ಗುರುವಾರ, ಏಪ್ರಿಲ್ 16, 2009

ರೆಕ್ಕೆ ಇದ್ದರೆ ಸಾಕೆ.......

ಹಕ್ಕಿಗೆ ರೆಕ್ಕೆ ಯಾಕಿರತ್ತೆ?................ ಹಾರೋದಕ್ಕೆ.

ಸರಿ.

ವಿಮಾನಕ್ಕೆ ರೆಕ್ಕೆ ಯಾಕಿರತ್ತೆ? ..........ಹಾರೋದಕ್ಕೆ ..

o.k. ಸರಿ.

ಹಕ್ಕಿ ಹೇಗೆ ಹಾರತ್ತೆ? ...............ರೆಕ್ಕೆ ಬಡಿದು ಹಾರುತ್ತೆ.

o.k. ಇದೂ ಸರಿ.

ರೆಕ್ಕೆ ಬಡಿಯದೇ ಇದ್ರೂ ವಿಮಾನ ಹೇಗೆ ಹಾರುತ್ತೆ? ...

ಹೋಗ್ಲಿ, ಆ ರೆಕ್ಕೆ ವಿಮಾನಾನ ಹೇಗೆ ಹಾರಿಸುತ್ತೆ? ......

ರೆಕ್ಕೆ ಇಲ್ಲದಿದ್ರೆ ವಿಮಾನ ಹಾರದೇ ಇಲ್ವಾ? ವಿಮಾನದಲ್ಲಿ ರೆಕ್ಕೆಗಳ ಕೆಲ್ಸ ಏನು?
........... .. ...

ಹೀಗೆಲ್ಲಾ ಯೋಚಿಸಿದ್ದೀರಾ?.. ಯೋಚಿಸಿದ್ರೆ ಗುಡ್ . ಯೋಚಿಸಿ ಇದರ ಬಗ್ಗೆ ತಿಳ್ಕೊಂಡಿದ್ದೀರಾ?.... ಹೌದಾದರೆ ವೆರಿ ಗುಡ್.

ಇದುವರೆಗೂ ಇದು ನಿಮ್ಮ ಯೋಚನೆಗೇ ಬಂದಿಲ್ವಾ? ಹಾಗಿದ್ರೆ ವೆರಿ ವೆರಿ ಗುಡ್.

ಬನ್ನಿ ಕೂತ್ಕೊಳ್ಳಿ, ಈಗ ನಾನು ಇದೇ ವಿಷ್ಯ ಹೇಳಕ್ಕೆ ಹೋಗ್ತಿದ್ದೀನಿ.


******

ರೆಕ್ಕೆ ವಿಷಯ ಮಾತಾಡಕಿಂತ ಮೊದಲು ಒಂದು ವಿಷಯ ತಿಳ್ಕಳಣ. ವಿಮಾನ ಹಾರೋದಕ್ಕೆ ಏನ್ ಬೇಕು ಅಂತ.

ಇದು ಸಿಂಪಲ್. ವಿಮಾನ ಹಾರೋದಕ್ಕೆ ಬೇಕಾಗಿರದು ಎರಡೇ ಎರಡು ತರದ ಬಲ(force)ಗಳು. ಒಂದಕ್ಕೆ thrust(ನೂಕು) ಅಂತಾರೆ, ಇನ್ನೊಂದಕ್ಕೆ lift(ಎತ್ತು) ಅಂತಾರೆ.

ವಿಮಾನ ಗಾಳಿಯನ್ನು ಸೀಳ್ಕೊಂಡು, ಗಾಳಿಯ ಪ್ರತಿರೋಧವನ್ನು ಎದುರಿಸ್ಕೊಂಡು ಮುಂದೆ ಹೋಗೋದಕ್ಕೆ ಬೇಕಾಗುವ ಬಲ thrust. ಇದ್ನ ಎಂಜಿನ್ ಗಳು ಮತ್ತು ಪ್ರೊಪೆಲ್ಲರ್ ಗಳ ಸಹಾಯದಿಂದ ಉತ್ಪತ್ತಿ ಮಾಡ್ತಾರೆ. ಇದು ’ಮುನ್ನುಗ್ಗುವ’ force.

ಅದೇ ರೀತಿ, ವಿಮಾನ ತನ್ನ ಭಾರಕ್ಕೆ ಕೆಳಗೆ ಬೀಳದಂತೆ, ಗುರುತ್ವಾಕರ್ಷಣ ಶಕ್ತಿಯನ್ನ ಮೆಟ್ಟಿನಿಂತು ಆಕಾಶದಲ್ಲಿ ತೇಲಲು ಬೇಕಾದ ಬಲ lift. ಈ ಲಿಫ್ಟ್ ಕ್ರಿಯೇಟ್ ಮಾಡೋದು ರೆಕ್ಕೆಗಳ ಕೆಲಸ. ಇದು ’ಮೇಲೆತ್ತುವ’ force.

ಹೇಗೆ ರೆಕ್ಕೆಗಳು ಲಿಫ್ಟ್ ಕ್ರಿಯೇಟ್ ಮಾಡ್ತವೆ ಅನ್ನೋದನ್ನ ನೋಡೋಣ.
ವಿಮಾನದ ರೆಕ್ಕೆಗಳ ಅಡ್ಡ ಕೊಯ್ತ(cross section,ಅಂದರೆ ರೆಕ್ಕೆಯನ್ನು ಕತ್ತರಿಸಿದಾಗ ಕಾಣುವ) ಆಕಾರ ಮೇಲೆ ತೋರಿಸಿದ ಚಿತ್ರದಂತಿರುತ್ತೆ. ಇದಕ್ಕೆ ವಾಯುಫಲಕ(aerofoil) ಅಂತಾರೆ. ಈ ಆಕಾರದಲ್ಲಿ ಒಂದು ವಿಷೇಶ ಇದೆ. ಗಾಳಿ ಬೀಸುವ ಎದುರು ದಿಕ್ಕಿನಲ್ಲಿ ಇದರ ಮೊಂಡು ಭಾಗ ಇರುತ್ತೆ. ಬೀಸುವ ಗಾಳಿ ಈ ಮೊಂಡು ಭಾಗಕ್ಕೆ ಬಡಿದು ರೆಕ್ಕೆಯ ಎರಡೂ ಬದಿಗೆ split ಆಗತ್ತೆ. ವಾಯುಫಲಕ ಮೇಲ್ಗಡೆ ಭಾಗ ಡೊಂಕಾಗಿರೋದ್ರಿಂದ(curved shape), ಒಂದು ನಿರ್ದಿಷ್ಟ ಕೋನದಲ್ಲಿ ಗಾಳಿ ಬಡಿದಾಗ ಅಲ್ಲಿ ಗಾಳಿಯ flow ವೇಗವಾಗಿ ಆಗತ್ತೆ. ಕೆಳಭಾಗದಲ್ಲಿ comparitively ನಿಧಾನಕ್ಕೆ ಗಾಳಿಯ ಹರಿವು ಇರತ್ತೆ. (ಇದ್ಯಾಕೆ ಹಿಂಗೇ ಆಗತ್ತೆ ಅಂತ ಕೇಳುವಂಗಿಲ್ಲ. ಅದು ನೈಸರ್ಗಿಕವಾಗಿ ಆಗುವಂತದ್ದು ಮತ್ತು ಅದನ್ನು ತಿಳಿದುಕೊಳ್ಳಬೇಕು ಅಂದ್ರೆ ಏರೋಡೈನಮಿಕ್ಸ್, ಫಿಸಿಕ್ಸ್ ಎಲ್ಲಾ ಓದ್ಕೊಂಡು ಬರ್ಬೇಕು. ಅವೆಲ್ಲಾ ಸಹವಾಸ ಬೇಡ ಸದ್ಯಕ್ಕೆ). ರೆಕ್ಕೆಯ ಮೇಲ್ಗಡೆ ಜಾಗದಲ್ಲಿ ಗಾಳಿ ವೇಗವಾಗಿ ಹಾಯ್ದು ಹೋಗೋದ್ರಿಂದ ಅಲ್ಲಿ ಒತ್ತಡ ಕಡಿಮೆ(pressure decrease) ಆಗುತ್ತೆ . ಆಗ ರೆಕ್ಕೆಯ ಕೆಳಗಡೆ ಮತ್ತು ಮೇಲ್ಗಡೆ ಜಾಗಗಳ ಮಧ್ಯ ಒತ್ತಡದ ವ್ಯತ್ಯಾಸ(pressure difference) ಉಂಟಾಗುತ್ತದೆ. ಈ ವ್ಯತ್ಯಾಸದಿಂದ ಕೆಳಗಿನ ಗಾಳಿ ರೆಕ್ಕೆಯನ್ನ ಮೇಲಕ್ಕೆ ತಳ್ಳುತ್ತೆ. ಅದಕ್ಕೇ ’ಎತ್ತುವ ಬಲ’ (lift force) ಅನ್ನುವುದು. ರೆಕ್ಕೆಯೇ ಆಗ್ಬೇಕು ಅಂತಿಲ್ಲ, ಈ ರೀತಿ ಚಲಿಸುವ ಗಾಳಿ ಒಂದು ಕೋನದಲ್ಲಿ ತಾಕಿದಾಗ ಯಾವುದೇ ವಸ್ತುವಾದ್ರೂ ಕೂಡ ಮೇಲೇಳುತ್ತದೆ. ಆದ್ರೆ ಆದಷ್ಟು ಕಡಿಮೆ ಪ್ರತಿರೋಧದಿಂದ ಮೇಲೆ ಏಳಲು ಈ aerofoil ಆಕಾರ ಸಹಾಯಕಾರಿಯಾಗಿದೆ. ಅದಕ್ಕೋಸ್ಕರವೇ ವಿಮಾನದ ರೆಕ್ಕೆಯನ್ನ ಆ ಆಕಾರದಲ್ಲಿ ತಯಾರು ಮಾಡಿರ್ತಾರೆ. ಈ ಮೇಲಕ್ಕೆ ಎತ್ತುವ ಬಲ ಗುರುತ್ವಾಕರ್ಷಣ ಶಕ್ತಿಗಿಂತ ಜಾಸ್ತಿ ಇರುವ ಹಾಗೆ ಎರಡೂ ಕಡೆ ಅಗಲವಾದ ರೆಕ್ಕೆಗಳನ್ನು ವಿನ್ಯಾಸ ಮಾಡಿರ್ತಾರೆ. ಆದ್ದರಿಂದ ಇವು ವಿಮಾನಾನ್ನ ಗಾಳಿಯಲ್ಲಿ ತೇಲಿಸಿ ಹಿಡಿದುಕೊಳ್ತವೆ. ಇಷ್ಟೆ ವಿಮಾನದ ರೆಕ್ಕೆಗಳ ಕೆಲಸ .

********

ಅರ್ಥಾಯ್ತಾ? ತಲೆ ಕೆಡ್ತಾ? fine.

ಥಿಯರಿ ಓದಿದ್ರೆ ಅರ್ಥಾಗೋದು ಸ್ವಲ್ಪ ಕಷ್ಟ. ಆದ್ರೆ ಕಣ್ಣಾರೆ ನೋಡಿದರೆ ಅರ್ಥ ಮಾಡ್ಕೊಳ್ಳದು ಸುಲಭ ಅಲ್ವಾ. ಇಲ್ನೋಡಿ ಈ ಕೆಳಗಿನ ಮಾಡೆಲ್. ರೆಕ್ಕೆಯ aerofoil ಆಕಾರ ಮತ್ತು ಒತ್ತಡದ ವ್ಯತ್ಯಾಸ ಉಂಟಾಗೋದನ್ನ ಇದರಲ್ಲಿ ಪ್ರಾಕ್ಟಿಕಲ್ಲಾಗಿ ನೋಡ್ಬೋದು. ಇದರಲ್ಲಿ ಮುಂದಿರುವ ಕೊಳವೆಯಿಂದ ಬರುವ ಗಾಳಿಗೆ ಸರಿಯಾಗಿ ರೆಕ್ಕೆಯನ್ನು ಎತ್ತಿ ಹಿಡಿದರೆ pressure difference ಉಂಟಾಗಿ ಕೆಳಗಿನ ಕೊಳವೆಯಲ್ಲಿರುವ ಚೆಂಡು ಮೇಲೆ ಬರೋದನ್ನ ನೋಡ್ಬೋದು.

ಇದು ಇರೋದು ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ನಲ್ಲಿ. ಇದೇ ರೀತಿ ಅಲ್ಲಿ ಬಯಾಲಜಿ, ಸೆಟಲೈಟ್ಸ್, ಹಿಸ್ಟರಿ, , ಎಲೆಕ್ಟ್ರಾನಿಕ್ಸ್, ವಿಜ್ಞಾನ, ಸಾಮಾನ್ಯಜ್ಞಾನ, ಮೆಷಿನ್ಸ್, ಎಂಜಿನ್ಸ್, ಅದು ಇದು, ಹಾಳುಮೂಳು ಮಣ್ಣು ಮಸಿ ಅಂತ ಏನೇನೇನೇನೋ ಇದೆ. 3D theatre ಒಳಗೆ ಹೋದ್ರೆ ಬೇಜಾನ್ ಮಜಾ ಇರತ್ತೆ, ಮಕ್ಕಳಿಗಂತೂ ಖುಷಿಯೋ ಖುಷಿ ಆಗತ್ತೆ. ಇಂತಹ ಹತ್ತು ಹಲವಾರು ವಿಷಯಗಳನ್ನು ತಿಳಿದುಕೊಳ್ಬೇಕು, ನೋಡಿ ಆನಂದ ಪಡಬೇಕು ಅಂತ ಆಸಕ್ತಿ ಇರೋರಿಗೆ, ಎಲ್ಲಾ ವಿದ್ಯಾರ್ಥಿಗಳಿಗೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅದರಲ್ಲೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಳ್ಳೇ ಜಾಗ . ಫ್ರೀ ಇದ್ದಾಗ ಆದ್ರೆ ಒಮ್ಮೆ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹೋಗ್ಬನ್ನಿ. ಒತ್ತಾಯ ಏನಿಲ್ಲ. :)

ಮಂಗಳವಾರ, ಏಪ್ರಿಲ್ 14, 2009

ಟೀವೀ ನೈನೂ ಮತ್ತು ’ಚಂದ್ರಯಾನ’ವೂ..

ನಿನ್ನೆ ರಾತ್ರಿ ೧೦:೩೦, ಅಪ್ಪನ ಫೋನಿಂದ ಮೆಸೇಜು ಬಂತು - "ನಿನ್ನನ್ನ TV9ನಲ್ಲಿ ನೋಡಿದೆವು! "

ಎದೆ ಧಸಕ್ ಎಂದಿತು. ಚಂದನದಲ್ಲೋ, ಕಸ್ತೂರಿಯಲ್ಲೋ, ಈ ಟೀವಿಯಲ್ಲೋ ನೋಡಿದೆ ಎಂದಿದ್ದರೆ ಏನಾಗುತ್ತಿರಲಿಲ್ಲ. ಆದರೆ ಹೇಳಿ ಕೇಳಿ ಅದು ಟೀವಿ ನೈನು! ಸುದ್ದಿಯನ್ನು ಮನರಂಜನೆಯಂತೆ ಕೊಟ್ಟು, ಮನರಂಜನೆಯನ್ನು ಅತಿರೇಕ ಮಾಡಿ, ಅತಿರೇಕವನ್ನು ಮಾಮೂಲಿನಂತೆ ದಿನವಿಡೀ ತೋರಿಸಿ ’ಉತ್ತಮ ಸಮಾಜಕ್ಕಾಗಿ’ ದುಡಿಯುತ್ತಿರುವ ಅಪರೂಪದ ವಾಹಿನಿ ಅದು. ಅಂದ ಮೇಲೆ ಗಾಬರಿಯಾಗದೇ ಇರುತ್ತದೆಯೇ. ಅವರ ಕ್ಯಾಮೆರಾ ಎಲ್ಲೆಲ್ಲಿ ಇರುತ್ತದೋ ಯಾರಿಗೆ ಗೊತ್ತು. ನಾವು ಹುಡುಗರು ಎಲ್ಲೆಲ್ಲೋ ನಿಂತಿರುತ್ತೇವೆ, ಏನೇನೋ ಮಾಡುತ್ತಿರುತ್ತೇವೆ. ಇನ್ಯಾವುದೋ ವರದಿಯ ಸಂದರ್ಭದಲ್ಲಿ ಅಕಸ್ಮಾತಾಗಿಯೋ , ಉದ್ದೇಶಪೂರ್ವಕವಾಗಿಯೋ ನಮ್ಮ ಮೇಲೆ ಕ್ಯಾಮೆರಾ ಕಣ್ಣು ಬಿದ್ದು ಅದು ಬೇರೆ ಏನೋ ಅರ್ಥ ಕೊಟ್ಟು ಬ್ರೇಕಿಂಗ್ ನ್ಯೂಸ್ ಆಗಿಹೋಯಿತಾ ಎಂದು ಹೆದರಿಕೆಯಾಯಿತು.

ರೆಹಮಾನ್, ಆ ಹುಡುಗ್ರು ಅಲ್ಲಿ ಎಷ್ಟೊತ್ತಿಂದ ನಿಂತಿದಾರೆ?
.................................
ಅವರ ಕೈಯಲ್ಲಿ ಏನೋ ವೈಟ್ ಕಲರ್ ವಸ್ತು ಇದೆಯಲ್ಲ, ಅದು ಏನೂಂತ ಹೇಳಕ್ಕಾಗತ್ತಾ?
.................................
ಅವರು ಇನ್ನೂ ಅಲ್ಲೇ ಎಷ್ಟು ಹೊತ್ತು ನಿಂತಿರ್ತಾರೆ ಅಂತ ಹೇಳ್ತೀರಾ
...............

ಹೀಗೆಲ್ಲಾ ಅವರ ವರದಿಗಾರ-ಸ್ಟುಡಿಯೋ ಮಧ್ಯೆ ಸಂಭಾಷಣೆ ಕಲ್ಪಿಸಿಕೊಂಡು ದಿಗಿಲಾದೆ. ಯಾವುದಕ್ಕೆ ಏನು ರೆಕ್ಕೆಪುಕ್ಕ ಸೇರಿಸಿ, ಮಸಾಲೆ ಅರೆದು, ಬಣ್ಣ ಹಚ್ಚಿ ತೋರಿಸಿಬಿಡುತ್ತಾರೋ ಯಾರಿಗೆ ಗೊತ್ತು ನಮ್ ಗ್ರಾಚಾರ! :)

ಕೆಲವರ್ಷಗಳ ಹಿಂದೆ ಹೀಗೇ ಆಗಿತ್ತು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯ ಕ್ಯಾಂಪಸ್ಸಿನಲ್ಲೇ ಕಾಲ್ ಸೆಂಟರ್ ಒಂದಿತ್ತು. ಆಗ ಅದ್ಯಾವುದೋ ಕಾಲ್ ಸೆಂಟರ್ ಹುಡುಗಿಯನ್ನು ಕ್ಯಾಬ್ ಚಾಲಕನೊಬ್ಬ ಎತ್ತಾಕಿಕೊಂಡು ಹೋಗಿ ರೇಪ್ & ಕೊಲೆ ಮಾಡಿದ ಘಟನೆ ಹಸಿಹಸಿಯಾಗಿತ್ತು. ಕ್ರೈಂ ಡೈರಿ, ಸ್ಟೋರಿ ಮುಂತಾದ ಕ್ಯಾಮೆರಾಗಳು ಕಾಲ್ ಸೆಂಟರ್ ಗಳ ಹಿಂದೆ ಬಿದ್ದಿದ್ದವು. ನಮಗೂ ಎರಡನೇ ಪಾಳಿ ಇರುತ್ತಿದ್ದುದ್ದರಿಂದ ರಾತ್ರಿ ೧ ರ ವರೆಗೆ ಆಫೀಸಿನಲ್ಲೇ ಇರಬೇಕಾಗುತ್ತಿತ್ತು. ಆಗಾಗ ಗಾಳಿ ಸೇವನೆಗೆಂದು, ನಿದ್ದೆ ಬರದಿರಲೆಂದು ನಾವು ಹೊರಗೆ ಹೋಗುತ್ತಿದ್ದೆವು. ಅದೇ ಜಾಗಕ್ಕೆ ಕಾಲ್ ಸೆಂಟರಿನ ಹುಡುಗ ಹುಡುಗಿಯರೂ ಬರುತ್ತಿದ್ದರು.

ಆ ಹುಡುಗಿಯರ ಅಸ್ತವ್ಯಸ್ತ ಬಟ್ಟೆಗಳು, ಅವರು ಸೇದುತ್ತಿದ್ದ ಪ್ಯಾಕುಗಟ್ಟಲೇ ಸಿಗರೇಟುಗಳು, ಯಾವ ಮುಲಾಜೂ ಇಲ್ಲದಂತೆ ಹುಡುಗಿಯರ ಮೈಮೇಲೆ ಎಲ್ಲೆಲ್ಲೋ ಹರಿದಾಡುತ್ತಿದ್ದ ಹುಡುಗರ ಕೈಗಳು, ಮಬ್ಬುಗತ್ತಲಲ್ಲಿ ಪರಸ್ಪರ ದಾಹ ತೀರಿಸಿಕೊಳ್ಳುತ್ತಿದ್ದ ತುಟಿಗಳು, ಚಳಿಗಾಲದ ಹೀಟ್ ಟ್ರಾನ್ಸ್ ಫರ್ ಗಳು ಎಲ್ಲವನ್ನೂ ಸುತ್ತಮುತ್ತಲೇ ನೋಡುತ್ತಿದ್ದೆವು. ಎಥ್ನಿಕ್ ಡೇ ಹೆಸರಲ್ಲಿ ಕಾಲ್ ಸೆಂಟರ್ ಹುಡುಗೀರು ಸೀರೆ ಉಟ್ಟುಕೊಂಡು ಬಂದಾಗ ಮಾತ್ರ ನಮಗೆ ಬಹಳ ಸಂಕಟವಾಗುತ್ತಿತ್ತು. ಅದ್ಯಾಕೆ ನೆಟ್ಟಗೆ ಸೀರೆ ಉಟ್ಟುಕೊಂಡು ಬರುತ್ತಿರಲಿಲ್ವಾ ಅಂತೀರಾ? ಇಲ್ಲ ಹಾಗೇನಿಲ್ಲ , ಪಾಪ ಸರಿಯಾಗೇ ಸೀರೆ ಉಟ್ಟುಕೊಂಡೇ ಬಂದಿರ್ತಿದ್ರು, ಆದರೆ ಹುಡುಗೀರು ಸೀರೆ ಉಟ್ಟುಕೊಂಡು ಸಿಗರೇಟ್ ಸೇದುವುದನ್ನು ನೋಡೋಕಾಗೋಲ್ಲ ಕಣ್ರೀ. ಬೇಕಿದ್ರೆ ಜೀನ್ಸ್ ಟೀಶರ್ಟ್ ಅಥವಾ ಇನ್ನೇನನ್ನೋ ಹಾಕಿಕೊಂಡು ಸೇದಿದರೆ ಅದು ನೋಡೆಬಲ್.

ನೀವು ಹುಡುಗರು ಯಾವ ಬಟ್ಟೆ ಬೇಕಿದ್ರೂ ಹಾಕಿಕೊಂಡು ಏನ್ ಬೇಕಾದ್ರೂ ಮಾಡ್ತೀರಾ, ಹುಡುಗಿಯರಿಗೆ ಮಾತ್ರ ಕಟ್ಟು ಪಾಡು, ಶೋಷಣೆ, ದೌರ್ಜನ್ಯ ಅದು ಇದು ಅಂತ ಸ್ತ್ರೀವಾದಿಗಳು ಮೂದಲಿಸಿದರೂ ಪರ್ವಾಗಿಲ್ಲ, ಸೀರೆ ಉಟ್ಟುಕೊಂಡರೆ ಸಭ್ಯರೆಂಬ ಭಾವನೆಯೋ ಅಥವಾ ಸೀರೆ ಉಟ್ಟಿರುವವರೆಲ್ಲಾ ಅಮ್ಮಂದಿರಂತೆ ಎಂಬ ಮುಗ್ಧತೆಯೋ ಗೊತ್ತಿಲ್ಲ, ನಮಗೆ ಆ ಸೀರೆ ಮೇಲೆ ಚಿಕ್ಕಂದಿನಿಂದ ಏನೋ ಗೌರವ. ಇರ್ಲಿ ಬಿಡಿ. ಯಾರಿಗೂ ಏನೂ ಹೇಳುವ ಹಾಗಿಲ್ಲ, ಎಲ್ಲರೂ ೨೧ ನೇ ಶತಮಾನದವರರು, modern, forward, broad minded and independent. They know what is right and wrong. They don't want moral policing by anybody.

ಇದೇನು ಇಂಗ್ಲೀಷ್ ಬಂತು ಮಧ್ಯದಲ್ಲಿ !. ಹೋಗ್ಲಿ ಬಿಡಿ.. ಅದೆಲ್ಲ ವಿಷ್ಯ ಬೇಡ ಈಗ .

ನಮ್ಮ ತಲೆಬಿಸಿ ಇದ್ದದ್ದು ಟೀವಿ ಕ್ಯಾಮೆರಾಗಳ ಬಗ್ಗೆ ಮಾತ್ರ. ಅವರು ಎಲ್ಲೋ ಕ್ಯಾಮೆರಾ ಇಟ್ಟು ಫೋಕಸ್ ಮಾಡಿ ಕಾಲ್ ಸೆಂಟರ್ ಜನರ ಜೊತೆ ನಮ್ಮನ್ನೂ ಸೇರಿಸಿ ಟೀವಿನಲ್ಲಿ ತೋರಿಸಿ ಅದನ್ನು ನಮ್ಮೂರಲ್ಲೆಲ್ಲಾ ನೋಡಿ ಫಜೀತಿಯಾಗಿ ಬಿಡುತ್ತದೆ ಎಂಬ ಭಯ ಇತ್ತು. ಈ ಬ್ಲಾಗ್, ಇಂಟರ್ನೆಟ್ ನಲ್ಲೆಲ್ಲಾ ಏನೇ ಬರೆದುಕೊಂಡರೂ ಪರ್ವಾಗಿಲ್ಲ , ಯಾರೂ ಓದಲ್ಲ. ಆದರೆ ಟೀವಿ ಮಾತ್ರ ಹಾಗಲ್ಲ ನೋಡಿ. :)

ಯಾವುದೋ ವಿಷಯ ಹೇಳಲು ಹೋಗಿ ಏನೋ ಹೇಳುತ್ತಾ ಕೂತೆ. ನೀವೂ ಅದನ್ನು ಓದುತ್ತಾ ಕೂತಿರಿ. ಅಸಲು ವಿಷಯ ಇನ್ಮುಂದಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳ ಈ ಕಾಲದಲ್ಲಿ ನಿನ್ನೆಯ ಸುದ್ದಿ ಇವತ್ತಿಗೆ ಹಳತಾಗಿ ಹೋಗಿರುತ್ತದೆ. ಏನಾದರೂ ಘಟನೆಗಳು ನೆಡೆದಾಗ ಅವು ಹಸಿ ಇರುವಾಗಲೇ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು. ಇಂಗ್ಲೀಷ್ ಬರವಣಿಗೆಯ ಜಗತ್ತು ಇದನ್ನು ಯಾವತ್ತೋ ಅಳವಡಿಸಿಕೊಂಡಿದೆ. ಆದರೆ ಕನ್ನಡ ಜಗತ್ತು ಈಗೀಗ ಅಳವಡಿಸಿಕೊಳ್ಳುತ್ತಿದೆ. (ಅಥವಾ ಮೊದಲೇ ಅಳವಡಿಸಿಕೊಂಡಿದ್ದರೆ ನನ್ನ ಅಜ್ಞಾನವೆಂದು ಮನ್ನಿಸಿ). ಅಮೆರಿಕಾದಲ್ಲಿ ಟ್ವಿನ್ ಟವರ್ ದುರಂತ ಆದಾಗ ಕೆಲವೇ ತಿಂಗಳುಗಳಲ್ಲಿ ಆ ಘಟನೆಯದ ವಿವರಗಳನ್ನೊಳಗೊಂಡ ಹಲವಾರು ದಪ್ಪ ದಪ್ಪ ಪುಸ್ತಕಗಳು ಬಂದವು. ಆ ಘಟನೆ ಇನ್ನೂ ಜನರ ಮನಸಲ್ಲಿ ಹಸಿಯಿದ್ದುದರಿಂದ ಪುಸ್ತಕಗಳು ಬಿಸಿಬಿಸಿಯಾಗಿ ಖರ್ಚಾದವು. ಕನ್ನಡದಲ್ಲೂ ಕೂಡ ಮೊನ್ನೆ ಮೊನ್ನೆ ದೈತ್ಯ ಬರಹಗಾರ ರವಿ ಬೆಳಗೆರೆಯವರು ಮುಂಬೈ ಘಟನೆಯನ್ನು ವಿಷಯವಾಗಿರಿಸಿಕೊಂಡು ’ಮೇಜರ್ ಸಂದೀಪ್ ಹತ್ಯೆ’ ಎಂಬ ಪುಸ್ತಕ ಬರೆದು ಬಿಡುಗಡೆ ಮಾಡಿದರು. ಇದು ಭಾವನೆಗಳನ್ನು encash ಮಾಡಿಕೊಳ್ಳುವುದು ಎಂದು ಕೆಲವರು ಟೀಕಿಸಿದರೂ ಕೂಡ ಅಂತಹ ಘಟನೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು, ಜನರ ಮನಸಲ್ಲಿ ಇಳಿಯಲು ಸಹಕಾರಿಯಾಗುತ್ತವೆ.

ಈಗ ’ಚಂದ್ರಯಾನ’ದ ವಿಷಯಕ್ಕೆ ಬರೋಣ. ಕೆಲ ತಿಂಗಳುಗಳ ಹಿಂದೆ ನಮ್ಮ ವಿಜ್ಞಾನಿಗಳು ಚಂದ್ರಯಾನ-೧ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡರು. ಇದು ಭಾರತದ ಹೆಮ್ಮೆಯ ಸಾಧನೆ. ನಿನ್ನೆ ’ಚಂದ್ರಯಾನ’ ಪುಸ್ತಕ ಬಿಡುಗಡೆಯಾಯಿತು. ಟೀವಿ ನೈನ್ ಉದ್ಯೋಗಿ ಶ್ರೀ ಶಿವಪ್ರಸಾದ್ ಮತ್ತು ಮಿತ್ರರು ಇಸ್ರೋ ಚಂದ್ರಯಾನದ ಯೋಜನೆಯ ವಿಷಯವನ್ನಿಟ್ಟುಕೊಂಡು ಪುಸ್ತಕ ಬರೆದಿದ್ದಾರೆ. ಕನ್ನಡ ಬರವಣಿಗೆ ಲೋಕದಲ್ಲಿ ಮಾಹಿತಿ ಸಾಹಿತ್ಯದ ಅಗತ್ಯತೆ ದೃಷ್ಟಿಯಿಂದ ಈ ಪುಸ್ತಕ ನಿಜವಾಗಿಯೂ ಒಂದು ಒಳ್ಳೆಯ ಸಾಮಗ್ರಿಯಾಗಿ ಹೊರಬಂದಿದೆ. ಈ ಪುಸ್ತಕದಲ್ಲಿ ಚಂದ್ರನ ಬಗ್ಗೆ ವಿವರಗಳಿವೆ, ಮತ್ತೊಮ್ಮೆ ದೇಶ ದೇಶಗಳ ನಡುವೆ space race ಶುರುವಾಗಲು ಕಾರಣವಾದ ’ಚಂದ್ರಯಾನ-೧’ ಯೋಜನೆಯನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಮಾನವ ಚಂದ್ರನ ಮೇಲೆ ಏಕೆ ಅಷ್ಟು ಆಸಕ್ತಿ ತೋರಿಸುತ್ತಿದ್ದಾನೆ, ಚಂದ್ರನನ್ನು ಎಟುಕಿಸಿಕೊಂಡರೆ ಮನುಕುಲಕ್ಕೆ ಮುಂದೆ ಆಗುವ ಪ್ರಯೋಜನಗಳೇನು ಎಂಬುದಕ್ಕೆ ಇದುವರೆಗೂ ಜನಸಾಮಾನ್ಯರಿಗೆ ಗೊತ್ತೇ ಇರದ ರೋಚಕ ವಿಷಯಗಳಿವೆ. ಜೊತೆಗೆ ಭಾರತದ ಬಾಹ್ಯಾಕಾಶ, ಉಪಗ್ರಹ ಕ್ಷೇತ್ರದ ಹುಟ್ಟು ಬೆಳವಣಿಗೆಗಳ ವಿಷಯಗಳು ಮತ್ತು ವಿಶ್ವದ ಬಾಹ್ಯಾಕಾಶದ ಚಟುವಟಿಕೆಗಳ ವಿಷಯಗಳನ್ನೂ ಒಳಗೊಂಡಿದೆ. ಕೇರಳದ ’ತುಂಬಾ’ ಎಂಬ ಅತೀ ಕುಗ್ರಾಮವೊಂದರಲ್ಲಿ ಒಂದು ಹಳೇ ಚರ್ಚನ್ನೇ ಕಛೇರಿ ಮಾಡಿಕೊಂಡು ದನದ ಕೊಟ್ಟಿಗೆಯಲ್ಲಿ ಜೋಡಣೆ ಮಾಡಿ ಸೈಕಲ್ ನಲ್ಲಿ ಸಾಗಿಸಿ ಭಾರತದ ಮೊಟ್ಟ ಮೊದಲ ರಾಕೆಟನ್ನು ಆಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ ಘಟನೆಯನ್ನು ಓದುತ್ತಾ ಹೋದಂತೆ ಅಕ್ಷರಶಃ ರೋಮಾಂಚನವಾಗುತ್ತದೆ. ದೇಶಕ್ಕೋಸ್ಕರ ಅಮೆರಿಕದ ಉನ್ನತ ಹುದ್ದೆಗಳನ್ನು ತೊರೆದು ಬಂದ ವಿಜ್ಞಾನಿಗಳು, ಇಸ್ರೋ(ISRO) ಸಂಸ್ಥೆಯ ಹುಟ್ಟು, ಬೆಳವಣಿಗೆ ಎಂತವರಲ್ಲೂ ಆಶ್ಚರ್ಯ, ಹೆಮ್ಮೆ ಮೂಡಿಸದೇ ಇರಲಾರದು. ಬಾಹ್ಯಾಕಾಶದ ಬಗ್ಗೆ ವಿವರಗಳು, ಗಗನಯಾತ್ರೆಯ ಒಳಹೊರಗು, ಅಮೆರಿಕಾ - ರಷ್ಯಾ ಶೀತಲ ಸಮರದಿಂದ ಶುರುವಾದ ಸ್ಪರ್ಧೆ, ಚಂದ್ರನ ಬಗ್ಗೆ ಇರುವ ಕಥೆಗಳು, ನಂಬಿಕೆಗಳು, ಇದಕ್ಕೆ ಸಂಬಂಧಪಟ್ಟ ಜಗತ್ತಿನ ಸ್ವಾರಸ್ಯಕರ ಘಟನೆಗಳು ಮುಂತಾದ ಹಲವು ವಿಷಯಗಳಿಂದ ಪುಸ್ತಕವು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.


ಚಂದ್ರಯಾನದಂತಹ ಯೋಜನೆಗಳ ಬಗ್ಗೆ ಜನರಲ್ಲಿ ಆಸಕ್ತಿ, ಗೌರವ ಮೂಡಿಸಲು, ಮಕ್ಕಳನ್ನು, ಯುವಕರನ್ನು ಇಂತಹ ಕ್ಷೇತ್ರಗಳ ಕಡೆಗೆ ಸೆಳೆಯಲು, ಸಂಶೋಧನಾ ಕೆಲಸಗಳ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಲು ಇಂತಹ ಪುಸ್ತಕಗಳ ಅಗತ್ಯ ಬಹಳ ಇದೆ. ಪ್ರೌಢಶಾಲಾ ಮಟ್ಟದಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಸಹಕಾರಿಯಾಗಬಲ್ಲ, ಅಗತ್ಯವಾಗಿ ಓದಬೇಕಾದ ಪುಸ್ತಕ ಇದು. ಅಬ್ದುಲ್ ಕಲಾಂರವರು ಇದನ್ನು ಮೊದಲೇ ಅನೌಪಚಾರಿಕವಾಗಿ ಬಿಡುಗಡೆ ಮಾಡಿ ಶಭಾಷ್ಗಿರಿ ಕೊಟ್ಟಿದ್ದಾರೆ. ಇಂತಹ ಹೆಚ್ಚು ಹೆಚ್ಚು ಪುಸ್ತಕಗಳು ಬರಲಿ ಎಂದು ಆಸೆ ಪಡೋಣ.

ಇದರ ಜೊತೆಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ದರ್ಶಿ ನೂರು ವರ್ಷಕ್ಕಿಂತಲೂ ಹಿರಿಯರಾದ ಸುಧಾಕರ ಚತುರ್ವೇದಿಯವರಿಂದ ಶಿವಪ್ರಸಾದ್ ಅವರೇ ಬರೆದಿರುವ ’ಜಲಿಯನ್ ವಾಲಾಬಾಗ್’ ಎಂಬ ಪುಸ್ತಕವೂ ಬಿಡುಗಡೆಯಾಯಿತು. ನಾನಿನ್ನೂ ಓದಿಲ್ಲ.
*******************

ಇಷ್ಟೆಲ್ಲಾ ಮಾತಾಡಿ ಈಗ ಟೀವಿನೈನ್ ನಲ್ಲಿ ಅಪ್ಪ ಅಮ್ಮ ನನ್ನನ್ನು ಕಂಡದ್ದು ಹೇಗೆ ಅಂತಲೇ ಹೇಳಲಿಲ್ಲ ಅಲ್ವೇ?

ನಿನ್ನೆ ಚಂದ್ರಯಾನ ಮತ್ತು ಜಲಿಯನ್ ವಾಲಾಬಾಗ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಟೀವಿನೈನ್ ಕ್ಯಾಮರಾ ಪ್ರೇಕ್ಷಕರ ಗುಂಪನ್ನು ತೋರಿಸುವಾಗ ಅಲ್ಲೆಲ್ಲೋ ಮಧ್ಯದಲ್ಲಿ ಕೂತಿದ್ದ ನನ್ನನ್ನು ಕೂಡ ಫೋಕಸ್ ಮಾಡಿಬಿಟ್ಟಿದೆ. ಪುಸ್ತಕ ಬಿಡುಗಡೆ ಸುದ್ದಿಯನ್ನು ರಾತ್ರಿ ’ಜಸ್ಟ್ ಬೆಂಗಳೂರು’ ಎಂಬ ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಅಪ್ಪ ಅಮ್ಮ ಅದನ್ನು ನೋಡುವಾಗ ನಾನೂ ಅವರ ಕಣ್ಣಿಗೆ ಬಿದ್ದಿದ್ದೇನೆ ಅಷ್ಟೆ.

ಫೋನ್ ಮಾಡಿ ಇಷ್ಟು ವಿಷಯ ತಿಳಿದುಕೊಂಡ ನಂತರ ನಿರಾಳವೆನಿಸಿ ನಿದ್ದೆ ಹೋದೆ. :)

ಶುಕ್ರವಾರ, ಏಪ್ರಿಲ್ 3, 2009

ಬ್ಲಾಗ್ ಅಡುಗೆ !

ಕೆಲವು ಅಡುಗೆ ಬ್ಲಾಗ್ ಗಳನ್ನು ನೋಡುವುದು ಮೊದಲಿಂದಲೂ ನನಗೆ ಅಭ್ಯಾಸ. ಮಾತೆತ್ತಿದರೆ ಗೋಬಿ, ರೋಟಿ, ಕೇಕ್ ಅನ್ನದೇ, ಸುಮ್ಮನೇ ನಾರ್ಥ್ ಇಂಡಿಯನ್ನು, ಚೈನೀಸು, ಇಟಾಲಿಯನ್ನು ಅಂತ ಹೋಗದೇ ನಮ್ಮ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳ ಬಗ್ಗೆ ಬರೆಯುವ ಬ್ಲಾಗ್ ಗಳು ಖುಷಿ ಕೊಡುತ್ತವೆ. ಪಾಕಚಂದ್ರಿಕೆ, ನನ್ ಪ್ರಪಂಚ, ಮನೆ ಅಡುಗೆ, My Chow Chow Bhath ಮುಂತಾದ ಅಡುಗೆ ಬ್ಲಾಗ್ ಗಳು ನನ್ನ ಓದಿನ ಪಟ್ಟಿಯಲ್ಲಿವೆ.

ಅವುಗಳಲ್ಲಿ ಇನ್ನೊಂದು ವಿಶಿಷ್ಟ ಬ್ಲಾಗ್ ರುಚಿ ರುಚಿ ಅಡುಗೆ. ಈ ಬ್ಲಾಗ್ ಅಮೆರಿಕದಲ್ಲಿರುವ ಕೃಷ್ಣವೇಣಿಯವರದ್ದು . ನಿಯಮಿತವಾಗಿ ವಾರಕ್ಕೆ ೫ ಪದಾರ್ಥಗಳನ್ನು ಮಾಡಿ ಬಡಿಸುವ ಇವರ ಅಡುಗೆಯಷ್ಟೇ ಬ್ಲಾಗ್ ಕೂಡ ಅಚ್ಚುಕಟ್ಟು. ಅಡುಗೆಯ ಪ್ರತಿಯೊಂದು ಹಂತವನ್ನೂ ಫೋಟೋ ತೆಗೆದು ಹಾಕುವ ಇವರ ಶ್ರದ್ಧೆ ದೊಡ್ಡದು. ಬಾಳೆದಿಂಡಿನ ಮಜ್ಜಿಗೆ ಹುಳಿಯಿಂದ ಹಿಡಿದು ಪತ್ರೊಡೆ ತನಕ, ಸೋರೆಕಾಯಿ ದೋಸೆಯಿಂದ ಹಿಡಿದು ಮಂಗಳೂರು ಬನ್ಸ್ ವರೆಗೆ ವಿಧವಿಧದ ರೆಸಿಪಿಗಳಿಗೆ ರುಚಿ ರುಚಿ ಅಡುಗೆ ಬ್ಲಾಗ್ ನೋಡಬಹುದು. ಸದ್ಯಕ್ಕೆ ಅಲ್ಲಿ ಬಿಸಿ ಬಿಸಿ ಹಯಗ್ರೀವ ತಯಾರಿದೆ.

ಅವತ್ತಿಂದ ಯೋಚಿಸುತ್ತಲೇ ಇದ್ದೇನೆ, ನಾನೂ ಒಂದು ಅಡುಗೆ ಬ್ಲಾಗ್ ಮಾಡಿದರೆ ಹೇಗೆ ಅಂತ ! ಹೇಗೂ ವರ್ಷವಿಡೀ ಬರೆದರೂ ಮುಗಿಯದಷ್ಟು ಅಮ್ಮನ ಅಡುಗೆಗಳಿವೆ. ನೋಡೋಣ, ಹೆದರೋ ಅಗತ್ಯವಿಲ್ಲ.. ಯಾವುದಕ್ಕೂ ಲೋಕಸಭೆ ಚುನಾವಣೆ ಮುಗಿಯಲಿ. :-)

**************

ಕನ್ನಡದಲ್ಲಿ ಪರಿಸರದ ಬಗ್ಗೆ ಯಾವುದಾದರೂ e-magazine ಇರಬಹುದಾ ಎಂದು ಹುಡುಕಿದ ನನಗೆ ಸಿಕ್ಕಿದ್ದು ’ನಿಸರ್ಗ’. ಚಂದ ಚಂದದ ಚಿತ್ರಗಳೊಂದಿಗೆ, ಪ್ರಕೃತಿ, ಜೀವಿಗಳ ಕುರಿತ ಬರಹಗಳೊಂದಿಗೆ ಪ್ರತಿ ತಿಂಗಳಿಗೊಮ್ಮೆ pdf format ನಲ್ಲಿ ಬರುವ ಇ-ಪತ್ರಿಕೆಗಾಗಿ ಇಲ್ಲಿ ಚಿಟುಕಿ - ನಿಸರ್ಗ

****************

Happy weekendu...