ಮಂಗಳವಾರ, ಡಿಸೆಂಬರ್ 30, 2014

ಹನಿಮೂನ್ ಪಿರಿಯಡ್ ಮತ್ತು ಅದರಾಚೆಯ ದಿನಗಳು

ಹನಿಮೂನ್ ಪಿರಿಯಡ್ ಅಂದಾಕ್ಷಣ ಮದುವೆಯಾದ ಮೇಲಿನ ಮಧುಚಂದ್ರ ಅಂತ ಕಣ್ಣರಳಿಸಬೇಕಿಲ್ಲ. ಇದು ವಿದ್ಯಾರ್ಥಿಗಳ ಹನಿಮೂನ್. ಫೈನಲ್ ಇಯರ್ ಪರೀಕ್ಷೆಗಳನ್ನು ಮುಗಿಸಿ ಫಲಿತಾಂಶಕ್ಕೆ ಕಾಯುವ ದಿನಗಳು ಕಾಲೇಜು ವಿದ್ಯಾರ್ಥಿಗಳಿಗೆ ಒಂಥರಾ ಹನಿಮೂನ್ ಪಿರಿಯಡ್ ಇದ್ದಂತೆ. ಹೆಮ್ಮೆಯಿಂದ ಪದವಿಧರರಾಗಿ ಹೊರಜಗತ್ತಿಗೆ ನೆಗೆಯುವ ತವಕ. ಮತ್ತೊಂದೆಡೆ ಸುಂದರ ಕಾಲೇಜು ದಿನಗಳು ಮುಗಿದು ಹೋದವು ಎಂಬ ಬೇಸರ. ಫಲಿತಾಂಶ ಬರುತ್ತಿದ್ದಂತೇ ಉದ್ಯೋಗ ಹುಡುಕುವ ಆತಂಕವೂ ಶುರುವಾಗುತ್ತದೆ. ವೃತ್ತಿಪರ ಕೋರ್ಸುಗಳಲ್ಲಿ ಹಲವಾರು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲೇ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ವಿಶ್ವ ಆರ್ಥಿಕ ಹಿಂಜರಿತದ ಹಿನ್ನೆಲೆಯನ್ನಿಟ್ಟುಕೊಂಡು ಕಂಪನಿಗಳು ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತವೆ. ಆಯ್ಕೆಯಾದವರಿಗೆ ಕಂಪನಿಗಳು ಸೇರುವ ದಿನಾಂಕವನ್ನು ಕೊಟ್ಟಿರುತ್ತವೆ. ಕೆಲವರಿಗೆ ಅನಂತರ ತಿಳಿಸುವುದಾಗಿ ಹೇಳಿರುತ್ತವೆ. ಆ ದಿನಾಂಕಗಳು ಮುಂದೂಡಲ್ಪಡುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಕ್ಯಾಂಪಸ್ ಆಯ್ಕೆ ಆದವರೂ ಮತ್ತು ಆಗದವರೂ ಕೂಡ ಪರೀಕ್ಷೆಯ ಫಲಿತಾಂಶಗಳು ಬಂದಮೇಲೂ ಕಾಯುವಿಕೆ ಅನಿವಾರ್ಯವಾಗುತ್ತದೆ. ಉದ್ಯೋಗಕ್ಕಾಗಿ ಹಲವಾರು ಕಡೆ ರೆಸ್ಯೂಮ್ ಕಳಿಸಿ ಉತ್ತರಕ್ಕಾಗಿ, ಸಂದರ್ಶನದ ಕರೆಗಾಗಿ ಕಾಯಬೇಕಾಗುತ್ತದೆ. ಕೆಲವರಿಗೆ ಬೇಗ ಸಿಗಬಹುದು, ಮತ್ತು ಕೆಲವರು ಇನ್ನೂ ಪ್ರಯತ್ನ ಮಾಡಬೇಕಾಗಬಹುದು. ಈ ಕಾಲಾವಧಿ ಕೆಲವೇ ದಿನಗಳಿಂದ ಹಿಡಿದು ಹಲವು ತಿಂಗಳುಗಳವರೆಗೂ ಇರಬಹುದು. ಒಟ್ಟಿನಲ್ಲಿ ಈ ಕಾಲ ಮಹತ್ವದ್ದಾಗಿರುತ್ತದೆ. ಉದ್ಯೋಗಕ್ಕೆ ಮತ್ತು ವೈಯಕ್ತಿಕ ಬದುಕಿನ ಉನ್ನತಿಗೆ ಸಹಾಯವಾಗುವಂತಹ ಚಟುವಟಿಕೆಗಳನ್ನು ಮಾಡಲು ಅದು ಸಕಾಲ. ಈ ಸಮಯದಲ್ಲಿ ಏನು ಮಾಡುತ್ತೀರಿ ಎನ್ನುವುದು ನಿಮ್ಮ ಮುಂದಿನ ಬದುಕಿನ ದಿಕ್ಕನ್ನು ಬದಲಿಸಬಹುದು. ಇಂತಹ ಅಮೂಲ್ಯ ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಲು ಏನು ಮಾಡಬಹುದು ನೋಡೋಣ.

೧. ವಿಷಯಜ್ಞಾನ ಮತ್ತು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಿ: ಪರೀಕ್ಷೆ ಮುಗಿದ ಮೇಲೆ ಹಲವರು ತಮ್ಮ ಪಠ್ಯ ಪುಸ್ತಕಗಳ ಕಡೆ ನೋಡುವುದೇ ಇಲ್ಲ. ಹೀಗಾದರೆ ಓದಿದ್ದು ಕಾಲಕ್ರಮೇಣ ಮರೆತುಹೋಗುವ ಸಾಧ್ಯತೆ ಹೆಚ್ಚು. ನಿಮ್ಮ ಸಿಲೆಬಸ್ ಪುಸ್ತಕಗಳು ಮತ್ತು ಇನ್ನಿತರ ಸಂಬಂಧಿತ ಪುಸ್ತಕಗಳನ್ನು ತಿರುವಿಹಾಕುತ್ತಿರಿ.  ಮುಖ್ಯವಾದ ವಿಷಯಗಳನ್ನು ಆಗಾಗ ಓದಿ ನೆನಪಿಟ್ಟುಕೊಳ್ಳಿ. ಇದರ ಜೊತೆ ಪತ್ರಿಕೆ, ಟೀವಿ, ಪಠ್ಯೇತರ ಪುಸ್ತಕಗಳ ಮೂಲಕ  ಸಾಮಾನ್ಯಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಜ್ಞಾನ ಪಡೆದುಕೊಳ್ಳುತ್ತಿರಿ.

೨. ಗೆಳೆಯರ ಸಂಪರ್ಕದಲ್ಲಿರಿ: ಅದುವರೆಗೂ ದಿನವೂ ಒಡನಾಟದಲ್ಲಿದ್ದ ಗೆಳೆಯರು ಕಾಲೇಜು ಮುಗಿದಮೇಲೆ ದೂರದೂರವಾಗಬೇಕಾದ ಸಂದರ್ಭ ಬರುತ್ತದೆ. ಹಾಗಾಗಿ ಗೆಳೆಯರ ಸಂಪರ್ಕದಲ್ಲಿರಿ. ಈಗಿನ ಕಾಲದಲ್ಲಿ ಮಾಹಿತಿಯೇ ಶಕ್ತಿಯಾಗಿರುವುದರಿಂದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಗೆಳೆಯರ ಬಳಗ ಮುಖ್ಯ. ಆನ್ ಲೈನ್ ಗುಂಪುಗಳನ್ನು ಮಾಡಿಕೊಳ್ಳಬಹುದು. ಭೇಟಿಯಾಗುತ್ತಾ ಇರಬಹುದು. ಚರ್ಚೆ ಮಾಡಬಹುದು. ಒಬ್ಬೊಬ್ಬರಿಂದಲೂ ಹಲ ವಿಷಯಗಳು ತಿಳಿಯುತ್ತವೆ. ಉದ್ಯೋಗ ಪಡೆಯಲು ಸಹಾಯವಾಗುತ್ತವೆ.

೩. ಪರೀಕ್ಷೆಗಳಿಗೆ ತಯಾರಾಗಿ: ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ಯೋಚನೆ ಇರುವವರು ಮತ್ತು ಕೆ.ಎ.ಎಸ್., ಐ. ಎ.ಎಸ್., ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಯಸುವವರು ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳ ಪ್ರವೇಶ ಪರೀಕ್ಷೆಗಳಿಗೆ ತಯಾರಾಗಬಹುದು. ಕೋಚಿಂಗ್ ಕ್ಲಾಸ್ ಗಳಿಗೆ ಸೇರಬಹುದು. ಪುಸ್ತಕಗಳನ್ನು ಅಧ್ಯಯನ ಮಾಡಬಹುದು.

೪. ಅಂತರಜಾಲದ ಸಾಮಾಜಿಕೆ ತಾಣಗಳಲ್ಲಿ ತೊಡಗಿಕೊಳ್ಳಿ: ಈಗಿನ ಕಾಲದಲ್ಲಿ ಎಲ್ಲರೂ ಸಾಮಾಜಿಕ ತಾಣಗಳಲ್ಲಿ ಸಮಯ ಪೋಲುಮಾಡಬೇಡಿ ಎನ್ನುತ್ತಿರುವಾಗ ಈ ಸಲಹೆ ಆಶ್ಚರ್ಯ ಮೂಡಿಸಬಹುದು. ಆದರೆ ಈ ಸೋಶಿಯಲ್ ನೆಟ್ವರ್ಕುಗಳನ್ನು ಸರಿಯಾಗಿ ಬಳಸಿಕೊಂಡರೆ ನಿಜಕ್ಕೂ ಅದರಿಂದ ಒಳ್ಳೆಯ ಉಪಯೋಗ ಪಡೆದುಕೊಳ್ಳಬಹುದು. ಹೊಸ ಹೊಸ ಜನರ ಪರಿಚಯ, ಮಾಹಿತಿ ವಿನಿಮಯಕ್ಕೆ ಸಹಾಯಕಾರಿ. ಇದರಲ್ಲಿಯೂ ಕಿರಿಯರಿಗೆ ಉದ್ಯೋಗಕ್ಕೆ ಸಹಾಯ ಮಾಡುವ ಗುಂಪುಗಳಿರುತ್ತವೆ, ರೆಫರೆನ್ಸ್ ಒದಗಿಸುವ ಸಹೃದಯರಿರುತ್ತಾರೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಈಗಾಗಲೇ ತೊಡಗಿಕೊಂಡಿರುವ ವ್ಯಕ್ತಿಗಳಿರುತ್ತಾರೆ. ಅಂತವರ ಜೊತೆ ಆರೋಗ್ಯಕರ ಸಂವಹನ ಇಟ್ಟುಕೊಳ್ಳಿ. ಸುಮ್ಮನೇ ಹೊತ್ತುಕಳೆಯುವುದು, ಅನಗತ್ಯ ಚರ್ಚೆಗಳನ್ನು ಮಾಡುವುದು ಬಿಟ್ಟು ಸದುಪಯೋಗ ಪಡಿಸಿಕೊಳ್ಳಬಹುದು.

೫. ಸಾಫ್ಟ್ ಸ್ಕಿಲ್ ಹೆಚ್ಚಿಸಿಕೊಳ್ಳಿ, ಸರ್ಟಿಫಿಕೇಶ್ ಗಳನ್ನು ಮಾಡಿ:  ಎಷ್ಟೋ ಜನಕ್ಕೆ ಒಳ್ಳೆಯ ಜ್ಞಾನವಿದ್ದರೂ ಸಹ ಅದನ್ನು ಸರಿಯಾಗಿ ತೋರ್ಪಡಿಸಲು ಬರದೇ ಸಂದರ್ಶನಗಳಲ್ಲಿ ವಿಫಲರಾಗುತ್ತಾರೆ.  ಚೆನ್ನಾಗಿ ಮಾತನಾಡುವುದು, ಭಾಷೆಯ ಮೇಲಿನ ಹಿಡಿತ, ಒಳ್ಳೆಯ ವರ್ತನೆ ಇವುಗಳಿಗೆ ಸಾಫ್ಟ್ ಸ್ಕಿಲ್ಸ್ ಎನ್ನುತ್ತಾರೆ. ನಿಮಗೆ ಅದರಲ್ಲಿ ತೊಂದರೆ ಇದೆ ಅನ್ನಿಸಿದರೆ ಸಾಫ್ಟ್ ಸ್ಕಿಲ್ ಗಳನ್ನು ಹೆಚ್ಚಿಸಿಕೊಳ್ಳಲು ಸ್ಪೋಕನ್ ಲ್ಯಾಂಗ್ವೇಜ್ ತರಗತಿಗಳಿಗೆ ಸೇರಿಕೊಳ್ಳಬಹುದು, ಗೆಳೆಯರೊಂದಿಗೆ ಮಾತಾಡಿ, ಚರ್ಚೆ ಮಾಡಿ ಅಭ್ಯಾಸ ಮಾಡಿಕೊಂಡು ಆತ್ವವಿಶ್ವಾಸ ಪಡೆದುಕೊಳ್ಳಬಹುದು. ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಮತ್ತು ಉದ್ಯೋಗ ಪಡೆಯಲು ಸಹಾಯವಾಗುವಂತಹ ಹಲವು ಸರ್ಟಿಫಿಕೇಶನ್ ಕೋರ್ಸ್ ಗಳಿರುತ್ತವೆ. ಅವುಗಳನ್ನು ಮಾಡಿಕೊಳ್ಳಿ.

೬. ಸ್ಟಾರ್ಟ್ ಅಪ್ ಕಂಪನಿಗಳು ಮತ್ತು ನಿಮ್ಮ ಇಷ್ಟದ ಕ್ಷೇತ್ರದ ಕಂಪನಿಗಳನ್ನು ಸೇರಿ:  ಯಾವುದೇ ಪರಿಣಿತಿಗೆ ಅನುಭವವು ಬಹಳ ಮುಖ್ಯ. ಸಣ್ಣ ಸಣ್ಣ ಕಂಪನಿಗಳಲ್ಲಿ ದೊರಕುವ ಕೆಲಸ ಅನುಭವ ಅನೇಕಬಾರಿ ದೊಡ್ಡ ಕಂಪನಿಗಳಲ್ಲಿ ಸಿಗುವುದಿಲ್ಲ. ಹಾಗಾಗಿ ಬರೀ ದೊಡ್ಡ ಕಂಪನಿಗಳಿಗೆ ಮಾತ್ರ ಗುರಿ ಇಡದೇ ಸಣ್ಣ ಕಂಪನಿಗಳಲ್ಲಿ ಉದ್ಯೋಗಾವಕಾಶ ಸಿಕ್ಕಿದಾಗ ಸೇರಿಕೊಳ್ಳಿ. ಇದು ಮುಂದಿನ ವೃತ್ತಿ ಬದುಕಿಗೆ ಬಹಳ ಸಹಾಯವಾಗುತ್ತದೆ.  ಹಲವರಿಗೆ ತಮ್ಮ ಇಷ್ಟದ ನಿರ್ದಿಷ್ಟ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಗುರಿಯಿರುತ್ತದೆ.  ಉದಾಹರಣೆಗೆ ಬ್ಯಾಂಕಿಂಗ್ ಕ್ಷೇತ್ರ ಇಷ್ಟ ಇರುವ ಕಂಪ್ಯೂಟರ್ ಪದವೀಧರರಿಗೆ ಕೇವಲ ಜಾವಾದಂತಹ ಕೋಡಿಂಗ್ ಚೆನ್ನಾಗಿ ಗೊತ್ತಿದ್ದರೆ ಸಾಕಾಗುವುದಿಲ್ಲ. ಬ್ಯಾಂಕು ಹೇಗೆ ಕೆಲಸ ಮಾಡುತ್ತದೆ, ಗ್ರಾಹಕರು ವ್ಯವಹರಿಸಲು ಏನು ಮುಖ್ಯ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಹಾಗಾಗಿ ಅಂತಹ ಕ್ಷೇತ್ರದಲ್ಲಿ ಇಂಟರ್ನ್ ಶಿಪ್ ಅಥವಾ ತರಬೇತಿಯ ಅವಕಾಶ ಪಡೆದುಕೊಳ್ಳಲು ಪ್ರಯತ್ನಿಸಿ. ಇದರಿಂದ ನಿರ್ದಿಷ್ಟ ಕ್ಷೇತ್ರ ಪರಿಚಯ ಮತ್ತು ಅನುಭವ ಆಗುತ್ತದೆ. ಸ್ವಂತಉದ್ಯೋಗ, ವ್ಯವಹಾರಗಳನ್ನು ಶುರುಮಾಡುವ ಮನಸ್ಸಿರುವವರು ಮೊದಲು ಆ ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡಿ ತಿಳಿದುಕೊಳ್ಳುವುದು ಅಗತ್ಯ.

೭. ಪುಸ್ತಕಗಳನ್ನು ಓದಿ: ಓದಿನ ಅಭಿರುಚಿ ಇರುವವರಿಗೂ ಇದು ಒಳ್ಳೆಯ ಸಮಯ. ದಿನದಲ್ಲಿ ಕೆಲವು ಗಂಟೆಗಳ ಸಮಯವನ್ನು ಪಠ್ಯೇತರ ಪುಸ್ತಕಗಳ ಓದಿಗೆ ಮೀಸಲಿಡುಬಹುದು. ಕತೆ ಕಾದಂಬರಿ ಸೇರಿದಂತೆ ನಿಮ್ಮ ಆಸಕ್ತಿಯ ಯಾವುದೇ ಪುಸ್ತಕವನ್ನಾದರೂ ಓದಿ. ಜಗತ್ತಿನಲ್ಲಿನ ವಿವಿಧ ಕ್ಷೇತ್ರಗಳ ಸಾಧಕರ ಚರಿತ್ರೆಗಳನ್ನು, ಆತ್ಮಕತೆಗಳನ್ನು ಓದಿ. ಯಾವುದೇ ಪುಸ್ತಕವೂ ಕೂಡ ನಮ್ಮ ವ್ಯಕ್ತಿತ್ವ ಅರಳಲು ಸಹಾಯ ಮಾಡುತ್ತವೆ.

೮. ಹೊಸದೇನನ್ನಾದರೂ ತಯಾರುಮಾಡಿ: ನಿಮ್ಮ ಮಿತಿಯಲ್ಲಿ ನೀವು ಹೊಸ ಹೊಸ ಪ್ರಯೋಗಗಳನ್ನು ಮಾಡಬಹುದು.  ಉದಾಹರಣೆಗೆ ಕಂಪ್ಯೂಟರ್,ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿರುವವರು ಹೊಸ ಮೊಬೈಲ್ ಆಪ್ ತಯಾರು ಮಾಡುವುದೋ, ವೆಬ್ ಸೈಟ್ ವಿನ್ಯಾಸ ಮಾಡುವುದು ಅಥವಾ ನಿಮ್ಮ ಕಂಪ್ಯೂಟರ್ ನಲ್ಲೇ ಸಣ್ಣ ಸಣ್ಣ ತಂತ್ರಾಂಶಗಳನ್ನು ಬರೆದು ಪರೀಕ್ಷೆ ಮಾಡುವುದು, ಈಗ ಇರುವ ವೆಬ್ ಪೋರ್ಟಲ್ ಗಳನ್ನು ಇನ್ನೂ ಜನಸ್ನೇಹಿಯಾಗಿಸುವುದು ಹೇಗೆ ಎಂದು ಯೋಚಿಸಿ ಪರಿಹಾರ ಕಂಡುಹಿಡಿಯುವುದು ಇತ್ಯಾದಿ. ಇದರಿಂದ ನೀವು ಕಲಿತ ಪಠ್ಯ ವಿಷಯಗಳನ್ನು ಎಲ್ಲಿ ಹೇಗೆ ಬಳಕೆ ಮಾಡಬಹುದೆಂಬ ತಿಳುವಳಿಕೆಯೂ ಮೂಡುತ್ತದೆ.

೯. ಪ್ರವಾಸ ಹೋಗಿಬನ್ನಿ: ಕೆಲಸ ಪಡೆಯುವುದರ ಜೊತೆಗೆ ವೈಯಕ್ತಿಕ ಜೀವನವೂ ಮುಖ್ಯ. ಸುತ್ತಮುತ್ತಲಿನ ಸ್ಥಳಗಳ, ದೇಶವಿದೇಶಗಳ ಪ್ರವಾಸ ವ್ಯಕ್ತಿತ್ವ ವಿಕಸನಕ್ಕೆ ಮತ್ತು ನಮ್ಮ ಅರಿವಿನ ವಿಸ್ತಾರಕ್ಕೆ ಸಹಾಯಕಾರಿ. ಎಷ್ಟೋ ದಿನಗಳಿಂದ ನಿಮಗೆ ಯಾವುದೋ ಸ್ಥಳಕ್ಕೆ ಭೇಟಿ ನೀಡುವ ಆಸೆ ಇದ್ದಿರಬಹುದು. ಸಮಾನಮನಸ್ಕ ಗೆಳೆಯರ ಜೊತೆಗೋ ಅಥವಾ ಕುಟುಂಬದ ಜೊತೆಗೋ ಪ್ರವಾಸ ಹೋಗಿಬನ್ನಿ. ಇದರಿಂದ ಮನಸ್ಸಿಗೂ ರಿಲ್ಯಾಕ್ಸ್ ಆಗುವುದರ ಜೊತೆ ಹೊರಜಗತ್ತನ್ನು ನೋಡುವ ಅವಕಾಶವಾಗುತ್ತದೆ.

೧೦. ಫ್ಯಾಮಿಲಿ ಬಿಸಿನೆಸ್ ನೋಡಿಕೊಳ್ಳಿ: ಅನೇಕರಿಗೆ ಅವರ ಕುಟುಂಬದ ವ್ಯಾಪಾರ ವ್ಯವಹಾರದ ಹಿನ್ನೆಲೆ ಇರುತ್ತದೆ. ಇಷ್ಟು ದಿನ ಓದು ಮುಂತಾದ ಕಾರಣಗಳಿಂದ ಅದರಲ್ಲಿ ತೊಡಗಿಕೊಳ್ಳದೇ ಇರಬಹುದು. ಈಗ ಸ್ವಲ್ಪ ಸಮಯ ಅದರಲ್ಲಿ ತೊಡಗಿಕೊಂಡು ಅದರ ಪರಿಚಯ ಮಾಡಿಕೊಂಡು ಅನುಭವ ಪಡೆಯಬಹುದು. ಅದು ಖಂಡಿತ ಮುಂದೆ ಸಹಾಯವಾಗುತ್ತದೆ. ನಿಮ್ಮ ತೋಟ ಗದ್ದೆ ಇದ್ದರೆ ಆ ಕೃಷಿ ಚಟುವಟಿಕೆಗಳ ಅನುಭವ ಮಾಡಿಕೊಳ್ಳಿ.

೧೧. ನಿಮ್ಮ ಬಂಧು ಬಳಗ ಮತ್ತು ಪರಿಚಿತರಿಗೆ ನಿಮ್ಮ ವಿದ್ಯಾರ್ಹತೆ, ಆಸಕ್ತಿಯ ಕ್ಷೇತ್ರದ ಬಗ್ಗೆ ವಿವರವಾಗಿ ತಿಳಿಸಿ ಅವಕಾಶಗಳು ಕಂಡುಬಂದಾಗ  ನಿಮಗೆ ತಿಳಿಸಲು, ಸಹಾಯ ಮಾಡಲು ನಿರ್ಭಿಡೆಯಿಂದ ಹೇಳಿ. ಆದರೆ ಯಾರನ್ನೂ ನಿಮಗೆ ಕೆಲಸ ಕೊಡಿಸಲು ಪದೇ ಪದೇ ಪೀಡಿಸಬೇಡಿ.


’ಖಾಲಿತಲೆ ಶೈತಾನನ ಕಾರ್ಯಾಗಾರ’ ಎನ್ನುವ ಮಾತೊಂದಿದೆ. ತಲೆ ಚುರುಕಾಗಿರಲು ನಮ್ಮ ಮೆದುಳಿಗೆ ಕೆಲಸ ಕೊಡುತ್ತಿರಬೇಕು. ಹಾಗಾಗಿ ಪೂರ್ತಿ ಚಟುವಟಿಕೆಯಿಂದಿರಿ. ಯಶಸ್ಸು ನಿಮ್ಮದಾಗಲಿ.

****

ಡಿಸೆಂಬರ್ ೧೦, ೨೦೧೪ರ 'ವಿಜಯವಾಣಿ' ಪತ್ರಿಕೆಯ 'ಮಸ್ತ್' ಪುರವಣಿಯಲ್ಲಿ ಇದು ಪ್ರಕಟವಾಗಿದ್ದು ಹೀಗೆ: ಡಿಗ್ರಿ ಮುಗೀತು, ಮುಂದ?

ಸೋಮವಾರ, ಅಕ್ಟೋಬರ್ 6, 2014

'ಕೊಮಗಟ ಮರು' ಘಟನೆಗೆ ನೂರು ವರ್ಷ

ಭಾರತದ ಸ್ವಾತಂತ್ರಪೂರ್ವ ಇತಿಹಾಸವು ಅನೇಕ ರೋಚಕ ಘಟನೆಗಳನ್ನೊಳಗೊಂಡಿದೆ. ಆ ಕಾಲದಲ್ಲಿ ಬ್ರಿಟಿಶರ ದಬ್ಬಾಳಿಕೆ ವಿರುದ್ಧ ಭಾರತೀಯ ಮನಸ್ಸುಗಳೆಲ್ಲಾ ಹಲವಾರು ರೀತಿಯಲ್ಲಿ ಸೆಟೆದು ನಿಲ್ಲಲು ಪ್ರಯತ್ನಪಟ್ಟಿದ್ದು ಕಂಡುಬರುತ್ತದೆ. ಅನೇಕ ವ್ಯಕ್ತಿಗಳು ತಮ್ಮ ಮಿತಿಯಲ್ಲೇ ಬ್ರಿಟಿಶರನ್ನು ಎದುರಿಸಿ ನಿಂತ ದೃಷ್ಟಾಂತಗಳೂ ಅನೇಕ. ‘ಕೊಮಗಟ ಮರು ಘಟನೆಎನ್ನುವ ಈ ಒಂದು ಘಟನೆ ಕೇವಲ ಭಾರತೀಯ ಇತಿಹಾಸದಲ್ಲಲ್ಲದೇ ಕೆನಡಾ ದೇಶದ ಇತಿಹಾಸಕ್ಕೂ ಕೂಡ ಸಂಬಂಧಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ.


ಭಾರತವು ಬ್ರಿಟಿಶ್ ಆಳ್ವಿಕೆಯಲ್ಲಿ ಸಿಲುಕಿದ್ದ ಕಾಲದಲ್ಲಿಯೇ ಬ್ರಿಟಿಶರು ಜಗತ್ತಿನ ಹಲವು ಇತರ ದೇಶಗಳಲ್ಲೂ ಕೂಡ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡು ಆಳುತ್ತಿದ್ದರು. ಅವುಗಳಲ್ಲಿ ಕೆನಡಾ ದೇಶ ಕೂಡ ಒಂದು. ಕೆನಡಾದಲ್ಲಿ ಮೂಲನಿವಾಸಿಗಳ ಸಂಖ್ಯೆ ಬಹಳ ಕಡಿಮೆ. ಹಾಗಾಗಿ ಅಲ್ಲಿ ಭಾರತೀಯರೂ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ಜನರು ವಲಸೆ ಹೋಗಿ ನೆಲೆಸಿದ್ದರು. ಭಾರತೀಯರಲ್ಲಿ ಹೆಚ್ಚಿನ ಜನ ಪಂಜಾಬಿಗಳು. ಭಾರತದಲ್ಲಿ ಅಷ್ಟೇನೂ ಚೆನ್ನಾಗಿರದಂತಹ ಆರ್ಥಿಕ ಪರಿಸ್ಥಿತಿಯಲ್ಲಿ ಅವರೆಲ್ಲರೂ ಉದ್ಯೋಗಕ್ಕೋಸ್ಕರ ಅಲ್ಲಿಗೆ ಹೋಗಿದ್ದವರು. ಆದರೆ ಅಲ್ಲಿಗೆ ಹೋದ ನಂತರ ಅವರೆಲ್ಲಾ ಬಹಳಷ್ಟು ತೊಂದರೆ ಮತ್ತು ಭೇದಭಾವಗಳನ್ನು ಅನುಭವಿಸಬೇಕಾಯಿತು. ಕೆನಡಾದಲ್ಲಿದ್ದ ಬಿಳಿಯ ಜನರಿಗೆ ಕಂದುಚರ್ಮದ ಜನರು ತಮ್ಮ ದೇಶಕ್ಕೆ ಬರುವುದು ಇಷ್ಟವಿರಲಿಲ್ಲ. ಅವರಿಗೆ ಈ ಜನರು ಕಾರ್ಖಾನೆಗಳಲ್ಲಿ, ಮಿಲ್ಲುಗಳಲ್ಲಿ, ಲಂಬರ್ ಯಾರ್ಡುಗಳಲ್ಲಿ ತಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತಾರೆಂಬ ಆತಂಕವಿತ್ತು. ಈ ಅಭದ್ರತೆಯ ಭಾವ ಹೆಚ್ಚಾದಂತೆ ಏಶಿಯಾ ಮೂಲದ ಜನರ ವಲಸೆಯನ್ನು ತಡೆಗಟ್ಟಲು ಬ್ರಿಟಿಶ್ ಕೊಲಂಬಿಯಾ ಪ್ರಾಂತ್ಯದ ಆಡಳಿತ ಒಂದು ಕಾನೂನನ್ನು ತರುತ್ತದೆ. ಕೆನಡಾ ದೇಶಕ್ಕೆ ಬರುವವರು ತಮ್ಮ ಮೂಲದೇಶದಿಂದ ನೇರವಾಗಿ ಒಂದೇ ಪ್ರಯಾಣದಲ್ಲಿ ಬರಬೇಕು ಹಾಗೂ ೨೦೦ ಡಾಲರ್ ಮೊತ್ತದ ಹಣವನ್ನು ಇಟ್ಟುಕೊಂಡು ಬರಬೇಕು. ಅಂತವರಿಗೆ ಮಾತ್ರ ದೇಶದೊಳಗೆ ಪ್ರವೇಶ ಕೊಡುವುದಾಗಿ ಆ ಕಾನೂನಿನಲ್ಲಿ ಹೇಳಲಾಗಿರುತ್ತದೆ. ಇದರ ಉದ್ದೇಶ ಭಾರತದಂತಹ ದೇಶದಿಂದ ವಲಸೆ ತಡೆಯುವುದೇ ಆಗಿರುತ್ತದೆ. ಏಕೆಂದರೆ ಆಗ ಭಾರತವೂ ಸೇರಿದಂತೆ ಹಲವಾರು ದೇಶಗಳಿಂದ ಕೆನಡಾಗೆ ನೇರ ಹಡಗಿನ ಸಂಪರ್ಕವೂ ಇರಲಿಲ್ಲ. ಜೊತೆಗೆ ವಲಸೆ ಬರುವವರಿಗೆ ಆ ಕಾಲದಲ್ಲಿ ದೊಡ್ಡ ಮೊತ್ತವಾಗಿದ್ದ ಅಷ್ಟು ಹಣವನ್ನು ಇಟ್ಟುಕೊಂಡು ಬರಲೂ ಸಾಧ್ಯವಿರಲಿಲ್ಲ. ಸಾಮಾನ್ಯ ಭಾರತೀಯನೊಬ್ಬನ ದಿನದ ಗಳಿಕೆ ಆಗ ಹತ್ತು ಸೆಂಟ್ ಗಳಷ್ಟೇ ಇತ್ತು. ಇಷ್ಟಲ್ಲದೇ ಕೆನಡಾ ಸರ್ಕಾರ ಹಡಗಿನ ಕಂಪನಿಗಳಿಗೆ ಭಾರತೀಯರಿಗೆ ಪ್ರಯಾಣದ ಟಿಕೆಟ್ ಕೊಡದಿರುವಂತೆ ಕೂಡ ಒತ್ತಡ ಹಾಕಲು ಆರಂಭಿಸಿತ್ತು. ೧೯೦೭ರಲ್ಲಿ ಕೆನಡಾದಲ್ಲಿದ್ದ ಭಾರತೀಯರಿಗೆ ಮತದಾನದ ಹಕ್ಕನ್ನು ತೆಗೆದುಹಾಕಲಾಯಿತು. ಭಾರತೀಯರು ಸಾರ್ವಜನಿಕ ಕಛೇರಿಯಲ್ಲಿ, ನ್ಯಾಯಾಂಗದಲ್ಲಿ ಕೆಲಸ ಮಾಡಲು, ಅಕೌಂಟೆಂಟ್, ವಕೀಲ ವೃತ್ತಿಗಳಲ್ಲಿ ತೊಡಗಿಕೊಳ್ಳಲು ಅನುಮತಿ ನಿರಾಕರಿಸಲಾಯಿತು. ಇವೆಲ್ಲವೂ ಕೂಡ ಕಂದು ಹಾಗೂ ಕಪ್ಪು ಜನರ ವಲಸೆ ತಡೆಯುವ ಉದ್ದೇಶದಿಂದಲೇ ಆಗಿತ್ತು. ಇಂತಹ ವರ್ಣಭೇದದ ಕಾನೂನನ್ನು ಎದುರಿಸುವ ಪ್ರಯತ್ನಗಳಲ್ಲಿ ಕೊಮಗಟುಮರುಘಟನೆ ಇತಿಹಾಸ ಪ್ರಸಿದ್ಧ.

ಈ ವಲಸೆ ಕಾನೂನಿನಿಂದ ಕೆರಳಿದವರು ಗುರ್ದಿತ್ ಸಿಂಗ್ ಎನ್ನುವ ದೇಶಭಕ್ತ ವ್ಯಾಪಾರಿ. ಭಾರತವನ್ನು ಬ್ರಿಟಿಶರಿಂದ ಮುಕ್ತಗೊಳಿಸಲು ಅಮೆರಿಕಾದಲ್ಲಿ ಸ್ಥಾಪಿತವಾಗಿದ್ದ ಗದರ್ಪಕ್ಷದ ಬೆಂಬಲಿಗರೂ ಆಗಿದ್ದ ಅವರು ಈ ಕಾನೂನಿಗೆ ಸವಾಲೆಸೆಯುವ ಉದ್ದೇಶದಿಂದ ಒಂದು ಯೋಜನೆ ರೂಪಿಸುತ್ತಾರೆ. ಅದರಂತೆ ಅವರು ಒಂದು ಜಪಾನಿ ಉಗಿಹಡಗನ್ನು ಬಾಡಿಗೆಗೆ ಪಡೆಯುತ್ತಾರೆ. ಅದರ ಹೆಸರೇಕೊಮಗಟಮರು’. ಅದರಲ್ಲಿ ಹಾಂಕಾಂಗಿನಿಂದ ಕೆನಡಾದ ವ್ಯಾಂಕೋವರ್ ನಗರಕ್ಕೆ ಪ್ರಯಾಣ ಮಾಡಲು ನಿರ್ಧರಿಸುತ್ತಾರೆ. ಅಂತೆಯೇ ಹಾಂಕಾಂಗಿನಲ್ಲಿರುವ ಗುರುದ್ವಾರದಲ್ಲಿ ನೆಲೆಸಿದ್ದ ವ್ಯಾಪಾರಿಗಳಾದ ಗುರ್ದಿತ್ ಸಿಂಗ್, ದಲ್ಜಿತ್ ಸಿಂಗ್ ಮತ್ತು ವೀರ್ ಸಿಂಗ್ ಭಾರತದ ಜನರು ಕೆನಡಾಗೆ ಹೋಗಲು ಸಾಧ್ಯವಾಗುವಂತೆ ಹಡಗಿನ ಪ್ರಯಾಣಕ್ಕೆ ಟಿಕೆಟುಗಳನ್ನು ಮಾರಾಟ ಮಾಡಲು ಶುರುಮಾಡುತ್ತಾರೆ. ಆಗ ಹಾಂಕಾಂಗಿನಲ್ಲಿನ ಬ್ರಿಟಿಶ್ ಸರ್ಕಾರವು ಇವರ ಚಟುವಟಿಕೆಗಳ ಮೇಲೆ ಕಣ್ಣಿಡುತ್ತದೆ. ಪ್ರಯಾಣಕ್ಕೆ ಇನ್ನು ಎರಡು ದಿನಗಳ ಬಾಕಿ ಇರುವಾಗ ಗುರ್ದಿತ್ ಸಿಂಗರನ್ನು ಬಂಧಿಸಿ ಹಡಗನ್ನು ಪೋಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಮಾರ್ಚ್ ೨೪, ೧೯೧೪ರಂದು ಗುರ್ದಿತ್ ಸಿಂಗರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಏಪ್ರಿಲ್ ೪, ೧೯೧೪ರಂದು ಹಡಗಿನ ಪ್ರಯಾಣಕ್ಕೆ ಗವರ್ನರ್ ಅನುಮತಿ ದೊರೆಯುತ್ತದೆ. ೧೫೦ ಜನ ಭಾರತೀಯರನ್ನು ತುಂಬಿಕೊಂಡ ಹಡಗು ಅಲ್ಲಿಂದ ಪ್ರಯಾಣ ಆರಂಭಿಸುತ್ತದೆ. ಶಾಂಘೈ ನಗರದಲ್ಲಿ ೧೧೧ ಜನರು ಸೇರಿಕೊಳ್ಳುತ್ತಾರೆ. ಪೋರ್ಟ್ ಆಫ್ ಮೋಜಿಯಲ್ಲಿ ೮೬ ಜನರು, ಯೊಕೊಹೊಮಾ ಬಂದರಿನಲ್ಲಿ ೧೪ ಜನರು ಸೇರಿಕೊಂಡು ಒಟ್ಟು ೩೭೬ ಪ್ರಯಾಣಿಕರಾಗುತ್ತಾರೆ. ಆ ಪ್ರಯಾಣಿಕರಲ್ಲಿ ೩೪೦ ಜನ ಸಿಖ್ಖರು, ೧೨ ಹಿಂದೂಗಳು ಮತ್ತು ೨೪ ಮುಸ್ಲಿಮರು. ಕೆನಡಾದಲ್ಲಿ ಮಾರಾಟ ಮಾಡಲು ೧೫೦೦ಟನ್ ಕಲ್ಲಿದ್ದಲನ್ನು ಸಹ ತುಂಬಿಕೊಳ್ಳಲಾಗುತ್ತದೆ. ಹಡಗು ಮೇ ೩ರಂದು ಕೆನಡಾ ಕಡೆಗೆ ಪ್ರಯಾಣ ಬೆಳೆಸುತ್ತದೆ. ಆ ಸಮಯದಲ್ಲಿ ಚೀನಾದಲ್ಲಿದ್ದ ಅನೇಕ ಸಿಖ್ ಮುಖಂಡರು ಭಾರತೀಯ ವಲಸಿಗರ ಬಗ್ಗೆ ಕೆನಡಾದಲ್ಲಿ ಬ್ರಿಟಿಶ್ ಆಡಳಿತಕ್ಕಿರುವ ಧೋರಣೆಯ ಪರಿಸ್ಥಿತಿಯನ್ನು ಪ್ರಯಾಣಿಕರಿಗೆ ವಿವರಿಸಿ ಎಚ್ಚರಿಸುತ್ತಾರೆ.

"೪೦೦ ಭಾರತೀಯ ಜನರನ್ನು ಹೊತ್ತ ಹಡಗು ಕೆನಡಾ ಕಡೆಗೆ ಪ್ರಯಾಣ ಬೆಳೆಸಿದೆ" ಎಂದು ಜರ್ಮನ್ ಕೇಬಲ್ ಕಂಪನಿಯು ಜರ್ಮನ್ ಪ್ರೆಸ್ ಗೆ ತಂತಿ ಸಂದೇಶ ಕಳಿಸುತ್ತದೆ. ಇದು ಬ್ರಿಟಿಶ್ ಪ್ರೆಸ್ಸಿಗೂ ಕೂಡ ತಲುಪಿ ಕೆನಡಾದ ಪತ್ರಿಕೆಗಳು ಇದನ್ನು ದೊಡ್ಡ ಸುದ್ದಿಯನ್ನಾಗಿ ಮಾಡುತ್ತವೆ. ವ್ಯಾಂಕೋವರ್ ನಗರದಪ್ರಾವಿನ್ಸ್ಎಂಬ ಪತ್ರಿಕೆಯುಹಡಗಿನ ತುಂಬಾ ಹಿಂದೂಗಳು ವ್ಯಾಕೋಂವರ್ ಗೆ ಬರುತ್ತಿದ್ದಾರೆಎಂಬ ತಲೆಬರಹ ಪ್ರಕಟಿಸುತ್ತದೆ. ಬ್ರಿಟಿಶ್ ಕೊಲಂಬಿಯಾ ಪ್ರೆಸ್ಕೆನಡಾಗೆ ಹಿಂದೂಗಳ ಧಾಳಿಎಂಬಂತಹ ಶೀರ್ಷಿಕೆಗಳನ್ನು ಪ್ರಕಟಿಸುತ್ತದೆ. ಬ್ರಿಟಿಶ್ ಕೊಲಂಬಿಯಾ ಆಡಳಿತಕ್ಕೆ ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ಹೇಗಾದರೂ ಮಾಡಿ ಭಾರತೀಯ ವಲಸಿಗರನ್ನು ತಡೆಯಬೇಕು ಎಂದು ತಯಾರಾಗುತ್ತದೆ. ಈಗಾಗಲೇ ಕೆನಡಾದಲ್ಲಿ ನೆಲೆಯೂರಿದ್ದ ಭಾರತೀಯರು ಹಡಗಲ್ಲಿ ಬರುತ್ತಿರುವ ಜನರನ್ನು ಸುರಕ್ಷಿತವಾಗಿ ಕೆನಡಾದೊಳಗೆ ಬರುವಂತೆ ಮಾಡಲು ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಗುರುದ್ವಾರದಲ್ಲಿ ಸಭೆಗಳಾಗುತ್ತವೆ. ಬರುವವರ ಸಹಾಯಕ್ಕಾಗಿ ಹಣವನ್ನು ಸೇರಿಸಲಾಗುತ್ತದೆ. ಬ್ರಿಟಿಶ್ ಆಡಳಿತದ ವಿರೋಧವನ್ನು ಎದುರಿಸಲು ಎಲ್ಲಾ ಭಾರತೀಯ ಜನರು ಒಗ್ಗಟ್ಟಾಗಿ ತಯಾರಾಗುತ್ತಾರೆ.

ಮೇ ೨೩, ೧೯೧೪ರಂದು ಕೊಮಗಟಮರು ಹಡಗು ವ್ಯಾಂಕೋವರ್ ಬಂದರನ್ನು ತಲುಪುತ್ತದೆ.. ಈ ಹಡಗು ವಲಸೆ ಕಾನೂನನ್ನು ಪಾಲಿಸದೇ ಬಂದಿರುವುದರಿಂದ ಪ್ರಯಾಣಿಕರನ್ನು ಬಿಟ್ಟುಕೊಳ್ಳಲು ಆಗುವುದಿಲ್ಲವೆಂದು ಕೆನಡಾದ ಅಧಿಕಾರಿಗಳು ನಿರಾಕರಿಸುತ್ತಾರೆ. ನಿಯಮದ ಪ್ರಕಾರ ಈ ಹಡಗು ವಲಸಿಗರ ಮೂಲ ಸ್ಥಳದಿಂದ ಒಂದೇ ನೇರ ಪ್ರಯಾಣದಲ್ಲಿ ಬಂದಿಲ್ಲ ಹಾಗೂ ಬ್ರಿಟಿಶ್ ಕೊಲಂಬಿಯಾ ರಾಜ್ಯದೊಳಗೆ ಬರಲು ಪ್ರತಿಯೊಬ್ಬ ಪ್ರಯಾಣಿಕ ೨೦೦ ಡಾಲರ್ ಹಣವನ್ನು ಇಟ್ಟುಕೊಂಡು ಬಂದಿಲ್ಲ ಎಂಬುದು ಅವರ ವಾದವಾಗಿರುತ್ತದೆ. ಕೆನಡಾದಲ್ಲಿದ್ದ ಭಾರತೀಯರೂ ಕೂಡ ವಕೀಲರನ್ನು ಇಟ್ಟುಕೊಂಡು ತಯಾರಾಗಿರುತ್ತಾರೆ. ಭಾರತವು ಬ್ರಿಟಿಶರ ಸಾಮ್ರಾಜ್ಯದ ಭಾಗವಾಗಿರುವುದರಿಂದ ಈ ನಿಯಮವು ತಮಗೆ ಅನ್ವಯಿಸುವುದಿಲ್ಲವೆಂದು ಭಾರತೀಯ ವಲಸಿಗರು ಪ್ರತಿಪಾದಿಸುತ್ತಾರೆ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಬ್ರಿಟಿಶ್ ಕೊಲಂಬಿಯಾದ ಆಡಳಿತ ಮತ್ತು ಭಾರತೀಯರ ನಡುವೆ ಬಿರುಸಿನ ಕಾನೂನು ಹೋರಾಟ ಶುರುವಾಗುತ್ತದೆ. ಇದು ಎರಡು ತಿಂಗಳವರೆಗೆ ನಡೆಯುತ್ತದೆ. ಅಷ್ಟು ಕಾಲದವರೆಗೆ ಅಷ್ಟೂ ಜನ ಪ್ರಯಾಣಿಕರೊಂದಿಗೆ ಹಡಗು ಬಂದರಿನಲ್ಲಿ ಅತಂತ್ರವಾಗಿ ನಿಲ್ಲಬೇಕಾಗುತ್ತದೆ. ಎರಡು ತಿಂಗಳ ಹೋರಾಟದ ನಂತರ ಕೇವಲ ೨೪ ಜನರಿಗೆ ಮಾತ್ರ ಬ್ರಿಟಿಶ್ ಕೊಲಂಬಿಯಾ ಪ್ರವೇಶಿಸಲು ಅನುಮತಿ ದೊರೆಯುತ್ತದೆ. ಕೆನಡಾದ ಪೋಲೀಸರು ಮತ್ತು ಅಧಿಕಾರಿಗಳು ಹಡಗಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಅದರಲ್ಲಿದ್ದ ಪ್ರಯಾಣಿಕರು ಕಲ್ಲಿದ್ದಲನ್ನು ಎಸೆದು ಅವರನ್ನು ಹಿಮ್ಮೆಟ್ಟಿಸುತ್ತಾರೆ. ಕೊನೆಗೆ ನೌಕಾದಳದ ಹಡಗುಗಳನ್ನು ಬಳಸಿ ಜುಲೈ ೨೩, ೧೯೧೪ರಂದು ಉಳಿದ ಪ್ರಯಾಣಿಕರೊಂದಿಗೆ ಬಲವಂತವಾಗಿ ಹಡಗನ್ನು ಹೊರದಬ್ಬಲಾಗುತ್ತದೆ.

ಅಲ್ಲಿಂದ ತಿರುಗಿ ಪ್ರಯಾಣ ಹೊರಟ ಹಡಗು ಸೆಪ್ಟೆಂಬರ್ ೨೬, ೧೯೧೪ರಂದು ಕೋಲ್ಕತಾವನ್ನು ತಲುಪುತ್ತದೆ. ಕೋಲ್ಕತಾವನ್ನು ತಲುಪುತ್ತಿದ್ದಂತೆಯೇ ಈ ಹಡಗನ್ನು ತಡೆದು ಅದರಲ್ಲಿನ ಪ್ರಯಾಣಿಕರನ್ನು ರಾಜಕೀಯ ದಂಗೆಕೋರರೆಂಬ ಆರೋಪ ಹೊರಿಸಿ ಬಂಧಿಗಳನ್ನಾಗಿ ಮಾಡಿ ಅವರ ಸಮೇತ ಹಡಗನ್ನು ೧೭ಮೈಲಿ ದೂರದ ಬೋಜ್ ಬೋಜ್ಎಂಬಲ್ಲಿಗೆ ಕರೆದೊಯ್ಯಲಾಗುತ್ತದೆ. ಈ ಬಗ್ಗೆ ಗುರ್ದಿತ್ ಸಿಂಗರು ವಿಚಾರಿಸಿದಾಗ ಪ್ರಯಾಣಿಕರನ್ನು ಕೋಲ್ಕೋತಾದಿಂದ ರೈಲಿನಲ್ಲಿ ಪಂಜಾಬಿಗೆ ಕಳುಹಿಸಿಕೊಡಲಾಗುವುದೆಂದು ಬ್ರಿಟಿಶ್ ಅಧಿಕಾರಿಗಳು ತಿಳಿಸುತ್ತಾರೆ. ತಿಂಗಳುಗಳ ಕಾಲ ಸಮುದ್ರ ಪ್ರಯಾಣದಿಂದ ಮತ್ತು ಕೆನಡಾಗೆ ಪ್ರವೇಶ ಸಿಗದೇ ಹಿಂದಿರುಗಿ ಬಂದಿದ್ದರಿಂದ ಬೇಸತ್ತಿದ್ದ ಪ್ರಯಾಣಿಕರು ಇದನ್ನು ವಿರೋಧಿಸುತ್ತಾರೆ. ಹಲವರಿಗೆ ಕೋಲ್ಕೋತಾದಲ್ಲೇ ಇರುವ ಮನಸ್ಸಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಜೊತೆ ಕೊಂಡೊಯ್ದಿದ್ದ ಪವಿತ್ರ ಧರ್ಮಗ್ರಂಥ ಗುರುಗ್ರಂಥಸಾಹೀಬನ್ನು ಕೋಲ್ಕೋತಾದ ಗುರುದ್ವಾರದಲ್ಲಿ ಇಡಬೇಕಿರುತ್ತದೆ. ಹಾಗಾಗಿ ಪ್ರಯಾಣಿಕರು ಕೊಲ್ಕೊತಾಗೆ ಹೊರಡುತ್ತಾರೆ. ಆದರೆ ಬ್ರಿಟಿಶ್ ಪೋಲೀಸರ ಬೆದರಿಕೆಗಳಿಂದಾಗಿ ಪುನಃ ಬೋಜ್ ಬೋಜ್ ಸ್ಥಳಕ್ಕೆ ಬರಬೇಕಾಗುತ್ತದೆ. ಅಲ್ಲಿ ಮತ್ತೆ ಹಡಗನ್ನು ಏರಲು ಒತ್ತಾಯಿಸಲಾಗುತ್ತದೆ. ಬೇಸತ್ತ ಪ್ರಯಾಣಿಕರು ಇದನ್ನು ವಿರೋಧಿಸುತ್ತಾರೆ. ಆಗ ಬ್ರಿಟಿಶ್ ಪೋಲಿಸರು ಗುರ್ದಿತ್ ಸಿಂಗರನ್ನೂ ಸೇರಿದಂತೆ ಹಲವು ಮುಂದಾಳುಗಳನ್ನು ಬಂಧಿಸಿಲು ಮುಂದಾಗುತ್ತಾರೆ. ಇದರಿಂದ ಭಾರತೀಯ ಪ್ರಯಾಣಿಕರು ಮತ್ತು ಬ್ರಿಟಿಶ್ ಪೋಲೀಸರ ನಡುವೆ ಘರ್ಷಣೆ ಶುರುವಾಗುತ್ತದೆ. ಪೋಲೀಸರಿಂದ ಗುಂಡಿನ ಧಾಳಿಯೂ ನಡೆಯುತ್ತದೆ. ಗುರ್ದಿತ್ ಸಿಂಗರೂ ಸೇರಿದಂತೆ ಹಲವರು ತಪ್ಪಿಸಿಕೊಂಡು ಹೋಗುತ್ತಾರೆ. ಆದರೆ ೨೦ ಭಾರತೀಯರು ಗುಂಡಿಗೆ ಬಲಿಯಾಗುತ್ತಾರೆ ಮತ್ತು ಇತರ ೨೯ ಜನರು  ಗಾಯಗೊಳ್ಳುತ್ತಾರೆ. ಈ ರೀತಿ ಅಮಾಯಕ ಭಾರತೀಯರು ಬ್ರಿಟಿಶರಿಂದ ಹತ್ಯೆಗೊಳಗಾದ ಘಟನೆ ಭಾರತದ ಇತಿಹಾಸದ ದುರಂತಪುಟಗಳಿಗೆ ಸೇರ್ಪಡೆಯಾಗಿಬೋಜ್ ಬೋಜ್ ದಂಗೆಎಂದು ಹೆಸರಾಗಿದೆ. ಉಳಿದವರನ್ನು ಬಂಧನಕ್ಕೊಳಪಡಿಸಿ ಅವರ ಹಳ್ಳಿಗಳಿಗೆ ಕಳಿಸಲಾಗುತ್ತದೆ. ಮೊದಲ ವಿಶ್ವಯುದ್ಧ ಮುಗಿಯುವವರೆಗೂ ಅವರನ್ನು ಅವರವರ ಹಳ್ಳಿಗಳಲ್ಲೇ ಗೃಹಬಂಧನದಲ್ಲಿಡಲಾಗುತ್ತದೆ.  ಒಟ್ಟಾರೆ ಈ ಘಟನೆಯಲ್ಲಿ ಹಲವು ರೀತಿಯಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿರುವುದೂ ಸೇರಿ ಇದು ಕೆನಡಾದ ಇತಿಹಾಸದಲ್ಲೂ ಒಂದು ಕರಾಳ ಘಟನೆಯಾಗಿ ದಾಖಲಾಗಿದೆ.


1952ರಲ್ಲಿ ಈ ಘಟನೆ ನಡೆದಬೋಜ್ ಬೋಜ್ಸ್ಥಳದಲ್ಲಿ ಈ ಹುತಾತ್ಮರ ನೆನಪಿಗಾಗಿ ನಿರ್ಮಿಸಿದ ಒಂದು ಸ್ಮಾರಕವು ಪ್ರಧಾನಿ ನೆಹರೂರವರಿಂದ ಉದ್ಘಾಟಿಸಲ್ಪಟ್ಟಿತು. ಕೆನಡಾದ ವ್ಯಾಂಕೋವರ್ ನಗರದಫೆಸಿಫಿಕ್ ಗೇಟ್ ವೇದಲ್ಲಿ ಮತ್ತು ರಾಸ್ ಸ್ಟ್ರೀಟ್ ಗುರುದ್ವಾರದಲ್ಲಿ ಕೊಮಗಟಮರು ಘಟನೆಯ ಸ್ಮಾರಕ ಫಲಕಗಳನ್ನು ಇಂದಿಗೂ ಕಾಣಬಹುದು. ಇಂದು ಭಾರತೀಯರು ಕೆನಡಾದಲ್ಲಿ ಸುಸ್ಥಿತಿಯಲ್ಲಿ ನೆಲೆಸಿದ್ದಾರೆ. ಐದು ವರ್ಷಗಳ ಹಿಂದೆ ಕೆನಡಾದ ಪ್ರಧಾನಿ ಸ್ಟೀಫನ್ ಹಾರ್ಪರ್ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಕೊಮಗಟಮರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುವ ಮಾತುಗಳನ್ನಾಡಿದ್ದಾರೆ. ಈ ಘಟನೆ ನಡೆದ ಬ್ರಿಟಿಶ್ ಕೊಲಂಬಿಯಾ ಪ್ರಾಂತ್ಯದ ಆಡಳಿತ ಕೂಡ ಕ್ಷಮೆ ಯಾಚಿಸಿದೆ. ೨೦೧೪ರ ಈ ವರ್ಷಕ್ಕೆ ಈ ಘಟನೆ ನಡೆದು ಒಂದು ಶತಮಾನವಾಗಿರುವ ಸಂದರ್ಭದಲ್ಲಿ ಕೆನಡಾದ ಭಾರತೀಯ ಸಮುದಾಯದಲ್ಲಿ ಇದರ ಸ್ಮರಣಾರ್ಥ ಹಲವು ಕಾರ್ಯಕ್ರಮಗಳು ನಡೆದಿವೆ. 

(ಆಗಸ್ಟ್ ೧೦, ೨೦೧೪ ರ ವಿಜಯವಾಣಿ ಪತ್ರಿಕೆಯ ವಿಜಯವಿಹಾರ ಪುರವಣಿಯಲ್ಲಿ ಪ್ರಕಟವಾಗಿದ್ದು. ಭಾಗ ೧, ಭಾಗ ೨)

ಬುಧವಾರ, ಮೇ 28, 2014

Kannada typing in Smart phones - ಟೈಪಿಸು ಕನ್ನಡ ಡಿಂಡಿಮವ

ಸ್ಮಾರ್ಟ್ ಫೋನುಗಳಲ್ಲಿ ಕನ್ನಡದಲ್ಲಿ ಬರೆಯೋದು ಹೇಗೆ, ಅದಕ್ಕಾಗಿ ಇರುವ ಸೌಲಭ್ಯಗಳೇನು ಎನ್ನುವುದರ ಬಗ್ಗೆ ೨೮ ಮೇ ೨೦೧೪ರ  'ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನದೊಂದು ಬರಹ: ಪುಟ ೧ಪುಟ ೩ 




ಇದು ಸ್ಮಾರ್ಟ್ ಫೋನುಗಳ ಕಾಲ. ಆಂಡ್ರಾಯ್ಡ್, ವಿಂಡೋಸ್, ಐಫೋನುಗಳು ಜನರ ಕೈಯಲ್ಲಿ ನಲಿದಾಡುತ್ತಿವೆ. ವಿವಿಧ ಸುದ್ದಿತಾಣಗಳ ವೀಕ್ಷಣೆ, ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕಜಾಲತಾಣಗಳ ಬಳಕೆ ಫೋನುಗಳಲ್ಲಿ ಹೆಚ್ಚಿದೆ. ಭಾರತದಲ್ಲಿ ಜನರು ತಮ್ಮ ತಮ್ಮ ತಾಯ್ನುಡಿಯಲ್ಲೇ ಫೋನುಗಳನ್ನು, ಅಂತರಜಾಲವನ್ನು ಬಳಸಲು ಬಯಸುತ್ತಿದ್ದಾರೆ. ಅದರಂತೆಯೇ ಕನ್ನಡಕ್ಕೂ ಕೂಡ ಬಹಳ ಬೇಡಿಕೆಯಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕನ್ನಡವನ್ನು ಓದಲು ಮತ್ತು ಬರೆಯಲು ಅನುಕೂಲ ಮಾಡಿಕೊಡುವಂತಹ ಫೋನುಗಳಿವೆ.

ಕನ್ನಡಕ್ಕೆ ಬೆಂಬಲ:  ಈಗ ಜನಪ್ರಿಯವಾಗಿರುವ ಆಂಡ್ರಾಯ್ಡ್ ಫೋನುಗಳಲ್ಲಿ ಮೊದಲು ಕನ್ನಡ ಅಕ್ಷರಗಳಿಗೆ ಬೆಂಬಲ ಇರಲಿಲ್ಲ. ಅಂದರೆ ಅವುಗಳಲ್ಲಿ ಕನ್ನಡ ಅಕ್ಷರಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ ಅಕ್ಷರಗಳು ಖಾಲಿ ಚೌಕಗಳಂತೆ ಕಾಣುತ್ತಿದ್ದವು. ಹಳೆಯ ಆಂಡ್ರಾಯ್ಡ್ ಆವೃತ್ತಿಗಳನ್ನು ಹೊಂದಿರುವ ಕೆಲವು ಬ್ರ್ಯಾಂಡ್ ಗಳ ಕೆಲವು ಮಾಡೆಲ್ ಗಳಲ್ಲಿ ಮಾತ್ರ ಕನ್ನಡಕ್ಕೆ ಬೆಂಬಲವಿತ್ತು. ಆಂಡ್ರಾಯ್ಡ್ ೪.೧ (ಜೆಲ್ಲಿ ಬೀನ್) ಆವೃತ್ತಿಯ ನಂತರ ಕನ್ನಡಕ್ಕೆ ಬೆಂಬಲ ನೀಡಲಾಗಿರುವುದರಿಂದ ಆ ಆವೃತ್ತಿ ಮತ್ತು ಅದರ ನಂತರದ ಆವೃತ್ತಿಗಳನ್ನು ಹೊಂದಿರುವ ಎಲ್ಲಾ ಫೋನುಗಳಲ್ಲೂ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತವೆ. ಆದಾಗ್ಯೂ ಕೆಲವು ಬ್ರ್ಯಾಂಡ್ ಫೋನುಗಳಲ್ಲಿ ಕನ್ನಡ ಸರಿಯಾಗಿ ಮೂಡದಿರುವ ಬಗ್ಗೆ ತಿಳಿದುಬಂದಿದೆ. ಕೊಳ್ಳುವಾಗ ಈ ಬಗ್ಗೆ ಖಾತ್ರಿಪಡಿಸಿಕೊಂಡು ಕನ್ನಡ ಅಕ್ಷರಗಳು ಸರಿಯಾಗಿ ಕಾಣದಿರುವ ಫೋನುಗಳನ್ನು ತಿರಸ್ಕರಿಸುವುದು ಒಳ್ಳೆಯದು.

ಸಂದೇಶ ಕಳುಹಿಸಲು, ಚಾಟಿಂಗ್ ಮಾಡಲು, ಸಾಮಾಜಿಕ ತಾಣಗಳಲ್ಲಿ ಬರೆಯಲು ಕನ್ನಡವನ್ನು ಇಂಗ್ಲೀಶ್ ಲಿಪಿಯಲ್ಲಿ ಬರೆಯುವ ಅಭ್ಯಾಸವಿದೆ. ಆದರೆ ಇದು ಓದಲು ಬಹಳ ಕಷ್ಟವಾಗುವುದರ ಜೊತೆಗೆ ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆಗೂ ತೊಡಕಾಗಿದೆ. ಹಾಗಾಗಿ ಕನ್ನಡವನ್ನು ಕನ್ನಡ ಲಿಪಿಯಲ್ಲೇ ಬರೆಯುವುದು ಒಳ್ಳೆಯದು. ಆಂಡ್ರಾಯ್ಡ್ ದೂರವಾಣಿಗಳಲ್ಲಿ ಮತ್ತು ಟ್ಯಾಬ್ಲೆಟ್ ಗಳಲ್ಲಿ ಕನ್ನಡವನ್ನು ಬೆರಳಚ್ಚು ಮಾಡಲು ಇರುವ ಸೌಲಭ್ಯಗಳ ಬಗ್ಗೆ ಪರಿಚಯ ಮಾಡಿಕೊಳ್ಳೋಣ.

ಮೊದಲನೆಯದಾಗಿ, ಸ್ಯಾಮ್ಸಂಗ್ ಕಂಪನಿಯ ಕೆಲವು ಮಾಡೆಲ್ ಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ’ಸ್ಯಾಮ್ಸಂಗ್ ಇಂಡಿಯನ್ ಕೀಬೋರ್ಡ್’ ಎನ್ನುವ ಸೌಲಭ್ಯ ಒದಗಿಸಲಾಗಿದೆ. ಅದರಲ್ಲಿ ಕನ್ನಡವೂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳನ್ನು ಟೈಪಿಸಬಹುದು.  ಕೀಬೋರ್ಡ್ ಇನ್ಪುಟ್ ನಲ್ಲಿ ಕನ್ನಡ ಆಯ್ಕೆ ಮಾಡಿಕೊಂಡರೆ ಆಯಿತು.

ಎರಡನೆಯದಾಗಿ, ಕನ್ನಡ ಟೈಪ್ ಮಾಡಲು ಸಾಧ್ಯಮಾಡಿಕೊಡುವಂತಹ  ಹಲವಾರು ಕಿರುತಂತ್ರಾಂಶಗಳು ಅಂದರೆ appಗಳು ಇವೆ.  ಅವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಬಹುತೇಕ ತಂತ್ರಾಂಶಗಳು ಉಚಿತವಾಗಿ ದೊರೆಯುತ್ತವೆ. ಹಲವಾರು ಹವ್ಯಾಸಿ ತಂತ್ರಜ್ಞರು ಮತ್ತು ವೃತ್ತಿಪರ ಸಂಸ್ಥೆಗಳು ಇವುಗಳನ್ನು ತಯಾರಿಸಿದ್ದಾರೆ. ಇವುಗಳನ್ನು ಯಾವುದೇ ಇತರ ಸಾಮಾನ್ಯ ಆಪ್ ಗಳಂತೆ ಡೌನ್ಲೋಡ್ ಮಾಡಿಕೊಂಡು ಹಾಕಿಕೊಳ್ಳಬಹುದು.  ಕೆಲವು ತಂತ್ರಾಂಶಗಳು ಇಂಗ್ಲೀಷಿನ QUERTY ಕೀಬೋರ್ಡಿಗೆ ಅನುಗುಣವಾಗಿರುವ ’ನುಡಿ’ (ಕೆ.ಪಿ.ರಾವ್/ಕ.ಗ.ಪ) ಮಾದರಿಯ ಕೀಬೋರ್ಡ್ ವಿನ್ಯಾಸ ಒದಗಿಸಿಕೊಡುತ್ತವೆ ಮತ್ತು ಕೆಲವು ತಂತ್ರಾಂಶಗಳು ಇನ್ ಸ್ಕ್ರಿಪ್ಟ್(inscript) ಮಾದರಿಯ ಕೀಬೋರ್ಡ್ ವಿನ್ಯಾಸ ಒದಗಿಸಿಕೊಡುತ್ತವೆ.  ಇನ್ನುಳಿದ ಕೆಲವು ತಂತ್ರಾಂಶಗಳು ಅದರದೇ ಆದ ಕೀಬೋರ್ಡ್ ವಿನ್ಯಾಸ ಹೊಂದಿರುತ್ತವೆ. ಬಳಸುವವರು ತಮಗೆ ಯಾವುದು ಸುಲಭವೆನಿಸುತ್ತದೋ ಅದನ್ನು ಅಳವಡಿಸಿಕೊಂಡು ಬಳಸಬಹುದು. ಕೆಲವು ತಂತ್ರಾಂಶಗಳು ಪದಸಲಹೆಗಳನ್ನೂ ಕೊಡುತ್ತವೆ. ಅಂದರೆ ನಾವು ಟೈಪ್ ಮಾಡಲು ಶುರುಮಾಡಿ ಒಂದೆರಡು ಅಕ್ಷರಗಳಾಗುತ್ತಿದ್ದಂತೆಯೇ ಮುಂದಿನ ಅಕ್ಷರಗಳು ಏನಿರಬಹುದು ಎಂಬುದನ್ನು ಊಹಿಸಿ ಅದು ಪೂರ್ತಿ ಪದಗಳನ್ನು ಸಲಹೆ ಮಾಡಿ ತೋರಿಸುತ್ತದೆ.

ಇವು ಕನ್ನಡ ಟೈಪ್ ಮಾಡಲು ಬಳಕೆಯಲ್ಲಿರುವ Appಗಳು.

೧. ಪದ ಕನ್ನಡ (Pada Kannada) : ಫೊನೆಟಿಕ್ (ನುಡಿ/ಕೆ.ಪಿ.ರಾವ್) ರೀತಿಯ ಕೀ ವಿನ್ಯಾಸ ಹೊಂದಿದೆ. ನೇರವಾಗಿ ಕನ್ನಡ ಟೈಪಿಸಲು ಬೇಕಾಗುವ ಕೀಬೋರ್ಡ್ ಉಚಿತವಾಗಿ ಲಭ್ಯವಿದೆ.
೨. ಜಸ್ಟ್ ಕನ್ನಡ (Just Kannada Keyboard): ಫೊನೆಟಿಕ್ (ನುಡಿ/ಕೆ.ಪಿ.ರಾವ್) ರೀತಿಯ ಕೀ ವಿನ್ಯಾಸ ಹೊಂದಿರುವ ಇದು ವ್ಯಾಪಕವಾಗಿ ಬಳಕೆಯಾಗುತ್ತಿರುವ ಕೀಬೋರ್ಡ್ ಗಳಲ್ಲಿ ಒಂದು.
೩. ಎನಿ ಸಾಫ್ಟ್ (AnySoft Keyboard): ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡ ಊಡಿಸಲು ವಿನ್ಯಾಸಗೊಂಡ ಮೊದಲ ಕೀಬೋರ್ಡ್ ಇದು. ಇದನ್ನು ಹಾಕಿಕೊಳ್ಳಲು, ಮೊದಲು ಈ ಎನಿಸಾಫ್ಟ್ ತಂತ್ರಾಂಶ ಅಳವಡಿಸಿಕೊಂಡು ಅನಂತರ Kannada for AnySoft ಎನ್ನುವ ಆಪ್ ಹಾಕಿಕೊಳ್ಳಬೇಕು. ಇದರಲ್ಲಿ ಕ.ಗ.ಪ.(ನುಡಿ) ಹಾಗೂ ಇನ್ ಸ್ಕ್ರಿಪ್ಟ್ ವಿನ್ಯಾಸಗಳ ಆಯ್ಕೆ ಇದೆ.
೪. ಪಾಣಿನಿ (Kannada Panini Keypad): ಆಂಡ್ರಾಯ್ಡ್ ಫೋನುಗಳು ಬರುವುದಕ್ಕಿಂತಲೂ ಮೊದಲು ಭಾರತೀಯ ಭಾಷೆಗಳಲ್ಲಿ ಬರೆಯಲು ಸಹಾಯವಾಗುತ್ತಿದ್ದ ಈ ತಂತ್ರಾಂಶದ ಆಂಡ್ರಾಯ್ಡ್ ಆವೃತ್ತಿಯೂ ಲಭ್ಯವಿದೆ. ಇದು ತನ್ನದೇ ಆದ ಕೀಬೋರ್ಡ್ ವಿನ್ಯಾಸ ಹೊಂದಿದೆ. ವ್ಯಂಜನದ ಕೀಯನ್ನು ಒತ್ತುತ್ತಿದ್ದಂತೆಯೇ ಸ್ವರಗಳ ಕೀಗಳು ಬರುತ್ತವೆ. ದೊಡ್ಡ ದೊಡ್ಡ ಗಾತ್ರದ ಕೀಗಳಿವೆ.
೫. ಲಿಪಿಕಾರ್ (Lipikar Kannada): ಇದರಲ್ಲಿ ಇಂಗ್ಲೀಷಿನ ಕೀಗಳೇ ಇದ್ದು ಒಂದೊಂದು ಕೀಯನ್ನು ಒತ್ತುತ್ತಿದ್ದಂತೆಯೇ ಅದಕ್ಕೆ ಅನುಗುಣವಾಗಿ ಕನ್ನಡ ಅಕ್ಷರಗಳ ಆಯ್ಕೆ ಬರುತ್ತದೆ.
೬. ಸ್ವರಚಕ್ರ (Swarachakra Kannada Keyboard): ಇದರ ಕೀಬೋರ್ಡ್ ವಿನ್ಯಾಸ ಕೊಂಚ ವಿಭಿನ್ನವಾಗಿದೆ. ವ್ಯಂಜನಗಳನ್ನು ಕೊಡಲಾಗಿದ್ದು ಒಂದು ವ್ಯಂಜನಾಕ್ಷರವನ್ನು ಮುಟ್ಟಿದಾಗ ಅದರ ಸುತ್ತಲೂ ಚಕ್ರಾಕಾರವಾಗಿ ಸಂಬಂಧಿಸಿದ ಗುಣಿತಾಕ್ಷರಗಳು ಕಾಣುತ್ತವೆ. ಅದರಲ್ಲಿ ಬೇಕಾದ್ದನ್ನು ಮುಟ್ಟಿದರೆ ಆ ಅಕ್ಷರ ಮೂಡುತ್ತದೆ. ವೇಗವಾಗಿ ಬರೆಯಲು ಇದು ಅಷ್ಟು ಅನುಕೂಲಕಾರಿಯಾಗಿಲ್ಲ.
೭. ಕನ್ನಡ-ಹಿಂದಿ ಕೀಬೋರ್ಡ್ (Kannada-Hindi Keyboard): ವರ್ಣಮಾಲೆಯ ಅನುಕ್ರಮದಲ್ಲೇ ವ್ಯಂಜನಗಳನ್ನು ಕೊಡಲಾಗಿದ್ದು, ಸ್ವರ ಚಿನ್ಹೆಗಳಿಗೆ ಪ್ರತ್ಯೇಕ ಕೀಗಳಿವೆ. 
೮. ಬ್ರಾಹ್ಮಿ (Brahmi Kannada Keyboard): ವರ್ಣಮಾಲೆಯ ಅನುಕ್ರಮದಲ್ಲೇ ಅಕ್ಷರಗಳನ್ನು ಕೊಡಲಾಗಿದೆ. ವ್ಯಂಜನ ಮತ್ತು ಸ್ವರಗಳನ್ನು ಒಂದಾದ ಮೇಲೊಂದು ಒತ್ತಿ ಸೇರಿಸಿ ಅಕ್ಷರಗಳನ್ನು ಮೂಡಿಸಬೇಕು.
೯. ಸ್ಪರ್ಶ್ (Sparsh Kannada Keyboard): ಇದರಲ್ಲಿ ವರ್ಣಮಾಲೆಯ ಅನುಕ್ರಮದಲ್ಲೇ ವ್ಯಂಜನಗಳನ್ನು ಕೊಡಲಾಗಿದ್ದು ಒಂದು ಅಕ್ಷರದ ಗುಂಡಿಯನ್ನು ಒತ್ತಿದ್ದಾಗ ಅದರ ಗುಣಿತಾಕ್ಷರಗಳ ಆಯ್ಕೆಯನ್ನು ತೋರಿಸುತ್ತದೆ. ಅಲ್ಲಿಯೇ ಆಯ್ಕೆ ಮಾಡಿಕೊಳ್ಳಬಹುದು. ವ್ಯಂಜನ ಮತ್ತು ಸ್ವರಗಳನ್ನು ಬೇರೆ ಬೇರೆ ಗುಂಡಿ ಒತ್ತಿ ಸೇರಿಸುವುದು ಇಷ್ಟವಾಗದವರಿಗೆ ಇದು ಅನುಕೂಲವಾಗಬಹುದು.

ಈ ಕೆಳಗಿನವುಗಳಲ್ಲಿ ಹಲವಾರು ಭಾಷೆಗಳ ಆಯ್ಕೆ ಇದ್ದು ಇನ್ ಸ್ಟಾಲ್ ಮಾಡಿಕೊಂಡಾದ ಮೇಲೆ ಅದನ್ನು ತೆರೆದು ’ಕನ್ನಡ’ವನ್ನು ಸಕ್ರಿಯಗೊಳಿಕೊಳ್ಳಬೇಕಾಗುತ್ತದೆ.

೧೦. ಮಲ್ಟಿಲಿಂಗ್ (Multiling Keyboard): ಇನ್ ಸ್ಕ್ರಿಪ್ಟ್ ಮಾದರಿಯ ವಿನ್ಯಾಸ ಹೊಂದಿದೆ.
೧೧. ಅಡಾಪ್ಟೆಕ್ಸ್ಟ್ (Adaptxt keyboard): ಇದರಲ್ಲಿ ಕನ್ನಡ ಮತ್ತು ಕಂಗ್ಲೀಷ್ ಎನ್ನುವ ಎರಡು ಬಗೆಯ ಕೀಬೋರ್ಡುಗಳನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಕನ್ನಡವನ್ನು ಇಂಗ್ಲೀಷ್ ಅಕ್ಷರಗಳಲ್ಲಿ ಬರೆಯುವವರಿಗೂ ಕಂಗ್ಲೀಷ್ ಕೀಲಿಮಣೆಯು ಪದಸಲಹೆಗಳನ್ನು ಕೊಡುತ್ತದೆ.
೧೨. ಇಂಡಿಕ್ ಕೀಬೋರ್ಡ್ (Indic Keyboard): ಇದು ಭಾರತೀಯ ಭಾಷೆಗಳಿಗಾಗಿ ಇರುವ ಕೀಬೋರ್ಡ್ ಆಗಿದ್ದು ಕನ್ನಡದಲ್ಲಿ ಜನಪ್ರಿಯವಿರುವ ಮೂರು ಕೀಬೋರ್ಡ್ ವಿನ್ಯಾಸಗಳಾದ ನುಡಿ, ಇನ್ ಸ್ಕ್ರಿಪ್ಟ್, ಟ್ರಾನ್ಸಿಲಿಟೆರೇಶನ್ ಮಾದರಿಗಳನ್ನು ಸಕ್ರಿಯಗೊಳಿಸಿಕೊಳ್ಳಬಹುದು.
೧೩. ಯುಕೀಬೋರ್ಡ್ (Ukeyboard): ಇದು ಗೂಗಲ್ ಟ್ರಾನ್ಸಿಟರೇಶನ್ ನಂತಹ ಕೀಬೋರ್ಡ್. ಇಂಗ್ಲೀಷಿನ ಕೀಗಳೇ ಇದ್ದು ಅವುಗಳನ್ನು ಒತ್ತುತ್ತಿದ್ದಂತೆ ಅದಕ್ಕೆ ತಕ್ಕುದಾಗಿ ಕನ್ನಡ ಪದಗಳು ಮೂಡುತ್ತಾ ಹೋಗುತ್ತವೆ. ಕೆಲವು ಕೀಗಳನ್ನು ಒತ್ತುತ್ತಿದ್ದಂತೆ ಮುಂದಿನ ಸಾಧ್ಯತೆಗಳ ಬಗ್ಗೆ ಪದಸಲಹೆಗಳನ್ನು ಕೊಡುತ್ತವೆ. ಆದರೆ ಇದನ್ನು ಬಳಸಲು ಅಂತರಜಾಲ ಸಂಪರ್ಕದ ಅಗತ್ಯ.
೧೪. MILE Indic Keyboards: ಇನ್ ಸ್ಕ್ರಿಪ್ಟ್ ಹಾಗೂ ಕ.ಗ.ಪ (ನುಡಿ) ವಿನ್ಯಾಸದ ಕೀಬೋರ್ಡ್ ಇದೆ.

'ಯುಕೀಬೋರ್ಡ್' ಹೊರತುಪಡಿಸಿ ಈ ಮೇಲಿನ ಎಲ್ಲಾ ಆಪ್ ಗಳನ್ನು ಒಮ್ಮೆ ಅಳವಡಿಕೊಂಡಮೇಲೆ ಅಂತರಜಾಲ(ಡೇಟಾ) ಸಂಪರ್ಕ ಇಲ್ಲದೆಯೂ ಬಳಸಬಹುದು. ಬೇಕಾದ ಕೀಬೋರ್ಡ್ ಅಳವಡಿಸಿಕೊಂಡಮೇಲೆ ಫೋನ್ ’ಸೆಟ್ಟಿಂಗ್ಸ್’ ತೆರೆಯಬೇಕು. ಅದರಲ್ಲಿ ’ಲ್ಯಾಂಗ್ವೇಜ್ ಮತ್ತು ಇನ್ಪುಟ್’ ಎನ್ನುವ ಆಯ್ಕೆ ಇರುತ್ತದೆ. ಅದನ್ನು ತೆರೆದಾಗ ಅಲ್ಲಿ ನೀವು ಇನ್ ಸ್ಟಾಲ್ ಮಾಡಿಕೊಂಡ ಕೀಬೋರ್ಡ್ ಹೆಸರುಗಳು ಕಾಣುತ್ತದೆ. ಅದರ ಪಕ್ಕದಲ್ಲಿರುವ ಚೆಕ್ ಬಾಕ್ಸ್ ನ್ನು ಒತ್ತಿ ಅದನ್ನು ಆಯ್ಕೆ ಮಾಡಿಕೊಂಡರೆ ಅದು ನಿಮ್ಮ ಕೀಬೋರ್ಡ್ ಆಯ್ಕೆ ಪಟ್ಟಿಗೆ ಸೇರುತ್ತದೆ. ಅನಂತರ ನಿಮಗೆ ಎಲ್ಲಿ ಕನ್ನಡ ಬರೆಯಲು ಬೇಕಾಗುತ್ತದೆಯೋ ಅಂದರೆ ಮೆಸೇಜ್, ವ್ಯಾಟ್ಸಪ್, ಫೇಸ್ ಬುಕ್ ಅಥವಾ ಮುಂತಾದ ಯಾವುದೇ ಕಡೆ ಟೈಪ್ ಮಾಡುವ ಜಾಗದಲ್ಲಿ ಕೀಬೋರ್ಡ್ ಇನ್ಪುಟ್ ಆಯ್ಕೆಗೆ ಹೋಗಿ ಈ ಕನ್ನಡ ಕೀಬೋರ್ಡ್ ಆಯ್ಕೆ ಮಾಡಿಕೊಂಡು ಕನ್ನಡವನ್ನು ನೇರವಾಗಿ ಟೈಪಿಸಬಹುದು.  ಕನ್ನಡ ಬೇಡದಿದ್ದಾಗ ಇಂಗ್ಲೀಷ್ ಕೀಬೋರ್ಡ್ ಆಯ್ಕೆಗೆ ಮರಳಬಹುದು.

ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡ ಬರೆಯಲು ಇರುವ ಇಷ್ಟೆಲ್ಲಾ ಸೌಲಭ್ಯಗಳ ಬಗ್ಗೆ ಹೇಳಿದಮೇಲೆ ವಿಂಡೋಸ್ ಫೋನ್ ಮತ್ತು ಐಫೋನ್ ಹೊಂದಿರುವವರು ಕನ್ನಡ ಬರೆಯಲು ಏನು ಮಾಡಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೂ ಉತ್ತರವಿದೆ.

ವಿಂಡೋಸ್ ೮ ಆವೃತ್ತಿಯ ಫೋನುಗಳಲ್ಲಿ ಕನ್ನಡಕ್ಕೆ ಬೆಂಬಲವಿದೆ. ಕನ್ನಡ ಟೈಪ್ ಮಾಡಲು 'ಟೈಪ್ ಕನ್ನಡ'(Type Kannada) ಎನ್ನುವ ಒಂದು ತಂತ್ರಾಂಶವಿದೆ. ವಿಂಡೋಸ್ ಸ್ಟೋರ್ ನಲ್ಲಿ ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.  ಅನಂತರ ಇದನ್ನು ತೆರೆದು ಇದರಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ಇಲ್ಲಿಂದ ಕಾಪಿ ಮಾಡಿ ಬೇಕಾದ ಕಡೆಯಲ್ಲಿ ಪೇಸ್ಟ್ ಮಾಡಬೇಕಾಗುತ್ತದೆ. ಆದರೆ ಇದನ್ನು ಬಳಸಲು ಅಂತರಜಾಲ(ಡೇಟಾ) ಸಂಪರ್ಕವಿರಬೇಕಾಗುತ್ತದೆ. ಇದರ ಮೂಲಕ ಬರೆದು ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಕಡೆಗಳಲ್ಲಿ ನೇರವಾಗಿ ಶೇರ್ ಮಾಡಬಹುದು. ಆಂಡ್ರಾಯ್ಡ್ ನಂತೆ ಡೇಟಾ ಸಂಪರ್ಕವಿಲ್ಲದಿದ್ದರೂ ನೇರವಾಗಿ ಕನ್ನಡ ಬರೆಯುವ ಕೀಬೋರ್ಡ್ ತಂತ್ರಾಂಶಗಳು ವಿಂಡೋಸ್ ಫೋನಿಗೆ ಇನ್ನೂ ಲಭ್ಯವಿಲ್ಲ.

ಐಫೋನಿನಲ್ಲಿ iOS-4 ರ ನಂತರದ ಆವೃತ್ತಿಗಳಲ್ಲಿ ಕನ್ನಡಕ್ಕೆ ಬೆಂಬಲ ನೀಡಲಾಗಿದೆ. ಆದರೆ ಇದರಲ್ಲೂ ಕೂಡ ಆಂಡ್ರಾಯ್ಡ್ ನಂತೆ ನೇರವಾಗಿ ಕನ್ನಡ ಬರೆಯುವ ಕೀಬೋರ್ಡ್ ಸೌಲಭ್ಯ ಇನ್ನೂ ಲಭ್ಯವಿಲ್ಲ. ಆಪಲ್ ಸ್ಟೋರ್ ನಲ್ಲಿ Kannada for iPhone ಎಂಬ app ಡೌನ್ಲೋಡ್ ಮಾಡಿ ಅಳವಡಿಸಿಕೊಂಡು ಕನ್ನಡವನ್ನು ಬರೆಯಬಹುದು. ಇದನ್ನು ಆಫ್ ಲೈನ್ ಮತ್ತು ಆನ್ ಲೈನ್ ಬಳಕೆ ಮಾಡಬಹುದು.  iTransliterate ಎನ್ನುವ ಮತ್ತೊಂದು ತಂತ್ರಾಂಶದ ಮೂಲಕವೂ ಕನ್ನಡ ಬರೆಯಬಹುದು. ಅಳವಡಿಸಿಕೊಂಡ ನಂತರ ಇದನ್ನು ತೆರೆದು ಇದರಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ಇಲ್ಲಿಂದ ಕಾಪಿ ಮಾಡಿ ಬೇಕಾದ ಕಡೆಯಲ್ಲಿ ಪೇಸ್ಟ್ ಮಾಡಬೇಕಾಗುತ್ತದೆ. ಇದರ ಮೂಲಕ ಬರೆದು ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಕಡೆಗಳಲ್ಲಿ ನೇರವಾಗಿ ಶೇರ್ ಮಾಡಬಹುದು.

ಅಭ್ಯಾಸವಿಲ್ಲದವರಿಗೆ ಕನ್ನಡ ಟೈಪ್ ಮಾಡಲು ಮೊದಮೊದಲು ಸ್ವಲ್ಪ ತೊಡಕೆನಿಸಿದರೂ ಆಮೇಲೆ ಸುಲಭವಾಗುತ್ತದೆ. ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಸೌಲಭ್ಯಗಳಿರುವಾಗ ನಾವು ಹಿಂದೆ ಬೀಳುವುದು ಬೇಡ. ಎಲ್ಲೆಡೆಯೂ ಕನ್ನಡವನ್ನೇ ಬಳಸೋಣ. ಕನ್ನಡವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತು ಎಲ್ಲೆಡೆಯಲ್ಲೂ ಬಳಕೆಯಲ್ಲಿ ಉಳಿಯಲು ಮತ್ತು ಬೆಳೆಯಲು ಇದು ಅತ್ಯಗತ್ಯ.

****
'ನುಡಿ' ವಿನ್ಯಾಸದ 'ಪದ' ಕೀಬೋರ್ಡ್ 
ಬ್ರಾಹ್ಮಿ ಕೀಬೋರ್ಡ್ 
Inscript ವಿನ್ಯಾಸದ ಕೀಬೋರ್ಡ್ 

ಶುಕ್ರವಾರ, ಮೇ 23, 2014

ಭದ್ರಾವತಿಯಲ್ಲಿ ಸಾಯಿಭಕ್ತರ ನಿಸ್ವಾರ್ಥ ನೀರು ಸೇವೆ

ಇದು ೨೦೦೯ರಲ್ಲಿ  'ದಟ್ಸ್ ಕನ್ನಡ' ಸುದ್ದಿತಾಣಕ್ಕಾಗಿ  ಬರೆದಿದ್ದ  ಬರಹ . ಇದು ಇವತ್ತಿಗೂ ಪ್ರಸ್ತುತವಾಗಿರುವುದರಿಂದ  ಇಲ್ಲಿ ಹಾಕುತ್ತಿದ್ದೇನೆ 

***


"ಜಪ ಮಾಡುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ಪವಿತ್ರವಾದವು" - ಇದು ಶ್ರೀ ಸತ್ಯ ಸಾಯಿಬಾಬಾ ತಮ್ಮ ಭಕ್ತಕೋಟಿಗೆ ಸದಾ ಹೇಳುವ ಮಾತುಗಳು. ಇದನ್ನು ಅಕ್ಷರಶ: ಪಾಲಿಸುತ್ತಿರುವವರು ಭದ್ರಾವತಿಯ ಸಾಯಿಭಕ್ತರು. 

ಬೇಸಿಗೆಯ ಪ್ರಯಾಣ ಎಂಬುದೇ ಒಂದು ಹಿಂಸೆ. ಆಗಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲುವುದಿಲ್ಲ. ಎಲ್ಲ ಕಡೆ ಕುಡಿಯುವ ಒಳ್ಳೆಯ ನೀರಿನ ವ್ಯವಸ್ಥೆಯೂ ಇರುವುದಿಲ್ಲ. ಅದರಲ್ಲೂ ಮಕ್ಕಳು ಮರಿ ಕಟ್ಟಿಕೊಂಡು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವಾಗ ಕುಡಿಯುವ ನೀರಿನ ಅಗತ್ಯ ಬಹಳ. ಬೇಸಿಗೆಯಲ್ಲಿ ಬಸ್ ಪ್ರಯಾಣ ಮಾಡುವವರು ಭದ್ರಾವತಿ ಮೂಲಕ ಹಾದು ಹೋದರೆ ಬಸ್ ನಿಲ್ದಾಣದ ಒಳಗೆ ಬರುತ್ತಿದ್ದ ಹಾಗೆಯೇ "ನೀರು.. ನೀರು...ಫ್ರೀ ಕೋಲ್ಡ್ ವಾಟರ್" ಎಂದು ಕೇಳಿಕೊಂಡು ಬರುವವರನ್ನು ನೋಡಿರಬಹುದು. ಆ ತಂಪಾದ ನೀರನ್ನು ಕುಡಿದು ದಾಹ ತಣಿಸಿಕೊಂಡಿರಲೂಬಹುದು. ಇದು ಭದ್ರಾವತಿ ಸಾಯಿಭಕ್ತರ ಜನಸೇವೆಯ ಕೆಲಸಗಳಲ್ಲಿ ಒಂದು. ಬೇಸಿಗೆ ಶುರುವಾದ ಕೂಡಲೇ ಬಸ್ ನಿಲ್ದಾಣದಲ್ಲಿ ಇವರು ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತಾರೆ. ಬೇಸಿಗೆಯ ಎಲ್ಲಾ ದಿನಗಳಲ್ಲಿಯೂ ಕೂಡ ಬೆಳಗ್ಗಿನಿಂದ ಸಂಜೆಯವರೆಗೂ ಆ ವ್ಯವಸ್ಥೆ ಇರುತ್ತದೆ. ಮಾಮೂಲು ನೀರನ್ನು ಹಾಗೆಯೇ ಕುಡಿದರೆ ದಾಹ ನೀಗುವುದಿಲ್ಲವೆಂದು ಇದಕ್ಕೆ ಶುದ್ಧವಾದ ನೀರಿನಲ್ಲೇ ಮಾಡಿದ ಐಸ್ ಕೂಡ ಸೇರಿಸಿ ಸ್ವಲ್ಪ ತಂಪು ಮಾಡಿರುತ್ತಾರೆ. ದೂರ ದೂರದಿಂದ ಬರುವ ಬಸ್ಸುಗಳು ಕೆಲವೇ ನಿಮಿಷಗಳ ಕಾಲ ಅಲ್ಲಿ ನಿಲ್ಲುತ್ತವೆ. ಅದರಲ್ಲಿನ ಪ್ರಯಾಣಿಕರಿಗೆ ಕೆಳಗೆ ಇಳಿದು ನೀರು ಕುಡಿಯುವಷ್ಟು ಸಮಯವಿರುವುದಿಲ್ಲ ಮತ್ತು ಶುದ್ಧ ನೀರು ಸಿಗುವ ಖಾತ್ರಿಯೂ ಇರುವುದಿಲ್ಲ. ಆದ್ದರಿಂದ ಅಂತಹ ದೂರ ಪ್ರಯಾಣದ ಬಸ್ಸುಗಳ ಬಳಿಗೆ ಸ್ವಯಂ ಸೇವಕರೇ ಖುದ್ದಾಗಿ ಹೋಗಿ "ನೀರು ಬೇಕೇ" ಎಂದು ಕೇಳಿ ಕೊಡುತ್ತಾರೆ. ಬಾಟಲಿಗೆ ನೀರು ತುಂಬಿಸಿಕೊಡುತ್ತಾರೆ. ಬಿರು ಬಿಸಿಲಿಗೆ, ಬೇಸಿಗೆಯ ಬಿಸಿಗೆ ಸಿಕ್ಕ ಪ್ರಯಾಣಿಕರು ದಾಹ ತೀರಿಸಿಕೊಂಡು ಮುಂದೆ ಪ್ರಯಾಣ ಬೆಳೆಸುತ್ತಾರೆ. 

ಹೀಗೆ ನೀರು ಒದಗಿಸುತ್ತಿದ್ದ ಭಕ್ತರನ್ನು ಮಾತನಾಡಿಸಿ ಇದರಿಂದ ನಿಮಗೆ ಏನು ದೊರೆಯುತ್ತದೆ ಎಂದು ಕೇಳಿದಾಗ ಬಿಡುವಿನ ಸಮಯದಲ್ಲಿ ಇಂತಹ ಕೈಲಾದ ಸೇವೆ ಮಾಡಿದರೆ ಮನಸಿಗೆ ಏನೋ ಸಣ್ಣ ತೃಪ್ತಿಯ ದೊರೆಯುತ್ತದೆ ಮತ್ತು ಸತ್ಯ ಸಾಯಿಬಾಬಾರವರ ಮಾರ್ಗದರ್ಶನದಿಂದ, ಭಕ್ತಿಯಿಂದ ಈ ಕೆಲಸ ಮಾಡುತ್ತಿದ್ದೇವೆ ಹೊರತು ಬೇರೆ ಯಾವ ಅಪೇಕ್ಷೆಯೂ ಇಲ್ಲ ಎಂದರು. ಮೊದಲು ಬಹಳ ಜನ ಈ ಸೇವೆ ಮಾಡಲು ಬರುತ್ತಿದ್ದರು, ಈಗ ಈ ಕೆಲಸಕ್ಕೆ ಜನರನ್ನು ಹುಡುಕಬೇಕಾಗಿದೆ, ಅದರಲ್ಲೂ ಕೂಡ ಈಗಿನ ಮಕ್ಕಳಿಗೆ, ಯುವಕರಿಗಂತೂ ಇಂತಹ ಕೆಲಸಗಳಲ್ಲಿ ಆಸಕ್ತಿಯೇ ಇಲ್ಲ ಎಂದು ವ್ಯಥೆ ಪಟ್ಟುಕೊಂಡರು. 

ಇದರ ಹೊರತಾಗಿ ಭದ್ರಾವತಿಯ ಸಾಯಿಬಾಬಾ ಮಂದಿರದ ಶಾಲೆಯಲ್ಲಿ ಬಡವರಿಗಾಗಿ ಉಚಿತ ಮೆಡಿಕಲ್ ಕ್ಯಾಂಪ್ ಗಳು ಪ್ರತೀವಾರ ನಡೆಯುತ್ತವೆ. ಸೇವಾ ಮನೋಭಾವದ ಕೆಲವು ವೈದ್ಯರು ಇದನ್ನು ನಡೆಸಿಕೊಡುತ್ತಾರೆ. "ಜನಸೇವೆಯೇ ಜನಾರ್ದನ ಸೇವೆ" ಎಂಬುದು ಇವರ ಧ್ಯೇಯ. ಬೇರೆ ಕೆಲವು ಊರುಗಳಲ್ಲಿರುವ ಸಾಯಿ ಭಕ್ತರು ಕೂಡ ಈ ಸೇವೆಯನ್ನು ನಡೆಸುತ್ತಾರೆ. ಆದರೆ ಭದ್ರಾವತಿಯ ಸಾಯಿ ಭಕ್ತರ ಈ ಕುಡಿಯುವ ನೀರಿನ ಸೇವೆ ಹಲವಾರು ವರ್ಷಗಳಿಂದ ಅಬಾಧಿತವಾಗಿ ನೆಡೆದುಕೊಂಡು ಬರುತ್ತಿದೆ. ಜನಸೇವೆಯ ಮನಸ್ಸಿರುವ ಸಾಯಿಭಕ್ತರು ಸ್ವಯಂಪ್ರೇರಿತರಾಗಿ ಇದರಲ್ಲಿ ಭಾಗವಹಿಸುತ್ತಾರೆ. ಇಷ್ಟೇ ದಿನ ಇಷ್ಟೇ ಹೊತ್ತು ಮಾಡಬೇಕೆಂಬ ನಿಯಮವಿಲ್ಲದೇ ತಮಗೆ ಬಿಡುವಿರುವಷ್ಟು ಸಮಯವನ್ನು ತೊಡಗಿಸಿಕೊಂಡು ನಡೆಸಿಕೊಂಡು ಬರುತ್ತಿರುವ ಈ ಸೇವೆ ಮಾದರಿಯಾಗಿದೆ. ದೇವರು, ಧರ್ಮ, ಭಕ್ತಿ ಎಂಬುದು ಇಂತಹ ಒಳ್ಳೆಯ ಕೆಲಸಗಳಿಗೆ ಪ್ರೇರಣೆಯಾದರೆ ಅದಕ್ಕಿಂತ ಸಂತೋಷದ ವಿಷಯ ಬೇರೆ ಇಲ್ಲ ಎಂಬುದಕ್ಕೇ ಇದೇ ಸಾಕ್ಷಿ.

ಬುಧವಾರ, ಮೇ 14, 2014

ನಮ್ಮ ಮನೆಗಳಿಗೆ ವಿದ್ಯುತ್ ಹೇಗೆ ತಲುಪುತ್ತದೆ?

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ(BESCOM)  M.D. ಆಗಿದ್ದ ಮಣಿವಣ್ಣನ್  ಅವರು ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಉತ್ಪಾದನೆಯಾದ ವಿದ್ಯುತ್ ಬೆಂಗಳೂರಿನಲ್ಲಿರುವ ಮನೆಗಳಿಗೆ ಬಂದು ತಲುಪುವುದು ಹೇಗೆ ಎಂಬುದರ ಬಗ್ಗೆ ಹಿಂದೊಮ್ಮೆ ಇಂಗ್ಲೀಷಿನಲ್ಲಿ ಬರೆದಿದ್ದರು. ಜನರಿಗೆ ಅರಿವು ಮೂಡಿಸುವುದಕ್ಕಾಗಿ ಬರೆದಿದ್ದ ಆ ಮಾಹಿತಿ ಬರಹವು ಇನ್ನೂ ಹೆಚ್ಚಿನ ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ನಾನು ಕನ್ನಡಕ್ಕೆ ತರ್ಜುಮೆ ಮಾಡಿಕೊಟ್ಟಿದ್ದೆ. ಅದನ್ನು ಇಲ್ಲಿ ಹಾಕುತ್ತಿದ್ದೇನೆ. ಸಾಮಾನ್ಯ ಓದುಗರಿಗೂ ಅರ್ಥವಾಗುವುದಕ್ಕಾಗಿ ಅಗತ್ಯವಿದ್ದಷ್ಟೇ ಮಾತ್ರ ತಾಂತ್ರಿಕ ವಿಷಯಗಳನ್ನು ಇದರಲ್ಲಿ ಹೇಳಲಾಗಿದೆ. 
ನಮ್ಮ ಮನೆಗೆ ವಿದ್ಯುತ್ತು ಹೇಗೆ ಬರುತ್ತದೆ ಎನ್ನುವುದು ಬಹಳ ಆಸಕ್ತಿಯ ವಿಷಯ. ಇದನ್ನು ತಿಳಿದುಕೊಳ್ಳುವುದೂ ಮುಖ್ಯ. ಇದನ್ನು ತಿಳಿದುಕೊಳ್ಳುವುದರಿಂದ ಮನೆಗೆ ವಿದ್ಯುತ್ ಪೂರೈಕೆಯಲ್ಲಾಗುವ ಏರುಪೇರಿನ ಬಗ್ಗೆಯೂ ಗೊತ್ತಾಗುತ್ತದೆ.  ಕೆಲವೊಮ್ಮೆ ವಿದ್ಯುತ್ ಸರಬರಾಜು ಏಕೆ ಕೈಕೊಡುತ್ತದೆ ಎಂಬ ವಿಷಯ ಇದರಿಂದ ಮನದಟ್ಟಾಗುತ್ತದೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರ(RTPS)ಲ್ಲಿ (ಅಥವಾ ಬೇರೆ ಯಾವುದೇ ಕಡೆ) ಉತ್ಪಾದನೆಯಾದ ವಿದ್ಯುತ್ ಐದು ಹಂತಗಳಲ್ಲಿ ನಮ್ಮ ಮನೆಗಳಿಗೆ ತಲುಪುತ್ತದೆ.
೧. ಮೊದಲ ಹಂತವೆಂದರೆ RTPSನಿಂದ ಬೆಂಗಳೂರಿಗೆ ಸಾಗಣೆ. ಈ ವಿದ್ಯುತ್ ಸಾಗಣೆ ೪೦೦KV (ಕಿಲೋ ವೋಲ್ಟ್ಸ್) ಯಷ್ಟು ಹೈವೋಲ್ಟೇಜಿನಲ್ಲಾಗುತ್ತದೆ. ನೆಲಮಂಗಲ/ಪೀಣ್ಯ ರಸ್ತೆಯಲ್ಲಿ ಬರುವಾಗ ಕಾಣಿಸುವ ದೊಡ್ಡ ವಿದ್ಯುತ್ ಗೋಪುರಗಳೇ ಈ ೪೦೦KV ವಿದ್ಯುತ್ತನ್ನು ಸಾಗಿಸುವಂತವು. ಈ ವಿದ್ಯುತ್ ಲೈನುಗಳು ಮಾಸ್ಟರ್ ರೀಸಿವಿಂಗ್ ಸ್ಟೇಷನ್ನುಗಳೆಂದು ಕರೆಯಲ್ಪಡುವ ದೊಡ್ಡ ವಿದ್ಯುತ್ ಸ್ಟೇಶನ್ನುಗಳನ್ನು ತಲುಪುತ್ತವೆ. ಇಲ್ಲಿ ದೊಡ್ಡ ದೊಡ್ಡ ಟ್ರಾನ್ಸ್ ಫಾರ್ಮರುಗಳು ೪೦೦KV ವಿದ್ಯುತ್ತನ್ನು ೨೨೦KVಗೆ ಇಳಿಸುತ್ತವೆ. ಈ ಟ್ರಾನ್ಸ್ ಫಾರ್ಮರುಗಳನ್ನು ಪವರ್ ಟ್ರಾನ್ಸ್ ಫಾರ್ಮರುಗಳೆನ್ನುತ್ತಾರೆ. ಇವುಗಳ ಸಾಮರ್ಥ್ಯ ೫೦೦ ಮೆಗಾವ್ಯಾಟ್. ಅಂದರೆ ಕಾಲುಭಾಗ ಬೆಂಗಳೂರಿಗೆ ಸಾಕಾಗುವಷ್ಟಿರುತ್ತದೆ. ಇವು ಮನೆಯ ಜಗಲಿಯಷ್ಟು ದೊಡ್ಡದಾಗಿರುತ್ತವೆ. ಬೆಂಗಳೂರಿಗಾಗಿ ಇಂತಹ ಮೂರು ೪೦೦KV. ಮಾಸ್ಟರ್ ರಿಸೀವಿಂಗ್ ಸ್ಟೇಶನ್ನುಗಳಿವೆ. ಉತ್ತರಭಾಗದಲ್ಲಿ ನೆಲಮಂಗಲ, ಪೂರ್ವದಲ್ಲಿ ಹೂಡಿ, ದಕ್ಷಿಣದಲ್ಲಿ ಸೋಮನಹಳ್ಳಿ. ಈ ಸ್ಟೇಶನ್ನುಗಳಲ್ಲಿ ತೊಂದರೆಯಾದರೆ (ಟ್ರಿಪ್) ನಗರದ ವಿದ್ಯುತ್ ಪೂರೈಕೆಯಲ್ಲಿ ಭಾರೀ ಏರುಪೇರಾಗುತ್ತದೆ.  


೨. ಎರಡನೇ ಹಂತದಲ್ಲಿ, ಈ ಮಾಸ್ಟರ್ ರಿಸೀವಿಂಗ್ ಸ್ಟೇಷನ್ನುಗಳಿಂದ ಹೊರಬರುವ ೨೨೦KV ವಿದ್ಯುತ್ತನ್ನು ನಗರದ ಬೇರೆ ಬೇರೆ ಭಾಗಗಳಲ್ಲಿರುವ ರಿಸೀವಿಂಗ್ ಸ್ಟೇಶನ್ನುಗಳಿಗೆ ಕಳಿಸಲಾಗುತ್ತದೆ. ಈ ರಿಸೀವಿಂಗ್ ಸ್ಟೇಶನ್ನುಗಳಲ್ಲಿ ಈ ವಿದ್ಯುತ್ತನ್ನು ೬೬KVಗೆ ಇಳಿಸಲಾಗುತ್ತದೆ. ಇಲ್ಲಿಯೂ ಕೂಡ ಪವರ್ ಟ್ರಾನ್ಸ್ ಫಾರ್ಮರುಗಳು ಈ ಕೆಲಸವನ್ನು ಮಾಡುತ್ತವೆ. ಬೆಂಗಳೂರಿನಲ್ಲಿ ಇಂತಹ ಹದಿನೈದು ರಿಸೀವಿಂಗ್ ಸ್ಟೇಶನ್ನುಗಳಿವೆ.

೩. ಮೂರನೇ ಹಂತದಲ್ಲಿ, ೬೬KVಗೆ ಇಳಿಸಲ್ಪಟ್ಟ ಈ ವಿದ್ಯುತ್ ರಿಸೀವಿಂಗ್ ಸ್ಟೇಶನ್ನುಗಳಿಂದ ಸಬ್ ಸ್ಟೇಶನ್ನುಗಳಿಗೆ ಹೋಗುತ್ತದೆ. ಈ ಸಾಗಣೆಯನ್ನು ಸಣ್ಣ ಟವರ್ ಗಳ ಮೂಲಕ ಅಥವಾ ನೆಲದೊಳಗೆ ಸಾಗುವ ಕೇಬಲ್ ಗಳ ಮೂಲಕ ಮಾಡಬಹುದು. ಈ ಸಬ್ ಸ್ಟೇಶನ್ನುಗಳಲ್ಲಿ ಟ್ರಾನ್ಸ್ ಫಾರ್ಮರುಗಳ ಮೂಲಕ ಈ ೬೬KV. ವಿದ್ಯುತ್ ೧೧KVಗೆ ಇಳಿಸಲ್ಪಡುತ್ತದೆ. ಬೆಂಗಳೂರಲ್ಲಿ ಇಂತಹ ತೊಂಭತ್ತು ಸಬ್ ಸ್ಟೇಶನ್ನುಗಳಿವೆ.


೪. ನಾಲ್ಕನೇ ಹಂತದಲ್ಲಿ, ಈ ವಿದ್ಯುತ್ ಫೀಡರ್ಸ್ಎಂದು ಕರೆಯಲ್ಪಡುವ ಲೈನುಗಳ ಮೂಲಕ ಸಬ್ ಸ್ಟೇಶನ್ನುಗಳಿಂದ ಹೊರಹೋಗುತ್ತದೆ. ಪ್ರತಿಯೊಂದು ಸಬ್ ಸ್ಟೇಶನ್ನುಗಳಿಂದ ಇಂತಹ ೧೦-೧೫ ಫೀಡರ್ ಲೈನುಗಳು ಹೊರಬಂದು ಬೇರೆ ಬೇರೆ ಕಡೆಯಲ್ಲಿರುವ ಟ್ರಾನ್ಸ್ ಫಾರ್ಮರುಗಳಿಗೆ ಸಂಪರ್ಕಗೊಳ್ಳುತ್ತವೆ. ಇವೇ ನಾವು ರಸ್ತೆ ಬದಿಯಲ್ಲಿ ಕಾಣುವಂತಹ ಟ್ರಾನ್ಸ್ ಫಾರ್ಮರುಗಳು. ಇದನ್ನು ಡಿಸ್ಟ್ರಿಬ್ಯೂಶನ್ ಟ್ರಾನ್ಸ್ ಫಾರ್ಮರ್ ಸೆಂಟರ್ಸ್’ (DTC) ಎಂದು ಕರೆಯುತ್ತಾರೆ. ಈ ಟ್ರಾನ್ಸ್ ಫಾರ್ಮರುಗಳಲ್ಲಿ ವಿದ್ಯುತ್ತು ೪೪೦ ವೋಲ್ಟ್ ಗಳಿಗೆ ಇಳಿಕೆಯಾಗುತ್ತದೆ. 
೫. ಐದನೇ ಹಂತದಲ್ಲಿ, ಈ ೪೪೦ ವೋಲ್ಟ್ ಲೈನುಗಳು ಟ್ರಾನ್ಸ್ ಫಾರ್ಮರುಗಳಿಂದ ಹೊರಟು ಕೊನೆಯದಾಗಿ ನಿಮ್ಮ ಮನೆಯ ಮೀಟರಿಗೆ/ಮೇನ್ ಸ್ವಿಚ್ ಬೋರ್ಡಿಗೆ ಬಂದು ಸೇರುತ್ತವೆ. ಟ್ರಾನ್ಸ್ ಫಾರ್ಮರ್ ಗಳಿಂದ ಮೂರು ತಂತಿಗಳ ಮೂಲಕ ವಿದ್ಯುತ್ ಪಡೆಯಬಹುದು (ಮೂರೂ ಬೇರೆ ಬೇರೆ ಫೇಸ್ ಗಳಲ್ಲಿರುತ್ತವೆ). ಮನೆಯ ಬಳಕೆಗೆ ೨೨೦ ವೋಲ್ಟ್ಸ್ ವಿದ್ಯುತ್ ಸಾಕು. ಹಾಗಾಗಿ ಒಂದು ತಂತಿಯನ್ನು ಮಾತ್ರ ಸಂಪರ್ಕಿಸಲಾಗುತ್ತದೆ. 
(From the transformer, we get electricity in 3 lines, each carrying current in 3 different phases. The voltage between any two phase will be 440 volts. But, the voltage between any phase to the earth will be 220 volts! Thus, for your home, they will send only one wire carrying 220 volts! If you require 2 phase supply, then all 3 wires will come)
ಈ ಐದೂ ಹಂತಗಳಲ್ಲಿ ವಿದ್ಯುತ್ ಸುಮಾರು ಸಾವಿರ ಕಿಲೋಮೀಟರ್ ಲೈನುಗಳ ಮೂಲಕ, ನೂರಾರು ಉಪಕರಣಗಳು ಹಾಗೂ ನಟ್ ಬೋಲ್ಟುಗಳ ಮೂಲಕ ಹಾದು ಬರುತ್ತದೆ. ಇದಿಷ್ಟೂ ದೂರದ ಸಾಗಾಣಿಕೆಯಲ್ಲಿ ಯಾವುದೋ ಒಂದು ಸಣ್ಣ ತೊಂದರೆಯೂ ಕೂಡ ವಿದ್ಯುತ್ ಸರಬರಾಜಿಗೆ ತಡೆಯಾಗಬಲ್ಲುದು.

ಈ ಪ್ರಯಾಣದಲ್ಲಿ ಮೊದಲ ಮೂರು ಹಂತಗಳು ಕರ್ನಾಟಕ ವಿದ್ಯುತ್‌  ಪ್ರಸರಣಾ ನಿಗಮದ (KPTCL) ಆಡಳಿತ ವ್ಯಾಪ್ತಿಗೆ ಬರುತ್ತದೆ. ೬೬KVವರೆಗಿನ ಸರಬರಾಜಲ್ಲಿ ಆಗುವ ತೊಂದರೆಗಳನ್ನು KPTCLನವರು ನೋಡಿಕೊಳ್ಳುತ್ತಾರೆ. ಕೊನೆಯ ಎರಡು ಹಂತಗಳು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಅಡಿಯಲ್ಲಿ ಬರುತ್ತವೆ. ಅಂದರೆ ಸಬ್ ಸ್ಟೇಶನ್ನುಗಳಿಂದ ನಮ್ಮ ಮನೆಯವರೆಗಿನ ಸರಬರಾಜು ಬೆಸ್ಕಾಂಗೆ ಸೇರಿದ್ದು. ಮೊದಲ ಎರಡು ಹಂತಗಳು ಬಹಳ ಹೈ  ವೋಲ್ಟೇಜಿನಲ್ಲಿ ಆಗುವುದರಿಂದ ಅದನ್ನು ನೆಲದಡಿಯಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ ಕೊನೆಯ ಎರಡು ಹಂತಗಳ ಪ್ರಸರಣವನ್ನು ನೆಲದಡಿಯ ಕೇಬಲ್ಲುಗಳ ಮೂಲಕ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಹೇಳಿರುವ ಎಲ್ಲಾ ೪೦೦KV ಪವರ್ ಲೈನ್ ಗಳು ಮತ್ತು ೪೦೦KV ಮಾಸ್ಟರ್ ರಿಸೀವಿಂಗ್ ಸ್ಟೇಶನ್ ಗಳು ಸಾಮಾನ್ಯವಾಗಿ ನ್ಯಾಶನಲ್ ಪವರ್ ಗ್ರಿಡ್ ಜಾಲದಲ್ಲಿರುತ್ತವೆ. ಈ ರೀತಿಯಾಗಿ, ನಮಗೆ ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಪೂರೈಕೆಯಾಗಲು RTPS (ಅಥವಾ ಇನ್ಯಾವುದೇ ಉತ್ಪಾದನಾ ಘಟಕ), KPTCL ಹಾಗೂ BESCOMಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಈ ಎಲ್ಲಾ ಇಲಾಖೆಗಳಲ್ಲಿಯೂ ಹಗಲುರಾತ್ರಿ ಕೆಲಸ ನಡೆಯುತ್ತಿರುತ್ತದೆ.
******
ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜಿನ ಹಿಂದಿರುವ ಸಂಪನ್ಮೂಲ ಮತ್ತು ಶ್ರಮವನ್ನು ಗಮನದಲ್ಲಿರಿಸಿಕೊಂಡು ವಿದ್ಯುತ್ತನ್ನು ಸದ್ಬಳಕೆ ಮಾಡೋಣ ಮತ್ತು ಪೋಲು ಮಾಡದಿರೋಣ. :)
ಮೂಲ ಇಂಗ್ಲೀಶ್ ಬರಹ ಇಲ್ಲಿದೆ: How electricity reaches our homes.
ಮಣಿವಣ್ಣನ್ ಅವರ ಬ್ಲಾಗ್ ಇದು: I and the Government..?