ಬುಧವಾರ, ಸೆಪ್ಟೆಂಬರ್ 24, 2008

ಇಂಗ್ಲೀಷ್ ನಲ್ಲಿ ತೇಜಸ್ವಿ ಸಣ್ಣಕಥೆಗಳ ಪುಸ್ತಕ

ಅಮೆರಿಕೆಯಿಂದ ಅವಲೋಕಿಸುವ ಶ್ರೀ ರವಿ ರಂಜ್ ಅವರು ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆಗಳನ್ನು ಇಂಗ್ಲೀಷಿಗೆ ತಂದಿದ್ದಾರೆ. ಸುಮಾರು ದಿನಗಳ ಹಿಂದೆ ಒಂದೆರಡು ಸ್ಯಾಂಪಲ್ಲುಗಳನ್ನು ತಮ್ಮ ಬ್ಲಾಗ್ ಮೂಲಕ ಓದಿಸಿ ರುಚಿ ತೋರಿಸಿದ್ದ ಅವರು ಈಗ ಆ ಕೆಲಸವನ್ನು ಅಮೆರಿಕದಲ್ಲೇ ಕೂತು ಸದ್ದಿಲ್ಲದೇ ಮಾಡಿಮುಗಿಸಿದ್ದಾರೆ. ಕನ್ನಡ ಸಾಹಿತ್ಯವನ್ನು, ಅದರಲ್ಲೂ ತೇಜಸ್ವಿಯವರ ಅದ್ಭುತ ಸಾಹಿತ್ಯವನ್ನು ಇಂಗ್ಲೀಷ್ ಓದುಗರೆಡೆಗೆ ಮತ್ತು ಜಗತ್ತಿನೆಲ್ಲೆಡೆ ಹರಡಲು ಮಾಡಿರುವ ಅಭಿನಂದನಾರ್ಹ ಕೆಲಸದ ಜೊತೆಗೆ ಮುಂದೆ ಇನ್ನೂ ಇಂತಹ ಹಲವು ಪ್ರಯತ್ನಗಳನ್ನು ಮಾಡುವ ಆಸಕ್ತಿ, ಉತ್ಸಾಹ, ಶಕ್ತಿ ಅವರಲ್ಲಿದೆ.

ಪುಸ್ತಕದ ಹೆಸರು : By the Corner of Indian Western Ghats.

ಸದ್ಯಕ್ಕೆ ಪುಸ್ತಕ http://www.amazon.com/ಈ ಜಾಗದಲ್ಲಿ ಲಭ್ಯವಿದೆ.

ಥ್ಯಾಂಕ್ಯೂ ರವಿ ಸರ್.

ಗುರುವಾರ, ಸೆಪ್ಟೆಂಬರ್ 18, 2008

ಕುಂಕುಮವಿಟ್ಟರೆ ಗೆಟ್ ಔಟ್!

ಕಣ್ಣಿಲ್ಲದವರಿಗೆ ಕಣ್ಣು ಬರತ್ತಂತೆ, ಕಾಲಿಲ್ಲದವರಿಗೆ ಕಾಲು, ದುಡ್ಡಿಲ್ಲದವರಿಗೆ ದುಡ್ಡು, ಅವರು ನೇರ ದೇವರೊಡನೆ ಮಾತಾಡ್ತಾರಂತೆ ಎಂದು ೬ನೇ ತರಗತಿ ಕೋಣೆಯ ತುಂಬಾ ಗುಸುಗುಸು. ’ಅಲ್ಲಿ’ ೪ ದಿನಗಳಿಂದ ನೆಡೆಯುತ್ತಿದೆ. ನಾನು ನಿನ್ನೆ ನೋಡಿಬಂದೆ. ಆಶ್ಚರ್ಯ ಆಯ್ತು ಎಂದರು ಒಂದಿಬ್ಬರು.ನನಗೂ ಹೋಗಿ ನೋಡಬೇಕೆಂಬ ಆಸೆ. ಆದರೆ ಇನ್ನೂ ಸಣ್ಣವನು, ಹೇಗೆ ಹೋಗಲಿ, ಯಾರ ಜೊತೆ ಹೋಗಲಿ ಎಂದು ಪೇಚಿಗಿಟ್ಟಾಗ ಅದೇ ಸ್ಥಿತಿಯಲ್ಲಿದ್ದ ಇನ್ನೆರಡು ಗೆಳೆಯರೂ ಕೂಡಿ ಹೇಗಾದರೂ ಮಾಡಿ ಇವತ್ತು ಹೋಗೋಣ ಎಂದು ತೀರ್ಮಾನಿಸಿಕೊಂಡೆವು. ಸಂಜೆಯ ಹಿಂದಿಕ್ಲಾಸು ಅವತ್ತಿನ ಆ ’ಅದ್ಭುತ’ವನ್ನು ನೋಡಲು ಬಲಿಯಾಗಿತ್ತು.

ದೊಡ್ಡದೊಂದು ಸಭಾಂಗಣ. ಬಹಳ ಜನ ಸೇರಿದ್ದಾರೆ. ಹೇಗೋ ಒಳಗೆ ತೂರಿಕೊಂಡೆವು. ಕಾರ್ಯಕ್ರಮ ಶುರುವಾಯಿತು. ವೇದಿಕೆಯ ಮೇಲೆ ನಾಲ್ಕು ಜನ ವಿದೇಶೀಯರು ಬಂದರು. ಅವರೊಡನೆ ಒಬ್ಬ ಭಾರತೀಯ. ಮಾತು ಶುರುವಾಯಿತು. ಭಾರತೀಯ ಕನ್ನಡದಲ್ಲಿ ವಿದೇಶೀಯರ ಪರಿಚಯ ಮಾಡಿಕೊಡುತ್ತಾ ಇವರು ಅದ್ಯಾವುದೋ ದೇಶದಿಂದ ಬಂದಿದ್ದಾರೆ, ಅವರನ್ನು ದೇವರೇ ಕಳಿಸಿದ್ದಾನೆ ನಮಗೋಸ್ಕರ, ನಮ್ಮ ಉದ್ಧಾರಕ್ಕೋಸ್ಕರ ಎಂದು ಅವರ ಗುಣಗಾನ ಮಾಡಿದ. ಸೇರಿದ್ದ ಜನರೆಲ್ಲರೂ ಅದೇನೋ ಕೂಗಿದರು. ನಮಗೇನೂ ಅರ್ಥವಾಗಲಿಲ್ಲ. ಅನಂತರ ವಿದೇಶೀಯರ ಕೈಗೆ ಮೈಕು ಕೊಡಲಾಯಿತು. ಅವ ಇಂಗ್ಲೀಷಿನಲ್ಲಿ ಏನೋ ಹೇಳಲು ಶುರು ಮಾಡಿದ. ಅದರ ಅನುವಾದವನ್ನು ಕನ್ನಡದಲ್ಲಿ ಮೊದಲು ಮಾತಾಡಿದ ವ್ಯಕ್ತಿ ಮಾಡುತ್ತಿದ್ದ. ಪೂರ್ತಿ ಸಭೆಯಲ್ಲಿ ದಿವ್ಯ ಮೌನ. ನಾವೂ ಉಸಿರು ಬಿಗಿ ಹಿಡಿದು ಕುಳಿತಿದ್ದೆವು.

ಈಗ ಇವರು ದೇವರ ಜೊತೆ ಸಂಪರ್ಕ ಹೊಂದುತ್ತಾರೆ. ನೀವು ಎಲ್ಲರೂ ದೇವರನ್ನು ಪ್ರಾರ್ಥಿಸಿಕೊಳ್ಳಿ. ನಂತರ ಯಾರಿಗೆ ಏನು ತೊಂದರೆ ಇದ್ದರೂ ವೇದಿಕೆಗೆ ಬಂದು ಹೇಳಿಕೊಳ್ಳಬಹುದು ಎಂದರು. ವೇದಿಕೆಯಲ್ಲಿ ಬೆಳಕು ಮಂಕಾಯಿತು. ಆ ನಾಲ್ವರೂ ವಿದೇಶೀಯರಿಂದ ಅದೇನೇನೋ ಹಾವಭಾವ, ಏನೇನೋ ಮಾತುಗಳು.. ಕ್ಷಣ ಕ್ಷಣಕ್ಕೂ ಜನ ಭಾವ ಪರವಶರಾಗುತ್ತಾ ಹೋದರು. ನಮಗೇನೂ ಅರ್ಥವಾಗದಿದ್ದರೂ ಆತಂಕವಾಗುತ್ತಿತ್ತು.

ಅದಾದ ನಂತರ ಜನರ ಕಷ್ಟ ಪರಿಹರಿಸುವ ಕೆಲಸ. ವೇದಿಕೆ ಹಿಂದಿನಿಂದ ಒಬ್ಬನನ್ನು ಕರೆತರಲಾಯಿತು. ಅವನಿಗೆ ಕಣ್ಣು ಕಾಣುತ್ತಿರಲಿಲ್ಲವಂತೆ. ನಿನ್ನೆ ಇದೇ ಕಾರ್ಯಕ್ರಮದಲ್ಲಿ ಅವನಿಗೆ ದೇವರ ಕೃಪೆ ಕೊಡಿಸಿದ್ದರಂತೆ. ಅವನನ್ನು ವಿದೇಶೀಯರು ಏನೋ ಮಾತಾಡಿಸಿದರು. ಮತ್ತೊಬ್ಬ ಕನ್ನಡದಲ್ಲಿ ಅದನ್ನೇ ಕೇಳಿದ. ಈಗ ಕಣ್ಣು ಕಾಣ್ತಾ ಇದೆಯಾ ನಿನಗೆ? ಅವನು ಮಸುಕು ಮಸುಕಾಗಿ ಕಾಣ್ತಾ ಇದೆ ಸ್ವಾಮಿ ಅಂದ.ಆ ವಿದೇಶೀಯರು ಮತ್ತೆ ದೇವರಿನ ಸಂಪರ್ಕಕ್ಕೆ ಹೋದರು. ೨ ನಿಮಿಷಕ್ಕೆ ಮರಳಿ ಬಂದರು. ನಿನಗೆ ಇನ್ನು ಸ್ವಲ್ಪ ದಿನದಲ್ಲಿ ಪೂರ್ತಿ ಕಣ್ಣು ಕಾಣುತ್ತೆ, ದೇವರು ಕೃಪೆ ತೋರಿಸಿದ್ದಾರೆ. ಅವನಿಗೆ ಶರಣು ಹೋಗು ಅಂತ ತಿಳಿಹೇಳಲಾಯಿತು. ವೇದಿಕೆಯಲ್ಲಿದ್ದವರು ಅದೇನೋ ಕೂಗಿದರು. ಜನರೆಲ್ಲರೂ ಜೋರಾಗೀ ಅದನ್ನೇ ಕೂಗಿದರು. ನಂತರ ಕಾಲಿಲ್ಲದವಳು ಬಂದಳು, ಅವಳಿಗೆ ಸ್ವಾಮಿ ಕೃಪೆಯಿಂದ ಕಾಲು ಬಂದಿತ್ತು, ಸೊಂಟ ಬಿದ್ದೋದ ಮುದುಕಪ್ಪನೊಬ್ಬನಿಗೆ ಸೊಂಟ ಬಂದಿತ್ತು, ಬಡವನೊಬ್ಬನಿಗೆ ಹಣ ಸಿಕ್ಕಿತ್ತು, ಇನ್ನೂ ಏನೇನೋ ಪರಮಾಶ್ಚರ್ಯದ ಘಟನೆಗಳು ನಡೆದವು. ಸುಮಾರು ಜನರಿಗೆ ಕುತ್ತಿಗೆಗೆ ಅದೇನೋ ಇದ್ದ ಸರ ತೊಡಿಸಲಾಯಿತು. ದೇವರೊಡನೆ ಸಂಪರ್ಕದಲ್ಲಿದ್ದ ಬಿಳಿಯರು ಅದೆನೇನೋ ಮಾತಾಡುತ್ತಲೇ ಇದ್ದರು, ಇನ್ನೊಬ್ಬ ಕನ್ನಡದಲ್ಲಿ ಹೇಳುತ್ತಲೇ ಇದ್ದ, ಜನ ಭಕ್ತಿಯಿಂದ ಥರಗುಡುತ್ತಲೆ ಇದ್ದರು. ನೀವೆಲ್ಲರೂ ಕೂಡ ದೇವರ ಶರಣು ಬನ್ನಿ, ಸ್ವಾಮಿ ಎಲ್ಲರನ್ನೂ ಕಾಪಾಡುತ್ತಾನೆ, ನಿಮ್ಮ ಸುತ್ತ ಮುತ್ತಲಿನ ಎಲ್ಲಾ ಸೋದರ ಸೋದರಿಯರನ್ನೂ ಸ್ವಾಮಿಯ ಕೃಪೆಗೆ ಪಾತ್ರರನ್ನಾಗಿ ಮಾಡಿ ಎಂದು ಹೇಳಿದರು. ಎಲ್ಲಾ ಆದ ಮೇಲೆ ಏನೋ ಒಂದು ಹಾಡು ಹಾಡಿದರು.. ನಾವು ನಿಧಾನಕ್ಕೆ ಕಳಚಿಕೊಂಡೆವು.

ಮನೆಗೆ ಬಂದು ಯೋಚಿಸುತ್ತಲೇ ಇದ್ದೆ, ಅದು ಹೇಗೆ ಅವರು ದೇವರೊಡನೆ ಸಂಪರ್ಕ ಸಾಧಿಸುತ್ತಾರೆ, ಅದು ಹೇಗೆ ಕೈ, ಕಾಲು ಸರಿಯಾಗಿಬಿಡುತ್ತದೆ, ಕುರುಡು ಕಣ್ಣಿಗೆ ಬೆಳಕು ಬರುತ್ತದೆ, ಅದ್ಯಾಕೆ ವೇದಿಕೆ ಮೇಲೆ ಕೆಲ ಜನರಿಗೆ ಅದೇನೇನೋ ವಿದೇಶಿ ಹೆಸರುಗಳನ್ನಿಡಲಾಯಿತು. ಅಲ್ಲಿರುವ ಜನರ್ಯಾಕೆ ಅದ್ಯಾವುದೋ ಅರ್ಥವಾಗದ ಭಾಷೆಯಲ್ಲಿ ಅದೆನೋ ಜೋರಾಗಿ ಕೂಗುತ್ತಿದ್ದರು? ಏನೊಂದೂ ತಿಳಿಯಲಿಲ್ಲ. ಕದ್ದು ಹೋಗಿದ್ದರಿಂದ ಮನೆಯಲ್ಲಿ ಕೇಳಲೂ ಧೈರ್ಯವಾಗಲಿಲ್ಲ.

*******************

ಮತ್ಯಾವಾಗಲೋ ಕ್ಲಾಸಿನಲ್ಲಿ ಹುಡುಗನೊಬ್ಬ ’ಅವರ’ ದೇವರನ್ನು ಎದ್ವಾ ತದ್ವಾ ಹೊಗಳಿ ಬೈಬಲ್ ಪುಸ್ತಕವೊಂದನ್ನು ಓದಲು ಕೊಟ್ಟಾಗ ಕತೆ ಪುಸ್ತಕದಂತೆ ಅರ್ಥವಾದಷ್ಟು ಓದಿ ವಾಪಸ್ಸು ಕೊಟ್ಟಿದ್ದೆ. ಡ್ರಾಯಿಂಗಿಗೋ, ಕ್ರಾಫ್ಟಿಗೋ ಯಾವುದಕ್ಕೋ ಬರುತ್ತಿದ್ದ ಟೀಚರೊಬ್ಬರು ಕ್ಲಾಸಿನಲ್ಲಿ ಯಾವಾಗಲೂ ಆ ಸ್ವಾಮಿ ನಿಮ್ಮನ್ನು ಕಾಪಾಡ್ತಾನೆ, ನೀವೆಲ್ಲಾ ಅವನನ್ನು ಪ್ರಾರ್ಥಿಸಬೇಕು ಎಂದು "ಶುಭಸಂದೇಶ" ಎಂಬ ಪುಸ್ತಕ ಹಂಚಿದಾಗ ಅದರಲ್ಲಿರುವುದೇನೂ ಗೊತ್ತಾಗದೇ ಬ್ಯಾಗೊಳಗಿಟ್ಟುಕೊಂಡಿದ್ದೆವು.

**********************

ಕೆಲ ವರ್ಷಗಳ ನಂತರ ತಿಳಿಯಿತು. ನಾನು ಆವಾಗ ಹೋಗಿದ್ದ ಆ ಸಭೆಯಲ್ಲಿ ಆ ವಿದೇಶೀಯರು ಸಂಪರ್ಕಿಸಿದ್ದು ಏಸುವನ್ನ, ವೇದಿಕೆ ಮೇಲೆ ಕರೆತರುತ್ತಿದ್ದುದು ಬಡ ಹಿಂದೂಗಳನ್ನ, ಅವರಿಗೆ ತೊಡಿಸುತ್ತಿದ್ದುದು ’ಕ್ರಾಸ್’ ಮತ್ತು ಅಲ್ಲಿ ನೆಡೆಯುತ್ತಿದ್ದ ಕೆಲಸ ಮತಾಂತರ. ಎಲ್ಲರೂ ಎದ್ದು ನಿಂತು ಕೂಗುತ್ತಿದ್ದುದು ’ಅಲ್ಲೆಲೂಯ’....... ’ಆಮೀನ್’ ಎಂದು!


************

ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ, ಇನ್ನಿತರ ಕಡೆಗಳಲ್ಲಿ ನೆಡೆಯುತ್ತಿರುವ ಘಟನೆಗಳನ್ನೆಲ್ಲಾ ಕೇಳಿ ಇವೆಲ್ಲವನ್ನೂ ಹೇಳಿಕೊಳ್ಳಬೇಕೆನಿಸಿತು. ನಮ್ಮೂರಿನಲ್ಲೂ ಮೊದಮೊದಲು ಒಳಾಂಗಣದಲ್ಲಿ ನೆಡೆಯುತ್ತಿದ್ದ ಇಂತಹ ಮತಾಂತರಗಳು ನಂತರ ಮೈದಾನದಲ್ಲಿ ರಾಜಾರೋಷವಾಗಿ ನೆಡೆಯಲಾರಂಭಿಸಿ ವಿರೋಧವನ್ನೆದುರಿಸಿ ಮತ್ತೆ ಒಳಗೆ ಹೋಯಿತು. ಈಗ ಊರಿನ ಹೊರವಲಯದಲ್ಲೆಲ್ಲಾ ಭವ್ಯವಾದ ಚರ್ಚುಗಳು!. ಊರಲ್ಲೆಲ್ಲಾ ಏಸುದಾಸ, ಆರೋಗ್ಯಸ್ವಾಮಿ, ಸ್ಯಾಮುಯೆಲ್, ಥಾಮಸ್, ವಿಕ್ಟರ್, ಮೇರಿಗಳು. ಮೊದಲಿಂದಲೂ ಅವರ ಶಾಲೆಗಳಲ್ಲಿ ಕನ್ನಡ ಮಾತಾಡಿದರೆ ದಂಡ, ಕುಂಕುಮ ಇಟ್ಟಿದ್ದರೆ, ಹೂವು ಮುಡಿದಿದ್ದರೆ ಗೆಟ್ಟೌಟು!.


ಶುಕ್ರವಾರ, ಸೆಪ್ಟೆಂಬರ್ 5, 2008

ಮುದ್ರಿಸುವ ಮುನ್ನ ಯೋಚಿಸಿ

ಈ ಪ್ರಕೃತಿಯನ್ನು, ಪರಿಸರವನ್ನು ನಮಗಾಗಿ ಮತ್ತು ಮುಂದಿನ ಪೀಳಿಗೆಗೆ ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಮರಗಿಡಗಳನ್ನು ಉಳಿಸಿಕೊಳ್ಳಬೇಕು, ನಾಶವಾಗುತ್ತಿರುವ ಕಾಡುಗಳನ್ನು ಕಾಪಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಪ್ರಾಣವಾಯುವಿನಿಂದ ಹಿಡಿದು ಮಳೆಯವರೆಗೆ ಮನುಷ್ಯನನ್ನೂ ಸೇರಿಸಿ ಇಡೀ ಪ್ರಾಣಿಕುಲ ಬದುಕಿರುವುದು ಅದೇ ಮರಗಿಡಗಳ ಸಹಾಯದಿಂದ. ಮರಗಿಡಗಳನ್ನು ಕಡಿಯುವುದು ಎಂದರೆ ನಮಗೆ ಬರಿಯ ಕಳ್ಳಸಾಗಣೆ, ರಸ್ತೆ ಅಗಲೀಕರಣ, ಜಲಾಶಯ, ವಿದ್ಯುತ್ ಸ್ಥಾವರ, ಗಣಿಗಾರಿಕೆ ಇತ್ಯಾದಿಗಳ ಕಡೆಗೇ ಗಮನ ಹರಿಯುತ್ತದೆ. ಆದರೆ ಅವುಗಳ end users ನಾವೇ ಆಗಿದ್ದು ನಮ್ಮ ಪೂರೈಕೆಗಾಗಿಯೇ ಮೇಲೆ ಹೇಳಿರುವ ಎಲ್ಲವೂ ನೆಡೆಯುತ್ತಿವೆ, ಪ್ರತಿನಿತ್ಯ ನಾವು ಬಳಸುವ ಎಷ್ಟೋ ವಸ್ತುಗಳು, ಸೇವೆಗಳು ಕೂಡ ಈ ಮರಗಿಡಗಳಿಂದ ದೊರೆತದ್ದು ಎಂಬುದನ್ನು ಮರೆತುಬಿಡುತ್ತೇವೆ. ಮನೆಯ ಕಿಟಕಿ ಬಾಗಿಲುಗಳಿಂದ ಹಿಡಿದು ಕಛೇರಿಯ ಮೇಜು, ಕಾಗದ ಕೂಡ ಮರದ ಉತ್ಪನ್ನಗಳೇ ಆಗಿವೆ.

ಇದಿಷ್ಟು ಪೀಠಿಕೆಯಾಯಿತು. ಈಗ ವಿಷಯಕ್ಕೆ ಬಂದರೆ, ನಮ್ಮ ಆಫೀಸಿನಲ್ಲಿ ಉದ್ಯೋಗಿಗಳ ಬಳಕೆಗೆಂದು ಮೊದಲ ಮಹಡಿಗೆಲ್ಲಾ ಸೇರಿ ಒಂದು ಪ್ರಿಂಟರ್ ಇದೆ. ಆಫೀಸಿನ ಕೆಲಸಗಳಿಗೆ ಪ್ರಿಂಟಿಂಗ್ ಅವಶ್ಯಕತೆ ಇರುವುದರಿಂದ ಎಲ್ಲಾ ಕಂಪನಿಗಳಲ್ಲೂ ಇರುತ್ತದೆ. ನಾನು ಪ್ರತಿ ದಿನದ ಕೊನೆಯಲ್ಲಿ ಗಮನಿಸುತ್ತೇನೆ. ಏನಿಲ್ಲವೆಂದರೂ ದಿನವೂ ೫೦-೬೦ ಹಾಳೆಗಳು ಪ್ರಿಂಟರ್ ನಲ್ಲಿ ವ್ಯರ್ಥವಾಗಿ ಬಿದ್ದಿರುತ್ತವೆ. ಕೆಲವೊಮ್ಮೆ ಇನ್ನೂ ಜಾಸ್ತಿ! ಇದನ್ನು ಕಂಡಾಗ ವ್ಯಥೆಯಾಗುತ್ತದೆ. ಕೆಲವೊಂದು ಪ್ರಿಂಟ್ ಸರಿಯಾಗಿ ಬಂದಿರುವುದಿಲ್ಲ, ಇನ್ನೂ ಕೆಲವನ್ನು ಯಾರೂ ತೆಗೆದುಕೊಂಡು ಹೋಗುವುದೇ ಇಲ್ಲ. ಇನ್ನೂ ಕೆಲವರು ಅನವಶ್ಯಕವಾಗಿ ಪ್ರಿಂಟ್ ಗಳನ್ನು ಕೊಟ್ಟೂ ಕೊಟ್ಟೂ ವ್ಯರ್ಥ ಮಾಡುತ್ತಿರುತ್ತಾರೆ. ಸಿಕ್ಕಿದ್ದನ್ನೆಲ್ಲಾ ಮುದ್ರಿಸಿಕೊಂಡು ಇಟ್ಟುಕೊಳ್ಳುತ್ತಿರುತ್ತಾರೆ. ಇದು ಕೇವಲ ನನ್ನ ಕಛೇರಿಯ ಕತೆಯೊಂದೇ ಅಲ್ಲ. ಬಹುತೇಕ ಎಲ್ಲಾ ಕಛೇರಿಗಳಲ್ಲೂ ಕೂಡ ಇದೇ ರೀತಿಯ ಪರಿಸ್ಥಿತಿ ಇದೆ. ಹೇಳಲು ಹೋದರೆ ಇದು ಆಫೀಸಿನ ಪ್ರಿಂಟರ್, ಆಫೀಸಿನ ದುಡ್ಡು, ನಮ್ಮದೇನು ಹೋಗುವುದಿದೆ ಎಂದೋ ಅಥವಾ ನೀನೂ ಬೇಕಾದಷ್ಟು ಪ್ರಿಂಟ್ ತೆಗೆದುಕೋ ಎಂಬಂತೆ ಕೇವಲ ದುಡ್ಡಿನ ದೃಷ್ಟಿಯಿಂದ ಪರಿಗಣಿಸುತ್ತಾರೆಯೇ ವಿನಃ ಈ ರೀತಿ ಮಾಡುವುದರಿಂದ ನಮ್ಮ ಪ್ರಕೃತಿಯ ವಿನಾಶಕ್ಕೆ ನಾವೇ ಪರೋಕ್ಷವಾಗಿ ಕಾರಣರಾಗುತ್ತಿದ್ದೇವೆ ಎಂದು ತಿಳಿದುಕೊಳ್ಳುವುದಿಲ್ಲ. ಕೇವಲ ನನ್ನ ಆಫೀಸಿನ ಒಂದು ಪ್ರಿಂಟರಿನಲ್ಲಿಯೇ ದಿನಕ್ಕೆ ಇಷ್ಟು ಕಾಗದ ವ್ಯರ್ಥವಾಗುತ್ತಿದ್ದರೆ ಇನ್ನು ಎಲ್ಲಾ ಆಫೀಸುಗಳಲ್ಲಿ ಸೇರಿ ವ್ಯರ್ಥವಾಗುವ ಪ್ರಮಾಣ ಎಷ್ಟಿರಬಹುದು!

ಕಂಪ್ಯೂಟರ್ ಬಂದಮೇಲೆ ಕಾಗದ ರಹಿತ ಕಛೇರಿಗಳು ಇರುತ್ತವೆ ಎಂಬ ಕಲ್ಪನೆ ತಪ್ಪಾಗಿ ಕಾಗದದ ಬಳಕೆ, ದುರ್ಬಳಕೆ, ವ್ಯರ್ಥ ಮಾಡುವುದು ಜಾಸ್ತಿಯಾಗಿದೆ. ಆದ್ದರಿಂದ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡು ಸ್ವಲ್ಪ ಜವಾಬ್ದಾರಿಯಿಂದ ನೆಡೆದುಕೊಳ್ಳಬೇಕೆಂದು ಎಲ್ಲಾ ಆಫೀಸು ಜೀವಗಳಲ್ಲಿ ವಿನಂತಿ.

*ಕಛೇರಿಯ ಕೆಲಸಗಳಿಗೆ ಅಥವಾ ವೈಯಕ್ತಿಕ ಕೆಲಸಗಳಿಗೆ ನಿಜವಾದ ಅಗತ್ಯವಿದ್ದಾಗ, ಅಗತ್ಯವಿರುವಷ್ಟೆ ಪ್ರಿಂಟ್ ಮಾಡಿ.
ಹೇಗೆ ಕಾಣುತ್ತದೆ ಎಂದು ನೋಡಲು ಒಂದು ಪ್ರಿಂಟ್, ತಪ್ಪು ತಿದ್ದಿದ ಮೇಲೆ ಒಂದು ಪ್ರಿಂಟ್, ಫೈನಲ್ ಕಾಪಿ ಎಂದು ಮತ್ತೊಂದು ಪ್ರಿಂಟ್ ಕೊಡುವ ಬದಲು ಸಾಫ್ಟ್ ಕಾಪಿಯಲ್ಲಿಯೇ ಎಲ್ಲವನ್ನೂ ಫೈನಲೈಸ್ ಮಾಡಿಕೊಂಡು ನಂತರ ಮುದ್ರಿಸಿ.

*ಯಾವ ಯಾವ ಪುಟಗಳು ಬೇಕಾಗಿವೆ ಎಂದು ಮೊದಲೇ ನೋಡಿಕೊಂಡು ಅಷ್ಟನ್ನು ಮಾತ್ರ ಮುದ್ರಿಸಿಕೊಳ್ಳಿ. ಇಡೀ ಡಾಕ್ಯುಮೆಂಟನ್ನು ಮುದ್ರಿಸಿ ನಂತರ ಬೇಕಾದ ಪುಟಗಳನ್ನು ಮಾತ್ರ ಆರಿಸಿ ಇಟ್ಟುಕೊಳ್ಳುವ ಅಭ್ಯಾಸ ಬೇಡ.

*ಪ್ರಿಂಟ್ ಆಪ್ಷನ್ ಗಳನ್ನ ಸರಿಯಾಗಿ ತಿಳಿದುಕೊಳ್ಳಿ. ಮುದ್ರಿಸುವ ಮೊದಲು ಪ್ರಿಂಟರ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕೊಟ್ಟು, ಪ್ರಿಂಟ್ ಮುನ್ನೋಟವನ್ನು ನೋಡಿ ಖಾತ್ರಿಯಾದ ನಂತರವೇ ಪ್ರಿಂಟ್ ಕೊಡಿ. ಇದರಿಂದ ತಪ್ಪು ಪ್ರಿಂಟ್ ಗಳು ಬಂದು ವ್ಯರ್ಥವಾಗುವುದಿಲ್ಲ.

*ಸುಮ್ಮನೇ ರೆಫರೆನ್ಸ್ ಡಾಕ್ಯುಮೆಂಟ್ ಗಳನ್ನು ಹಾಗೂ ಡ್ರಾಫ್ಟ್ ಕಾಪಿಗಳನ್ನು ಪ್ರಿಂಟ್ ತೆಗೆದುಕೊಳ್ಳುವಾಗ ಹಾಳೆಯ ಎರಡೂ ಬದಿಯಲ್ಲಿ ಮುದ್ರಿಸಿ. ಒಂದೇ ಬದಿಯಲ್ಲಿದ್ದರೆ ನೋಡುವುದಕ್ಕೆ ಚೆನ್ನಾಗಿರುತ್ತದೆ, ಓದುವುದು ಅನುಕೂಲ ಇತ್ಯಾದಿ ಶೋಕಿಗಳು ಬೇಡ. ಒಂದು ಬದಿ ಬಳಸಿದ ಹಾಳೆಯಲ್ಲಿ ಪ್ರಿಂಟ್ ತೆಗೆದುಕೊಂಡರೆ ಇನ್ನೂ ಒಳ್ಳೆಯದು.

*ಎಷ್ಟು ಕಾಪಿಗಳು ಬೇಕೋ ಅಷ್ಟನ್ನು ಮಾತ್ರ ಮುದ್ರಿಸಿ. ಸುಮ್ಮನೇ ಯಾವುದಕ್ಕೂ ಇನ್ನೊಂದೆರಡು ಜಾಸ್ತಿ ಕಾಪಿಗಳು ಇರಲಿ ಎಂಬ ಧೋರಣೆ ಬೇಡ.

*ಹೇಗೂ ಉಚಿತ ಎಂದು ಸಿಕ್ಕಿದ್ದೆಲ್ಲಾ ಜೋಕುಗಳು, ಚಿತ್ರಗಳು, ಮೇಲ್ ಗಳು, ಡಾಕ್ಯುಮೆಂಟ್ ಗಳು, ಇ-ಬುಕ್ಸ್ ಎಲ್ಲವನ್ನೂ ಪ್ರಿಂಟ್ ತೆಗೆದಿಟ್ಟುಕೊಳ್ಳುವ ಮನಸ್ಥಿತಿ ಬಿಡಿ.

*ಕೇವಲ ಕಛೇರಿ ಒಳಗಿನ ಬಳಕೆಗೆ ಬೇಕಿದ್ದಾಗ, ನೆಡೆಯುತ್ತದೆ ಎಂದಿದ್ದಾಗ ಒಂದು ಬದಿ ಪ್ರಿಂಟ್ ಆಗಿರುವ ಹಾಳೆಗಳನ್ನು ಬಳಸಿ ಇನ್ನೊಂದು ಖಾಲಿ ಬದಿಯಲ್ಲಿ ಮುದ್ರಿಸಿಕೊಳ್ಳಿ. ಉದಾಹರಣೆಗೆ, ಡ್ರಾಯಿಂಗ್ ಗಳ ಕ್ವಾಲಿಟ್ ಚೆಕಿಂಗ್, ಡಾಕ್ಯುಮೆಂಟ್ ಗಳ/ಪತ್ರಗಳ ತಿದ್ದುವಿಕೆ ಮುಂತಾದವುಗಳಿಗೆ.

*ಅಗತ್ಯಕ್ಕಿಂತ ದೊಡ್ಡ ಫಾಂಟ್ ಗಳಿದ್ದಾಗ ಅದರ ಗಾತ್ರವನ್ನು ಕಡಿಮೆ ಮಾಡಿ ಮುದ್ರಿಸಿದರೆ ಕಡಿಮೆ ಹಾಳೆಗಳು ಸಾಕಾಗುತ್ತವೆ.

*ಪ್ರಿಂಟ್ ಡಾಕ್ಯುಮೆಂಟೇಶನ್ ಬದಲು ಎಲೆಕ್ಟ್ರಾನಿಕ್ ಡಾಕ್ಯುಮೆಂಟೇಷನ್ ಮಾಡಿ. ಅಂದರೆ ಆಫೀಸಿನ ಕೆಲಸದ ಕಮ್ಯುನಿಕೇಶನ್ ಮೇಲ್ ಗಳು, ಡಾಕ್ಯುಮೆಂಟ್ಸ್ ಮುಂತಾದವುಗಳ ಸಾಫ್ಟ್ ಕಾಪಿಯನ್ನು ಉಳಿಸಿಟ್ಟುಕೊಂಡು ಬಳಸಿಕೊಳ್ಳಿ.

*ಫೋಟೋಕಾಪಿ ಮತ್ತು ಸ್ಕಾನರ್ ಗಳನ್ನು ಬಳಸುವಾಗಲೂ ಅದರ ಆಪ್ಷನ್ ಮತ್ತು ಸೆಟ್ಟಿಂಗ್ ಗಳನ್ನು ಸರಿಯಾಗಿ ತಿಳಿದುಕೊಂಡು, ಅಗತ್ಯವಿರುವಷ್ಟೇ ಕಾಪಿಗಳನ್ನು ತೆಗೆದುಕೊಳ್ಳಿ.

ಇದಿಷ್ಟೂ ಕೇವಲ ಆಫೀಸುಗಳ ಪ್ರಿಂಟ್ ಕಾಗದದ ಬಗ್ಗೆ ಮಾತ್ರ. ಇದರ ಜೊತೆಗೆ ಆಫೀಸಿನಲ್ಲೇ ಬೇರೆ ಬೇರೆ ರೀತಿಯಲ್ಲಾಗುವ ಮತ್ತು ಶಾಲೆ ಇನ್ನಿತರ ಕಡೆಗಳಲ್ಲಾಗುವ ಕಾಗದದ ದುಂದುಬಳಕೆ ಬಗ್ಗೆ ಹೇಳಲು ಹೋದರೆ ಅದೇ ದೊಡ್ಡ ಕತೆಯಾಗುತ್ತದೆ.

ನೆನಪಿರಲಿ, ಕಾಗದವನ್ನು ತಯಾರಿಸಲು ಬೇಕಾಗುವ ಮೂಲವಸ್ತು ಮರ. ಕಾಗದ ತಯಾರಿಕೆಗಾಗಿಯೇ ಎಷ್ಟೆಲ್ಲಾ ಮರಗಳು ಕಡಿಯಲ್ಪಡುತ್ತವೆ ಮತ್ತು ಎಷ್ಟು ಶಕ್ತಿ, ಸಂಪನ್ಮೂಲಗಳು ವಿನಿಯೋಗಿಸಲ್ಪಡುತ್ತದೆ. ಒಳ್ಳೆ ಗುಣಮಟ್ಟದ ಒಂದು ಟನ್ ಪ್ರಿಂಟ್ ಕಾಗದ ಉತ್ಪಾದನೆಗೆ ಸುಮಾರು ೧೭ ರಿಂದ ೨೪ ಮರಗಳು ಬೇಕು. ಇಂತಿದ್ದ ಮೇಲೆ ಕಾಗದದ ಬಳಕೆಯನ್ನು ಸರಿಯಾಗಿ ಮಾಡಿ ವ್ಯರ್ಥವಾಗುವುದನ್ನು ತಪ್ಪಿಸಿ ಮರಗಿಡಗಳನ್ನು, ಪರಿಸರವನ್ನು ಉಳಿಸುವುದು ನೇರವಾಗಿ ನಮ್ಮ ಮೇಲೆ ಇದೆ.

*********

ನಾನು ಹೇಳಿದಾಕ್ಷಣ ಎಲ್ಲಾ ಬದಲಾಗುತ್ತದೆ ಎಂಬ ನಂಬಿಕೆಯಂತೂ ಇಲ್ಲದಿದ್ದರೂ ಇದನ್ನು ಓದಿ ಒಂದಿಷ್ಟು ಜನರಾದರೂ ಎಚ್ಚೆತ್ತುಕೊಂಡರೆ ಸಾರ್ಥಕವಾಗುತ್ತದೆ ಎಂಬ ಹಳೇ ಡೈಲಾಗಂತೂ ಮನಸ್ಸಿನಲ್ಲಿದೆ. :)



8th Sep thatskannada.comನಲ್ಲಿ: ಕಛೇರಿಗಳಲ್ಲಿ ಮರಕಡಿಯುವುದನ್ನು ನಿಲ್ಲಿಸಿ

ಸೋಮವಾರ, ಸೆಪ್ಟೆಂಬರ್ 1, 2008

ಫೋಟೋ ಟೆರರಿಸಂ !


ಮೊನ್ನೆ ಮೊನ್ನೆ ಗೆಳೆಯನೊಬ್ಬನ ಮದುವೆಯಿತ್ತು. ಮಹರಾಯ ಹತ್ತಿರದವನಾದ್ದರಿಂದ ತಾಳಿ ಕಟ್ಟಬೇಕಾದರೆ ನಾವೆಲ್ಲಾ ಹಾಜರಿರಬೇಕಿತ್ತು. ಮೊದಲೇ ತಡವಾಗಿದ್ದರಿಂದ ಎದ್ದೆನೋ ಬಿದ್ದೆನೋ ಅಂತ ೧೫ ಕಿ.ಮಿ. ಬೈಕೋಡಿಸಿಕೊಂಡು ಹೋಗಿದ್ದಾಯಿತು. ಎಲ್ಲರಿಗೂ ಹಲ್ಲು ಕಿರಿದು ಸುಧಾರಿಸಿಕೊಂಡು ಆದಮೇಲೆ ಗಟ್ಟಿ ಮೇಳ ಶುರುವಾಗುತ್ತಿದ್ದಂತೇ ಅದೆಲ್ಲಿದ್ದರೋ ಈ ಫೋಟೋ ಗ್ರಾಫರುಗಳು ೩-೪ ಜನ ಬಂದು ಮಂಟಪದ ಮುಂದೆ ನಿಂತು ಫೋಟೋ ತೆಗೆಯಲು ಶುರುಮಾಡಿಬಿಟ್ಟರು. ಜೊತೆಗೆ ಈಗ ತಮ್ಮ ಡಿಜಿಟಲ್ ಕ್ಯಾಮರಾಗಳು, ಸೆಲ್ ಫೋನುಗಳಲ್ಲಿ ಫೋಟೋ ತೆಗೆದುಕೊಳ್ಳುವ ಪುಕ್ಸಟ್ಟೆ ಫೋಟೋಗ್ರಾಫರುಗಳು, ಚಿಳ್ಳಿಪಿಳ್ಳೆಗಳು ಎಲ್ಲಾ ಸೇರಿಕೊಂಡು ಸುತ್ತಲೂ ಕೋಟೆಕಟ್ಟಿ ತಾಳಿಕಟ್ಟುವುದನ್ನೇ ನೋಡದಂತೆ ಮಾಡಿಬಿಟ್ಟರು. ಇದ್ದುದರಲ್ಲೇ ಅಂದಾಜು ಮಾಡಿ ಅಕ್ಷತೆ ಕಾಳುಗಳನ್ನು ಗುರಿ ಇಟ್ಟು ಎಸೆದು ಸಮಾಧಾನ ಪಟ್ಟಿದ್ದಾಯಿತು.



ಹಿಂದಿನ ವಾರದಲ್ಲಿ ಚೇತನಾ ತೀರ್ಥಹಳ್ಳಿಯವರ ಭಾಮಿನಿ ಷಟ್ಪದಿ ಪುಸ್ತಕದ ಬಿಡುಗಡೆಯಿತ್ತು. ಮೊದ ಮೊದಲು ಎಲ್ಲಾ ಚೆನ್ನಾಗಿ ನೆಡೆಯಿತು. ಆದರೆ ಈಗ ಪುಸ್ತಕ ಬಿಡುಗಡೆ ಎಂದು ಘೋಷಿಸಿದ್ದೇ ತಡ ೮-೧೦ ಫೋಟೊಗ್ರಾಫರು ಗಳು ವೇದಿಕೆಯನ್ನು ಯಾವ ಪರಿ ಸುತ್ತುವರೆದು ಬಿಟ್ಟರೆಂದರೆ ಅದ್ಯಾರು ಪುಸ್ತಕ ಬಿಡುಗಡೆ ಮಾಡಿದರೋ, ಅಲ್ಲಿ ಅದೇನು ಆಯಿತೋ ಒಂದೂ ತಿಳಿಯಲಿಲ್ಲ. ಸುಮಾರು ಒಂದೆರಡು ನಿಮಿಷ ನೆಡೆದ ಸತತ ಫೋಟೋ ಫ್ಲಾಷುಗಳಿಗೆ ವೇದಿಕೆಯಲ್ಲಿದ್ದವರೂ ಹಿಂಸೆ ಪಡುತ್ತಿದ್ದುದು ಕಂಡುಬಂತು. ಪುಸ್ತಕ ಬಿಡುಗಡೆ ನೋಡಲು ಖುದ್ಧಾಗಿ ಹೋದವರು ಪುಸ್ತಕ ಬಿಡುಗಡೆ ಆಯಿತು ಎಂದು ಕೆಳಗೆ ಕುಳಿತುಕೊಂಡು ತಿಳಿದುಕೊಳ್ಳಬೇಕಾಯಿತು. ಎಂತದೂ ಕಾಣ್ತನೇ ಇಲ್ಯಲೇ, ಸಾಯ್ಲಿ ಅಂತ ಶ್ರೀನಿಧಿ ಗೊಣಗಿದ. ನಾಳೆ ಫೋಟೋ ಸಿಗ್ತು ಅದ್ರಲ್ಲೇ ನೋಡ್ಕೋ ಅಂತ ನಾನಂದೆ. ಸುಶ್ರುತ ಹೌದು ಅಂತ ತಲೆ ಅಲ್ಲಾಡಿಸಿದ. ನನ್ನ ಪಕ್ಕದಲ್ಲಿ ಕೂತಿದ್ದ ಬಿಳಿಗಡ್ಡದ ವಯಸ್ಸಾದವರೊಬ್ಬರು ಹ್ಹ ಹ್ಹ ಹ್ಹ ಎಂದು ನಕ್ಕರು. ಬಹುಶಃ ಇಂತದ್ದು ಬಹಳ ಅನುಭವ ಆಗಿದೆಯೆನೋ ಅವರಿಗೆ ಅವರ ಸರ್ವೀಸಿನಲ್ಲಿ :)



ಮೇ ಫವರ್ ಮೀಡಿಯಾ ಹೌಸ್ ಸಂಸ್ಥೆಯಿಂದ ಫಿಶ್ ಮಾರ್ಕೆಟ್ ಎಂಬ ಒಳ್ಳೆಯ ಕಾರ್ಯಕ್ರಮವೊಂದು ನೆಡೆಯುತ್ತದೆ. ಖ್ಯಾತ ಕವಿ, ಬರಹಗಾರ, ಕಲಾವಿದ ಯಾರಾದರೊಬ್ಬರ ಜೊತೆ ನಮ್ಮ ಒಂದು ಸಂಜೆಯನ್ನು ಸುಂದರವಾಗಿಸುವ ಕಾರ್ಯಕ್ರಮವದು. ಮೊನ್ನೆ ಶನಿವಾರ ಅದಕ್ಕೂ ಹೋಗಿದ್ದೆ. ದುಂಡಿರಾಜ್ ಬಂದಿದ್ದರು. ಅಬ್ಬಾ, ಕಾರ್ಯಕ್ರಮ ಶುರುವಾದಾಗಿಂದ ಮೂರು ಜನ ಹುಡುಗಿಯರು ಅದೆಷ್ಟು ಫೋಟೋಗಳನ್ನು ತೆಗೆದರು ಎಂಬುದಕ್ಕೆ ಲೆಕ್ಕವಿಲ್ಲ. ಹುಡುಗಿಯರೇನೋ ಚೆನ್ನಾಗಿಯೇ ಇದ್ದರು. ಹಾಗಂತ ಎಷ್ಟು ಅಂತ ಫೋಸು ಕೊಡೋದು ನಾವು. ದುಂಡಿರಾಜರ ಹನಿಗವನಗಳನ್ನು ಕೇಳಿ ಕೆಟ್ಟ ಕೆಟ್ಟದಾಗಿ ಬಿದ್ದೂ ಬಿದ್ದೂ ನಗುತ್ತಿದ್ವಿ. ಮೊದ ಮೊದಲು ಫೋಟೋ ತೆಗೆಯುವಾಗ ಕೂತ ಭಂಗಿ ಸರಿಮಾಡಿಕೊಂಡು, ಕೂದಲು ಸರಿಮಾಡಿಕೊಂಡು ಫೋಸು ಕೊಟ್ಟರೂ ನಂತರ ಫೋಟೋ ಹುಡುಗಿಯರ ಓಡಾಟದ ಪರಿ ನೋಡಿ ಭಯಪಟ್ಟು ಹೆಂಗಾದ್ರೂ ತೆಕ್ಕೊಳ್ಲಿ ಅಂತ ಸುಮ್ಮನಿರಬೇಕಾಯಿತು. ದುಂಡೀರಾಜರ ಚುಟುಕಗಳಿಗಿಂತ ಫೋಟೋ ಪ್ಲ್ಯಾಷ್ ಗಳೇ ಇನ್ನೂ ತಲೆಯಲ್ಲಿ, ಕಣ್ಣಲ್ಲಿ....


*******************

ಅಲ್ಲ,ಇದೆಲ್ಲಾ ಮಾಡುವುದು ತಪ್ಪೂ ಅಂತ ಅಲ್ಲ. ನೆನಪು, ಪ್ರಚಾರ, ಮಾರ್ಕೆಟಿಂಗ್ ಕಾರಣಕ್ಕಾಗಿ ಇದೆಲ್ಲಾ ಮಾಡಬೇಕಾಗುತ್ತದೆ ನಿಜ. ಹಾಗಂತ ನಮ್ಮ ತೊಂದರೆ ನಾವು ಹೇಳಿಕೊಳ್ಳದೇ ಇರೋಕಾಗುತ್ತದಾ? :-)

ಫೋಟೋ ಕೃಪೆ: www.illustratedphotography.com