ಶನಿವಾರ, ಏಪ್ರಿಲ್ 7, 2018

ಕನ್ನಡದಲ್ಲಿ ಡಬ್ಬಿಂಗ್ ಸಿನೆಮಾಗಳ ’ಆರಂಭಂ’

19 ನವೆಂಬರ್ 2017 ರಂದು ಫೇಸ್ಬುಕ್ಕಲ್ಲಿ ಬರೆದದ್ದು.

'ಧೀರ' ಎಂಬ ಸಿನೆಮಾವನ್ನು ಬೆಂಗಳೂರಿನ ಹೊಸಕೆರೆಹಳ್ಳಿಯ ಕೋಕಿಲಾ ಟಾಕೀಸಲ್ಲಿ ನೋಡಿದೆ. ಅದರಲ್ಲೇನು ವಿಶೇಷ ಅಂತ‌ ನೀವು ಕೇಳಬಹುದು. ಮೂಲತಃ ಇದೊಂದು ತಮಿಳು ಸಿನೆಮಾ, 'ಆರಂಭಂ' ಅಂತ ಹೆಸರು. ಕನ್ನಡಕ್ಕೆ ಡಬ್ ಆಗಿ 'ಧೀರ'ನಾಗಿದೆ. ಅದೇನು ದೊಡ್ಡ ವಿಶೇಷ ಅಂತ ಕೇಳ್ತೀರಾ? ಅಲ್ಲೇ ಇರುವುದು ವಿಷಯ. ಸುಮಾರು ೫೦ ವರ್ಷಗಳಿಂದ‌ ಕನ್ನಡದ ಯಾವುದೇ‌ ಡಬ್ಬಿಂಗ್ ಸಿನೆಮಾ ಬೆಂಗಳೂರಲ್ಲಿ‌ ಬಿಡುಗಡೆಯಾಗಿರಲಿಲ್ಲ. ಇಡೀ ಕರ್ನಾಟಕದಲ್ಲೂ ಅಷ್ಟೆ! ಕನ್ನಡ ಚಿತ್ರರಂಗದ ಈ ಸ್ವಯಂ ಮತ್ತು‌ ಬಲವಂತದ ಡಬ್ಬಿಂಗ್ ನಿಷೇಧದ ವಿರುದ್ಧ 'ಕನ್ನಡ ಗ್ರಾಹಕ ಕೂಟ'ದ ಗೆಳೆಯರು ಅನೇಕ ವರ್ಷಗಳ‌ ಕಾಲ ಸುಪ್ರೀಂಕೋರ್ಟ್'ವರೆಗೂ ಕಾನೂನು ಹೋರಾಟ ಮಾಡಿ ಜಯಗಳಿಸಿ ಕನ್ನಡಕ್ಕೆ ಡಬ್ಬಿಂಗ್ ಆದ ಚಿತ್ರಗಳು ತೆರೆಗೆ ಬರುವಂತೆ ಮಾಡಿದ್ದಾರೆ. ಕೆಲತಿಂಗಳ‌ ಹಿಂದೆ ಬಂದಿದ್ದ 'ಸತ್ಯದೇವ ಐಪಿಎಸ್' ಎಂಬ ಸಿನೆಮಾ‌ ಕರ್ನಾಟಕದ ಬೇರೆ ಕಡೆಗಳಲ್ಲಿ ಬಿಡುಗಡೆಯಾಗಿದ್ರೂ ಬೆಂಗಳೂರಲ್ಲಿ ಕೆಲವರ ಗೂಂಡಾಗಿರಿಯಿಂದಾಗಿ ಸಾಧ್ಯವಾಗಿರಲಿಲ್ಲ! ವರ್ಷದ ಹಿಂದೆ 'ನಾನು ನನ್ನ ಪ್ರೀತಿ' ಎಂಬ ಸಿನೆಮಾಗೂ ಕೂಡ ಇದೇ ಗತಿಯಾಗಿತ್ತು. ಈ ಡಬ್ಬಿಂಗ್ ನಿಷೇಧದಿಂದ ಕನ್ನಡಿಗರಿಗಾದ ನಷ್ಟ ದೊಡ್ಡದಿದೆ. ಟೈಟಾನಿಕ್, ಜುರಾಸಿಕ್ ಪಾರ್ಕ್, ಅವತಾರ್, ಜಂಗಲ್ ಬುಕ್, ಸ್ಪೈಡರ್ ಮನ್, ಬಾಹುಬಲಿ ಇಂತಹ ಹಲವಾರು ಸಿನೆಮಾಗಳನ್ನು ಪರಭಾಷಿಕರು ಅವರವರ ಭಾಷೆಗಳಲ್ಲಿ ನೋಡಿ ಆನಂದಿಸಿದರೆ ಕನ್ನಡಿಗರು ಕನ್ನಡದಲ್ಲಿ ನೋಡಲು ಅವಕಾಶವಿಲ್ಲದಂತಾಗಿತ್ತು. ಜ್ಞಾನವಿಜ್ಞಾನ, ಕಾರ್ಟೂನ್ ಮೊದಲಾದ ಟೀವಿ ಚಾನಲ್ ಗಳೂ ಇದಕ್ಕೆ ಹೊರತಾಗಿರಲಿಲ್ಲ.
ಟೀವಿ ಜಾಹೀರಾತುಗಳನ್ನು ನೋಡಿ ನಮ್ಮ‌ ಜನಕ್ಕೆ ಡಬ್ಬಿಂಗ್ ಬಗ್ಗೆ ಆತಂಕ ಇದೆ. ಹಾಗಾಗಿ 'ಧೀರ' ಚಿತ್ರದ ಡಬ್ಬಿಂಗ್ ಕ್ವಾಲಿಟಿ ಬಗ್ಗೆ ಹೇಳಲೇಬೇಕು. ಇದು ಅತ್ಯುತ್ತಮ ಡಬ್ಬಿಂಗ್ ಗೆ ಉದಾಹರಣೆ ಅನ್ನಬಹುದು. ಇದರಲ್ಲಿನ‌ ಸಂಭಾಷಣೆಗಳು, ಹಾಡುಗಳ ಸಾಹಿತ್ಯ,‌ ಲಿಪ್ ಸಿಂಕ್ ಹೇಗಿವೆಯೆಂದರೆ ಒರಿಜಿನಲ್‌ ಕನ್ನಡ ಸಿನೆಮಾವನ್ನೇ ನೋಡುತ್ತಿರುವಂತೆ ಅನಿಸುತ್ತದೆ. ಮುಂಬಯಿ, ಚೆನ್ನೈ, ದುಬೈಗಳಲ್ಲಿ ನಡೆಯುವ ಕತೆಯನ್ನು, ದೃಶ್ಯಗಳನ್ನು ಎಲ್ಲೂ ಕೃತಕವೆನಿಸದಂತೆ ಕನ್ನಡಕ್ಕೆ ತರಲು ಸಂಪೂರ್ಣ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮಾರುಕಟ್ಟೆ ಈಗಾಗಲೇ ಪರಭಾಷಾ ಸಿನೆಮಾಗಳ ಹಾವಳಿಗೆ ತುತ್ತಾಗಿದೆ.‌ ಡಬ್ಬಿಂಗ್ ನಿಷೇಧದ ತೆರವಿನಿಂದಾಗಿ ಪರಭಾಷೆಯ ಸಿನೆಮಾಗಳು, ಹಾಲಿವುಡ್ ನ ಸಿನೆಮಾಗಳು ಕರ್ನಾಟಕದಲ್ಲಿ ಕನ್ನಡದಲ್ಲೇ ಬಿಡುಗಡೆಯಾಗಿ ಪರಭಾಷೆ ಹಾವಳಿ ಕಡಿಮೆಯಾಗಲು ಮತ್ತು ನಮಗೆ ಎಲ್ಲವನ್ನೂ ಕನ್ನಡದಲ್ಲೇ ಪಡೆಯುವ ಹಾದಿಯೂ ತೆರೆದುಕೊಳ್ಳುವಂತಾಗಲು ಮತ್ತು ಆ ಮೂಲಕ‌ ಹಲವಾರು ‌ರೀತಿಯ ಉದ್ಯೋಗ ಸೃಷ್ಟಿಗೆ ಕಾರಣವಾಗಲು ಇದೊಂದು‌ ಪ್ರಾರಂಭದ ಹೆಜ್ಜೆ ಅನ್ನಬಹುದು.
ಈ ಅಸಾಂವಿಧಾನಿಕ ಡಬ್ಬಿಂಗ್ ನಿಷೇಧದ ವಿರುದ್ಧ ಸತತ ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಯಶಸ್ವಿಯಾದ ಗ್ರಾಹಕ ಕೂಟದ Ganesh ChetanArun Javgal ಮುಂತಾದ ಎಲ್ಲಾ ಸ್ನೇಹಿತರಿಗೂ ಮತ್ತು‌ ನಿರ್ಮಾಪಕ Krishna Murthy ಯವರಿಗೂ ಧನ್ಯವಾದಗಳು.
ಅಂದಹಾಗೆ, ಸುಮಾರು ೨೦ ವರ್ಷಗಳ ಹಿಂದೆ ನಾನು ಟಾಕೀಸಿನಲ್ಲಿ ನೋಡಿದ್ದ‌ ಮೊದಲ ತಮಿಳು ಚಿತ್ರ ಕಮಲಹಾಸನ್‌ನ 'ದೇವರ ಮಗನ್'. ಎರಡನೇದು ಅಂದರೆ ಇದೇ 'ಆರಂಭಂ'...*ಧೀರ*ನಾಗಿ !

****
ರಾಜ್ ಬೆಳಗೆರೆಯವರು ಕೊಟ್ಟ ಮಾಹಿತಿ:
Raj Belagere: ಕನ್ನಡದಲ್ಲಿ ಸುಮಾರು 15-16 ವರ್ಷಗಳ ಹಿಂದೆಯೇ ಡಬ್ಬಿಂಗ್ ಚಿತ್ರ ಬಿಡುಗಡೆಯಾಗಿತ್ತು. ತೆಲುಗಿನ ಮೆಕ್ಯಾನಿಕ್ ಮಾವಯ್ಯ ಕನ್ನಡದಲ್ಲಿ ಭಾರತ್ 2000 ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಅದನ್ನು ಉಪಾಯವಾಗಿ ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಮಾಡಲಾಗಿತ್ತು. ಕನ್ನಡದಲ್ಲಿ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಇದನ್ನು ಕನ್ನಡಕ್ಕೆ ತಂದಿದ್ದರು. ಈ ಬಗ್ಗೆ ಸ್ವಲ್ಪ ಗಲಾಟೆ ಕೂಡಾ ಆಗಿತ್ತು. ನಿರ್ದೇಶಕ ಸಂಘದಿಂದ ಅವರನ್ನು ಕೆಲವು ಕಾಲ ಬಹಿಷ್ಕಾರ ಹಾಕಲಾಗಿತ್ತು. ಆ ಸಿನೆಮಾ ಒಮ್ಮೆ ನೋಡಿ. ಡಬ್ ಮಾಡಿರುವುದು ಸರಳವಾಗಿ ಗೊತ್ತಾಗುತ್ತೆ. ನಾಯಕ ರಾಜಶೇಖರ, ನಾಯಕಿ ರಂಭಾ.... ರಾಜ್ಯಾದ್ಯಂತ ಟಾಕೀಸ್ ನಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕೂಡಾ ಕಂಡಿತ್ತು.