗೆ ಬನ್ನಿ !

ನಕ್ಸಲೀಯರೇ ಬೆಂಗಳೂರಿಗೆ ಬನ್ನಿ.

ಹೀಗೊಂದು ಕರೆ ಕೊಡುವುದು ಎಷ್ಟು ಸರಿಯೋ ಗೊತ್ತಿಲ್ಲ. ಏಕೆಂದರೆ ಕಾನೂನಿಂದ ನೀವು ನಿಷೇಧಿತರು. ಜನರನ್ನು ಸಾಯಿಸುವ ಕೊಲೆಗಡುಕರು. ಕೆಲವರು ನೀವು ಚೀನಾ ದೇಶದ ಬೆಂಬಲಿತರೆಂದೂ ಹೇಳುತ್ತಾರೆ. ಇರಲಿ.

ನಕ್ಸಲ್ಬಾರಿಯ ಮೂಲ ಅಲ್ಲೆಲ್ಲೋ ಬಿಹಾರದಲ್ಲಂತೆ. ಆದರೆ ನೀವು ಪ್ರಸಿದ್ಧಿಯಾಗಿದ್ದು ಮಾತ್ರ ಆಂಧ್ರದಲ್ಲಿ. ಬಡವರ ಉದ್ಧಾರಕ್ಕಾಗಿ ಜಮೀನ್ದಾರರ ದೌರ್ಜನ್ಯ, ಶೋಷಣೆಯ ವಿರುದ್ಧ ಶಸ್ತ್ರ ಸಹಿತರಾಗಿ ಹೋರಾಡುತ್ತೀವೆಂದು ಹೇಳಿಕೊಳ್ಳುತ್ತಾ ಆಂಧ್ರದಲ್ಲಿ ನೆಲೆಯೂರಿದಿರಿ. ಮೊದ ಮೊದಲು ಭ್ರಷ್ಟ ಅಧಿಕಾರಿಗಳನ್ನ, ರಾಜಕಾರಣಿಗಳನ್ನು ಮುಲಾಜಿಲ್ಲದೇ ಹೊಸಕಿ ಹಾಕಿದ ನೀವು ಒಂದಿಷ್ಟು ಪ್ರದೇಶದಲ್ಲಿ ಭಾರೀ ಜನಮನ್ನಣೆಯನ್ನೂ ಗಳಿಸಿಕೊಂಡಿರಿ. ನಿಜಕ್ಕೂ ಜಮೀನ್ದಾರರ ನೂರಾರು ವರ್ಷಗಳ ದಬ್ಬಾಳಿಕೆಯಿಂದ ಸೋತುಹೋಗಿದ್ದ ಜನಕ್ಕೆ ಆಶಾಕಿರಣವಾದಿರಿ. ನಿಮ್ಮ ಗುಂಪನ್ನು ವಿದ್ಯಾವಂತರೂ, ಮೇಧಾವಿಗಳೂ ಮುನ್ನಡೆಸುತ್ತಿದ್ದಾರೆಂಬ ಕಾರಣಕ್ಕಾಗಿ ಮಾಮೂಲಿ ಬಂಡುಕೋರರಾಗದೇ ಒಂದು ವಿಶಿಷ್ಟ ಛಾಪು ಮೂಡಿಸಿದಿರಿ. ಚುನಾವಣೆಯ ದಿಕ್ಕನ್ನೇ ಬದಲಾಯಿಸುವಷ್ಟು ಬಲಿಷ್ಠರಾದಿರಿ. ಆದರೆ ಬರುಬರುತ್ತಾ ಯಾವಾಗ ತೀರ ಅಮಾಯಕ ಜನರನ್ನು, ನಿಮಗಾಗದವರನ್ನು, ನಿಮ್ಮ ಪರ ಕೆಲಸ ಮಾಡದವರನ್ನು, ಕಾನೂನು ರಕ್ಷಕರಾದ ಪೋಲೀಸರನ್ನು ಕೊಲ್ಲುವುದು, ಪೋಲೀಸ್ ಠಾಣೆಯನ್ನು ಸ್ಪೋಟಿಸುವುದು, ರೈಲನ್ನು ಅಪಹರಿಸುವುದು, ಜನಪ್ರತಿನಿಧಿಗಳನ್ನು ಕೊಲ್ಲುವುದು, ಸಾಮೂಹಿಕ ಕಗ್ಗೊಲೆ ಮಾಡುವುದು ನಿಮ್ಮ ಕೆಲಸವಾಗಿ ಹೋಯಿತೋ ಆಗ ಈ ದೇಶದ ಭದ್ರತೆಗೇ ಧಕ್ಕೆ ಬರುವಂತಾಗಿ ಹೋಯಿತು. ಆದರೂ ನಿಧಾನಕ್ಕೆ ಆಂಧ್ರ ಗಡಿಯಿಂದ ನಮ್ಮ ಕರ್ನಾಟಕದೊಳಕ್ಕೂ ಕಾಲಿಟ್ಟಿರಿ.

ನೀವು ಕರ್ನಾಟಕದೊಳಕ್ಕೆ ಬರುವ ಮೊದಲೇ ಇಲ್ಲಿ ನಿಮಗೆ ಒಳಗೊಳಗೇ ಗುಪ್ತ ವೇದಿಕೆ ಸಿದ್ಧವಾಗಿತ್ತು ಎಂಬುದು ನಿಜ. ಇಲ್ಲಿನ ನಿಮ್ಮ ಸಿದ್ಧಾಂತದ ಅನುಯಾಯಿಯಳು, ನಿಮ್ಮ ಹೋರಾಟದ ಅಭಿಮಾನಿಗಳೂ ಆದ ಕೆಲವು ಪತ್ರಿಕೆಗಳ ಸಂಪಾದಕರುಗಳು, ಕೆಲ ವಿಶ್ವವಿದ್ಯಾಲಯದ ಪ್ರೊಫೆಸರುಗಳು, ಕೆಲ ಸಂಘಗಳೂ ನಿಮ್ಮನ್ನು ಸಂಭ್ರಮದಿಂದ ಪರೋಕ್ಷವಾಗಿ ಬರಮಾಡಿಕೊಂಡದ್ದು, ಈಗಲೂ ನಿಮ್ಮನ್ನೆ ಬೆಂಬಲಿಸುತ್ತಿರುವುದು ಸುಳ್ಳಲ್ಲ. ಹೀಗೆ ಬಡವರ, ಬುಡಕಟ್ಟುಜನರ, ಶೋಷಣೆಗೊಳಗಾದವರ ಸಹಾಯಕ್ಕೆಂದು ಹೇಳಿಕೊಳ್ಳುತ್ತಾ ಬಂದ ನೀವು ಸೀದ ನಮ್ಮ ಮಲೆನಾಡಿಗೇ ಹೊಕ್ಕು ಕುಳಿತು ಮಲೆನಾಡಿಗರಲ್ಲಿ ಆತಂಕ ಮೂಡಿಸಿದಿರಿ. ಎಷ್ಟೋ ಶತಮಾನಗಳಿಂದ ಭೂತಾಯಿಯ ಸೇವೆ ಮಾಡಿಕೊಂಡು ಕೃಷಿ, ಸಂಬಂಧಿತ ಕೆಲಸಗಳಿಂದ ಬದುಕು ಕಂಡುಕೊಂಡಿದ್ದವರು ನಮ್ಮ ಮಲೆನಾಡಿಗರು. ನೀವು ಇಲ್ಲಿಗೆ ಬಂದು ಹಲವು ವರ್ಷಗಳೇ ಕಳೆದು ಹೋದವು. ಆದರೆ ಮಾಡಿದ್ದಾದರೂ ಏನು? ಕಾಡಿನಲ್ಲಿ ಅಡಗಿ ಕುಳಿತು ಹಳ್ಳಿಗರನ್ನು, ನಿಮಗಾಗದವರನ್ನು, ಪೋಲೀಸರನ್ನು ಕೊಂದಿದ್ದೇ ಬಂತು ವಿನಃ ಯಾವ ಉದ್ಧಾರದ ಕಾರ್ಯಗಳೂ ಆಗಲಿಲ್ಲ. ಇದ್ದಷ್ಟರಲ್ಲೇ,ಸಿಕ್ಕಷ್ಟರಲ್ಲೇ ತೃಪ್ತಿ ಪಡುತ್ತಾ ಯಾರಿಗೂ ತೊಂದರೆ ಮಾಡದೇ ಬದುಕುತ್ತಿದ್ದ ಮಲೆನಾಡಿನ ಹಸಿರಿನ ಮಧ್ಯೆ ಕೆಂಪು ಕಲೆಗಳಾದವು. ಬಡವರ ಉದ್ಧಾರಕರೆಂದು ಹೇಳಿಕೊಂಡೇ ಬಂದ ನಿಮ್ಮಿಂದ ಬಡವರಿಗೆ ನೇರವಾಗಿ ನಯಾಪೈಸೆ ಲಾಭ ಆಗಲಿಲ್ಲ. ಒಂದೆಡೆ ಸರ್ಕಾರ, ಇನ್ನೊಂದೆಡೆ ನೀವು ಎಲ್ಲ ಸೇರಿ ಆತಂಕ, ಅಭದ್ರತೆ ಹೆಚ್ಚಾಯಿತೇ ಹೊರತು ಇನ್ನೇನಾಗಲಿಲ್ಲ. ಅಸಲಿಗೆ ನಮ್ಮ ಮಲೆನಾಡಿನಲ್ಲಿ ನೀವೆಣಿಸಿದ ಮಟ್ಟಿಗೆ ಜಮೀನ್ದಾರಿತನವಾಗಲೀ, ಬಡಜನರ ಶೋಷಣೆಯಾಗಲೀ ಇರಲೇ ಇಲ್ಲ. ಜಗತ್ತಿನೆಲ್ಲೆಡೆ ಇರುವಂತೆ ಕೆಲಸ ಮಾಡಿಸುವ ಮಾಲೀಕವರ್ಗ, ದುಡಿಯುವ ಕೆಲಸದ ವರ್ಗವಷ್ಟೆ ಇರುವುದು. ಆದರೂ ನೀವು ಹೆದರಿಸುವುದು, ಬೆಂಕಿ ಹಚ್ಚುವುದು, ಕೊಲ್ಲುವುದು ಇವೆಲ್ಲವುಗಳಿಂದ ಮಲೆನಾಡಿನ ನೆಮ್ಮದಿಯ ವಾತಾವರಣ ಹಾಳಾಗಲು ಕಾರಣರಾದಿರಿ. ನಿಮ್ಮವರನ್ನು ಪೋಲೀಸರು ಕೊಂದರು, ನೀವು ಅವರನ್ನು ಕೊಂದಿರಿ. ಕೊಲೆಗಳೇ ಕಾಯಕವಾಯಿತು.

ಉಳ್ಳವರದ್ದು ಕಿತ್ತುಕೊಂಡು ಇಲ್ಲದಿರುವವರಿಗೆ ಹಂಚಬೇಕು ಎನ್ನುವ ನಿಮ್ಮ ಸಿದ್ಧಾಂತವೇ ವಿಚಿತ್ರ. ಹಾಗೇನಾದರೂ ಎಲ್ಲರಲ್ಲೂ ಒಂದೇ ರೀತಿಯ ಸಂಪತ್ತು ಇರಬೇಕು ಅಂತಾಗಿದ್ದರೆ ಈ ಜಗತ್ತು ಹೀಗಿರುತ್ತಿತ್ತೆ? ಹಾಗೇ ಆಗಬೇಕಂತಿದ್ದರೆ ಈಗ ವಿಷಯಕ್ಕೆ ಬರೋಣ, ನೀವು ನಿಜವಾಗಿಯೂ ಜನರ ಉದ್ಧಾರಕ್ಕಾಗೇ ಹೋರಾಟ ಮಾಡುತ್ತಿದ್ದರೆ, ಭೂಮಾಲೀಕರ , ಜಮೀನುದಾರರ ವಿರುದ್ಧ ಹೋರಾಡುವವರಾಗಿದ್ದರೆ ಬೆಂಗಳೂರಿಗೆ ಬನ್ನಿ. ಇವತ್ತು ಬೆಂಗಳೂರೆಂಬುದು ಯಾವ ರೀತಿ ಬೆಳೆದು ನಿಂತಿದೆ ಎಂಬುದು ಕಾಡಿನಲ್ಲಿ ಕೂತಿದ್ದರೂ ನಿಮ್ಮ ಗಮನಕ್ಕೆ ಬರದೇ ಏನೂ ಹೋಗಿಲ್ಲ. ಅಸಲಿಗೆ ಕರ್ನಾಟಕದಲ್ಲಿ ’ಜಮೀನುದಾರ’, 'ಜಮೀನುದಾರಿತನ’ ಎನ್ನುವುದು ಇರುವುದಾದರೆ ಇವತ್ತು ಬೆಂಗಳೂರಲ್ಲಿ ಮಾತ್ರ! ಇಲ್ಲಿ ಭೂಮಿಯ ಬೆಲೆಗಳು, ಮನೆಗಳ ಬೆಲೆಗಳು ಯಾವ ರೀತಿ ಆಕಾಶಕ್ಕೇರಿವೆಯೆಂದರೆ ಸಾಮಾನ್ಯ ಜನ ಮುಟ್ಟಲೂ ಸಾಧ್ಯವಾಗುತ್ತಿಲ್ಲ. ಒಂದಿಷ್ಟು ರಿಯಲ್ ಎಸ್ಟೇಟ್ ಧಣಿಗಳು, ರಾಜಕಾರಣಿಗಳ ವ್ಯವಸ್ಥಿತ ಕೆಲಸಗಳಿಂದಾಗಿ ಜನರಿಗೆ ಸ್ವಂತ ನೆಲೆಯೊಂದನ್ನು ಮಾಡಿಕೊಳ್ಳಲು ಸಾಧ್ಯವೇ ಇಲ್ಲದಂತೆ ಆಗಿ ಹೋಗಿದೆ. ಬೇರೆ ಊರಿನಲ್ಲಿ ಬರೀ ಬಡವರು ಮಾತ್ರ ಬಡವರಾಗಿದ್ದರೆ, ಇಲ್ಲಿನ ಭೂಮಿ, ಮನೆ ಬೆಲೆಯ ಮುಂದೆ ಬಡವರಿಂದ ಮೇಲ್ಮಧ್ಯಮ ವರ್ಗದವರ ತನಕವೂ ಎಲ್ಲರೂ ಬಡವರೇ! ಸರ್ಕಾರದಿಂದ ವಿದೇಶಿ ಕಂಪನಿಗಳಿಗೆ ಮಣೆ ಹಾಕುವುದಕ್ಕಾಗಿ ರೈತರ ಜಮೀನು ಗಳನ್ನು ಕಸಿದುಕೊಳ್ಳಲಾಗುತ್ತಿದೆ. ತೀರ ಕೆರೆಗಳನ್ನೂ ಮುಚ್ಚಿಹಾಕಿ, ರೈತರಿಗೆ ಆಮಿಷ ತೋರಿಸಿ ಭೂಮಿಯನ್ನು ಸೈಟುಗಳನ್ನಾಗಿ ಮಾರಾಟ ಮಾಡಲಾಗುತ್ತಿದೆ, ದೊಡ್ಡ ದೊಡ್ಡ ಕಟ್ಟಡಗಳನ್ನೆಬ್ಬಿಸಲಾಗುತ್ತಿದೆ. ರೈತರು ವ್ಯವಸ್ಥಿತವಾಗಿ ಭೂಹೀನರಾಗಿ ಸ್ವಾವಲಂಬನೆ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಮಾತ್ರ ದಿನೇ ದಿನೇ ಕೊಬ್ಬುತ್ತಲೇ ಇದ್ದಾರೆ. ಭ್ರಷ್ಟಾಚಾರ, ಮೋಸಗಳಿಗೆ ಕಡಿವಾಣವೆ ಹಾಕುವವರಿಲ್ಲ. ಎಲ್ಲರಿಗೂ ಈ ಕೆಟ್ಟ ಬೆಳವಣಿಗೆಯ ಕಾರಣ, ಪರಿಣಾಮದ ಅರಿವಿದ್ದರೂ ಎಲ್ಲರೂ ಅಸಹಾಯಕರು. ಯಾವ ಕಾನೂನಿಗೂ ನಿಲುಕದಂತೆ ನಡೆಯುತ್ತಿರುವ ಈ ದರೋಡೆಯನ್ನ ನಿಮ್ಮ ಗಮನಕ್ಕೆ ತೆಗೆದುಕೊಳ್ಳಿ. ಬರೀ ಕಾಡಿನಲ್ಲಿರುವವರಷ್ಟೆ ಶೋಷಿತರಲ್ಲ, ನಗರಗಳಲ್ಲೂ ಇದ್ದಾರೆ. ನಿಜಹೇಳಬೇಕೆಂದೆರೆ ಇಲ್ಲಿಯೇ ಶೋಷಣೆಯ ಎಲ್ಲಾ ಮುಖಗಳೂ ಇವೆ. ನೀವು ಜನರ ಉದ್ಧಾರಕ್ಕಾಗಿ ಹೋರಾಡುವವರೇ ಆಗಿದ್ದರೆ ನಿಮ್ಮ ಅಗತ್ಯ ಕಾಡಿಗಿಂತ ಈ ನಾಡಿಗೆ ಬಹಳ ಇದೆ. ನೀವಷ್ಟೂ ಜನರೂ ಬರಬೇಕೆಂದೇನೂ ಇಲ್ಲ, ನಿಮ್ಮದೊಂದು ತುಕಡಿಯನ್ನು ಇಲ್ಲಿಗೆ ಕಳಿಸಿಕೊಡಿ. ಭೂಗಳ್ಳರ ಕೊಬ್ಬನ್ನು ಬಸಿದು ಅದರಿಂದ ಜನಸಾಮಾನ್ಯರ ಮನೆ ದೀಪ ಹಚ್ಚುವಂತ ಕೆಲಸ ಮಾಡುವುದಕ್ಕಾದರೆ ಮಾಡಿ. ಅಭಿವೃದ್ಧಿ, ಪ್ರಗತಿಯ ತೆರೆಯ ಹಿಂದೆ ನೆಡೆಯುತ್ತಿರುವ ಅನಾಚಾರಗಳನ್ನು ನಿಲ್ಲಿಸಿ. ಈ ಬೆಂಗಳೂರಿನಲ್ಲಿ ನಿಮಗೆ ಅಡಗಿಕೊಳ್ಳಲು ಮಲೆನಾಡಿನ ಕಾಡಿನಂತಹ ಜಾಗ ಸಿಗಲಾರದೆಂಬ ಭಯ ಬೇಡ. ಇಲ್ಲಿ ಪಾಕಿಸ್ತಾನದ ಏಜೆಂಟರು, ಭಯೋತ್ಪಾದಕರು, ಇನ್ನು ಎಂತೆಂತವರೋ ಯಾರಿಗೂ ಗೊತ್ತಾಗದಂತೆ ಇದ್ದಾರಂತೆ. ಅಂದ ಮೇಲೆ ನಿಮಗೇನೂ ಕಷ್ಟವಾಗಲಿಕ್ಕಿಲ್ಲ. ಹಾಗೂ ಆಗದಿದ್ದರೆ ನಿಮ್ಮ ಬುದ್ಧಿ ಜೀವಿ ಬೆಂಬಲಿಗರಿದ್ದಾರಲ್ಲ ಅವರೇನಾದರೂ ವ್ಯವಸ್ಥೆ ಮಾಡಿಯಾರು. ತಾನು ದೇವರನ್ನು ನಂಬುವುದಿಲ್ಲ ಎಂದು ಹೇಳಿಕೊಳ್ಳುತ್ತ, ಆ ದೇವರಿಗೂ ಸಿಗಲಾರದಂತೆ ನಿಮ್ಮನ್ನು ಇರಿಸಿಕೊಳ್ಳಬಲ್ಲೆ ಮನೆ ಬಿಟ್ಟು ಓಡಿ ಬನ್ನಿ ಎಂದು ಪ್ರೇಮಿಗಳಿಗೆ ಕರೆಕೊಡುವ ಬಡಾಯಿ ಸಂಪಾದಕರು, ಪತ್ರಿಕೋದ್ಯಮವನ್ನು ಹಾದರವಾಗಿಸಿದ ಕೆಲ ವಂಶವಾಹಿ ಪತ್ರಕರ್ತ ಪತ್ರಕರ್ತೆಯರು, ಅನೇಕಾನೇಕ ಪ್ರಶಸ್ತಿ ವಿಜೇತರೂ, ಕಾರ್ಯಕರ್ತರೂ ಇದ್ದಾರೆ. ಅವರ ಮಕ್ಕಳೆಲ್ಲ ವಿದೇಶದಲ್ಲಿದ್ದಾರೆ. ಬೇರೆಯವರ ಮಕ್ಕಳು ನಕ್ಸಲರಾಗಿ ಕಾಡುಸೇರುವುದನ್ನು ಕೊಲೆಮಾಡುವುದನ್ನು ಮಾತ್ರ ಬೆಂಬಲಿಸುತ್ತಾರೆ ಅವರು. ಇರಲಿ. ಆ ನಂತರ ನೋಡಿ, ಜನಬೆಂಬಲ ತಾನಾಗಿಯೇ ದಕ್ಕುತ್ತದೆ. ಯಾವ ಜನರು ನಕ್ಸಲೀಯರೆಂದರೆ ಕೊಲೆಗಡುಕರೆನ್ನುತ್ತಿದ್ದರೋ ಅವರೇ ಪೂಜಿಸತೊಡಗುತ್ತಾರೆ. ನಂತರ ಜನಮನ್ನಣೆ ಸಿಕ್ಕ ಮೇಲೆ ಪ್ರಜಾಪ್ರಭುತ್ವದೊಳಗೆ ಕಾಲಿಡಿ. ನಿಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ. ಈ ಮೂಲಕ ಸರ್ಕಾರದಲ್ಲಿ ಪಾಲ್ಗೊಂಡು ರಾಜ್ಯ, ದೇಶ ಉದ್ಧಾರ ಮಾಡಿ.

ಇದೆಲ್ಲಾ ಏನು ನಮಗೆ ಗೊತ್ತಿರದ ವಿಷಯವೇನಲ್ಲ, ನಮ್ಮ ಗುರಿಯೇ ಬೇರೆಯಿದೆ, ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ, ನಾವು ನಂಬಿಕೊಂಡಿರುವ ಮಾವೋ ಸಿದ್ಧಾಂತವೇ ಸರಿ, ಎಲ್ಲದಕ್ಕೂ ಶಸ್ತ್ರಗಳಿಂದಲೇ ಉತ್ತರ ಕೊಡುತ್ತೇವೆ, ಕೊಲೆಗಳನ್ನು ಮಾಡಿಯೇ ಕೆಂಪು ಬಾವುಟ ಹಾರಿಸುತ್ತೇವೆ ಎನ್ನುವುದಾದರೆ ... ಊಹೂಂ..ಶಸ್ತ್ರಗಳಿಂದ ಈ ದೇಶವನ್ನು, ಹೋಗಲಿ ದೇಶದ ಯಾವುದಾದರೊಂದು ಭಾಗವನ್ನು ಕೂಡ ಭೌಗೋಳಿಕವಾಗಲೀ, ಹಿಂಸೆಯ ಸೈದ್ಧಾಂತಿಕತೆಯಿಂದಾಗಲೀ ಆಕ್ರಮಿಸಿಕೊಳ್ಳಲು ನಿಮಗೇ ಯಾಕೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆ ಕನಸು ಇದ್ದರೆ ಬಿಟ್ಟು ಬಿಡುವುದು ಲೇಸು. ಬಂದೂಕಿನಿಂದ ಶಾಶ್ವತ ಪರಿಹಾರ ಅಸಾಧ್ಯ. ಅದು ಇನ್ನಷ್ಟು ತೊಂದರೆಗಳನ್ನುಂಟು ಮಾಡುವುದೇ ಹೊರತು ಇನ್ನೇನು ಆಗದು. ನಿಮ್ಮ ಹಿಂದೆ ಚೀನಾ ದೇಶದ ವ್ಯವಸ್ಥಿತ ಕುತಂತ್ರ , ಬೆಂಬಲ ಕೆಲಸ ಮಾಡುತ್ತಿದೆ ಎಂಬುದು ಖಾತ್ರಿಯಾದರಂತೂ ಮುಗಿದೇ ಹೋಯಿತು. ಏಕೆಂದರೆ ಈ ದೇಶದಲ್ಲಿ ಪ್ರಾಣಕ್ಕಿಂತಲೂ ಹೆಚ್ಚಿನ ದೇಶಭಕ್ತಿ ಇಟ್ಟುಕೊಂಡಿರುವ ಜನರು ಬಹಳಷ್ಟಿದ್ದಾರೆ, ದೇಶಭಕ್ತ ರಾಜಕೀಯ ಪಕ್ಷಗಳಿವೆ, ಎಲ್ಲದಕ್ಕಿಂತ ಹೆಚ್ಚಾಗಿ ಈ ದೇಶಕ್ಕೊಂದು ಪ್ರಚಂಡ ಸೇನೆ ಇದೆ ಮತ್ತು ಅದರಲ್ಲಿ ವೀರ ಸೈನಿಕರಿದ್ದಾರೆ. ಎಚ್ಚರ.

*******************************************************
ಜೂನ್ ೦೬ - ೨೦೦೮ thatskannada.comನಲ್ಲಿ - ನಕ್ಸಲೀಯರೇ ಬೆಂಗಳೂರಿಗೆ ಬನ್ನಿ.