ಶನಿವಾರ, ಜೂನ್ 30, 2012

ಪತ್ರಿಕೆಗಳಲ್ಲಿ ಬ್ಲಾಗುಗಳು ಮತ್ತು ನನ್ನ ಬ್ಲಾಗು

ನೆನಪಿದೆ. ಅವತ್ತು ಆಗಸ್ಟ್ ೧೭, ೨೦೦೮. ಭಾನುವಾರ ಬೆಳಗ್ಗೆ ಏಳೂವರೆ. ಭದ್ರಾವತಿಯಿಂದ  ಹೊರನಾಡಿಗೆ ಹೊರಟಿದ್ದ ನಾನು ನರಸಿಂಹರಾಜಪುರ ಬಸ್ಟ್ಯಾಂಡ್ ಹೋಟೆಲಿನಲ್ಲಿ ತಿಂಡಿ ಮುಗಿಸಿ ಹೊರಬರುತ್ತಿದ್ದೆ. ಫೋನಿಗೆ ಸಂದೇಶವೊಂದು ಬಂದಿತ್ತು. ಗೆಳೆಯ ವಿಜಿ ಸಂದೇಶ ಕಳಿಸಿದ್ದ. ತೆಗೆದು ನೋಡಿದರೆ, "ಇವತ್ತಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ನಿನ್ನ ಬ್ಲಾಗ್ ಬಗ್ಗೆ ಬಂದಿದೆ ನೋಡು" ಅಂತ ಇತ್ತು. ಏನು ಬರೆದಿದ್ದಾರೆ ನೋಡೋಣ ಅಂತ ಅಲ್ಲೇ ಹೋಗಿ ಪತ್ರಿಕೆ ಕೊಂಡುಕೊಂಡಿದ್ದೆ. ಸಾಪ್ತಾಹಿಕ ಪ್ರಭದ ’ಬ್ಲಾಗ್ ಬುಟ್ಟಿ’ಯಲ್ಲಿ ನನ್ನ ಈ ಬ್ಲಾಗ್ ಬಗ್ಗೆ ಒಂದು ಚಿಕ್ಕ ಪರಿಚಯ ಬರೆದು ಆಗ ಬರೆದಿದ್ದ ’ಎಲೆಶೆಟ್ಟಿ’ ಎನ್ನುವ ಬರಹವೊಂದನ್ನು ಪೂರ್ತಿ ಪ್ರಕಟಿಸಿದ್ದರು.

ಬಹುಶಃ ಈ ರೀತಿ ಬ್ಲಾಗ್ ಗಳನ್ನು ಪರಿಚಯ ಮಾಡಿಕೊಡುವ ಕೆಲಸವನ್ನು ಮೊದಲು ಮಾಡಿದ್ದು ’ಕನ್ನಡ ಪ್ರಭ’ ಪತ್ರಿಕೆಯೇ ಇರಬೇಕು. ಆಮೇಲೆ ’ಹೊಸದಿಗಂತ’ ಪತ್ರಿಕೆ ಕೂಡ ಪ್ರತಿವಾರ ’ಜೇಡರಬಲೆ’ಯಲ್ಲಿ ಒಂದೊಂದು ಬ್ಲಾಗ್ ಗಳನ್ನು ಪರಿಚಯ ಮಾಡಿಕೊಡುತ್ತಿತ್ತು. ಅನಂತರದ ದಿನಗಳಲ್ಲಿ ವಿಜಯ ಕರ್ನಾಟಕವು ’ವೆಬ್ಬಾಗಿಲು’ ಎಂಬ ಹೆಸರಿನ ಅಂಕಣದಲ್ಲಿ ಬ್ಲಾಗುಗಳ ಬಗ್ಗೆ ಬರೆಯಿತು. ಈಗ ವಿ..ದಲ್ಲಿ ಬ್ಲಾಗ್ ಗಳ ಬಗ್ಗೆ ’ಬ್ಲಾಗಿಲು’ಎಂಬ ಅಂಕಣ ಬರುತ್ತಿದೆ.


ಮೊನ್ನೆ ಜೂನ್ ಹದಿನೈದು, ಪ್ರಜಾವಾಣಿಯು ಮೆಟ್ರೋ ಪುರವಣಿಯ 'ಬ್ಲಾಗಿಲನು ತೆರೆದು' ಅಂಕಣದಲ್ಲಿ ನನ್ನ ಬ್ಲಾಗ್ ಬಗ್ಗೆ ಬರೆದಿದೆ. ಪ್ರತಿ ಶುಕ್ರವಾರ ಅದರಲ್ಲಿ ಒಂದೊಂದು ಬ್ಲಾಗ್ ಪರಿಚಯ ಮಾಡಿಕೊಟ್ಟು ಆಯ್ದ ಬರಹವೊಂದನ್ನು ಪ್ರಕಟಿಸುತ್ತಾರೆ. ನನ್ನ ಬ್ಲಾಗ್ ಬಗ್ಗೆ ಬಂದಿದ್ದು ಗೊತ್ತಿರಲಿಲ್ಲ. ಅವತ್ತು ರಾತ್ರಿ ಗೆಳೆಯ ಪ್ರಭುಪ್ರಸಾದ ಈ ಬಗ್ಗೆ ಹೇಳಿದಾಗಲೇ ಗೊತ್ತಾಗಿದ್ದುನನಗೇ ಆಶ್ಚರ್ಯವಾಗುವಂತೆ ಮುದ್ದಾಗಿ ಪರಿಚಯ ಬರೆದು, ಒಂದೆರಡು screen shotಗಳನ್ನೂ ಹಾಕಿ, ಆ ಹಿಂದಿನ ದಿನವಷ್ಟೇ ಬರೆದು ಹಾಕಿದ್ದ ಪುಟ್ಟ ಬರಹವನ್ನೂ ಪ್ರಕಟಿಸಿದ್ದರು. ಅವರಿಗೆ ಧನ್ಯವಾದಗಳು

ಇತ್ತೀಚೆಗೆ ’ಸಂಯುಕ್ತ ಕರ್ನಾಟಕ’ವೂ ಕೂಡ 'ಬ್ಲಾಗ್ ಲೋಕ'ದಲ್ಲಿ ಬ್ಲಾಗ್ ಗಳನ್ನು ಪರಿಚಯಿಸುತ್ತಿದೆ. ಈ ನಡುವೆ ಅದೇ ಜೂನ್ ಹದಿನಾಲ್ಕರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆ ನನ್ನ 'ಕನ್ನಡ ಟೈಪಿಂಗ್' ಬರಹವನ್ನು ಪ್ರಕಟಿಸಿತ್ತು. ಕಂಪ್ಯೂಟರ್ ನಲ್ಲಿ ಕನ್ನಡದಲ್ಲಿ ಬರೆಯಲು ಏನೇನು ಸೌಲಭ್ಯಗಳಿವೆ ಎಂಬುದರ ಬಗ್ಗೆ  ಆ ಬರಹ. ಯಥಾಪ್ರಕಾರ ನನಗೆ ಅದು ಪ್ರಕಟವಾಗಿದ್ದು ಗೊತ್ತಿರಲಿಲ್ಲ. ಅವತ್ತು ರಾತ್ರಿ ವಿಜಯಕ್ಕ ಫೇಸ್ ಬುಕ್ಕಿನಲ್ಲಿ ಸಂದೇಶ ಕಳುಹಿಸಿ ಅದರ ಕೊಂಡಿ ಕೊಟ್ಟಾಗಲೇ ಗೊತ್ತಾಗಿದ್ದು. ಆದರೆ ಸಂಯುಕ್ತ ಕರ್ನಾಟಕ ಮಾಡಿದ್ದು ಬ್ಲಾಗ್ ಪರಿಚಯ ಅಲ್ಲ. ಅನಾಮತ್ತು ಆ ಬರಹದ ಕಾಪಿ ಪೇಸ್ಟು.! ಭಾಗ ೧, ೨ ಎಂದು ಎರಡು ದಿನ ಬಂದ ಆ ಬರಹದ ಕೊನೆಯಲ್ಲಿ ನನ್ನ ಹೆಸರು, ಇ ಮೇಲ್ ಐಡಿ, ಬ್ಲಾಗ್ ಲಿಂಕ್ ಎಲ್ಲಾ ಪ್ರಕಟಿಸಿದ್ದರು. ಆದರೆ ಅದೇ ನನ್ನ ಇ-ಮೇಲ್ ಐಡಿಗೆ ಅವರು ಒಂದು ಸಂದೇಶ ಕಳಿಸಿ ಹೀಗೆ ಪ್ರಕಟಿಸುತ್ತೇವೆ ಅಂತ ಮೊದಲೇ ಹೇಳಿದ್ದರೆ ಆ ಬರಹವನ್ನು ಖುಷಿಯಿಂದ ಇನ್ನೂ ಚೆನ್ನಾಗಿ ಅಪ್ ಡೇಟ್ ಮಾಡಿ ಬರೆದುಕೊಡುತ್ತಿದ್ದೆ. ಏಕೆಂದರೆ ಆ ಬರಹ ಒಂದು ವರ್ಷದ ಹಿಂದೆ purely ಒಂದು ಅಂತರಜಾಲ ಬರಹವಾಗಿ ಬರೆದಿದ್ದು. ಅಂದರೆ ಅದರಲ್ಲಿ ಹಲವು ಕೊಂಡಿ(page links)ಗಳಿವೆ ಮತ್ತು ಅನೇಕ ಕೊಂಡಿಗಳು ಕರೆದುಕೊಂಡು ಹೋಗುವ ಜಾಗದಲ್ಲಿ ಈಗ ಏನೂ ಇಲ್ಲ. ಉದಾಹರಣೆಗೆ ’ಬರಹ’ ತಂತ್ರಾಂಶ ಈಗ ಉಚಿತವಲ್ಲ, ’ನುಡಿ’ ತಂತ್ರಾಂಶಕ್ಕೆ ಕನ್ನಡ ಗಣಕ ಪರಿಷತ್ತಿನ ಮಿಂಬಲೆ ತಾಣವೇ ಇಲ್ಲ. ’ಪದ’ ತಂತ್ರಾಂಶದ ವೆಬ್ ಸೈಟ್ expire ಆಗಿಹೋಗಿದೆ. ಕೆಲವು ಹಳೇ ತಾಣಗಳು ಕೆಲಸ ಮಾಡುತ್ತಿಲ್ಲ. ಕೆಲವು ಬದಲಾವಣೆಯಾಗಿವೆ. ಹೊಸದು ಬಂದಿದೆ. ಆದ್ದರಿಂದ ಇಂತಹ ಬರಹವನ್ನು ಈಗ ಪ್ರಕಟಿಸಿದರೆ ಅದನ್ನು ಓದಿ ಅದರ ಕೊಂಡಿ ಹಿಡಿದು ಹೋಗುವ ಆಸಕ್ತಿಯುಳ್ಳ ಓದುಗರು ನಿರಾಶರಾಗಬೇಕಾಗುತ್ತದೆ. ಪತ್ರಿಕೆಯಲ್ಲಿ ಹಾಕುವಾಗ ಅವರು ಇಂತಹುದರ ಬಗ್ಗೆ ಎಚ್ಚರವಹಿಸಿಬೇಕಾಗಿತ್ತು.

***

ಮೊದಲೆಲ್ಲಾ ಬ್ಲಾಗ್ ಗಳ ಸಂಖ್ಯೆ ಕಡಿಮೆ ಇತ್ತು. ಐದಾರು ವರ್ಷಗಳ ಹಿಂದೆ ಕನ್ನಡ ಬ್ಲಾಗುಗಳನ್ನು ಬರೆಯಲು ಆರಂಭಿಸಿದ ನಾವೆಲ್ಲಾ ಹೆಚ್ಚುಕಡಿಮೆ ಒಂದೇ ವಾರಗೆಯವರಿದ್ದೆವು. ಸುಮಾರಾಗಿ ಬ್ಲಾಗಿಗರ ಪರಿಚಯ ಕೂಡ ಇರುತ್ತಿತ್ತು. ಯಾವುದ್ಯಾವುದೋ ಸಂದರ್ಭಗಳಲ್ಲಿ ಭೇಟಿ ಕೂಡ ಆಗುತ್ತಿದ್ದೆವು. ಬ್ಲಾಗ್ ಗಳ ಬಗ್ಗೆ ಮಾತಾಡುತ್ತಿದ್ದೆವು. ಮಾಹಿತಿ ಹಂಚಿಕೊಳ್ಳುತ್ತಿದ್ದೆವು. ಆಗ ಇದ್ದ ಬ್ಲಾಗುಗಳಲ್ಲಿ ಬಹುತೇಕ ಎಲ್ಲವೂ ಗೊತ್ತಿರುತ್ತಿತ್ತು. ಹಲವು ಹಳಬರ ಬ್ಲಾಗ್ ಕೊಂಡಿಗಳು ಇನ್ನೂ ನೆನಪಿನಲ್ಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಬ್ಲಾಗ್ ಲೋಕ ಬಹಳ ಬೆಳೆದಿದೆ. ಸಾವಿರಾರು ಬ್ಲಾಗ್ ಗಳಿವೆ. ಎಷ್ಟೋ ಚಂದಚಂದದ ಬ್ಲಾಗುಗಳು ಗೊತ್ತೇ ಇರುವುದಿಲ್ಲ. ಪತ್ರಿಕೆಗಳು ಹೀಗೆ ಪರಿಚಯ ಮಾಡಿಕೊಡುತ್ತಿರುವುದರಿಂದಲೇ ಹಲವಾರು ಬ್ಲಾಗ್ ಗಳು ಗೊತ್ತಾಗುತ್ತಿವೆ, ಓದಲು ಸಿಗುತ್ತಿವೆ.. ಬರೆಯುವವರಿಗೆ ಪ್ರೋತ್ಸಾಹವೂ ಸಿಗುತ್ತಿದೆ. ನನ್ನ ಗೂಗಲ್ ರೀಡರ್ ಅಂತೂ ತುಂಬಿ ತುಳುಕುತ್ತಿದೆ. ಪತ್ರಿಕೆಗಳಿಗೆ ಕೃತಜ್ಞತೆಗಳು.

ಬುಧವಾರ, ಜೂನ್ 13, 2012

ತಿರುಗಿ ಕೆಟ್ಟರೂ ಪರವಾಗಿಲ್ಲ....

ಹಿಂದಿನ ವರ್ಷ ಕೆನಡಾದಲ್ಲಿ ತಣ್ಣಗೆ ಕುಳಿತು ನೆಟ್ ಚಾಟ್ ಮಾಡುತ್ತಿದ್ದಾಗ ಗೆಳತಿಯೊಬ್ಬಳು "ಅಲಾಸ್ಕಾಗೆ ಹೋಗಿ ಬಂದ್ಯಾ?" ಅಂತ ಕೇಳಿದ್ದಳು. ಭೂಮಿ ಮೇಲಿನ ಸುಂದರ ಪ್ರದೇಶಗಳಲ್ಲಿ 'ಅಲಾಸ್ಕಾ' ಕೂಡ ಒಂದು ಅಂತ ಹೇಳುತ್ತಾರೆ.  ಕೆನಡಾ ದೇಶದ ಗಡಿಗೆ ತಾಗಿಕೊಂಡಿದ್ದರೂ ಕೂಡ ನಾನಿದ್ದ ಊರಿನಿಂದ ಅದು ಬಹಳ ದೂರ ಇತ್ತು.  ಜೊತೆಗೆ ಅದು ಯು.ಎಸ್.ಎ. ದೇಶಕ್ಕೆ ಸೇರುವ ಪ್ರದೇಶ.  ನನಗೆ ಯು.ಎಸ್. ವೀಸಾ ಕೂಡ ಇರಲಿಲ್ಲ. ಇದ್ದರೂ ಬಹಳ ಸಮಯ ಮತ್ತು ಹಣ ಖರ್ಚಾಗುತ್ತಿದ್ದುದರಿಂದ ಅಲಾಸ್ಕಾಗೆ ಹೋಗಿಬರಲು ಆಗುತ್ತಿರಲೂ ಇಲ್ಲ. ಅದನ್ನೇ ಆವಳಿಗೆ ಹೇಳಿದರೆ ಅವಳು ಅಷ್ಟು ದೂರ ಹೋಗಿ ಅಲಾಸ್ಕಾಗೆ ಹೋಗಲಿಲ್ಲ ಅಂದಮೇಲೆ ನೀನು ಅಲ್ಲಿಗೆ ಹೋಗಿದ್ದೇ ವೇಸ್ಟ್ ಅಂದಳು.  ನಾನೂ ಸುಮ್ಮನಿರದೇ, "ನೀನು ಕಾಶ್ಮೀರಕ್ಕೆ ಹೋಗಿದ್ದೀಯಾ?" ಅಂತ ಕೇಳಿದೆ. ಅವಳು ಇಲ್ಲ ಅಂದಳು. ಹಾಗಿದ್ದಮೇಲೆ ನೀನು ಇಪ್ಪತ್ತೈದು ವರ್ಷದಿಂದ ಭಾರತದಲ್ಲಿ ಇರುವುದೇ ವೇಸ್ಟ್ ಅಂದು ಅವಳನ್ನು ಸುಮ್ಮನಾಗಿಸಿದೆ. :)  ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಒಮ್ಮೆ ಬೇರೆ ದೇಶದ ಕ್ಲೈಂಟ್ ಒಬ್ಬಳು ಬಂದಿದ್ದಳು. ಭಾರತಕ್ಕೆ ಅದು ಅವಳ ಮೊದಲ ಭೇಟಿ ಆಗಿತ್ತು .  ಅವಳು  ಬರುವಾಗಲೇ ಯಾವ ರೀತಿ ಪ್ಲಾನ್ ಮಾಡಿಕೊಂಡು ಬಂದಿದ್ದಳು ಅಂದರೆ ಇಲ್ಲಿ ಇದ್ದಿದ್ದು ಒಂದು  ವಾರವೇ ಆದರೂ ಒಂದೇ ದಿನದಲ್ಲಿ ವಿಮಾನದಲ್ಲಿ ಹೋಗಿ ತಾಜ್ ಮಹಲ್ ನೋಡಿಕೊಂಡು ಬಂದಿದ್ದಳು! "ನಾವೆಲ್ಲಾ ಇದೇ ದೇಶದಲ್ಲೇ ಹುಟ್ಟಿ ಇಲ್ಲೇ ಇದ್ದರೂ ಆ ಕಡೆ ತಲೆಯೂ ಹಾಕಲಾಗಿಲ್ಲ, ನೀನು ಒಂದೇ ದಿನದಲ್ಲಿ ಒಬ್ಬಳೇ ಹೋಗಿ ನೋಡಿಕೊಂಡು ಬಂದೆ" ಅಂತ ಅವಳಿಗೆ ಶಭಾಶ್ ಹೇಳಿದ್ದೆವು.

ವಿಷಯ ಇದೇ. ನಾನು ಹಿಂದಿನ ವರ್ಷ ಇದೇ ಸಮಯದಲ್ಲಿ ಇನ್ನು ಒಂದು ವರ್ಷದ ಒಳಗಾಗಿ ಕರ್ನಾಟಕದಲ್ಲಿ ನನ್ನ ಆಸಕ್ತಿಯ ಕೆಲವು ಮುಖ್ಯವಾದ ಸ್ಥಳಗಳಿಗೆಲ್ಲಾ ಹೋಗಬೇಕು ಅಂದುಕೊಂಡಿದ್ದೆ.  ಆದರೆ ಅದು ಆಗಲಿಲ್ಲ. ಅದರ ಬಗ್ಗೆ ಹೀಗೆಯೇ ಪ್ಲಾನ್ ಮಾಡುತ್ತಾ ಇಷ್ಟು ವರ್ಷಗಳಲ್ಲಿ ಎಲ್ಲೆಲ್ಲಿ ಹೋಗಿದ್ದೇನೆ ಅಂತ ಯೋಚಿಸುತ್ತಿದ್ದೆ.  ನಾನು ಭಾರತದ ನಾಲ್ಕು ದಕ್ಷಿಣ ರಾಜ್ಯಗಳಿಗಷ್ಟೇ ಹೋಗಿದ್ದೇನೆ. ಅದೂ ಅಲ್ಲಿ ಕೆಲವು ಊರುಗಳಷ್ಟೇ!. ಕರ್ನಾಟಕವನ್ನೇ ತೆಗೆದುಕೊಂಡರೆ, ಇಲ್ಲಿನ ಮೂವತ್ತು ಜಿಲ್ಲೆಗಳಲ್ಲಿ ಬೀದರ್, ಕಲ್ಬುರ್ಗಿ, ವಿಜಾಪುರ, ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಯಾದಗಿರಿ ಜಿಲ್ಲೆಗಳನ್ನೇ ಹೊಕ್ಕಿಲ್ಲ!!  ಬೆಂಗಳೂರಿನ ಹತ್ತಿರ ಇರುವ ಎಷ್ಟೋ ಸ್ಥಳಗಳಿಗೆ ಹೋಗಬೇಕು ಅಂದುಕೊಳುತ್ತಲೇ ವರ್ಷಗಳು ಕಳೆದುಹೋಗಿವೆ! ನನ್ನ ತವರು ಜಿಲ್ಲೆ ಶಿವಮೊಗ್ಗ, ಉತ್ತರಕನ್ನಡಗಳಲ್ಲೇ ಎಷ್ಟೊಂದೆಲ್ಲಾ ಸ್ಥಳಗಳು ಬಾಕಿ ಇವೆ. ಇಲ್ಲಿ ಸ್ಥಳಗಳು ಅಂದರೆ ನಮ್ಮ ಆಸಕ್ತಿಗೆ ಸಂಬಂಧಿಸಿದ ಯಾವುದಾದರೂ ಆಯಿತು. ಕೆಲವರಿಗೆ ಐತಿಹಾಸಿಕ ಸ್ಥಳಗಳು ಆಸಕ್ತಿಯದ್ದಾದರೆ, ಮತ್ತೆ ಕೆಲವರಿಗೆ ನಿಸರ್ಗವೇ ಪುಣ್ಯಕ್ಷೇತ್ರ! ಆದರೆ ಆಸಕ್ತಿಗಳೇ ಇರದಿದ್ದರೆ ಮಾತ್ರ ಇದೆಲ್ಲಾ ಅರ್ಥಾಗುವುದಿಲ್ಲ.  ಪ್ರತಿಯೊಂದು ಪ್ರದೇಶಗಳಲ್ಲೂ ಆ ಜನ, ಜೀವನ, ಭಾಷೆ, ಹವಾಮಾನ, ಪ್ರಕೃತಿ, ಸಂಸ್ಕೃತಿ ಎಲ್ಲವೂ ಅನುಭವಗಳೇ ಹೌದು. ಹಾಗೆ ಎಲ್ಲಾ ಕಡೆ ಹೋಗಲು ಎಲ್ಲರಿಗೂ ಸಾಧ್ಯವೂ ಇಲ್ಲ ಅಂದುಕೊಂಡರೂ ಒಂದಂತೂ ನಿಜ. ತಿರುಗಿ ಕೆಟ್ಟರೂ ಪರವಾಗಿಲ್ಲ, ಕೂತು ಕೆಡಬಾರದು !