ಕಲ್ಲಪ್ಪ ಯಾವುದೋ ಜಗಳಕ್ಕೆ ತನ್ನ ತಮ್ಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದ. ಸ್ವಂತ ತಮ್ಮನನ್ನೇ ಭೀಕರವಾಗಿ ಕೊಲೆ ಮಾಡಿದ ಕಲ್ಲಪ್ಪನಿಗೆ ನ್ಯಾಯಾಲಯದಿಂದ ಇನ್ನೂ ಶಿಕ್ಷೆಯ ಪ್ರಮಾಣ ಘೋಷಣೆಯಾಗಬೇಕಿತ್ತು. ಆ ವಿಕೃತ ಕೊಲೆಗೆ ಮರಣದಂಡನೆಯಾಗುವುದು ಖಚಿತವಾಗಿತ್ತು. ಆದರೆ ಅಷ್ಟರಲ್ಲೇ ಒಂದು ರಾತ್ರಿ ಜೈಲರನನ್ನು ಕಬ್ಬಿಣದ ಸರಳಿನಲ್ಲಿ ಹೊಡೆದು ಬೀಗದ ಕೈ ಕಿತ್ತುಕೊಂಡು ಬಾಗಿಲು ತೆಗೆದು ಪರಾರಿಯಾಗಿದ್ದ. ಆ ಸಮಯದಲ್ಲಿ ಜೈಲರನ ಕೈಯಲ್ಲಿ ಯಾವುದೇ ಆಯುಧವಿಲ್ಲದಿದ್ದುದರಿಂದ ಕಲ್ಲಪ್ಪನ ಏಟಿನಿಂದ ತಪ್ಪಿಸಿಕೊಳ್ಳಲಾಗದೇ ಆತ ದಾರುಣವಾಗಿ ಹೊಡೆತ ತಿಂದು ಬಿದ್ದಿದ್ದ.
ಜೈಲಿನಿಂದ ಹೊರಬಿದ್ದ ಕಲ್ಲಪ್ಪ ಓಡಲು ಶುರುಮಾಡಿದ. ಊರಿನ ಬೀದಿಗಳಲ್ಲಿ ಚಟುವಟಿಕೆ ಕಡಿಮೆಯಾಗುತ್ತಿತ್ತು. ಜನರೆಲ್ಲಾ ಮನೆ ಸೇರಿಕೊಳ್ಳುತ್ತಿದ್ದರು. ಅಲ್ಲಿಂದ ಊರು ದಾಟಿ ಕಾಡಿನೊಳಗೆ ಸೇರಿ ಎಷ್ಟೋ ಹೊತ್ತಿನವರೆಗೆ ಓಡುತ್ತಾ ಓಡುತ್ತಾ ಸುಸ್ತಾದ ಕಲ್ಲಪ್ಪ ಸುಧಾರಿಸಿಕೊಳ್ಳಲು ನಿಂತ. ಅವತ್ಯಾಕೋ ಕತ್ತಲು ಹೆಚ್ಚೇ ಇದ್ದಂತಿತ್ತು. ಹಾಗೇ ತಲೆ ಎತ್ತಿ ನೋಡಿದ. ಆಕಾಶದಲ್ಲಿ ಚಂದ್ರ ಕಾಣಲಿಲ್ಲ, ನಕ್ಷತ್ರಗಳೂ ತಲೆಮರೆಸಿಕೊಂಡಿದ್ದವು. ಕಲ್ಲಪ್ಪನಿಗೆ ತಾನು ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ಆ ಕಾಡು ಅವನಿಗೆ ಅತ್ಯಂತ ಅಪರಿಚಿತ ಅನ್ನಿಸಿತು. ಅದೇ ಕಾಡಿನಲ್ಲಿ ಹಾಗೇ ಹೋದರೆ ಊರಿನಿಂದ ದೂರಕ್ಕೆ ಹೋಗುತ್ತೇನೋ ಅಥವಾ ಮತ್ತೆ ಊರೊಳಗೇ ಹೋಗುತ್ತೇನೋ ಎಂದು ಗೊತ್ತಾಗದೇ ಗೊಂದಲಕ್ಕೊಳಗಾಗಿ ಯೋಚಿಸತೊಡಗಿದ. ಇಷ್ಟು ಹೊತ್ತಿಗಾಗಲೇ ತಾನು ಜೈಲರನನ್ನು ಹೊಡೆದು ಓಡಿಬಂದ ವಿಷಯ ಎಲ್ಲರಿಗೂ ತಿಳಿದಿರುತ್ತದೆ, ತನ್ನನ್ನು ಹುಡುಕಿಕೊಂಡು ಪೋಲೀಸರು ಹೊರಟಿರುತ್ತಾರೆ, ಎಲ್ಲ ಕಡೆಯಲ್ಲೂ ಮಾಹಿತಿ ಕೊಟ್ಟಿರುತ್ತಾರೆ ಎಂದು ಅವನಿಗೆ ಖಾತ್ರಿಯಿತ್ತು. ತನ್ನ ಊರಿಗೆ ಹೋದರೂ ಅಲ್ಲಿ ಪೋಲೀಸರ ದಂಡೇ ಕಾದುಕುಳಿತಿರುತ್ತದೆ ಎಂದು ಗೊತ್ತಿತ್ತು. ಜೈಲಿನ ಬಂಧನದಿಂದ ತಪ್ಪಿಸಿಕೊಂಡು ಬಂದರೂ ಇನ್ನು ಯಾವತ್ತೂ ಈ ಜಗತ್ತಿನಲ್ಲಿ ಸ್ವತಂತ್ರವಾಗಿರುವುದು ಸಾಧ್ಯವಿಲ್ಲ ಅನ್ನಿಸತೊಡಗಿತು. ಮತ್ತೆ ಜೈಲಿನಲ್ಲಿರುವಂತೆಯೇ ಭಾಸವಾಯಿತು. ಹಾಗೇ ಮುಂದೆ ನಡೆಯತೊಡಗಿದ.
ಸ್ವಲ್ಪ ದೂರ ನೆಡೆಯುತ್ತಿದ್ದಂತೇ ಅಲ್ಲೇ ಪಕ್ಕದಲ್ಲಿ ಒಂದು ಹಳೇ ದಾರಿಯಿದ್ದಂತೆ ಕಂಡಿತು. ಅದರ ಕಡೆ ಓಡಿ ಹೋದ. ಅವನ ಅದೃಷ್ಟ ಅಲ್ಲಿಯೇ ಕೈಕೊಟ್ಟಿತ್ತು. ಕತ್ತಲಿನಲ್ಲಿ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ನಿಂತಿದ್ದು ಕಂಡಿತು. ಆತನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಕರಿಮೋಡಗಳ ಮರೆಯಿಂದ ಚಂದ್ರ ಹೊರಕ್ಕೆ ಇಣುಕಿ ಮರದ ಎಲೆಗಳ ಸಂದಿಯಿಂದ ಬಂದ ಸಣ್ಣ ಬೆಳಕಿನಲ್ಲಿ ಆ ವ್ಯಕ್ತಿಯ ಕೈಲಿದ್ದ ಕೋವಿ ಕಲ್ಲಪ್ಪನಿಗೆ ಕಂಡಿತು. ಕಲ್ಲಪ್ಪನ ಎದೆ ಧಸಕ್ಕೆಂದಿತು. ಆ ಕೋವಿ ಕಲ್ಲಪ್ಪನೆಡೆಗೇ ನೆಟ್ಟಿತ್ತು. ಅಲ್ಲಿಂದ ಓಡಲು ಕಲ್ಲಪ್ಪ ಹವಣಿಸುತ್ತಿದ್ದಂತೆಯೇ "ಈ ಬಂದೂಕು ಪೂರ್ತಿ ಲೋಡ್ ಆಗಿದೆ" ಎಂದ ಆ ವ್ಯಕ್ತಿ. ಕಲ್ಲಪ್ಪ ಮರಗಟ್ಟಿ ನಿಂತ. ಅವನ ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಕೈಕಾಲೇ ಆಡದಂತಾದ. ಆ ದಾರಿಯಲ್ಲಿ ಹಿಂದೆ ತಿರುಗಿ ನಡೆಯುವಂತೆ ಕಲ್ಲಪ್ಪನಿಗೆ ಕೋವಿಯಿಂದಲೇ ಸನ್ನೆ ಮಾಡಿದ ಆ ವ್ಯಕ್ತಿ. ಕಲ್ಲಪ್ಪ ತಪ್ಪಿಸಿಕೊಳ್ಳುವ ಅವಕಾಶವಿಲ್ಲದಷ್ಟು ಹತ್ತಿರ ಸಿಕ್ಕಿಹಾಕಿಕೊಂಡಿದ್ದ. ಬೇರೆ ವಿಧಿಯಿಲ್ಲದೇ ಆತ ತೋರಿಸಿದ ದಾರಿಯಲ್ಲಿ ನಿಧಾನಕ್ಕೆ ನಡೆಯತೊಡಗಿದ. ಹಿಂದೆ ಕುತ್ತಿಗೆಗೆ ಕೋವಿಯ ನಳಿಕೆ ತಾಗುತ್ತಿತ್ತು. ಜೋರಾಗಿ ಉಸಿರಾಡಲೂ ಹೆದರಿಕೆಯಾಗಿ ಎಡಬಲಕ್ಕೆ ಸ್ವಲ್ಪವೂ ತಿರುಗದೇ ಮನ್ನಡೆದ. ಕತ್ತು ಭಯಂಕರವಾಗಿ ನೋಯುತ್ತಿತ್ತು. ದೇಹ ಸೋತುಹೋದಂತೆ ಅನ್ನಿಸಿತು.
ಕಲ್ಲಪ್ಪ ತನ್ನ ತಮ್ಮನನ್ನು ಕೊಲೆ ಮಾಡಿದ ರೀತಿಯಲ್ಲೇ ಅವನೆಂತಹ ಕ್ರೂರ ಮನಸ್ಸಿನವನೆಂದು ಹೇಳಬಹುದಿತ್ತು. ತನ್ನ ಕೊರಳಿಗೆ ಕುಣಿಗೆ ಬೀಳುವುದು ಖಂಡಿತ ಎಂದು ಗೊತ್ತಾದ ಮೇಲೂ ಕೂಡ ಜೈಲರನನ್ನು ಹೊಡೆದು ಓಡಿಬರುವ ಸಾಹಸಕ್ಕೆ ಕೈ ಹಾಕಿದ್ದ. ಆದರೆ ಅಂತಹ ಮನುಷ್ಯನೂ ಈಗ ಏನೂ ಮಾಡದವನಂತಾಗಿದ್ದ. ಆತನ ಹುಂಬ ಧೈರ್ಯ ಕೊನೆಯಾದಂತೆ ಅನ್ನಿಸಿತು. ಹಿಂದೆ ಆ ವ್ಯಕ್ತಿ ಹತ್ತಿರದಲ್ಲೇ ನಡೆಯುತ್ತಿದ್ದ ಶಬ್ದ ಕೇಳುತ್ತಿತ್ತು. ಕತ್ತಲು ಹೆಚ್ಚುತ್ತಿತ್ತು. ಹೀಗೆ ಎಷ್ಟೋ ದೂರ ಅವರಿಬ್ಬರೂ ನಡೆದರು. ಹಾಗೇ ನಡೆಯುತ್ತಾ ಒಮ್ಮೆ ಬೆಳದಿಂಗಳ ಯಾವುದೋ ಒಂದು ಕ್ಷಣದಲ್ಲಿ ಕಲ್ಲಪ್ಪ ಅಚಾನಕ್ಕಾಗಿ ಹಿಂದಿರುಗಿ ನೋಡಿದ. ನೋಡಿದವನೇ ಬೆಚ್ಚಿಬಿದ್ದ. ಅವನ ಹಿಂದೆ ಬರುತ್ತಿದ್ದ ವ್ಯಕ್ತಿ ಅವನಿಂದ ಹೊಡೆಸಿಕೊಂಡ ಜೈಲರ್ ಆಗಿದ್ದ. ಆ ಮುಖ ಬಿಳುಚಿಕೊಂಡಿತ್ತು. ಕಬ್ಬಿಣದ ಸರಳಿನಿಂದ ಕಲ್ಲಪ್ಪ ಹೊಡೆದ ಗುರುತು ಮುಖದ ಮೇಲೆ ಹಾಗೇ ಎದ್ದು ಕಾಣುತ್ತಿತ್ತು. ಕಲ್ಲಪ್ಪ ಪೂರ್ತಿ ಧೈರ್ಯ ಕಳೆದುಕೊಂಡ. ಎಂತದೇ ಧೈರ್ಯವಂತನಾದರೂ ಅಸಹಾಯಕನಾದಾಗ ಸೋತುಬಿಡುತ್ತಾನೆ.
ಅವರಿಬ್ಬರೂ ಹಾಗೇ ನೆಡೆಯುತ್ತಾ ಊರಿನೊಳಗೆ ಬಂದರು. ಅಷ್ಟೊತ್ತಿಗೆ ಬೆಳಗಿನ ಜಾವ. ಊರ ಬೀದಿಗಳೆಲ್ಲಾ ಖಾಲಿಯಿದ್ದವು. ಆ ಜೈಲರ್ ಸೀದಾ ಕಲ್ಲಪ್ಪನನ್ನು ಜೈಲಿನ ದಾರಿಗೆ ನಡೆಸಿಕೊಂಡು ಹೋದ. ಜೈಲಿನ ಮುಖ್ಯದ್ವಾರಕ್ಕೆ ಬಂದು ಕಲ್ಲಪ್ಪ ಬಾಗಿಲನ್ನು ತಳ್ಳಿದ. ಹಾಗೇ ತೆಗೆದುಕೊಂಡಿತು. ಒಳಗೆ ಹೋಗುತ್ತಿದ್ದಂತೆಯೇ ಅಲ್ಲಿ ಕಾವಲಿದ್ದ ಪೋಲೀಸರು ಇವನನ್ನು ಹಿಡಿದುಕೊಂಡರು. ಕಲ್ಲಪ್ಪ ಹಿಂದಿರುಗಿ ನೋಡಿದ. ತನ್ನ ಹಿಂದೆ ಬರುತ್ತಿದ್ದ ಜೈಲರ್ ತನ್ನ ಜೊತೆಗೆ ಒಳಗೆ ಬಂದಿದ್ದು ಕಾಣಲಿಲ್ಲ.
ಬಂಧಿಸಿದ್ದ ಕಲ್ಲಪ್ಪನಿಗೆ ಕೋಳ ತೊಡಿಸಿ ಜೈಲಿನ ಕೋಣೆಯ ಕಡೆಗೆ ಕರೆದೊಯ್ದರು..... ಅಲ್ಲೇ ಕಾರಿಡಾರ್ ನ ಬದಿಯಲ್ಲಿ ಮೇಜಿನ ಮೇಲೆ ಜೈಲರನ ಹೆಣವನ್ನು ಮಲಗಿಸಲಾಗಿತ್ತು !
****
ಇಂಗ್ಲೀಶ್ ಮೂಲ ಕಥೆ: AN ARREST by Ambrose Bierce
ಸಖಿ ಪತ್ರಿಕೆಗಾಗಿ ಅನುವಾದಿಸಿ ಬರೆದಿದ್ದು.