ಬುಧವಾರ, ಜುಲೈ 27, 2011

ಅರೆಸ್ಟ್

ಲ್ಲಪ್ಪ ಯಾವುದೋ ಜಗಳಕ್ಕೆ ತನ್ನ ತಮ್ಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದ. ಸ್ವಂತ ತಮ್ಮನನ್ನೇ ಭೀಕರವಾಗಿ ಕೊಲೆ ಮಾಡಿದ ಕಲ್ಲಪ್ಪನಿಗೆ ನ್ಯಾಯಾಲಯದಿಂದ ಇನ್ನೂ ಶಿಕ್ಷೆಯ ಪ್ರಮಾಣ ಘೋಷಣೆಯಾಗಬೇಕಿತ್ತು. ಆ ವಿಕೃತ ಕೊಲೆಗೆ ಮರಣದಂಡನೆಯಾಗುವುದು ಖಚಿತವಾಗಿತ್ತು. ಆದರೆ ಅಷ್ಟರಲ್ಲೇ ಒಂದು ರಾತ್ರಿ ಜೈಲರನನ್ನು ಕಬ್ಬಿಣದ ಸರಳಿನಲ್ಲಿ ಹೊಡೆದು ಬೀಗದ ಕೈ ಕಿತ್ತುಕೊಂಡು ಬಾಗಿಲು ತೆಗೆದು ಪರಾರಿಯಾಗಿದ್ದ. ಆ ಸಮಯದಲ್ಲಿ ಜೈಲರನ ಕೈಯಲ್ಲಿ ಯಾವುದೇ ಆಯುಧವಿಲ್ಲದಿದ್ದುದರಿಂದ ಕಲ್ಲಪ್ಪನ ಏಟಿನಿಂದ ತಪ್ಪಿಸಿಕೊಳ್ಳಲಾಗದೇ ಆತ ದಾರುಣವಾಗಿ ಹೊಡೆತ ತಿಂದು ಬಿದ್ದಿದ್ದ.

ಜೈಲಿನಿಂದ ಹೊರಬಿದ್ದ ಕಲ್ಲಪ್ಪ ಓಡಲು ಶುರುಮಾಡಿದ. ಊರಿನ ಬೀದಿಗಳಲ್ಲಿ ಚಟುವಟಿಕೆ ಕಡಿಮೆಯಾಗುತ್ತಿತ್ತು. ಜನರೆಲ್ಲಾ ಮನೆ ಸೇರಿಕೊಳ್ಳುತ್ತಿದ್ದರು. ಅಲ್ಲಿಂದ ಊರು ದಾಟಿ ಕಾಡಿನೊಳಗೆ ಸೇರಿ ಎಷ್ಟೋ ಹೊತ್ತಿನವರೆಗೆ ಓಡುತ್ತಾ ಓಡುತ್ತಾ ಸುಸ್ತಾದ ಕಲ್ಲಪ್ಪ ಸುಧಾರಿಸಿಕೊಳ್ಳಲು ನಿಂತ. ಅವತ್ಯಾಕೋ ಕತ್ತಲು ಹೆಚ್ಚೇ ಇದ್ದಂತಿತ್ತು. ಹಾಗೇ ತಲೆ ಎತ್ತಿ ನೋಡಿದ. ಆಕಾಶದಲ್ಲಿ ಚಂದ್ರ ಕಾಣಲಿಲ್ಲ, ನಕ್ಷತ್ರಗಳೂ ತಲೆಮರೆಸಿಕೊಂಡಿದ್ದವು. ಕಲ್ಲಪ್ಪನಿಗೆ ತಾನು ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ಆ ಕಾಡು ಅವನಿಗೆ ಅತ್ಯಂತ ಅಪರಿಚಿತ ಅನ್ನಿಸಿತು. ಅದೇ ಕಾಡಿನಲ್ಲಿ ಹಾಗೇ ಹೋದರೆ ಊರಿನಿಂದ ದೂರಕ್ಕೆ ಹೋಗುತ್ತೇನೋ ಅಥವಾ ಮತ್ತೆ ಊರೊಳಗೇ ಹೋಗುತ್ತೇನೋ ಎಂದು ಗೊತ್ತಾಗದೇ ಗೊಂದಲಕ್ಕೊಳಗಾಗಿ ಯೋಚಿಸತೊಡಗಿದ. ಇಷ್ಟು ಹೊತ್ತಿಗಾಗಲೇ ತಾನು ಜೈಲರನನ್ನು ಹೊಡೆದು ಓಡಿಬಂದ ವಿಷಯ ಎಲ್ಲರಿಗೂ ತಿಳಿದಿರುತ್ತದೆ, ತನ್ನನ್ನು ಹುಡುಕಿಕೊಂಡು ಪೋಲೀಸರು ಹೊರಟಿರುತ್ತಾರೆ, ಎಲ್ಲ ಕಡೆಯಲ್ಲೂ ಮಾಹಿತಿ ಕೊಟ್ಟಿರುತ್ತಾರೆ ಎಂದು ಅವನಿಗೆ ಖಾತ್ರಿಯಿತ್ತು. ತನ್ನ ಊರಿಗೆ ಹೋದರೂ ಅಲ್ಲಿ ಪೋಲೀಸರ ದಂಡೇ ಕಾದುಕುಳಿತಿರುತ್ತದೆ ಎಂದು ಗೊತ್ತಿತ್ತು. ಜೈಲಿನ ಬಂಧನದಿಂದ ತಪ್ಪಿಸಿಕೊಂಡು ಬಂದರೂ ಇನ್ನು ಯಾವತ್ತೂ ಈ ಜಗತ್ತಿನಲ್ಲಿ ಸ್ವತಂತ್ರವಾಗಿರುವುದು ಸಾಧ್ಯವಿಲ್ಲ ಅನ್ನಿಸತೊಡಗಿತು. ಮತ್ತೆ ಜೈಲಿನಲ್ಲಿರುವಂತೆಯೇ ಭಾಸವಾಯಿತು. ಹಾಗೇ ಮುಂದೆ ನಡೆಯತೊಡಗಿದ.


ಸ್ವಲ್ಪ ದೂರ ನೆಡೆಯುತ್ತಿದ್ದಂತೇ ಅಲ್ಲೇ ಪಕ್ಕದಲ್ಲಿ ಒಂದು ಹಳೇ ದಾರಿಯಿದ್ದಂತೆ ಕಂಡಿತು. ಅದರ ಕಡೆ ಓಡಿ ಹೋದ. ಅವನ ಅದೃಷ್ಟ ಅಲ್ಲಿಯೇ ಕೈಕೊಟ್ಟಿತ್ತು. ಕತ್ತಲಿನಲ್ಲಿ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ನಿಂತಿದ್ದು ಕಂಡಿತು. ಆತನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಕರಿಮೋಡಗಳ ಮರೆಯಿಂದ ಚಂದ್ರ ಹೊರಕ್ಕೆ ಇಣುಕಿ ಮರದ ಎಲೆಗಳ ಸಂದಿಯಿಂದ ಬಂದ ಸಣ್ಣ ಬೆಳಕಿನಲ್ಲಿ ಆ ವ್ಯಕ್ತಿಯ ಕೈಲಿದ್ದ ಕೋವಿ ಕಲ್ಲಪ್ಪನಿಗೆ ಕಂಡಿತು. ಕಲ್ಲಪ್ಪನ ಎದೆ ಧಸಕ್ಕೆಂದಿತು. ಆ ಕೋವಿ ಕಲ್ಲಪ್ಪನೆಡೆಗೇ ನೆಟ್ಟಿತ್ತು. ಅಲ್ಲಿಂದ ಓಡಲು ಕಲ್ಲಪ್ಪ ಹವಣಿಸುತ್ತಿದ್ದಂತೆಯೇ "ಈ ಬಂದೂಕು ಪೂರ್ತಿ ಲೋಡ್ ಆಗಿದೆ" ಎಂದ ಆ ವ್ಯಕ್ತಿ. ಕಲ್ಲಪ್ಪ ಮರಗಟ್ಟಿ ನಿಂತ. ಅವನ ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಕೈಕಾಲೇ ಆಡದಂತಾದ. ಆ ದಾರಿಯಲ್ಲಿ ಹಿಂದೆ ತಿರುಗಿ ನಡೆಯುವಂತೆ ಕಲ್ಲಪ್ಪನಿಗೆ ಕೋವಿಯಿಂದಲೇ ಸನ್ನೆ ಮಾಡಿದ ಆ ವ್ಯಕ್ತಿ. ಕಲ್ಲಪ್ಪ ತಪ್ಪಿಸಿಕೊಳ್ಳುವ ಅವಕಾಶವಿಲ್ಲದಷ್ಟು ಹತ್ತಿರ ಸಿಕ್ಕಿಹಾಕಿಕೊಂಡಿದ್ದ. ಬೇರೆ ವಿಧಿಯಿಲ್ಲದೇ ಆತ ತೋರಿಸಿದ ದಾರಿಯಲ್ಲಿ ನಿಧಾನಕ್ಕೆ ನಡೆಯತೊಡಗಿದ. ಹಿಂದೆ ಕುತ್ತಿಗೆಗೆ ಕೋವಿಯ ನಳಿಕೆ ತಾಗುತ್ತಿತ್ತು. ಜೋರಾಗಿ ಉಸಿರಾಡಲೂ ಹೆದರಿಕೆಯಾಗಿ ಎಡಬಲಕ್ಕೆ ಸ್ವಲ್ಪವೂ ತಿರುಗದೇ ಮನ್ನಡೆದ. ಕತ್ತು ಭಯಂಕರವಾಗಿ ನೋಯುತ್ತಿತ್ತು. ದೇಹ ಸೋತುಹೋದಂತೆ ಅನ್ನಿಸಿತು.


ಕಲ್ಲಪ್ಪ ತನ್ನ ತಮ್ಮನನ್ನು ಕೊಲೆ ಮಾಡಿದ ರೀತಿಯಲ್ಲೇ ಅವನೆಂತಹ ಕ್ರೂರ ಮನಸ್ಸಿನವನೆಂದು ಹೇಳಬಹುದಿತ್ತು. ತನ್ನ ಕೊರಳಿಗೆ ಕುಣಿಗೆ ಬೀಳುವುದು ಖಂಡಿತ ಎಂದು ಗೊತ್ತಾದ ಮೇಲೂ ಕೂಡ ಜೈಲರನನ್ನು ಹೊಡೆದು ಓಡಿಬರುವ ಸಾಹಸಕ್ಕೆ ಕೈ ಹಾಕಿದ್ದ. ಆದರೆ ಅಂತಹ ಮನುಷ್ಯನೂ ಈಗ ಏನೂ ಮಾಡದವನಂತಾಗಿದ್ದ. ಆತನ ಹುಂಬ ಧೈರ್ಯ ಕೊನೆಯಾದಂತೆ ಅನ್ನಿಸಿತು. ಹಿಂದೆ ಆ ವ್ಯಕ್ತಿ ಹತ್ತಿರದಲ್ಲೇ ನಡೆಯುತ್ತಿದ್ದ ಶಬ್ದ ಕೇಳುತ್ತಿತ್ತು. ಕತ್ತಲು ಹೆಚ್ಚುತ್ತಿತ್ತು. ಹೀಗೆ ಎಷ್ಟೋ ದೂರ ಅವರಿಬ್ಬರೂ ನಡೆದರು. ಹಾಗೇ ನಡೆಯುತ್ತಾ ಒಮ್ಮೆ ಬೆಳದಿಂಗಳ ಯಾವುದೋ ಒಂದು ಕ್ಷಣದಲ್ಲಿ ಕಲ್ಲಪ್ಪ ಅಚಾನಕ್ಕಾಗಿ ಹಿಂದಿರುಗಿ ನೋಡಿದ. ನೋಡಿದವನೇ ಬೆಚ್ಚಿಬಿದ್ದ. ಅವನ ಹಿಂದೆ ಬರುತ್ತಿದ್ದ ವ್ಯಕ್ತಿ ಅವನಿಂದ ಹೊಡೆಸಿಕೊಂಡ ಜೈಲರ್ ಆಗಿದ್ದ. ಆ ಮುಖ ಬಿಳುಚಿಕೊಂಡಿತ್ತು. ಕಬ್ಬಿಣದ ಸರಳಿನಿಂದ ಕಲ್ಲಪ್ಪ ಹೊಡೆದ ಗುರುತು ಮುಖದ ಮೇಲೆ ಹಾಗೇ ಎದ್ದು ಕಾಣುತ್ತಿತ್ತು. ಕಲ್ಲಪ್ಪ ಪೂರ್ತಿ ಧೈರ್ಯ ಕಳೆದುಕೊಂಡ. ಎಂತದೇ ಧೈರ್ಯವಂತನಾದರೂ ಅಸಹಾಯಕನಾದಾಗ ಸೋತುಬಿಡುತ್ತಾನೆ.

ಅವರಿಬ್ಬರೂ ಹಾಗೇ ನೆಡೆಯುತ್ತಾ ಊರಿನೊಳಗೆ ಬಂದರು. ಅಷ್ಟೊತ್ತಿಗೆ ಬೆಳಗಿನ ಜಾವ. ಊರ ಬೀದಿಗಳೆಲ್ಲಾ ಖಾಲಿಯಿದ್ದವು. ಆ ಜೈಲರ್ ಸೀದಾ ಕಲ್ಲಪ್ಪನನ್ನು ಜೈಲಿನ ದಾರಿಗೆ ನಡೆಸಿಕೊಂಡು ಹೋದ. ಜೈಲಿನ ಮುಖ್ಯದ್ವಾರಕ್ಕೆ ಬಂದು ಕಲ್ಲಪ್ಪ ಬಾಗಿಲನ್ನು ತಳ್ಳಿದ. ಹಾಗೇ ತೆಗೆದುಕೊಂಡಿತು. ಒಳಗೆ ಹೋಗುತ್ತಿದ್ದಂತೆಯೇ ಅಲ್ಲಿ ಕಾವಲಿದ್ದ ಪೋಲೀಸರು ಇವನನ್ನು ಹಿಡಿದುಕೊಂಡರು. ಕಲ್ಲಪ್ಪ ಹಿಂದಿರುಗಿ ನೋಡಿದ. ತನ್ನ ಹಿಂದೆ ಬರುತ್ತಿದ್ದ ಜೈಲರ್ ತನ್ನ ಜೊತೆಗೆ ಒಳಗೆ ಬಂದಿದ್ದು ಕಾಣಲಿಲ್ಲ.

ಬಂಧಿಸಿದ್ದ ಕಲ್ಲಪ್ಪನಿಗೆ ಕೋಳ ತೊಡಿಸಿ ಜೈಲಿನ ಕೋಣೆಯ ಕಡೆಗೆ ಕರೆದೊಯ್ದರು..... ಅಲ್ಲೇ ಕಾರಿಡಾರ್ ನ ಬದಿಯಲ್ಲಿ ಮೇಜಿನ ಮೇಲೆ ಜೈಲರನ ಹೆಣವನ್ನು ಮಲಗಿಸಲಾಗಿತ್ತು !


****

ಇಂಗ್ಲೀಶ್ ಮೂಲ ಕಥೆ:  AN ARREST by Ambrose Bierce
ಸಖಿ ಪತ್ರಿಕೆಗಾಗಿ ಅನುವಾದಿಸಿ ಬರೆದಿದ್ದು.



ಸೋಮವಾರ, ಜುಲೈ 11, 2011

ಐಸ್ ವೈನ್ & ಕೊಮಗಟ ಮರು

ಯಾವುದಾದರೂ ಊರಿಗೆ/ಪ್ರದೇಶಕ್ಕೆ ಹೋದಾಗ ಅಲ್ಲಿನ ವಿಶೇಷ ಅನ್ನಿಸುವಂತದ್ದು ಏನಾದರೂ ಇದೆಯಾ ಎಂದು ತಿಳಿದುಕೊಳ್ಳುವುದು ನನ್ನ ಅಭ್ಯಾಸ. ಅಂದರೆ ಆ ಊರಿನ ವಿಶೇಷ ಪದಾರ್ಥಗಳು, ಆ ಊರಲ್ಲಿ ಮಾತ್ರ ಸಿಗುವಂತದ್ದು, ಬೆಳೆಯುವಂತದ್ದು, ತಯಾರಾಗುವಂತದ್ದು. ಉದಾಹರಣೆಗೆ ಹಾಸನ ಅಂದಕೂಡಲೇ ಸೌತೆಕಾಯಿ, ಶುದ್ಧ ನೀರಾ ಹೀಗೆ. ಮೊದಲೆಲ್ಲಾ ಸುಮಾರಷ್ಟು ಊರುಗಳಲ್ಲಿ ಆ ಊರಿನದ್ದೇ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವಂತದ್ದೇನಾದರೂ ಇರುತ್ತಿದ್ದವು. ಈಗಲೂ ಇವೆ. ಮೊಳಕಾಲ್ಮೂರು ಸೀರೆ, ಚನ್ನಪಟ್ಟಣದ ಬೊಂಬೆ,  ಮತ್ಯಾವುದೋ ಕಲೆ, ತರಕಾರಿ, ತಿಂಡಿ, ಸಿಹಿ ಮುಂತಾದವು.  ಆದರೆ ಜಾಗತೀಕರಣದ ನಂತರ ಎಲ್ಲ ಸ್ವಲ್ಪ ಕಲಸುಮೇಲೋಗರವಾಗಿದ್ದರೂ ಕೂಡ ಕೆಲವು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಇರಲಿ.


www.en.wikipedia.org/wiki/Ice_wine

ಅದೇ ರೀತಿ ಇಲ್ಲಿ ಕೆನಡಾದಲ್ಲಿ ನಾನಿರುವ ಪ್ರದೇಶದ ವಿಶೇಷದ ಬಗ್ಗೆ ವಿಚಾರಿಸಿದಾಗ ನನಗೆ ತಿಳಿದು ಬಂದದ್ದು ’ಐಸ್ ವೈನ್’. ನಾನು ರೆಡ್ ವೈನ್, ವೈಟ್ ವೈನ್ ಕೇಳಿದ್ದೆ ಆದರೆ ಈ ಐಸ್ ವೈನ್ ಬಗ್ಗೆ ಇದುವರೆಗೂ ಕೇಳಿರಲಿಲ್ಲ. ಈ ಒಂಟಾರಿಯೋ ರಾಜ್ಯದ ನಯಾಗರ ಪ್ರದೇಶದಲ್ಲಿ ಬಹಳ ದ್ರಾಕ್ಷಿ ತೋಟಗಳಿವೆ. ಆದ್ದರಿಂದ ಬಹಳ ವೈನರಿಗಳೂ ಇವೆ. ಹಲವು ಬಗೆಯ ವೈನ್ ಗಳು ತಯಾರಾಗುತ್ತವೆ. ಒಂದೊಂದು ವೈನ್ ಗೂ ಅದರದ್ದೇ ಆದ ವಿಶೇಷತೆಗಳಿವೆ. ಇಲ್ಲಿ ತಯಾರಾಗುವ ಅಂತಹ ವಿಶೇಷ ವೈನ್ ಗಳಲ್ಲಿ ಮುಖ್ಯವಾದದ್ದು ಈ ಐಸ್ ವೈನ್. ಇದು ಜಗತ್ತಿನ ಹಲವು ಶೀತ ದೇಶಗಳಲ್ಲಿ ತಯಾರಾಗುತ್ತದಾದರೂ ಕೆನಡಾದ ಐಸ್ ವೈನ್ ಗುಣಮಟ್ಟ ಮತ್ತು ಪ್ರಮಾಣದಲ್ಲಿ ನಂ. ೧ ಆಗಿದ್ದು ಪ್ರಸಿದ್ಧವಾಗಿದೆಯಂತೆ. ಸಾಮಾನ್ಯವಾಗಿ ವೈನ್ ಮಾಡುವಾಗ ದ್ರಾಕ್ಷಿ ಮಾಗಿದ ಅನಂತರ ಬಳ್ಳಿಯಿಂದ ಕಿತ್ತು ಸಂಸ್ಕರಣೆ ಮಾಡುತ್ತಾರೆ, ಆದರೆ ಈ ಐಸ್ ವೈನ್ ಗೆ ಮಾತ್ರ ಈ ರೀತಿ ಮಾಡುವುದಿಲ್ಲ. ಐಸ್ ವೈನ್ ವಿಶೇಷತೆ ಇರುವುದೇ ಅಲ್ಲಿ. ದ್ರಾಕ್ಷಿಯ ಗೊಂಚಲನ್ನು ಬಳ್ಳಿಯಲ್ಲಿ ಹಾಗೆಯೇ ಬಿಡುತ್ತಾರೆ. ಚಳಿಗಾಲದಲ್ಲಿ ಮೈನಸ್ ವಾತಾವರಣದಲ್ಲಿ ಅವುಗಳ ಮೇಲೆ ಹಿಮ ಕೂರುತ್ತದೆ. ಆಗ ಅದರಲ್ಲಿನ ನೀರಿನ ಅಂಶ ಹೆಪ್ಪುಗಟ್ಟಿ ಹೋಗುತ್ತದೆ. ಆದರೆ ಸಕ್ಕರೆ ಮತ್ತು ತಿರುಳಿನ ಅಂಶ ಮಾತ್ರ ಹಾಗೇ ಉಳಿಯುತ್ತದೆ. ಇದರಿಂದ ಮಾಮೂಲಿ ದ್ರಾಕ್ಷಿಗಿಂತ ದಪ್ಪ ಮತ್ತು ಸಿಹಿಯಾದ ಸಿರಪ್ ಸಿಗುತ್ತದೆ.. ಇದನ್ನು ಸಂಸ್ಕರಣೆ ಮಾಡಿ ವೈನ್ ತಯಾರಿಸುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ ಮತ್ತು ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ ಬೇರೆ ವೈನ್ ಗಳಿಗೆ ಹೋಲಿಸಿದರೆ ಬಹಳ ದುಬಾರಿ ಕೂಡ.

ಈ ಬಗ್ಗೆ ಇಂಗ್ಲೀಷ್ ವಿಕಿಪಿಡಿಯಾ ಮಾಹಿತಿ ಇಲ್ಲಿದೆ. ಇದನ್ನು ಗೂಗ್ಲ್ ಟ್ರಾನ್ಸ್ ಲೇಟರ್ ಟೂಲ್ ಕಿಟ್ ಬಳಸಿ ಸದ್ಯದಲ್ಲೇ ಕನ್ನಡ ವಿಕಿಪಿಡಿಯಾಗೂ ಹಾಕುತ್ತೇನೆ.

***

www.sikh-history.com/sikhhist/events/kamagatamaru.html
ಇನ್ನೊಂದು ಸಂಗತಿಯೆಂದರೆ ಇಲ್ಲಿನ ಭಾರತೀಯರಿಗೆ ಸಂಬಂಧಿಸಿದ ಇತಿಹಾಸದ ಒಂದು ಘಟನೆ. ಕೆನಡಾದ ಭಾರತೀಯ ಜನಸಂಖ್ಯೆಯಲ್ಲಿ ಸಿಖ್ಖರು ಹೆಚ್ಚಿದ್ದಾರೆ. ಬ್ರಿಟಿಷ್ ಕೊಲಂಬಿಯಾ ರಾಜ್ಯದಲ್ಲಿ ಅವರ ಸಂಖ್ಯೆ ಹೆಚ್ಚಿದೆ. ಇಪ್ಪತ್ತನೇ ಶತಮಾನದ ಶುರುವಿನಲ್ಲಿ ಕೆನಡಾದಲ್ಲಿ ಜನಸಂಖ್ಯೆ ಬಹಳ ಕಡಿಮೆ ಇತ್ತು. ಆಗ ಇಲ್ಲಿ ಬ್ರಿಟಿಷರ ನೇರ ಆಡಳಿತವಿತ್ತು. ಅವರು ವಲಸಿಗರಿಗೆ ಕರೆಕೊಟ್ಟು ಕೆನಡಾಗೆ ಬರಮಾಡಿಕೊಳ್ಳುತ್ತಿದ್ದರಂತೆ. ಕೃಷಿ ಮಾಡಲು ಭೂಮಿಯನ್ನೂ ಕೊಡುತ್ತಿದ್ದರಂತೆ. ಇದರಿಂದಾಗಿ ಭಾರತದಿಂದಲೂ ಬಹಳ ಜನ ಪಂಜಾಬಿಗಳು ಅಲ್ಲಿಗೆ ಹೋದರು. ಆದರೆ ಬ್ರಿಟಿಷರಿಗೆ ಕಪ್ಪು/ಕಂದು ಚರ್ಮದ ಜನರು ಅಲ್ಲಿಗೆ ಬರುವುದು ಇಷ್ಟವಿರಲಿಲ್ಲ. ಅವರು ಕೇವಲ ಬಿಳಿಯರನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಬೇರೆ ಜನರು ಅಲ್ಲಿಗೆ ವಲಸೆ ಬರದಂತೆ ತಡೆಯಲು ಅಲ್ಲಿನ ಆಡಳಿತ ಒಂದು ಕಾನೂನನ್ನು ಮಾಡುತ್ತದೆ. ಕೆನಡಾಗೆ ನೇರವಾಗಿ ಒಂದೇ ಪ್ರಯಾಣದಲ್ಲಿ ಬಂದವರಿಗೆ ಮತ್ತು ಒಂದು ಮೊತ್ತದ ಹಣ ಇಟ್ಟುಕೊಂಡು ಬಂದವರಿಗೆ ಮಾತ್ರ ಪ್ರವೇಶ ಎಂದು. ದಕ್ಷಿಣ ಏಷ್ಯಾದ ಜನರು ಕೆನಡಾಗೆ ಬರದಂತೆ ತಡೆಯುವುದು ಅವರ ಉದ್ದೇಶವಾಗಿರುತ್ತದೆ. ಭಾರತದಿಂದ ನೇರವಾಗಿ ಕೆನಡಾಗೆ ಹೋಗಲು ಆಗಿನ ಕಾಲದಲ್ಲಿ ಯಾವ ವ್ಯವಸ್ಥೆಯೂ ಇರಲಿಲ್ಲ. ೧೯೧೪ರಲ್ಲಿ ಸಿಖ್ ವ್ಯಾಪಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರನಾದ ಗುರ್ದಿತ್ ಸಿಂಗ್ ಎನ್ನುವವರು ಆ ಕಾನೂನು ಮೀರದೇ ವಲಸೆ ಮಾಡಲು ಯೋಚಿಸುತ್ತಾರೆ. ಒಂದು ಜಪಾನಿ ಹಡಗನ್ನು ಬಾಡಿಗೆಗೆ ಪಡೆಯುತ್ತಾರೆ. ಅದರ ಹೆಸರೇ ’ಕೊಮಗಟ ಮರು’. ಅದರಲ್ಲಿ ಹಾಂಗ್ ಕಾಂಗ್ ನಿಂದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರಕ್ಕೆ ನೇರವಾಗಿ ಒಂದೇ ಪ್ರಯಾಣ ಮಾಡುವ ಉಪಾಯ ಮಾಡುತ್ತಾರೆ. ಅದರಂತೆ ಆ ಹಡಗು ೩೭೬ ಜನ ಭಾರತೀಯರನ್ನು ತುಂಬಿಕೊಂಡು ಹೊರಟು ವ್ಯಾಂಕೋವರ್ ತಲುಪಿದಾಗ ಅಲ್ಲಿನ ಬ್ರಿಟಿಷರು ಅದನ್ನು ಬಂದರಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆ ಹಡಗು ಅತಂತ್ರವಾಗಿ ಪ್ರಯಾಣಿಕರ ಸಮೇತ ಸಮುದ್ರದಲ್ಲಿ ಎರಡು ತಿಂಗಳುಗಳ ಕಾಲ ನಿಲ್ಲಬೇಕಾಗುತ್ತದೆ. ಕೊನೆಗೆ ಕೆನಡಾ ನೌಕಾದಳವು ಅದನ್ನು ಬಲವಂತವಾಗಿ ಅಲ್ಲಿಂದ ಹೊರದಬ್ಬಿ ಕೋಲ್ಕೋತಾಗೆ ತಲುಪಿಸುತ್ತದೆ. ಆಗ ಭಾರತವು ಬ್ರಿಟಿಷರ ಕೈಯಲ್ಲಿದ್ದ ಕಾಲ. ಕೋಲ್ಕೋತಾಗೆ ಬಂದ ಆ ಹಡಗಿನ ಜನರ ಮೇಲೆ ಬ್ರಿಟಿಷರು ಅನುಮಾನದಿಂದ ಗುಂಡು ಹಾರಿಸುತ್ತಾರೆ. ಬಂಧಿಸಲು ತಯಾರಾಗುತ್ತಾರೆ. ಆಗ ಅಲ್ಲಿ ಕಾದಾಟಗಳಾಗಿ ೨೦ ಜನ ಭಾರತೀಯರು ಕೊಲ್ಲಲ್ಪಡುತ್ತಾರೆ.

ಇದು ಕೆನಡಾದ ಇತಿಹಾಸದಲ್ಲಿ ಒಂದು ವಿಶೇಷ ಘಟನೆಯಾಗಿದೆ (Sikh History link). ಇದು ನಡೆದು ಒಂದು ಶತಮಾನವಾಗುತ್ತಿರುವಾಗ ೨೦೦೬ರಲ್ಲಿ ಕೆನಡಾದ ಪ್ರಧಾನಿ ಹಾರ್ಪರ್ ಈ ಘಟನೆಯ ಬಗ್ಗೆ ಬಹಿರಂಗವಾಗಿ ಭಾರತೀಯ ಸಮುದಾಯದ ಕ್ಷಮೆಯನ್ನೂ ಯಾಚಿಸಿದ್ದಾರೆ. ಕೊಮಗಟ ಮರು ಘಟನೆಯ ಬಗ್ಗೆ ಕಂಟಿನ್ಯುಯಸ್ ಜರ್ನಿ ಎನ್ನುವ ಸಿನೆಮಾ ಕೂಡ ಇದೆ. (IMDb link)

ಬುಧವಾರ, ಜುಲೈ 6, 2011

ದಿಢೀರ್ ದೋಸೆ

ದೋಸೆ ತಿನ್ನುವ ತಲುಬು ಬಂದಿದೆ. ಅಕ್ಕಿ ನೆನೆಸಿಲ್ಲ, ಹಿಟ್ಟು ರುಬ್ಬಿಲ್ಲ. ವಿಧವಿಧದ ದೋಸೆ ಮಾಡಲು ಪದಾರ್ಥಗಳೂ ಇಲ್ಲ.

ಪರಿಹಾರ? ಹಿಟ್ಟಿನ ದೋಸೆ ಅಲಿಯಾಸ್ ದಿಢೀರ್ ದೋಸೆ ! ಅತ್ಯಂತ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡಬಹುದಾದ ದೋಸೆ.

ಬೇಕಾಗುವ ಪದಾರ್ಥಗಳು..

  • ಅಕ್ಕಿಹಿಟ್ಟು, ಗೋಧಿಹಿಟ್ಟು, ಸಣ್ಣರವೆ(ಸೂಜಿರವೆ), ಉಪ್ಪು.......ಇವು ನಾಲ್ಕೂ must.
  • ಜೀರಿಗೆ, ಖಾರದ ಪುಡಿ ಎಷ್ಟು ಬೇಕೋ ಅಷ್ಟ್.

ಮಾಡುವುದು ಹೀಗೆ...
  1. ಒಂದು ಅಳತೆ ಅಕ್ಕಿಹಿಟ್ಟಿಗೆ ಅರ್ಧ ಅಳತೆ ಗೋಧಿ ಹಿಟ್ಟು, ಅರ್ಧ ಅಳತೆ ರವೆ ಬೆರೆಸಿರಿ. ಸ್ವಲ್ಪ ಜೀರಿಗೆ ಹಾಕಿ.
  2. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತುಂಬಾ ತೆಳುವಾಗದಂತೆ ಎಚ್ಚರವಹಿಸಿ.
  3. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ಅಲ್ಲಿಗೆ ದೋಸೆ ಹಿಟ್ಟು ತಯಾರಾಯ್ತು!
  4. ಒಲೆ ಹಚ್ಚಿ ಅದರ ಮೇಲೆ ಕಾವಲಿ ಇಟ್ಟು ಬಿಸಿ ಮಾಡಿ.
  5. ಚೆನ್ನಾಗಿ ಕಾದ ಮೇಲೆ ದೋಸೆ ಎರೆಯಲು ಶುರುಮಾಡಿ. ಮೀಡಿಯಮ್ ದಪ್ಪ ಇರಲಿ.
  6. ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ.

ಬಿಸಿಬಿಸಿ ದೋಸೆ ತಯಾರು.
ಹಿಟ್ಟಿನ ದೋಸೆ
(Item shown in the picture may not represent the actual product. ಇನ್ನೂ ಚೆನ್ನಾಗಿ ಆಗಬಹುದು;-))

***

  • ಬೇಕಿದ್ದರೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ದೋಸೆ ಹಿಟ್ಟಿಗೆ ಹಾಕಬಹುದು.
  • ಇದೀಗ ಬಂದ ಮಾಹಿತಿ ಪ್ರಕಾರ ಗೋಧಿಹಿಟ್ಟಿನ ಬದಲಿಗೆ ರಾಗಿಹಿಟ್ಟನ್ನೂ ಬಳಸಬಹುದು!
  • ಮತ್ತೊಂದು ದಿಡೀರ್ ರವೆ ದೋಸೆ ರೆಸಿಪಿ ಇಲ್ಲಿದೆ:  ಧಿಡೀರ್ ರವಾಮಸಾಲ್‌ದೋಸೆ
  • ಸಮಯ ಇದ್ದಾಗ ದೋಸೆಗೆ ಹೀಗೆ ಆಲೂಗಡ್ಡೆ ಪಲ್ಯ ಮಾಡಿಕೊಳ್ಳಬಹುದು.

***

"ಇಷ್ಟಬಂದಹಾಗೆ ಇರಬೇಕು ಅಂದರೆ ಇಷ್ಟಪಟ್ಟಿದ್ದನ್ನೆಲ್ಲಾ ಕಲೀಬೇಕು". ಹೀಗಂತ ಹೇಳಿದ್ದು ಶಿವರಾಮ ಕಾರಂತರು...’ಹುಚ್ಚು ಮನಸಿನ ಹತ್ತು ಮುಖಗಳು’ ಪುಸ್ತಕದಲ್ಲಿ.

ಅಂದಹಾಗೆ, ನಾನಿನ್ನೂ ಅಡುಗೆಶಾಲೆಯಲ್ಲಿ ಕಲಿಯುತ್ತಿರುವ ವಿಧೇಯ ವಿದ್ಯಾರ್ಥಿ. :)