ಶನಿವಾರ, ಫೆಬ್ರವರಿ 1, 2020

ಕೈಲಾಸ ಮಾನಸ ಸರೋವರ ಯಾತ್ರೆಗೆ ಸಹಾಯಧನ


ಭಾರತದಲ್ಲಿ ಕೆಲವು ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ಕೈಲಾಸ ಮಾನಸ ಸರೋವರ ಮತ್ತು ಚಾರ್ ಧಾಮ್ ಯಾತ್ರೆ ಕೈಗೊಂಡವರಿಗೆ ಸಹಾಯಧನ ಕೊಡುತ್ತಿವೆ. ಅದರಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ಸರ್ಕಾರವು ಕೈಲಾಸ ಯಾತ್ರೆಗೆ ಮೂವತ್ತು ಸಾವಿರ ಮತ್ತು ಚಾರ್ ಧಾಮ್ ಯಾತ್ರೆಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ಕೊಡುತ್ತಿದೆ. ನನ್ನ ತಾಯಿಯವರು ಆಗಸ್ಟ್ ೨೦೧೯ರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿ ಬಂದರು. ಅದರ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದೆವು. ಈ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಯಾರು ಅರ್ಜಿಸಲ್ಲಿಸ ಬಹುದು?
  • ಯಾತ್ರೆ ಕೈಗೊಂಡ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. 
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. (ಪಾಸ್ ಪೋರ್ಟ್/ ವೋಟರ್ ಐಡಿ/ ರೇಶನ್ ಕಾರ್ಡ್ ದಾಖಲೆ)
  • ಖಾಸಗಿ ಟೂರ್ ಏಜೆನ್ಸಿ ಅಥವಾ ಸರ್ಕಾರದ ಯಾತ್ರಾ ವ್ಯವಸ್ಥೆ ಮೂಲಕ ಹೋದವರು ಅಥವಾ ಸ್ವತಂತ್ರವಾಗಿ ಹೋದವರು.
  • ಯಾವುದೇ ಆದಾಯದ, ಆರ್ಥಿಕ ಮಟ್ಟದ ಮಿತಿಯಿಲ್ಲ.
ಯಾವಾಗ ಸಲ್ಲಿಸಬೇಕು?
ಸಾಮಾನ್ಯವಾಗಿ ಈ ಯಾತ್ರೆಗಳು ಮೇ ಇಂದ ಪ್ರಾರಂಭವಾಗಿ ಆಗಸ್ಟ್ ಸೆಪ್ಟೆಂಬರ್ ವರೆಗೆ ನಡೆಯುತ್ತವೆ. ಅಕ್ಟೋಬರಿನಲ್ಲಿ ಪ್ರಾರಂಭವಾಗಿ ಈ ಸಹಾಯದಧನ ಅರ್ಜಿಗಳನ್ನು ಸಲ್ಲಿಸಬಹುದು.  ಡಿಸೆಂಬರ್ ೧೫ರ ವರೆಗೆ ಕಾಲಾವಕಾಶವಿರುತ್ತದೆ. (೨೦೧೯ರ ಮಾಹಿತಿ)

ಎಲ್ಲಿ ಅರ್ಜಿ ಸಲ್ಲಿಸಬೇಕು?
ಬೆಂಗಳೂರಿನಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಚಾಮರಾಜಪೇಟೆಯಲ್ಲಿರುವ ಟಿಪ್ಪು ಅರಮನೆಯ ರಸ್ತೆಯಲ್ಲಿ ಈ ಕಛೇರಿ ಇದೆ. ಅರಮನೆಯ ಪಕ್ಕದಲ್ಲಿ AIMS ಕಟ್ಟಡ, ಅದರ ಪಕ್ಕದ ಸರ್ಕಾರಿ ಕಟ್ಟಡದಲ್ಲಿ ಈ ಕಛೇರಿ ಎರಡನೇ ಮಹಡಿಯಲ್ಲಿದೆ. ಬೆಂಗಳೂರಲ್ಲಿ ಅರ್ಜಿ ಸಲ್ಲಿಸಲು ಆಗದವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಅರ್ಜಿ ತುಂಬಿ, ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.  ಆನ್ ಲೈನ್ ಕೊಂಡಿಗಳು ಇಂತಿವೆ:
೧. ಕೈಲಾಸ ಯಾತ್ರೆ:http://nemaka.kar.nic.in/manasa_2019/
೨. ಚಾರ್ ಧಾಮ್ ಯಾತ್ರೆ: http://nemaka.kar.nic.in/chardham_2019/
(ಕೊನೇ ದಿನಾಂಕ ಮುಗಿದಿದೆ. ಈ ಕೊಂಡಿಗಳು ಮುಂದಿನ ವರ್ಷಕ್ಕೆ ಬದಲಾಗಬಹುದು. ಇಲಾಖೆಯ ವೆಬ್ ಸೈಟ್ ನೋಡಿದರೆ ಅದರಲ್ಲಿ ಪ್ರಸಕ್ತ ವರ್ಷದ ಕೊಂಡಿಗಳಿರುತ್ತವೆ. ಜಾಲತಾಣ: https://temples.karnataka.gov.in/)

ಕೈಲಾಸ ಯಾತ್ರೆಯ ಸಹಾಯಧನ ಅರ್ಜಿಗೆ ಏನೇನು ದಾಖಲೆಗಳು ಬೇಕಾಗುತ್ತವೆ?
೧. ಭರ್ತಿಮಾಡಿದ ಅರ್ಜಿ (ಒಂದೇ ಪುಟ, ಕೆಲವು ಸಾಮಾನ್ಯ ವಿವರಗಳನ್ನು ಕೇಳಲಾಗಿರುತ್ತದೆ)
೨. ಒಂದು ಪಾಸ್ ಪೂರ್ಟ್ ಗಾತ್ರದ ಫೋಟೋ
೩. ಯಾತ್ರಿಯ ಪಾಸ್ ಪೋರ್ಟಿನ ಮೊದಲ, ಕೊನೆಯ ಪುಟಗಳ ಮತ್ತು ನೇಪಾಳ-ಚೀನಾ ಇಮ್ಮಿಗ್ರೇಶನ್ ಸೀಲ್ ಆಗಿರುವ ಪುಟದ ಬಣ್ಣದ ನೆರಳಚ್ಚು.  (ಕಲರ್ ಝೆರಾಕ್ಸ್)
೪. ಚೀನಾದ ಗ್ರೂಪ್ ವೀಸಾ ಮತ್ತು ಪರ್ಮಿಟ್ ಪ್ರತಿ
೫. ಬ್ಯಾಂಕ್ ಖಾತೆಯ ಪಾಸ್ ಬುಕ್ಕಿನ ಮೊದಲ ಪುಟದ ಪ್ರತಿ (ಹೆಸರು , ವಿಳಾಸ, ಖಾತೆ ಸಂಖ್ಯೆ, IFSC ಹೊಂದಿರುವಂತದ್ದು)
೮. ರದ್ದುಗೊಳಿಸಿದ ಒಂದು ಚೆಕ್  (ಖಾತೆದಾರರ ಹೆಸರು ಮತ್ತು IFSC ಇರುವಂತದ್ದು)
೯. ಈವರೆಗೆ ಈ ಯಾತ್ರೆಗೆ ಸರ್ಕಾರದಿಂದ ಯಾವುದೇ ಸಹಾಯಧನ ಪಡೆದಿಲ್ಲ ಎಂಬ ಸ್ವಯಂಘೋ‍ಷಣೆಯ ಪತ್ರ. (ಅಫಿಡವಿಟ್). ಇದು ೨೦ ರೂಪಾಯಿಯ ಇ-ಸ್ಟ್ಯಾಂಪ್ ಕಾಗದದ ಮೇಲೆ ಆಗಬೇಕು. ಇದಕ್ಕೆ ನೋಟರಿ ಸಹಿ ಹಾಕಿಸುವ ಅಗತ್ಯವಿಲ್ಲ. ಅರ್ಜಿದಾರರು ಸಹಿ ಹಾಕಿದರೆ ಸಾಕು. ಏನು ಬರೆಯಬೇಕೆಂಬ ಮಾಹಿತಿಯಿರುವ ಪ್ರತಿಯೊಂದನ್ನು ಅರ್ಜಿಯ ಜೊತೆ ಕೊಡುತ್ತಾರೆ.
೧೦. CIPSC Document ಪ್ರತಿ (ಇದು ಯಾತ್ರೆಗೆ ಕೊಡುವ ಪ್ರಮಾಣಪತ್ರ, ಚೀನೀ ಭಾಷೆಯಲ್ಲಿರುತ್ತದೆ. ಯಾತ್ರೆಗೆ ಕರೆದುಕೊಂಡ ಹೋದ ಟ್ರಾವೆಲ್ ಏಜೆನ್ಸಿಯವರಲ್ಲಿ ಪಡಯಬಹುದು )
೧೧. ಕೇಂದ್ರ ಸರ್ಕಾರದ ಪ್ರಮಾಣಪತ್ರ. (ಇದು ಸರ್ಕಾರದಿಂದ ಆಯೋಜಿಸಲ್ಪಟ್ಟ ಯಾತ್ರೆಯ ಮೂಲಕ ಹೋದವರಿಗೆ ಮಾತ್ರ)

ನನ್ನ ಅನುಭವ
ನಾನು ನವೆಂಬರಲ್ಲಿ ಮೇಲೆ ಹೇಳಿದ ಇಲಾಖೆಯ ಕಛೇರಿಗೆ ಇದರ ಬಗ್ಗೆ ವಿಚಾರಿಸಲು ಹೋದೆ. ಅದಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿತ್ತು. ಕೈಲಾಸಯಾತ್ರೆಗೆ ಮತ್ತು ಚಾರ್ ಧಾಮ್ ಯಾತ್ರೆಗೆ ಪ್ರತ್ಯೇಕ ಕೌಂಟರ್ ಗಳನ್ನು ಮಾಡಿದ್ದರು. ಎರಡರಲ್ಲೂ ಸಿಬ್ಬಂದಿ ಅರ್ಜಿಯನ್ನು ಕೊಟ್ಟು ಅಗತ್ಯ ಮಾಹಿತಿ ಒದಗಿಸುತ್ತಿದ್ದರು. ಅರ್ಜಿಯನ್ನು ಮನೆಗೆ ತಂದು ಭರ್ತಿಮಾಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಕೊಂಡು ಒಂದು ವಾರದ ನಂತರ ಎಲ್ಲವನ್ನೂ ಸಲ್ಲಿಸಿದೆ. ತೆಗೆದುಕೊಳ್ಳುವಾಗ ಎಲ್ಲಾ ಫೋಟೋಕಾಪಿಗಳ (ಝೆರಾಕ್ಸ್) ಮೂಲಪ್ರತಿಗಳನ್ನು ಪರಿಶೀಲನೆ ಮಾಡಿದರು. ಯಾವ ತೊಂದರೆ ತೊಡಕು ಇಲ್ಲದೇ ಮೇಜಿನಿಂದ ಮೇಜಿಗೆ ಓಡಾಡುವ ಪ್ರಮೇಯ ಇಲ್ಲದೇ ಕೆಲಸ ಆಯಿತು. ಕಛೇರಿಯು ನೀಟಾಗಿ ಇತ್ತು ಮತ್ತು ಸಿಬ್ಬಂದಿಯೂ ತಾಳ್ಮೆಯಿಂದ ವ್ಯವಹರಿಸುತ್ತಿದ್ದರು. ಸಾಮಾನ್ಯ 'ಸರ್ಕಾರಿ ಕಛೇರಿ'ಯಂತಿರದೇ  ವ್ಯವಸ್ಥಿತವಾಗಿ ನಡೆಯುತ್ತಿದ್ದಂತೆ ಕಂಡುಬಂತು. ಒಮ್ಮೆ ಅರ್ಜಿ ತರಲು, ಒಮ್ಮೆ ಅರ್ಜಿ ಸಲ್ಲಿಸಲು, ಒಟ್ಟು ಎರಡು ಬಾರಿ ಕಛೇರಿಗೆ ಹೋಗಬೇಕಾಯಿತು. ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರೆ ಮೊದಲ ದಿನವೇ ಅರ್ಜಿ ಸಲ್ಲಿಸಬಹುದಿತ್ತು. ಬೇಕಿದ್ದಲ್ಲಿ ಅಫಿಡವಿಟ್ ಮಾಡಿಸಲು ಅಲ್ಲೇ ಪಕ್ಕದ ಪಂಪಮಹಾಕವಿ ರಸ್ತೆಯಲ್ಲಿ ಸ್ಟ್ಯಾಂಪ್ ಪೇಪರ್ ಮತ್ತು ಟೈಪ್ ಮಾಡಿಕೊಡುವ ಜನ ಇದ್ದಾರೆ. ದತ್ತಿ ಇಲಾಖೆಯ ಸಿಬ್ಬಂದಿಗೆ ಕೇಳಿದರೆ ಆ ಮಾಹಿತಿ ಕೊಡುತ್ತಾರೆ.

ಅರ್ಜಿ ಸಲ್ಲಿಸಲು ಆದ ಒಟ್ಟು ಖರ್ಚು(ತಿರುಗಾಟ ಹೊರತುಪಡಿಸಿ):
  • ಸ್ಟ್ಯಾಂಪ್ ಪೇಪರ್ : ಮೂವತ್ತು ರೂಪಾಯಿ (೨೦ ರೂ ಬೆಲೆ + ೧೦ ರೂ ಕಮಿಶನ್) - ನಾನೇ ಟೈಪ್ ಮಾಡಿ ಪ್ರಿಂಟ್ ಹಾಕಿಕೊಂಡಿದ್ದರಿಂದ  ಟೈಪಿಂಗ್  ಮಾಡಿಸುವ ಖರ್ಚು ಉಳಿಯಿತು.
  • ಪಾಸ್ ಪೋರ್ಟಿನ ಮೂರು ಪುಟ ಗಳ ಕಲರ್ ಝೆರಾಕ್ಸಿಗೆ ಮೂವತ್ತು ರೂ
  • ಬೇರೆಲ್ಲಾ ದಾಖಲೆಗಳ ಝೆರಾಕ್ಸಿಗೆ ಒಟ್ಟು ೧೦ ರೂ.
ಇತರ ಒಂದಿಷ್ಟು ಮಾಹಿತಿಗಳು:
  • ಯಾತ್ರಿಗಳ ಪರವಾಗಿ ಬೇರೆಯವರು ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ ಯಾತ್ರಿಯ ಸಹಿ ಮತ್ತು ಎಲ್ಲಾ ದಾಖಲೆಗಳ ಮೂಲಪ್ರತಿಗಳನ್ನು ತೆಗೆದುಕೊಂಡು ಹೋಗುವುದು ಕಡ್ಡಾಯ. (ನನ್ನ ತಾಯಿಯವರ ಸಹಿಯನ್ನು ಹಾಕಿಸಿಕೊಂಡು ಅವರ ಪರವಾಗಿ ಹೋಗಿ ನಾನು ಅರ್ಜಿ ಸಲ್ಲಿಸಿದ್ದೇನೆ)
  • ಚಾರ್ ಧಾಮ್ ಯಾತ್ರೆಗೆ ಮುಖ್ಯವಾಗಿ ಪಿಲಿಗ್ರಿಮೇಜ್ ಕಾರ್ಡ್ ಜೊತೆಗೆ ಮೇಲೆ ಹೇಳಿದ ಕೆಲವು ದಾಖಲೆಗಳು ಸಾಕಾಗುತ್ತವೆ.
  • ಸಹಾಯಧನಕ್ಕೆ ಅಂತ ಇಂತಿಷ್ಟು ಬಜೆಟ್ ನಿಗದಿಯಾಗಿರುವುದರಿಂದ ಹೆಚ್ಚು ಜನ ಅರ್ಜಿ ಸಲ್ಲಿಸಿದರೆ ಸಾಮಾನ್ಯವಾಗಿ ಲಾಟರಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. (ಸುಮಾರು ೧೫೦೦ ಕೈಲಾಸ ಯಾತ್ರಿಕರಿಗೆ ಸಿಗಬಹುದು)
  • ಜನವರಿಯಲ್ಲಿ ಈ ಪ್ರಕ್ರಿಯೆ ನಡೆದು ಅರ್ಜಿದಾರದ ಖಾತೆಗೆ ಹಣ ಜಮೆಯಾಗುತ್ತದೆ ಎಂದು ತಿಳಿಸಲಾಗಿದೆ.  (ಜನವರಿ ತಿಂಗಳ ಕೊನೆಯ ದಿನವಾದ ಇಂದಿವರೆಗೆ ಬಂದಿಲ್ಲ, ಮುಂದೆ ಮಾಹಿತಿ ನವೀಕರಿಸುತ್ತೇನೆ)
ಫೆಬ್ರವರಿ ಹದಿಮೂರನೇ ತಾರೀಖು ಮೂವತ್ತು ಸಾವಿರ ರೂಪಾಯಿಗಳ ಸಹಾಯಧನವು ಸರ್ಕಾರದಿಂದ ನಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆ.