ಮಂಗಳವಾರ, ಜೂನ್ 30, 2009

ಕನಸು ಬಿತ್ತು

ನನಗೊಂದು ಕನಸು ಬಿತ್ತು
ಅದರಲ್ಲಿ ನಾ ಅಳಿಲಾಗಿದ್ದೆ
ದಿಕ್ಕೇ ಇಲ್ಲದೆ ಓಡುತ್ತಿದ್ದೆ
ಮರದ ತುದಿಯವರೆಗೂ ಹತ್ತಿದ್ದೆ

ಮತ್ತೊಂದು ಕನಸು ಬಿತ್ತು
ಮನೆ ಅಂಗಳದ ತುಂಬೆಲ್ಲಾ ಹಾವುಗಳು
ಬಾಲದ ಮೇಲೆ ನಿಂತು ಕುಣಿಯುತ್ತಿದ್ದವು
ಮಧ್ಯದ ಕರಿನಾಗರ ನನ್ನನ್ನೇ ನೋಡುತ್ತಿತ್ತು

ಅಳಿಲು ಓಡುತ್ತಾ ಗುಂಡಿಯಲ್ಲಿ ಬಿತ್ತು
ಕರಿನಾಗರವ ಕಂಡು ದಿಗಿಲಾಗಿತ್ತು
ಅಳಿಲಿನ ಸ್ವಪ್ನ ಅಪರೂಪವಂತೆ
ಹಾವಿನ ಸ್ವಪ್ನ ಶುಭಸೂಚಕವಂತೆ !

ವಿ.ಸೂ : ಇದನ್ನು ಕವನವೆಂದು ತಪ್ಪು ತಿಳಿಯಬಾರದು. :)

ಗುರುವಾರ, ಜೂನ್ 25, 2009

ನನಗಂತೂ ಅನಿಸಿದೆ !

ನಿನಗೆ ಅನ್ನಿಸಿದೆಯೋ ಗೊತ್ತಿಲ್ಲ. ನನಗಂತೂ ಅನಿಸಿದೆ. ಉಹುಂ, ಬಿಡುವಿದ್ದಾಗ ಪ್ರೀತಿಸುವುದು ಪ್ರೀತಿಯಲ್ಲ. ಹೋಗಲಿ ಇಲ್ಲಿ ಪ್ರೀತಿ ವಿಷಯ ಬೇಡ. ಬಿಡುವಿದ್ದಾಗ ಮಾತ್ರ ಇರುವುದು ಸ್ನೇಹವಲ್ಲ. ಗೆಳೆತನದಲ್ಲಿ ಬಂದಾಗ ಭರಿಸಿಕೋ ಎನ್ನುವುದು ತರವಲ್ಲ. ನದಿಯು ಸಮುದ್ರವನ್ನು ಸೇರುವಲ್ಲಿನ ಮೇಲ್ಮೈ ಪ್ರಶಾಂತತೆಯನ್ನು ನೀನು ನಿರ್ಲಿಪ್ತತೆ ಎನ್ನುವುದಾದರೆ ನಿನಗೆ ಒಳಗಿನ ಚಕ್ರಸುಳಿಗಳ ಅರಿವಿಲ್ಲ. ಆಚೆಯ ದಡದ ಭೋರ್ಗರೆಯುತ್ತಿರುವ ಅಲೆಗಳು ಕಾಣುತ್ತಿಲ್ಲ. ಏಕೆಂದರೆ ಈ ದಡದಲ್ಲೇ ಮಲಗಿಬಿಟ್ಟೆ ನೀನು. ಎಚ್ಚರಗೊಳಿಸುವ ಗೋಜಿಗೆ ಸಮಯ ಕಳೆದುಹೋದಾಗ ಅದು ಸಾಯುವ ಸ್ಥಿತಿ ತಲುಪಿತ್ತು. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿದುದ್ದನ್ನು ನದಿ ಎಂದುಕೊಂಡೆನೋ ಎಂದು ಬೇಸರವಾಗುತ್ತಿದೆ. ಬೇಸಿಗೆ ಸೃಷ್ಟಿಸಿದ ಬರದ ಗಾಳಿಗೆ ಹರಿವಿನ ಪಾತ್ರವೂ ಮುಚ್ಚಿಹೋಗುತ್ತಿದೆ. ಸಂಬಂಧಗಳು ಅಸಡ್ಡೆ, ನಿರ್ಲಕ್ಷದ ಹೊರತಾಗಿ ಕೆಲವೇ ಕೆಲವು ಸಣ್ಣ ಸೂಚನೆಯನ್ನಾದರೂ ಉಳಿಸುತ್ತವೆ. ಮತ್ತೆ ಮಳೆ ಹನಿಯುವುದಾ ನದಿ ತುಂಬಿ ಹರಿಯುವುದಾ ಪ್ರಶ್ನೆ ಕೇಳಿಕೊಳ್ಳಲೂ ಮನಸಾಗುತ್ತಿಲ್ಲ. ಮೋಡ ಕಟ್ಟುವ ಸುಳಿವೇ ಇಲ್ಲ. ಹನಿ ಹನಿಗೂ ಗೋಗರೆಯುವದರಲ್ಲಿ ಅರ್ಥವಿಲ್ಲ. ಪರಸ್ಪರ ತತ್ವಕ್ಕೆ ಬೆಲೆಯಿಲ್ಲದ ಕಡೆ ಬೆಲೆ ಕೊಟ್ಟು ಕೊಟ್ಟು ಈಗಿನ ಆಬದಿಯ ನಿರಾಳತೆ ಕಂಡು ದಂಗಾಗಿದ್ದೇನೆ. ಗುದ್ದಿದ್ದು ಸಮಾಧಾನವಾಗಿಲ್ಲ, ಆದರೆ ಬೆನ್ನು ತಿರುಗಿಸಿ ಹೋದ ಬೆನ್ನಿನ ಹಿಂದೆ ಬಿದ್ದು ಅಭ್ಯಾಸವಿಲ್ಲ. ಬಲವಂತದ ಬಳ್ಳಿಯಾಗಿ ಸುತ್ತಿಕೊಂಡಿದ್ದ ವಿಷಾದ ಭಾವ. ಎಲ್ಲವನ್ನೂ ನಿರ್ಧರಿಸಿ ಆಗಿರುವಾಗ ಮತ್ತೇನು ಹೇಳುವುದು ಫಲವಿಲ್ಲ ಎಂದು ನುಣುಚಿಕೊಂಡೆಯಾ? ಕೆಲವೊಂದು ಸಂದರ್ಭಗಳಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವುದೇ ಒಳ್ಳೆಯ ನಿರ್ಧಾರವೆನ್ನುತ್ತಾರೆ. ಅದೇ ರೀತಿ ನಾನೂ ಕೂಡ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದೆಂದು ನಿರ್ಧರಿಸಿದ್ದೆ. ಆದರೆ ಈಗ ಏನಾದರೊಂದು ನಿರ್ಧರಿಸಿಬಿಡಬೇಕು ಎಂಬ ನಿರ್ಧಾರಕ್ಕೆ ಬರೋಣವೆನಿಸುತ್ತಿದೆ. ನೀ ಕೊಟ್ಟ ಎರಡು ರೂಪಾಯಿ ನಾಣ್ಯ ಪರ್ಸಿನ ಒಳಖಾನೆಯಲ್ಲಿ ಹಾಗೇ ಇದೆ. ಅದಕ್ಕೆ ಇನ್ನೆರಡೂವರೆ ರೂಪಾಯಿ ಸೇರಿಸಿದರೆ ಅದು ನನ್ನೆದೆಯ ದಹಿಸಿ, ಭಾರ ಇಳಿಸಿ, ಬೂದಿಯಾಗುತ್ತದೆ. ನಾ ಅಂತವನೇನಲ್ಲ!