ಭಾನುವಾರ, ಜುಲೈ 6, 2025

ಶಾಲಾಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ : ಹಿಂದಿ ಹೇರಿಕೆ

'ಪ್ರಜಾವಾಣಿ'ಯ 'ವಾಚಕರ ವಾಣಿ'ಗೆ ಬರೆದಿದ್ದ ಪತ್ರಗಳು.

ಮಹಾರಾಷ್ಟ್ರವು ಶಿಕ್ಷಣದಲ್ಲಿ ದ್ವಿಭಾಷಾ ನೀತಿಗೆ ಮರಳಿದೆ ಎಂದು 24 ಏಪ್ರಿಲ್ 'ವಾಚಕರ ವಾಣಿ'ಯಲ್ಲಿ ಓದುಗರೊಬ್ಬರ ಓಲೆಯಲ್ಲಿ ಪ್ರಕಟವಾಗಿದೆ. ಆದರೆ ವಾಸ್ತವೇನೆಂದರೆ ಈವರೆಗೂ ಮಹಾರಾಷ್ಟ್ರದ ರಾಜ್ಯಪಠ್ಯಕ್ರಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ದ್ವಿಭಾಷಾ ನೀತಿಯೇ ಇತ್ತು. ಆದರೆ ಹೊಸ ಶಿಕ್ಷಣ ನೀತಿಯ ಪ್ರಕಾರ ಒಂದನೇ ತರಗತಿಯಿಂದಲೇ ಮೂರನೇ ಭಾಷೆಯಾಗಿ ಹಿಂದಿಯನ್ನೇ ಕಲಿಯಬೇಕೆಂದು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಬದಲಾಗಿ ಎನ್. ಇ.ಪಿ.ಯಲ್ಲಿರುವಂತೆ ಯಾವುದಾದರೂ ಭಾರತೀಯ ಭಾಷೆಯನ್ನು ಮೂರನೇ ಭಾಷೆಯಾಗಿ ಕಲಿಯಬಹುದು ಎಂದಿದೆ. ಇದು ಕೂಡ ಪರೋಕ್ಷವಾಗಿ ಹಿಂದಿ ಹೇರಿಕೆಯ ಉದ್ದೇಶವೇ ಆಗಿದೆ. ಹೇಗೆಂದರೆ, ಮೂರನೇಭಾಷೆ ಕಡ್ಡಾಯಗೊಳಿಸಿದರೆ ಬಹುತೇಕ ಎಲ್ಲಾ ಶಾಲೆಗಳೂ ಕೂಡ ಹಿಂದಿಯನ್ನು ಮಾತ್ರವೇ ಮೂರನೇ ಭಾಷೆಯಾಗಿ ಆಯ್ಕೆ ಒದಗಿಸುತ್ತವೆ. ಇಂತಹ ಸಂದರ್‍ಭದಲ್ಲಿ ಮಕ್ಕಳು ಅನಿವಾರ್‍ಯವಾಗಿ ಹಿಂದಿಯನ್ನೇ ಕಲಿಯಬೇಕಾಗುತ್ತದೆ. ಕೆಲವು ಶಾಲೆಗಳಲ್ಲಿ ಸಂಸ್ಕೃತದ ಆಯ್ಕೆ ಇರಬಹುದಷ್ಟೆ. ಹಾಗಾಗಿ ಈ ಮೂರನೇ ಭಾಷೆ ಎಂಬುದೇ ಹಿಂದಿಯನ್ನು ತರುವ ಯೋಜನೆಯ ಭಾಗವಾಗಿದೆ. ಇದುವರೆಗೂ ಐದನೇ ತರಗತಿಯಿಂದ ಇದ್ದ ಈ ಮೂರನೇ ಭಾಷೆಯು ಈಗ ಒಂದನೇ ತರಗತಿಯಿಂದ ಕಲಿಯಬೇಕಾಗಿರುವುದು ಮಕ್ಕಳಿಗೆ ಹೊರೆಯಾಗುವುದು ಖಂಡಿತ. ಜೊತೆಗೆ ಇದು ಬಾಲ್ಯದಿಂದಲೇ ಎಲ್ಲರೂ ಹಿಂದಿಯನ್ನು ಒಪ್ಪಿಕೊಳ್ಳಬೇಕೆಂಬ ದೊಡ್ಡ ಯೋಜನೆಯಾಗಿರುವುದು ಸ್ಪಷ್ಟವಾಗಿದೆ.
 
ಕರ್‍ನಾಟಕದ ರಾಜ್ಯಪ್ರಠ್ಯಕ್ರಮದ ಶಾಲೆಗಳಲ್ಲಿ ಪ್ರೌಢಶಾಲೆಯಲ್ಲಿ ತ್ರಿಭಾಷಾ ಸೂತ್ರ ಇದ್ದು ಬಹುತೇಕ ಶಾಲೆಗಳಲ್ಲಿ ಇದೇ ತರಹ ಅನಿವಾರ್‍ಯ ಹಿಂದಿ ಆಯ್ಕೆ ಇರುವುದನ್ನು ಕಾಣಬಹುದು. ಇದನ್ನು ಅರಿತೇ ತಮಿಳುನಾಡು ಮೊದಲಿಂದಲೂ ದ್ವಿಭಾಷಾ ನೀತಿಯನ್ನು ಪಾಲಿಸುತ್ತಿದೆ ಮತ್ತು ಈಗಲೂ ತ್ರಿಭಾಷಾ ನೀತಿಯನ್ನು ಒಪ್ಪಿಕೊಳ್ಳಲು ತಯಾರಾಗಿಲ್ಲ. ಯಾವುದೇ ಹಿಂದಿರಾಜ್ಯ ಅಥವಾ ಉತ್ತರಭಾರತದ ಯಾವುದೇ ರಾಜ್ಯವೂ ಕೂಡ ತಾವು ದಕ್ಷಿಣದ ಭಾಷೆಗಳನ್ನು ತಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಪರಿಚಯಿಸುತ್ತೇವೆ ಎಂದು ಇದುವರೆಗೆ ಮುಂದಡಿ ಇಟ್ಟಿಲ್ಲ. ಆ ಬಗ್ಗೆ ಯೋಚನೆಯೂ ಸಹ ಇದ್ದಂತಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್‍ಕಾರವು ಹೀಗೆ ಅತಿ ಉತ್ಸಾಹದಿಂದ ಹಿಂದಿ ಕಡ್ಡಾಯ ಮಾಡಹೊರಟು ಪ್ರತಿರೋಧ ಬಂದಾಗ ಕೊಂಚ ಹಿಂದೆ ಸರಿದಂತೆ ಮಾಡಿ ಪರೋಕ್ಷವಾಗಿ ಹಿಂದಿಯನ್ನು ಪ್ರಾಥಮಿಕ ಹಂತದಲ್ಲೇ ಹೇರುವ ಪ್ರಯತ್ನವನ್ನು ಪ್ರಾರಂಭಿಸಿರುವುದು ಎಚ್ಚರಿಕೆಯ ಗಂಟೆಯೆಂದೇ ಹೇಳಬಹುದು. ಇದು ಎನ್. ಇ. ಪಿ. ಯ ಉದ್ದೇಶವನ್ನು ಪ್ರಶ್ನೆ ಮಾಡುವಂತಾಗಿದೆ ಮತ್ತು ಅದನ್ನು ಹಿಂದಿ ಹೇರಿಕೆಯ ಹುನ್ನಾರವನ್ನಾಗಿ ಕಾಣುವಂತಾಗಿದೆ.

***********

ಸದ್ಯದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಸರ್‍ಕಾರವು ಮತ್ತೊಮ್ಮೆ ತ್ರಿಭಾಷಾ ಕಲಿಕೆಯ ಆದೇಶ ಹೊರಡಿಸಿತು. ಅದರಲ್ಲಿ ಹಿಂದಿ ಬಿಟ್ಟು ಬೇರೆ ಆಯ್ಕೆ ಬೇಕಾದರೆ ಕನಿಷ್ಟ ೨೦ ಮಕ್ಕಳು ಇರಬೇಕು. ಅದಕ್ಕೆ ಆನ್ ಲೈನ್ ಕಲಿಕೆ ವ್ಯವಸ್ಥೆ ಮಾಡಬೇಕು ಎಂದು ಸೇರಿಸಲಾಗಿತ್ತು. ಆದರೆ ಇದಕ್ಕೂ ಸಹ ಮಹಾರಾಷ್ಟ್ರದಲ್ಲಿ ಪ್ರಬಲ ವಿರೋಧ ವ್ಯಕ್ತವಾದ ಕಾರಣ ಈ ಆದೇಶವನ್ನು ರದ್ದುಪಡಿಸಿದೆ.

++++++++++++++++

ದ್ವಿಭಾಷಾ ನೀತಿಯು ಸೂಕ್ತ

03 ಜುಲೈ 2025ರ ಪ್ರಜಾವಾಣಿಯ 'ಅಭಿಮತ'ದಲ್ಲಿ ಪ್ರೊ.ಬಿಳಿಮಲೆಯವರ ಲೇಖನ ಕಣ್ತೆರುಸುವಂತಿದೆ. 1968ರಿಂದಲೇ ಶಿಕ್ಷಣದಲ್ಲಿ ತ್ರಿಭಾಷಾ ನೀತಿಯನ್ನು ಅಳವಡಿಸಿಕೊಂಡ ಕರ್‍ನಾಟಕಕ್ಕೆ ಅದರಿಂದ ಯಾವ ಪ್ರಯೋಜನವೂ ಆಗದಿರುವುದು ಹಾಗೂ ಅದೊಂದು ಹಿಂದಿ ಹೇರಿಕೆಯ ಅಸ್ತ್ರವಾಗಿರುವುದು ಅರ್ಧಶತಕದ ನಂತರವೂ ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ೧.೪೨ ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯ ಹಿಂದಿ ವಿಷಯದಲ್ಲಿ ಫೇಲಾಗಿದ್ದಾರೆ ಎಂಬ ಮಾಹಿತಿ. ಇಷ್ಟು ವರ್ಷಗಳಲ್ಲಿ ಅದೆಷ್ಟು ಲಕ್ಷ ವಿದ್ಯಾರ್ಥಿಗಳು ಫೇಲಾಗಿ ತೊಂದರೆ ಅನುಭವಿಸಿರಬಹುದು, ಶಿಕ್ಷಣವನ್ನೇ ಮೊಟಕುಗೊಳಿಸಿರಬಹುದು ಎಂದು ಊಹಿಸಬಹುದು. ಹೀಗೆ ಅನಗತ್ಯವಾದ ಭಾಷೆಯೊಂದನ್ನು ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿ ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿರುವುದು ಶೋಚನೀಯ. ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡ ತಮಿಳುನಾಡಲ್ಲಿ ಅದರಿಂದ ಶೈಕ್ಷಣಿಕವಾಗಿ ಏನೂ ಸಮಸ್ಯೆಯಾಗಿಲ್ಲ, ಜೊತೆಗೆ ತಮಿಳರು ಕನ್ನಡಿಗರಿಗಿಂತ ಹೆಚ್ಚಾಗಿ ಬೇರೆ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ಅವಕಾಶಗಳನ್ನು ಪಡೆದುಕೊಂಡಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಉತ್ತರ ಭಾರತದ ಯಾವ ರಾಜ್ಯಗಳೂ ಇದುವರೆಗೆ ಶಾಲಾಶಿಕ್ಷಣದಲ್ಲಿ ದಕ್ಷಿಣ ಭಾಷೆಗಳನ್ನು ಪರಿಚಯಿಸುವ ಗೋಜಿಗೇ ಹೋಗಿಲ್ಲ. ಆದರೆ ಕರ್ನಾಟಕವು ಮಾತ್ರ ಕಡ್ಡಾಯ ಹಿಂದಿಯನ್ನಿಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಎನ್ ಇ ಪಿ ನೀತಿಯನ್ನು ತಂದು ಒಂದನೇ ತರಗತಿಯಿಂದಲೇ ಮೂರು ಭಾಷೆಗಳನ್ನು ಕಲಿಸುವ ಹಾಗೂ ಮತ್ತದರಲ್ಲೂ ಹಿಂದಿಯನ್ನು ಹೇರುವ ಪ್ರಯತ್ನಗಳಾಗುತ್ತಿರುವುದನ್ನು ಗಮನಿಸಬಹುದು.


ಹಿಂದಿಕಲಿಕೆ ಅಳವಡಿಸಿಕೊಂಡು ಐವತ್ತು ವರ್ಷಗಳ ನಂತರವೂ ಕರ್ನಾಟಕದ ಜನರಿಗೆ ಉತ್ತರ ಭಾರತದ ಉದ್ಯೋಗಗಳಲ್ಲಿ ಅಥವಾ ಕೇಂದ್ರಸರ್ಕಾರಿ ನೌಕರಿಗಳಲ್ಲಿ ವಿಶೇಷವಾಗಿ ಏನೂ ಪ್ರಯೋಜನವಾಗಿಲ್ಲ. ಬದಲಾಗಿ ಉತ್ತರದ ಹಿಂದಿಭಾಷಿಕರೇ ದಕ್ಷಿಣರಾಜ್ಯಗಳೆಡೆಗೆ ದುಡಿಮೆಗಾಗಿ ಹೆಚ್ಚಾಗಿ ಬರುತ್ತಿದ್ದಾರೆ. ಮುಂದ್ಯಾವಾಗಲೋ ಉದ್ಯೋಗಕ್ಕೆ ಉತ್ತರ ರಾಜ್ಯಗಳಿಗೆ ಹೋದರೆ ಅನುಕೂಲವಾಗಬಹುದು ಎಂದು ಬಾಲ್ಯದಲ್ಲಿಯೇ ಲಕ್ಷಾಂತರ ಕನ್ನಡದ ಮಕ್ಕಳಿಗೆ ಕಡ್ಡಾಯವಾಗಿ ಹಿಂದಿ ಹೇರುವುದು ಸರ್ವಥಾ ಸಮರ್ಥನೀಯವಲ್ಲ. ಹಿಂದಿಯಾಗಲಿ, ಮತ್ತಿತರ ಭಾಷೆಗಳಾಗಲೀ ಅವರವರ ಅಗತ್ಯಕ್ಕೆ ತಕ್ಕಂತೆ ಆಯ್ಕೆಯಾಗಿರಬೇಕೇ ಹೊರತು ಹೇರಿಕೆಯಾಗಬಾರದು ಮತ್ತು ಪರೀಕ್ಷೆಯ ತೇರ್ಗಡೆಗೆ, ಅಂಕಗಳ ಪರಿಗಣನೆಗೆ ಕಡ್ಡಾಯವಾಗಿರಬಾರದು. ಇದೆಲ್ಲಾ ದೃಷ್ಷಿಯಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಕನ್ನಡ ಇಂಗ್ಲೀಷ್ ಒಳಗೊಂಡ ದ್ವಿಭಾಷಾ ನೀತಿಗೆ ಮರಳುವುದು ಅತ್ಯಂತ ಸೂಕ್ತ.

ಭಾನುವಾರ, ಫೆಬ್ರವರಿ 9, 2025

ಕನ್ನಡ ಅಕ್ಷರಗಳಿರುವ ಕಂಪ್ಯೂಟರ್ ಕೀಬೋರ್ಡ್?

"ಲ್ಯಾಪ್ ಟಾಪಲ್ಲಿ ಟೈಪ್ ಮಾಡಲು ಕನ್ನಡ ಕೀಬೋರ್ಡ್ ಸಿಗುತ್ತದಾ" ಅಂತ ಒಬ್ಬರು ಕೇಳಿದರು. ನಾನು, ಕನ್ನಡ ಕೀಬೋರ್ಡುಗಳೇನು, ಬೇಕಾದಷ್ಟಿವೆ, ಪದ, ನುಡಿ, ಬರಹ, ವಿಂಡೋಸ್ ಇನ್ ಬಿಲ್ಟ್, ಲೀನಕ್ಸ್ ಅದು ಇದು ಅಂತ ಒಂದ್ನಾಲ್ಕು ಹೇಳಿ, "ಬೇಕಾದರೆ  ಕನ್ನಡದಲ್ಲಿ ಬರೆಯುವ ಈ ಯಾವುದಾದರೂ ತಂತ್ರಾಂಶವನ್ನು ಹಾಕಿಕೊಂಡು ಒಂದು external keyboard ಲ್ಯಾಪ್ಟಾಪಿಗೆ ಜೋಡಿಸಿಕೊಂಡು ಕುಟ್ಟಬಹುದು" ಅಂದೆ. ಆದರೆ ಅವರು, ಅದಲ್ಲ ಕೇಳ್ತಿರೋದು, ಕನ್ನಡ ಅಕ್ಷರಗಳಿರುವ ಕೀಬೋರ್ಡೇ ಬೇಕು ಅಂತ ಕೇಳಿದರು.
 
ನನಗೆ ಗೊತ್ತಿರುವಂತೆ ಈಗಿರುವ ಇಂಗ್ಲೀಷ್ ಕೀಬೋರ್ಡ್ ವಿನ್ಯಾಸದಂತೆ ಕನ್ನಡ ಅಕ್ಷರಗಳಿರುವ ಕೀಬೋರ್ಡು ಯಾವುದೂ ಇಲ್ಲ. ಹಿಂದೊಮ್ಮೆ ಯಾವಾಗಲೋ ಪ್ರಾಯೋಗಿಕವಾಗಿ ಮಾಡಿದ್ದನ್ನೋ ಅಥವಾ ಎಲ್ಲೋ ಬಳಕೆಯಲ್ಲಿದ್ದುದ್ದನ್ನೋ ನೋಡಿದ ನೆನಪಿದೆ. (ಎಲ್ಲಾದರೂ ಸರ್ಕಾರಿ ಕಛೇರಿಗಳಲ್ಲಿ ಈಗಲೂ ಇದ್ದರೆ ಬಲ್ಲವರು ತಿಳಿಸಬೇಕು). ಆದರೆ ಇತ್ತೀಚೆಗಂತೂ ಅಂತಹುದು ಯಾವುದೂ ಕಾಣೆ. ವ್ಯಾಪಕವಾಗಿ ಬಳಕೆಯಲ್ಲಿರುವ ಇಂಗ್ಲೀಷ್ ಅಕ್ಷರಗಳಿರುವ QWERTY ಕೀಬೋರ್ಡನ್ನೇ ಕನ್ನಡ ಟೈಪಿಸುವ ಕೆಲಸಕ್ಕೂ ಬಳಸಬೇಕಾದ ಅನಿವಾರ್ಯತೆಯಿಂದ ಕನ್ನಡ ಟೈಪಿಂಗ್ ತಂತ್ರಾಂಶಗಳನ್ನೂ ಸಹ ಅದಕ್ಕೆ ತಕ್ಕುದಾಗಿ ಮಾಡಿದ್ದಾರೆ. 

ನಿಜ ಹೇಳಬೇಕೆಂದರೆ, ಕೀಬೋರ್ಡ್ ಅನ್ನುವುದು ಖಾಲಿ ಕೀಬೋರ್ಡ್ ಅಷ್ಟೆ, ಅದರ ಗುಂಡಿಗಳ ಮೇಲೆ ಇಂಗ್ಲೀಷ್ ಅಕ್ಷರಗಳು ಪ್ರಿಂಟಾಗಿರುತ್ತವೆ ಮತ್ತು ಯಾವ ಕೀ ಗೆ ಯಾವ ಅಕ್ಷರ ಮೂಡಬೇಕು ಅಂತ ತಂತ್ರಾಂಶ ನಿರ್ದೇಶನ ಇರುತ್ತದೆ. ಬದಲಾಗಿ ಅದರ ಮೇಲೆ ಬೇರೆ ಭಾಷೆಯ ಅಕ್ಷರಗಳನ್ನು ಪ್ರಿಂಟ್ ಹಾಕಿದರೆ ಮತ್ತು ತಕ್ಕುದಾದ ತಂತ್ರಾಂಶ ನಿರ್ದೇಶಕ ಕೊಟ್ಟರೆ ಅದು ಆಯಾ ಭಾಷೆಯ ಕೀಬೋರ್ಡು ಅನಿಸಿಕೊಳ್ಳಬಹುದು. ಕೆಲವು ಭಾಷೆಗಳಿಗೆ ಒಂದಿಷ್ಟು ಹೆಚ್ಚಿನ ಗುಂಡಿಗಳ ಅವಶ್ಯಕತೆ ಇರುತ್ತದೆ.
ಟೈಪಿಂಗ್ ಅನ್ನುವುದು ಮೆದುಳಿನ ಸಹಯೋಗದಿಂದ ಬೆರಳುಗಳ ಚಲನೆಗಳ ಮೂಲಕ ನಡೆಯುವುದರಿಂದ ಅದರದ್ದೊಂದು ವೈಜ್ಞಾನಿಕ ಕ್ರಮದಿಂದಲೇ ಕೀಬೋರ್ಡ್ ವಿನ್ಯಾಸಗಳು ಅಭಿವೃದ್ಧಿಯಾಗಿವೆ. (ಕೀಬೋರ್ಡುಗಳ ವಿನ್ಯಾಸದ ಬೆಳವಣಿಗೆ ಬಗ್ಗೆ ಓದಿದರೆ ಬಹಳ ಕುತೂಹಲಕಾರಿಯಾಗಿದೆ). 

ಚಿತ್ರ: https://ka-naada.com/
ಅದು ಇರಲಿ. ಕನ್ನಡದ್ದೇ ಅಕ್ಷರಗಳಿರುವ 'ಕ-ನಾದ' ಕೀಬೋರ್ಡು ಎರಡ್ಮೂರು ವರ್ಷಗಳ ಹಿಂದೆ ತಯಾರಿಸಲ್ಪಟ್ಟಿತ್ತು. ಈಗಲೂ ಅವರ ಜಾಲತಾಣದಲ್ಲಿ ಕೊಳ್ಳಲು ಲಭ್ಯ ಇದೆ. ಆದರೆ ಅದರ ವಿನ್ಯಾಸ ಬೇರೆ ರೀತಿಯೇ ಇದೆ. (ಚಿತ್ರ ನೋಡಿ). ಅದರಲ್ಲಿ ಟೈಪ್ ಮಾಡುವುದು ಸುಲಭ ಅಂತ ತಯಾರಕರು ಹೇಳುತ್ತಾರೆ. ಆದರೆ ಅದು ಹೇಗೆ ಸುಲಭ ಅಂತ ನನಗಂತೂ ಇದುವರೆಗೂ ಅರ್ಥಾಗಿಲ್ಲ. ನಮಗೆ qwerty ಕೀಬೋರ್ಡ್ ಬಳಸಿ ಅಭ್ಯಾಸವಾಗಿರುವುದರಿಂದ ಹಾಗನ್ನಿಸುತ್ತದೋ ಗೊತ್ತಿಲ್ಲ. 'ಕ-ನಾದ' ಕೀಬೋರ್ಡಿನ ವಿನ್ಯಾಸವು ಟೈಪಿಂಗಿಗೆ ಅನುಕೂಲ ಅನ್ನಿಸುತ್ತಿಲ್ಲ. ಅದನ್ನು ಅರ್ಥಮಾಡಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದರೂ ನನ್ನ ಬುದ್ದಿಗೆ ನಿಲುಕುತ್ತಿಲ್ಲ! (ಅವರು ತುಳು, ದೇವನಾಗರಿ-ಇಂಗ್ಲೀಷ್ ಕೀಲಿಮಣೆಗಳನ್ನೂ ತಯಾರಿಸಿದ್ದಾರೆ). ಸದ್ಯಕ್ಕಂತೂ ಕನ್ನಡ ಅಕ್ಷರಗಳಿರುವ ಕೀಬೋರ್ಡೇ ಬೇಕು ಅಂದರೆ ಅದೊಂದೇ ಇರುವುದು. ಅದು ಬಿಟ್ಟರೆ ಈಗಿರುವ ಇಂಗ್ಲೀಷ್ ಕೀಬೋರ್ಡನ್ನೇ ಕನ್ನಡಕ್ಕೆ ಮಾಡಿಕೊಳ್ಳಬೇಕು ಅಂದರೆ ಕನ್ನಡ ಅಕ್ಷರಗಳ ಸ್ಟಿಕರ್ಸ್ ಮಾಡಿಸಿಕೊಂಡು ಕೀಗಳ ಮೇಲೆ ಅಂಟಿಸಿಕೊಳ್ಳಬೇಕಷ್ಟೆ. ಅದು ಹೊರತು ಬೇರೆ ಉಪಾಯ ಹೊಳೆಯುತ್ತಿಲ್ಲ!


ಶನಿವಾರ, ಜನವರಿ 25, 2025

ಕುದುರೆಮುಖ ಸಾಲಿನ ಕುರಿಂಜಲ್ ಬೆಟ್ಟದ ಚಾರಣ

ಹಿಂದಿನವಾರ ಕುದುರೆಮುಖ ಸಾಲಿನ ಬೆಟ್ಟಗಳಲ್ಲಿ ಪ್ರವಾಸ ಮತ್ತು ಚಾರಣ ಮಾಡಿಬಂದೆವು. ಅದರ ಕೆಲವು ವಿವರಗಳನ್ನು ದಾಖಲಿಸಲು ಈ ಬರೆಹ. 

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು ಕುದುರೆಮುಖ ಊರಿನಿಂದ ಕಾರ್‍ಕಳದವರೆಗೆ ರಸ್ತೆ ಇದರೊಳಗೆ ಹಾದುಹೋಗುತ್ತದೆ. ನಾವು ಇಲ್ಲಿಗೆ ಹೋಗಬೇಕೆಂದು ಯೋಜನೆ ಹಾಕಿದಾಗ ಉಳಿದುಕೊಳ್ಳುವ ವ್ಯವಸ್ಥೆ ಹಾಗೂ ಚಾರಣಕ್ಕೆ ಸೂಕ್ತವಾದ ಸ್ಥಳಗಳನ್ನು ಹುಡುಕಲಾಗಿ ಅಲ್ಲಿರುವ ಭಗವತಿ ನೇಚರ್ ಕ್ಯಾಂಪ್ ಹಾಗೂ ಕುರಿಂಜಾಲ್ ಶಿಖರ ಚಾರಣವನ್ನು ಆಯ್ಕೆ ಮಾಡಿಕೊಂಡೆವು. 

ಭಗವತಿ ನೇಚರ್ ಕ್ಯಾಂಪ್

ಇದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್'ನವರದ್ದಾಗಿದ್ದು ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೇ ಇದೆ. ನಾವು ಹತ್ತು ಜನರಿದ್ದುದರಿಂದ ಡಾರ್‍ಮಿಟ್ರಿಯನ್ನು ಬುಕ್ ಮಾಡಿದ್ದೆವು. ಈ ಕ್ಯಾಂಪಿನಲ್ಲಿ ಕಾಟೇಜುಗಳೂ ಸಹ ಇದೆ. ಬೆಂಗಳೂರಿನಿಂದ ಹೊರಟು ಮೂಡಿಗೆರೆ, ಕಳಸ, ಸಂಸೆ ಮಾರ್‍ಗವಾಗಿ ಸಾಗಿದರೆ ಬಸ್ರೀಕಲ್ ಎಂಬಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ವಾಹನಗಳ ನಂಬರ್ ಬರೆದುಕೊಂಡು ಪಾಸ್ ಕೊಡುತ್ತಾರೆ.  ಈ ರಸ್ತೆಯಲ್ಲಿ ಹಾಗೇ ಮುಂದೆ ಹೋದಾಗ ಕುದುರೆಮುಖ ಊರು ಸಿಗುತ್ತದೆ. ಕಾರ್‍ಕಳ ಅಥವಾ ಶೃಂಗೇರಿ ಕಡೆಯಿಂದ ಹೊರಹೋಗಲು ಅಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಈ ಪಾಸನ್ನು ಕೊಟ್ಟು ಹೊರಹೋಗಿದ್ದನ್ನು ದಾಖಲಿಸಬೇಕು. ಕುದುರೆಮುಖದ ಅರಣ್ಯ ಇಲಾಖೆಯ ಕಛೇರಿಯಿಂದ ಸುಮಾರು ಎಂಟು ಕಿಮಿ ದೂರದಲ್ಲಿ ಭಗವತಿ ನೇಚರ್ ಕ್ಯಾಂಪ್ ಸಿಗುತ್ತದೆ. ಮುಖ್ಯರಸ್ತೆಯಿಂದ ಮತ್ತೆ ಒಳಗೆ ಒಂದು ಕಿಮಿ ಹೋಗಬೇಕು. ಎಲ್ಲಾ ಕಾಲದಲ್ಲೂ ವಾಹನಗಳು ಹೋಗಬಹುದಾದಂತಹ ರಸ್ತೆ ಇದೆ.  ನೇಚರ್ ಕ್ಯಾಂಪಿನ ಪರಿಸರವು ಚೆನ್ನಾಗಿದ್ದು ಒಳ್ಳೆಯ ಅನುಭವ ಒದಗಿಸುತ್ತದೆ. 

ನೇಚರ್ ಕ್ಯಾಂಪಿನ ಪ್ಯಾಕೇಜ್ ಚಟುವಟಿಗಳಲ್ಲಿ ಮುಖ್ಯವಾಗಿ ಇರುವುದು ನೇಚರ್ ವಾಕ್, ಡಾಕ್ಯುಮೆಂಟರಿ ಶೋ ಮತ್ತು ಊಟ ತಿಂಡಿ ಚಾ ಕಾಪಿ. ನೇಚರ್ ವಾಕ್ ಎಂದರೆ ಅಲ್ಲೇ ಸುತ್ತಲಿನ ಪರಿಸರದಲ್ಲಿ ಆಸಕ್ತರು ಮರಗಿಡಗಳನ್ನು, ಪಕ್ಷಿಗಳನ್ನು ನೋಡುತ್ತಾ, ಬಗೆಬಗೆಯ ಹಕ್ಕಿಗಳ ಕೂಗನ್ನು ಕೇಳಿಸಿಕೊಳ್ಳುತ್ತಾ ಓಡಾಡಬಹುದು. ಹತ್ತಿರದಲ್ಲೇ ಒಂದು ವೀಕ್ಷಣಾಗೋಪುರವಿದ್ದು ಅದರ ಮೇಲಿಂದ ಬೆಟ್ಟಗಳ ಸಾಲಿನ, ಕಾಡಿನ ನೋಟ ಸಾಧ್ಯ. ಈ ಕ್ಯಾಂಪಿನ ಪಕ್ಕದಲ್ಲೇ ತಾಗಿಕೊಂಡಂತೆ ಭದ್ರಾನದಿಯು ಹಾದುಹೋಗಿದೆ. ನಿಯಮದ ಪ್ರಕಾರ ನದಿಯಲ್ಲಿ ಇಳಿಯುವುದು ನಿಷಿದ್ಧ. ನೀರು ತುಂಬಿ ಹರಿಯುವಾಗಲಂತೂ ಅಪಾಯಕಾರಿ. ಬೇರೆ ಕಾಲಗಳಲ್ಲಿ ನೀರು ಕಡಿಮೆ ಇದ್ದಾಗ ಹೋಗಬಹುದಾದರೂ ಇದು ನೇಚರ್ ಕ್ಯಾಂಪಿನವರ ಹೊಣೆಗಾರಿಕೆಯಲ್ಲಿಲ್ಲ. ರಾತ್ರಿ ಏಳೂವರೆ ಗಂಟೆಗೆ ಕುದುರೆಮುಖಶ್ರೇಣಿಗಳ ಬಗ್ಗೆ, ಅರಣ್ಯ ಸಿಬ್ಬಂದಿಯ ಕೆಲಸದ ಬಗ್ಗೆ ಕೆಲವು ಡಾಕ್ಯುಮೆಂಟರಿಗಳನ್ನು ಹಾಕಲಾಗುತ್ತದೆ. ಆಸಕ್ತರು ಕುಳಿತು ನೋಡಬಹುದು. ಊಟ ತಿಂಡಿಗಳ ಬಗ್ಗೆ ಯಾವುದೇ ದೂರೂ ಇಲ್ಲದಂತೆ ಬಗೆಬಗೆಯ ಮತ್ತು ರುಚಿಯಾದ ಪದಾರ್‍ಥಗಳನ್ನು ಒದಗಿಸಿದರು. ಅಲ್ಲಿರುವ ಊಟದ ಜಗುಲಿಯಲ್ಲಿ ನಾವು ಬಡಿಸಿಕೊಂಡು ಉಣ್ಣಬಹುದು. ಇನ್ನುಳಿದಂತೆ ಕಾಟೇಜುಗಳು ಮತ್ತು ಡಾರ್‍ಮೆಟ್ರಿಯನ್ನು ತಕ್ಕಮಟ್ಟಿಗೆ ನಿರ್‍ವಹಿಸಿ ಇಟ್ಟುಕೊಂಡಿದ್ದಾರಾದರೂ ಇನ್ನೂ ಒಂದಿಷ್ಟು ನಿರ್‍ವಹಣೆ ಮತ್ತು ಸೌಲಭ್ಯಗಳನ್ನು ಸುಧಾರಿಸಬಹುದು ಎನಿಸಿತು.   ಇಲ್ಲಿಂದ ಹೆಚ್ಚುವರಿ ಪಾವತಿ ಮಾಡಿ ಜೀಪ್ ಸಫಾರಿ ಹೋಗಲೂ ಅವಕಾಶವಿದೆ.

ಕುರಿಂಜಲ್ ಬೆಟ್ಟ ಚಾರಣ


ಕುರಿಂಜಾಲ ಬೆಟ್ಟದ ಚಾರಣದ ಪ್ರಾರಂಭದ ಜಾಗ ಭಗವತಿ ನೇಚರ್ ಕ್ಯಾಂಪ್. ಅಲ್ಲಿಂದಲೇ ಕುರಿಂಜಾಲ್ ಹಾಗೂ ಗಂಗಡಿಕಲ್ ಬೆಟ್ಟಗಳ ಚಾರಣ ಶುರುವಾಗುತ್ತದೆ. ಕುದುರೆಮುಖ ಶ್ರೇಣಿಯ ಎಲ್ಲಾ ಟ್ರೆಕ್ ಗಳಿಗೂ ಅರಣ್ಯ ಇಲಾಖೆಯ ಜಾಲತಾಣದ ಮೂಲಕ ಮೊದಲೇ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಕೆಲವು ಚಾರಣಗಳಿಗೆ ಕುದುರೆಮುಖದ ಅರಣ್ಯ ಕಛೇರಿಯಲ್ಲಿ, ಕೆಲವು ಚಾರಣಗಳಿಗೆ ಬಸ್ರೀಕಲ್ ಅರಣ್ಯ ಕಛೇರಿಯಲ್ಲಿ ಚಾರಣದ ದಿನದ ಬೆಳಗ್ಗೆ ಹಾಜರಾತಿ ಹಾಕಿ ಗುರುತಿನ ಚೀಟಿ ತೋರಿಸಿ ಸಹಿಮಾಡಿ ಅವರೇ ಒದಗಿಸುವ ಗೈಡಿನ ಜೊತೆಗೆ ಹೊರಡಬೇಕಾಗುತ್ತದೆ. ಅಂತೆಯೇ ನಾವು ಕುದುರೆಮುಖದ ಕಛೇರಿಗೆ ಹೋಗಿ ನಮ್ಮ ನೊಂದಣಿ ತೋರಿಸಿದೆವು. ಕುರಿಂಜಾಲ್ ಪರ್‍ವತದ ತುದಿಗೆ ಅಲ್ಲಿಂದ ಏಳು ಕಿಮಿ ನಡಿಗೆ. ಮೊದಲು ಸುಮಾರು ಐದು ಕಿಮಿ ಕಾಡಿನಲ್ಲಿ ನಡೆಯಬೇಕು. ಕೊನೆಯ ಎರಡು ಕಿಮಿ ಬೆಟ್ಟದ ಏರುದಾರಿಯಲ್ಲಿ ನಡೆಯಬೇಕು. ಇದು ತೀರಾ ಕಷ್ಟದ ಹಾದಿ ಅಲ್ಲದಿರುವುದರಿಂದ ಒಂದು ತಕ್ಕ ಮಟ್ಟಿಗಿದ ದೈಹಿಕ ಸದೃಢತೆ ಇರುವ ಯಾರಾದರೂ ಹತ್ತಬಹುದಾಗಿದೆ. ದಟ್ಟಕಾಡಿನಲ್ಲಿ ಹಾದು, ನಡುವೆ ಸಿಗುವ ನದಿ ತೊರೆಗಳಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ, ಶಿಖರದ ತುದಿ ತಲುಪಿ ಸ್ವಲ್ಪ ಸಮಯ ಕಳೆದು ಅಲ್ಲಿಂದ ಇಳಿದು ಬರುವುದಕ್ಕೆ ಒಟ್ಟಾರೆ ಸುಮಾರು ಐದು ಗಂಟೆಗಳನ್ನು ತೆಗೆದುಕೊಂಡೆವು. ಬೆಟ್ಟದ ತುದಿಯಿಂದ ಕಾಣುವ ವಿಹಂಗಮ ನೋಟವು ಬಹಳ ಸುಂದರವಾಗಿತ್ತು. ಅವತ್ತಿನ ದಿನ ಹೆಚ್ಚು ಬಿಸಿಲು ಅಥವಾ ಮಳೆಯ ವಾತಾವರಣವೂ ಇಲ್ಲದೆ ಚೆನ್ನಾಗಿದ್ದುದರಿಂದ  ಅನುಕೂಲವಾಯಿತು.


ಒಂದು ಕುತೂಹಲಕಾರಿ ಸಂಗತಿ
ಚಾರಣಕ್ಕೆಂದು ಹೋದಾಗ, ಕಾಡಿನಲ್ಲಿ ನಡೆಯುತ್ತಿದ್ದಾಗ ಒಳಗೆ ಒಂದಿಷ್ಟು ದೂರದಾನಂತರ ಚಿತ್ರದಲ್ಲಿರುವಂತಹ ಮರಗಳು ಕಾಣಿಸಿದವು. ನಾನು ಆ ತರಹದ ಮರಗಳನ್ನು ಅದೇ ಮೊದಲು ನೋಡಿದ್ದು. ಬುಡದಲ್ಲಿ ಮಣ್ಣಿನಿಂದ ಕೊಂಚ ಮೇಲ್ಭಾಗದವರೆಗೂ ಸುತ್ತಲೂ ಅಡ್ಡ ಪಟ್ಟಿಗಳ ತರಹ ರಚನೆ ಇದ್ದು ಕೆಲವು ಮರಗಳಲ್ಲಿ ಅದರಿಂದ ಬೇರುಗಳು ಹೊರಬಂದು ಗೊಂಚಲಾಗಿ ಹರಡಿಕೊಂಡಿರುತ್ತವೆ. ದೊಡ್ಡ ಮರಗಳಲ್ಲಿ ಬೇರುಗಳು ಹತ್ತು ಅಡಿಗೂ ದೂರ ಮಣ್ಣಿನ ಮೇಲೇ ಚಾಚಿ ಬೆಳೆದಿದ್ದವು. ಮೊದಮೊದಲು ಒಂದೆರಡು ಕಂಡ ಮರಗಳು ಆನಂತರ ಹೆಚ್ಚಾಗುತ್ತಾ ಹೋದವು. ಆವರೆಗೆ ಕಾಡಿನಲ್ಲಿ ಹಲವು ಜಾತಿಯ ಮರಗಳು ಇದ್ದವು. ಆದರೆ ಈ ಪ್ರದೇಶದಲ್ಲಿ ಶುರುವಾಗಿ ಅಲ್ಲಿಂದ ಮುಂದಿನ ಕಾಡಿನ ಪ್ರದೇಶವೆಲ್ಲಾ ಈ ಮರಗಳೇ ತುಂಬಿದ್ದವು. ಚಿಕ್ಕಪುಟ್ಟ ಮರಗಿಡ ಬಳ್ಳಿಗಳು ಬೇರೆ ಹಲವು ಜಾತಿಯವು ಇದ್ದವಾದರೂ ದೊಡ್ಡದಾಗಿ ಬೆಳೆದ ಮರಗಳಲ್ಲಿ ಇವುಗಳದ್ದೇ ಪ್ರಾಬಲ್ಯವಾಗಿ ಎಲ್ಲೆಡೆ ಹರಡಿಕೊಂಡಿದ್ದವು. ಇನ್ನೂ ಒಳಗಿನ ಕಾಡಿನಲ್ಲಿ ಬೇರೆ ಯಾವುದೇ ಮರಗಳು ಇಲ್ಲದಂತೆ ಬರೀ ಇವೇ ಮರಗಳು ತುಂಬಿದ್ದವು. ಒಂದು ಜಾಗದಲ್ಲಿ ಇದರ ಬಗ್ಗೆ ಅಧ್ಯಯನ ಮಾಡಿ ಒಂದು ಫಲಕ ಹಾಕಿದ್ದು ಕಾಣಿಸಿತು. Poeciloneuron indicum ಎಂಬ ಹೆಸರಿನ ಈ ಮರಗಳಿರುವ ಪ್ರದೇಶ monodominent forest ಎಂದೇ ಗುರುತಿಸಲಾಗಿತ್ತು. (ಚಿತ್ರದಲ್ಲಿದೆ). ಈ ಮರಗಳಿಗೆ ಕನ್ನಡದಲ್ಲಿ 'ಬಲಿಗೆ' ಎಂದು ಕರೆಯುತ್ತಾರೆ ಎಂದು ನಮ್ಮ ಸ್ಥಳೀಯ ಮಾರ್ಗದರ್ಶಿಯಿಂದ ತಿಳಿಯಿತು. ನಾನು ಕಾಡಿನಲ್ಲಿ ಈ ರೀತಿಯ ಪರಿಸರವನ್ನು ಇದೇ ಮೊದಲು ನೋಡಿದ್ದು ಇದೊಂದು ಹೊಸ ಅನುಭವವಾಗಿತ್ತು. ಅವು ಆ ಪರಿಸರದಲ್ಲಿ ಏಕೆ, ಹೇಗೆ ಅಷ್ಟು ಹೆಚ್ಚಾಗಿ ಬೆಳೆದವು, ಅವುಗಳ ಬುಡದಲ್ಲಿ ಆ ರಚನೆಯ ಕಾರಣವೇನು ಎಂಬುದರ ಬಗ್ಗೆ ಓದಿ ತಿಳಿದುಕೊಳ್ಳಬೇಕಿದೆ. ವಿಕಿಪೀಡಿಯಾದಲ್ಲಿ ಇದರ ಬಗ್ಗೆ ಕಿರುಮಾಹಿತಿ ಇದೆ : ಬಳಗಿ

****

ಭಾನುವಾರ, ಏಪ್ರಿಲ್ 28, 2024

ಬೆಂಗಳೂರು ನಗರದಲ್ಲಿ ಮತದಾನದ‌‌ ಪ್ರಮಾಣ ಕಡಿಮೆ ಏಕೆ?

ಮೇ 26, 2024ರಂದು ಲೋಕಸಭಾ ಚುನಾವಣೆಗೆ ಮತದಾನ ಆಯಿತು. ಕರ್‍ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಸುಮಾರು ಶೇ.55 ರಷ್ಟು ಮತದಾನದ ಪ್ರಮಾಣ ವರದಿಯಾಗಿದೆ.

ಬೇರೆ ಕ್ಷೇತ್ರಗಳಿಗಿಂತ ಬೆಂಗಳೂರಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಮತದಾನದ‌‌ ಪ್ರಮಾಣ ಕಡಿಮೆ ಅಂತ ಪ್ರತಿಬಾರಿಯೂ ಹೇಳ್ತಾರೆ. ಅದಕ್ಕೆ ಕಾರಣಗಳು ಹೀಗಿರಬಹುದು ಅಂತ ನನ್ನ ಅನಿಸಿಕೆ.

೧. ಮತದಾರರ ಪಟ್ಟಿ ಪರಿಷ್ಕರಣೆ ಆಗಿರುವುದಿಲ್ಲ. ನಗರ ಅಂದಮೇಲೆ ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಾಸಸ್ಥಳ ಬದಲಾಯಿಸುತ್ತಿರುತ್ತಾರೆ. ಬೇರೆ ಬೇರೆ ಊರುಗಳಿಂದ ಬಂದವರಿರುತ್ತಾರೆ, ಬೇರೆ ಊರುಗಳಿಗೆ ಹೋಗುವವರಿಗುತ್ತಾರೆ. ಬಹಳ ಜನ ತಾವು ಇರುವಲ್ಲಿ ಹೆಸರು ಸೇರಿಸಿದರೆ, ಹಿಂದಿನ ಪಟ್ಟಿಯಲ್ಲಿ ಹೆಸರು ತೆಗೆಸುವ ಗೋಜಿಗೆ ಹೋಗುವುದಿಲ್ಲ. ನಗರದ ಸುತ್ತಮುತ್ತಲಿನ ಊರಿನವರು ಅವರವರ ಊರಿಗೆ ಹೋಗಿ ಮತಚಲಾಯಿಸುತ್ತಾರೆ. ಬೆಂಗಳೂರಲ್ಲಿನ ಪಟ್ಟಿಯಲ್ಲೂ ಅವರ ಹೆಸರಿರುತ್ತದೆ. ನಿಧನರಾದವರ ಹೆಸರುಗಳೂ ಹಾಗೇ ಇರುತ್ತವೆ. ನಗರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಬಹಳ ಶ್ರಮ, ಸಿಬ್ಬಂದಿ, ಸಮಯ ಬೇಕಿರುವುದರಿಂದ ಆ ಕೆಲಸ ಮಾಡುವುದಿಲ್ಲ. ಕೋಟಿಗಟ್ಟಲೇ ಮತದಾರರಿರುವ ಬೆಂಗಳೂರಿನಂತಹ ನಗರದಲ್ಲಿ ಅದು ಸುಲಭದ ಕೆಲಸ ಅಲ್ಲ. 

೨. ಬೆಂಗಳೂರಲ್ಲಿ ಪರರಾಜ್ಯಗಳ ವಲಸಿಗರು ಜಾಸ್ತಿ. ಅವರಲ್ಲೂ ಅನೇಕರು ಪಾಸ್ ಪೋರ್ಟ್, ಪಡಿತರ ಮುಂತಾದ ಬೇರೆ ಬೇರೆ ಕಾರಣಗಳಿಗಷ್ಟೆ ಮತದಾರದ ಪಟ್ಟಿಗೆ ಹೆಸರು ಸೇರಿಸಿಕೊಂಡರೂ ಅವರಿಗೆ ಇಲ್ಲಿನ ರಾಜಕೀಯ, ಅಭ್ಯರ್ಥಿಗಳ ಬಗ್ಗೆ ಏನೂ ಗೊತ್ತಿರದ ಕಾರಣ ಮತದಾನಕ್ಕೆ ಹೋಗದೇ ಇರುವವರು ಹೆಚ್ಚಿರಬಹುದು. ಹಲವರು ಇಲ್ಲೇ ನೆಲೆಯೂರಿ ಬಹಳ ವರ್ಷಗಳಾಗಿದ್ದರೂ ಹೊರಗಿನವರಂತೆಯೇ ಇದ್ದು ಮತದಾನಕ್ಕೆ ಆಸಕ್ತಿ ಹೊಂದಿರುವುದಿಲ್ಲ.  

೩. ಇಲ್ಲಿನ ಬಹುತೇಕ ಯುವಜನಾಂಗಕ್ಕೆ ರಾಜಕೀಯ ಪ್ರಜ್ಞೆ ಕಡಿಮೆ.  ಬಹಳ ಮಕ್ಕಳಿಗೆ ರಾಜಕೀಯ, ಆಡಳಿತ, ಚುನಾವಣೆ ಬಗ್ಗೆ, ಅಧಿಕಾರದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಯೇ ಗೊತ್ತಿರುವುದಿಲ್ಲ.  ಇಂತಹವರಲ್ಲಿ ಬಹಳಷ್ಟು ಜನ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡರೂ ಮನೆಯಲ್ಲಿ ಯಾರೂ ಹೇಳದಿದ್ದರೆ ಮತದಾನಕ್ಕೆ ಹೋಗದಿರಬಹುದು.  

೪. ಓಡಾಟದ ಕೆಲಸದಲ್ಲಿರುವವರು, ರಾತ್ರಿಪಾಳಿಯವರು ಹಲವು ಜನ ಮತದಾನ ತಪ್ಪಿಸಿಕೊಳ್ಳಬಹುದು. ಹಲವರು ವಿದೇಶಗಳಿಗೆ ಹೋಗಿರುತ್ತಾರೆ. ಅಂತಹ ಉದ್ಯೋಗಿಗಳು ನಗರಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುತ್ತಾರೆ. 

೫. ಹಿರಿಯನಾಗರಿಕರು ನಿರಾಸಕ್ತಿ ಹೊಂದಿರಬಹುದು. "ಯಾವ್ ಪಕ್ಷ ಬಂದ್ರೂ ಅಷ್ಟೇ ಬಿಡ್ರಿ. ಏನಾದ್ರೂ ಮಾಡ್ಕಳ್ಲಿ.." ಅನ್ನೋದು ಸಾಮಾನ್ಯ. ಆದರೆ ಬೇರೆ ಊರುಗಳಲ್ಲಿ ಮುದುಕರು ಹುಡುಗರು ಎಲ್ಲರೂ ಎದ್ದುಬಂದು ಓಟ್ ಮಾಡೋದಿದೆ. ಕಾರಣ ಹಲವಿರಬಹುದು.

೬. ಇದಿಷ್ಟೂ ಕಾರಣಗಳ ಹೊರತಾಗಿಯೂ ನಿಜವಾಗಿಯೂ ನಗರದಲ್ಲಿ ಮತದಾನದ ಬಗ್ಗೆ ನಿರಾಸಕ್ತಿ ಇರುವವರ, ಅದರ ಮಹತ್ವವನ್ನು ತಿಳಿಯದವರ, ನಿರ್ಲಕ್ಷ್ಯ ಮಾಡುವವರ, ಆ ಪ್ರಜ್ಞೆ ಇರದವರ ಸಂಖ್ಯೆ ಗಣನೀಯವಾಗಿದೆ.  ವಾರಾಂತ್ಯದಲ್ಲಿ ಮತದಾನದ ದಿನ ಬಂದಾಗ ಹಲವರು ಪ್ರವಾಸ ಹೋಗಿಬಿಡುತ್ತಾರೆ ಎಂಬ ಆರೋಪವು ಈ ಅಂಶದಲ್ಲಿ ಸೇರುತ್ತದೆ. ಈ ಬಾರಿಯ ಮತದಾನವು ಶುಕ್ರವಾರ ಬಂದಿತ್ತು. ಹಾಗಾಗಿ ಮೂರು ದಿನ ರಜೆ ಸಿಗುವಂತಾಗಿತ್ತು.  ಇದನ್ನು ತಪ್ಪಿಸಲು ಹೋಂಸ್ಟೇ , ರೆಸಾರ್ಟುಗಳಲ್ಲಿ ಬುಕಿಂಗ್ ತೆಗೆದುಕೊಳ್ಳದಂತೆ ಜಿಲ್ಲಾಡಳಿತಗಳು ನಿರ್‍ದೇಶನ ಕೊಟ್ಟಿದ್ದವು ಎಂದು ವರದಿಯಾಗಿತ್ತು. ಅದು ಪಾಲನೆ ಆಯಿತೊ ಇಲ್ಲವೊ ಗೊತ್ತಿಲ್ಲ.

ಆದರೆ ಮುಖ್ಯಕಾರಣ ಮೇಲೆ ಹೇಳಿರುವ ಅಂಶಗಳಲ್ಲಿ ಮೊದಲನೆಯದ್ದೇ ಆಗಿದೆ ಅಂತ ನನ್ನ ಅನಿಸಿಕೆ.

ಭಾನುವಾರ, ಜುಲೈ 2, 2023

ಐಫೋನ್'ಗಾಗಿ ಕನ್ನಡ ಕೀಬೋರ್ಡ್ ಆಪ್‌ಗಳು

ಐಫೋನ್/ಐಪ್ಯಾಡಲ್ಲಿ ಕನ್ನಡದಲ್ಲಿ ಬರೆಯಲು ಇನ್ ಬಿಲ್ಟ್ ಕೀಬೋರ್‍ಡ್ ಇದೆ. ಆದರೆ ಅದು ಅಷ್ಟು ಅನುಕೂಲವಾಗಿಲ್ಲ ಅನ್ನಿಸುವವರಿಗೆ ಬೇರೆ ಹಲವಾರು ಆಯ್ಕೆ ಇವೆ. ಅವುಗಳಲ್ಲಿ ಕೆಲವು ಆ‌ಪ್ ಗಳು ಬಳಕೆಗೆ ಸುಲಭವಾಗಿವೆ ಅಂತ ಅವುಗಳನ್ನು ಬಳಸುತ್ತಿರುವ ಐಫೋನಿಗರು ಹೇಳುತ್ತಾರೆ. ಹಾಗೆ ಶಿಫಾರಸ್ಸು ಮಾಡಲ್ಪಟ್ಟ ಕೆಲ ಆಪ್ ಗಳು ಚಿತ್ರದಲ್ಲಿವೆ.