ಶನಿವಾರ, ಅಕ್ಟೋಬರ್ 24, 2020

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ - ರೆಸ್ಯುಮೆ ಬರೆಯುವುದು/ಕಳಿಸುವುದು ಕಲಿಯಿರಿ

19ಅಕ್ಟೋಬರ್2020 'ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ: ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ





ನಾನು ಆಗಾಗ ನಮ್ಮ ಕಂಪನಿಯಲ್ಲಿ ಅಥವಾ ಬೇರೆಡೆ ಗೊತ್ತಿರುವಲ್ಲಿ ಉದ್ಯೋಗಾವಕಾಶಗಳಿದ್ದಲ್ಲಿ ಆ ಮಾಹಿತಿ ಹಂಚಿಕೊಂಡು ಆಸಕ್ತರು ರೆಸ್ಯೂಮೆ ಕಳಿಸಲು ಹೇಳುತ್ತಿರುತ್ತೇನೆ. ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರಯೋಜನವಾಗಲಿ ಮತ್ತು ಯೋಗ್ಯ ಅಭ್ಯರ್ಥಿಗಳು ಸಿಗಲಿ ಎಂಬುದು ಅದರ ಉದ್ದೇಶ. ಇಂತಹ ಮಾಹಿತಿ ಹಂಚಿಕೊಂಡಾಗ ಅದಕ್ಕೆ ಬರುವ ಬಹಳಷ್ಟು ಇಮೇಲುಗಳು ನಿರಾಸೆಗೊಳಿಸಿಬಿಡುತ್ತದೆ. ಬಹುತೇಕ ಇಮೇಲುಗಳು ಯಾವುದೇ ವಿವರಗಳಿಲ್ಲದೇ, ಯಾವ ಹುದ್ದೆಗೆ ಅರ್ಜಿಹಾಕುತ್ತಿದ್ದೇವೆ ಎಂಬ ಮಾಹಿತಿ ಇಲ್ಲದೇ ಸುಮ್ಮನೇ ಫಾರ್ವರ್ಡ್ ಮಾಡಿದಂತವುಗಳಾಗಿರುತ್ತವೆ. ಅದರಲ್ಲಿ ಬಂದ ರೆಸ್ಯುಮೆಗಳು ಸಹ ಉದ್ಯೋಗಕ್ಕೆ ತಕ್ಕ ಅನುಭವವನ್ನು, ಸ್ಕಿಲ್ ಗಳನ್ನು ಹೊಂದಿರುವುದಿಲ್ಲ. ಒಂದು ವ್ಯವಸ್ಥಿತವಾಗಿ ಅಗತ್ಯಕ್ಕೆ ತಕ್ಕಂತೆ ಹಲವಾರು ರೆಸ್ಯುಮೆಗಳು ಬರೆಯಲ್ಪಟ್ಟಿರುವುದಿಲ್ಲ. ಕಾರ್ಪೋರೇಟ್ ವಲಯದ ಹಲವಾರು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡವನಾಗಿ ಮತ್ತು ಉದ್ಯೋಗಾಕಾಂಕ್ಷಿಯಾಗಿಯೂ ಸಹ ಸುಮಾರು ಹದಿನೈದು ವರ್ಷಗಳ ಅನುಭವದ ಮಾತಲ್ಲಿ ಹೇಳುವುದಾದರೆ ನಮ್ಮ ಕರ್ನಾಟಕದ ಅಭ್ಯರ್ಥಿಗಳು ಅದರಲ್ಲೂ ವಿಶೇಷವಾಗಿ ಹೊಸಬರು, ಜೂನಿಯರ್ ಗಳು, ಕಡಿಮೆ ಅನುಭವವಿರುವರು ತಮ್ಮ ಬಯೊಡೇಟಾ ಅಥವಾ ರೆಸ್ಯುಮೆಯನ್ನು ಬರೆಯುವ ಹಾಗೂ ಉದ್ಯೋಗ ಅರ್ಜಿ ಸಲ್ಲಿಸುವ ಒಂದು ಮೂಲಭೂತ ತಿಳುವಳಿಕೆಯನ್ನು ಹೊಂದುವ ಮತ್ತು ಆ ಒಂದು ಸೌಜನ್ಯವನ್ನು ಕಲಿಯುವ ಅವಶ್ಯಕತೆ ಇದೆ ಅನಿಸುತ್ತದೆ.

ಕೊರೊನಾನಂತರದ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿದ್ದಂತೆ ಈಗ ನೇಮಕಾತಿ ಪ್ರಕ್ರಿಯೆಗಳೂ ಹಲವೆಡೆ ಶುರುವಾಗಿವೆ. ಇಂತಹ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳು ತಮ್ಮ ರೆಸ್ಯುಮೆಯನ್ನು ಉತ್ತಮವಾಗಿ ತಯಾರುಮಾಡಿಕೊಂಡು ಸೂಕ್ತವಾಗಿ ಸಲ್ಲಿಸುವುದು ಅತ್ಯಂತ ಮುಖ್ಯ. ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ರೆಸ್ಯೂಮಲ್ಲಿರುವ ಮಾಹಿತಿಗಳ ಆಧಾರದಲ್ಲಿ ನಿಮ್ಮನ್ನು ಸಂದರ್ಶನಕ್ಕೆ ಪರಿಗಣಿಸಬೇಡವೋ ಇಲ್ಲವೋ ಎಂಬ ತೀರ್ಮಾನವಾಗುತ್ತದೆ. ರೆಸ್ಯುಮೆಯನ್ನು ನೋಡುವವರಿಗೆ ನೀವೊಬ್ಬ ಅಪರಿಚಿತ ವ್ಯಕ್ತಿಯಾಗಿದ್ದು ನಿಮ್ಮ ಮೊದಲ ಇಂಪ್ರೆಶನ್ ತಲುಪುವುದು ಆ ರೆಸ್ಯುಮೆ ಮೂಲಕ ಮಾತ್ರ.


ಹೇಗಿರಬೇಕು ರೆಸ್ಯುಮೆ?

ರೆಸ್ಯುಮೆ ಅನ್ನುವುದು ನಮ್ಮನ್ನು ನಾವು ಪರಿಚಯಿಸಿಕೊಳ್ಳುವ ಮತ್ತು ನಮ್ಮ ಕಲಿಕೆಯನ್ನು, ಸಾಮರ್ಥ್ಯವನ್ನು, ಅನುಭವವನ್ನು ಕ್ಲುಪ್ತವಾಗಿ ವಿವರಿಸಿಕೊಳ್ಳುವ ಒಂದು ವಿಧಾನ. ವಿವಿಧ ಕ್ಷೇತ್ರಗಳಲ್ಲಿ, ಹಂತಗಳಲ್ಲಿ, ಅನುಭವದ ಮಟ್ಟದಲ್ಲಿ ರೆಸ್ಯುಮೆಗಳನ್ನು ವಿವಿಧ ರೀತಿ ತಯಾರು ಮಾಡಬೇಕಾಗುತ್ತದಾದರೂ ಅದರ ಮೂಲಭೂತ ರಚನೆ ಬಹುತೇಕ ಒಂದೇ ರೀತಿ ಇರುತ್ತದೆ. ರೆಸ್ಯುಮೆ ಒಂದು ಸುದೀರ್ಘ ಕಡತದಂತಿರದೇ ಚಿಕ್ಕಚೊಕ್ಕದಾಗಿ ಇರುವುದು ಅಗತ್ಯ. ಕೆಲವೇ ನಿಮಿಷಗಳಲ್ಲಿ ರೆಸ್ಯುಮೆಯನ್ನು ನೋಡಿ ಮುಗಿಸುವಂತಿರಬೇಕು ಮತ್ತು ಅಷ್ಟರಲ್ಲಿ ನಿಮ್ಮ ಸ್ಥೂಲ ಪರಿಚಯ ಆಗಬೇಕು. ನಿಮ್ಮ ರೆಸ್ಯುಮೆ ಈ ಅಂಶಗಳನ್ನು ಒಳಗೊಂಡಿರಲಿ. ವಿಧ್ಯಾಭ್ಯಾಸ ಮಾಹಿತಿ, ತೇರ್ಗಡೆ ವರ್ಷ, ಶೇಕಡಾ ಅಂಕಗಳು ಇತ್ಯಾದಿ. ನೀವು ಮಾಡಿರುವ ಇತರ ಸಂಬಂಧಿತ ಕೋರ್ಸುಗಳು, ನೀವು ಕಲಿತಿರುವ ಇತರ ಸ್ಕಿಲ್ ಗಳು, ನಿಮಗೆ ಬಳಸಲು ಗೊತ್ತಿರುವ, ಬಳಸುತ್ತಿರುವ ವಿವಿಧ ಕಂಪ್ಯೂಟರ್ ಅಥವಾ ಇತರ ಸಂಬಂಧಿತ ಅಪ್ಲಿಕೇಶನ್ ಗಳು, ತಂತ್ರಾಂಶಗಳ ಮಾಹಿತಿಗಳನ್ನು ಪಾಯಿಂಟುಗಳಾಗಿ ನಮೂದಿಸಿ. ಈವರೆಗೆ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಕಂಪನಿಗಳ ಬಗ್ಗೆ ಕಾಲಾನುಕ್ರಮವಾಗಿ ಮಾಹಿತಿ, ಅಲ್ಲಿ ಯಾವ ಇಸವಿಯಿಂದ ಯಾವ ಇಸವಿವರೆಗೆ ಕೆಲಸ ಮಾಡಿದ್ದೀರಿ, ಅದರಲ್ಲಿ ನಿಮ್ಮ ಹುದ್ದೆ, ಜವಾಬ್ದಾರಿಗಳು ಮತ್ತು ಅದರಲ್ಲಿ ನಿಮ್ಮ ಕೆಲಸಗಳ, ನಿಭಾಯಿಸುತ್ತಿರುವ ಪ್ರಾಜೆಕ್ಟುಗಳ ಸಂಕ್ಷಿಪ್ತ ವಿವರಣೆ. ಆನಂತರ ನಿಮ್ಮ ಹವ್ಯಾಸಗಳು, ವೈಯಕ್ತಿಕ ಮಾಹಿತಿಗಳು, ಇತರ ಆಸಕ್ತಿಕರ ವಿಷಯ ಇತ್ಯಾದಿಗಳನ್ನು ಸೂಕ್ತವಾಗಿ ಅಗತ್ಯಕ್ಕೆ ತಕ್ಕಂತೆ ಹಾಕಬೇಕಾಗುತ್ತದೆ. ಇದಿಷ್ಟು ಒಂದು ರೆಸ್ಯುಮೆ ಹೊಂದಿರಬೇಕಾದ ಮೂಲಭೂತ ಅಂಶಗಳು. ಇದರಲ್ಲಿ ಅನುಭವದ ಮಟ್ಟಕ್ಕೆ ತಕ್ಕಂತೆ ವಿಭಾಗಗಳು ಮೇಲೆ ಕೆಳಗೆ ಆಗಬಹುದು. ಉದಾಹರಣೆಗೆ ಹೊಸಬನೊಬ್ಬ ತನ್ನ ವಿಧ್ಯಾಭ್ಯಾಸ ಹಾಗೂ ಕಲಿತಿರುವ ಇತರ ಸ್ಕಿಲ್ ಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟರೆ ಅನುಭವಿಗಳು ತಮ್ಮ ಇಷ್ಟು ವರ್ಷಗಳ ಅನುಭವದ ಸಾರಾಂಶವನ್ನು ಮೊದಲ ವಿಭಾಗದಲ್ಲಿ ಹಾಕಬಹುದು. ಈ ಎಲ್ಲಾ ಮಾಹಿತಿಗಳೂ ಸಹ ಪ್ಯಾರಾಗಳ ರೀತಿ ಬರೆಯದೇ ಸಾಧ್ಯವಾದಷ್ಟೂ ಪಾಯಿಂಟುಗಳ ರೀತಿಯಲ್ಲಿ ಪ್ರಸ್ತುತಿಪಡಿಸುವುದು ಉತ್ತಮ ರೆಸ್ಯುಮೆಯ ಲಕ್ಷಣ.

ರೆಸ್ಯುಮೆ ಕಳಿಸುವ ಹಂತ:

ಒಂದು ಉದ್ಯೋಗಾವಕಾಶದ ಜಾಹೀರಾತು ಅಥವಾ ಮಾಹಿತಿಯು ಕಂಡಾಗ ಮೊಟ್ಟಮೊದಲು ನೋಡಬೇಕಾದುದು ಯಾವ ಹುದ್ದೆಗಳು ಇವೆ ಎಂಬುದು. ಉದಾಹರಣೆಗೆ ಫೈನಾನ್ಸ್ ಕ್ಷೇತ್ರದಲ್ಲಿ ಉದ್ಯೋಗ ಇದೆ ಎಂದಾಗ ಫೈನಾನ್ಸ್ ಕ್ಷೇತ್ರದ ಎಲ್ಲರೂ ಅರ್ಜಿ ಹಾಕಲಾಗುವುದಿಲ್ಲ. ಅದರಲ್ಲಿ ನಿರ್ದಿಷ್ಟ ರೀತಿಯ ಹುದ್ದೆಗಳನ್ನು ಕೇಳಿರುತ್ತಾರೆ. ಹಾಗಾಗಿ ಹುದ್ದೆ ಮತ್ತು ಅಗತ್ಯವಾದ ವಿವರಣೆಗಳನ್ನು ಮೊದಲು ನೋಡಿಕೊಳ್ಳಬೇಕು. ಅದು ನಿಮಗೆ ಸಂಪೂರ್ಣವಾಗಿ ಅಲ್ಲದಿದ್ದರೂ ಮುಖ್ಯವಾಗಿ ಬೇಕಾದಷ್ಟು ನಿಮ್ಮ ಅನುಭವಕ್ಕೆ, ಪರಿಣಿತಿಗೆ ಹೊಂದಿಕೆಯಾಗುತ್ತಿದ್ದರೆ ಮಾತ್ರ ಅರ್ಜಿಸಲ್ಲಿಸಬೇಕು. ಈಗ ರೆಸ್ಯುಮೆಗಳನ್ನು ಕಳಿಸುವುದು ಇಮೇಲುಗಳ ಮುಖಾಂತರವಾದ್ದರಿಂದ, ಆ ಇಮೇಲುಗಳನ್ನು ಹೇಗೆ ಕಳಿಸುತ್ತೀರಿ ಎಂಬುದೂ ಬಹಳ ಮುಖ್ಯ. ಇಮೇಲಿನ ಸಬ್ಜೆಕ್ಟ್ ಲೈನಿನಲ್ಲಿ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಿ ಎಂಬುದನ್ನು ಬರೆಯಿರಿ. ಇಮೇಲಿನಲ್ಲಿ ನೀವು ಯಾರು, ಏನು ಓದಿದ್ದೀರಿ, ಎಷ್ಟು ವರ್ಷಗಳ ಅನುಭವ ಮತ್ತು ಪರಿಣಿತಿ ಇದೆ, ಏಕೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಮೂರ್ನಾಲ್ಕು ಸಾಲುಗಳಲ್ಲಿ ವಿವರಿಸಿ. ರೆಸ್ಯೂಮೆ ಫೈಲಿಗೆ ನಿಮ್ಮ ಹೆಸರನ್ನು ಕೊಟ್ಟು ಅದನ್ನು ಅಟ್ಯಾಚ್ ಮಾಡಿ ಕಳುಹಿಸಿ.

ನೀವು ಕಳಿಸುವ ಇಮೇಲ್ ಅರ್ಜಿಯು ನಿಮ್ಮ ಬಗ್ಗೆ ಮೊದಲ ನೋಟದಿಂದ ಉತ್ತಮ ಅಭಿಪ್ರಾಯ ಮೂಡಿಸುತ್ತದೆ. ಒಟ್ಟಾರೆ ನಿಮ್ಮ ರೆಸ್ಯೂಮ್ ನಿಮಗೆ ಉದ್ಯೋಗ ಪಡೆಯಲು ಒಂದು ಕೀಲಿಕೈ ಇದ್ದಂತೆ. ಸಮರ್ಥವಾಗಿ ಬಳಸಿಕೊಳ್ಳುವುದು ಜಾಣತನ.

ಇದು ನೆನಪಿರಲಿ 

೧. ರೆಸ್ಯುಮನ್ನು ಬೇರೆಯವರಿಂದ ಕಾಪಿ ಮಾಡಬೇಡಿ. ಅಗತ್ಯವಿದ್ದಲ್ಲಿ ಬೇರೆಡೆ ಮಾಹಿತಿ ತೆಗೆದುಕೊಂಡು ಸ್ವಂತವಾಗಿ ಬರೆಯಿರಿ.
೨. ರೆಸ್ಯುಮಲ್ಲಿ ನೀವು ಹಾಕಿರುವ ಎಲ್ಲಾ ಮಾಹಿತಿಗಳೂ ಸಹ ಸತ್ಯವಾಗಿರಬೇಕು ಮತ್ತು ಆ ಬಗ್ಗೆ ನಿಮಗೆ ಗೊತ್ತಿರಬೇಕು. ಸಂದರ್ಶನದಲ್ಲಿ ತಮ್ಮ ರೆಸ್ಯುಮೆಯಲ್ಲಿ ತಾವೇ ಹಾಕಿರುವ ಮಾಹಿತಿ ಬಗ್ಗೆ ಉತ್ತರಿಸಲು ಹಲವರು ವಿಫಲರಾಗುತ್ತಾರೆ.
೩. ಇಮೇಲ್ ಕಳಿಸುವಾಗ ಸುಮ್ಮನೇ ಫಾರ್ವರ್ಡ್ ಮಾಡುವುದು, ರೆಸ್ಯುಮೆ ಫೈಲಿಗೆ ಸರಿಯಾಗಿ ಹೆಸರು ಕೊಡದಿರುವುದು, ರೆಸ್ಯುಮೆಯಲ್ಲಿ ನಿಮ್ಮ ಮಾಹಿತಿಯನ್ನು ಹುಡುಕಾಡುವಂತೆ ಮಾಡುವುದು ಸರಿಯಲ್ಲ.

ಮಾನವ ಸಂಪನ್ಮೂಲ ಕ್ಷೇತ್ರದ ಹೇಮಾ ಪವಾರ್ ಅವರಿಂದ ಮಾಹಿತಿ:

ನಿಮ್ಮ CV ಎರಡು ಅಥವಾ ಮೂರು ಪುಟಗಳಷ್ಟಿದ್ದರೆ ಬೇಗ ಗ್ರಹಿಸಲು ಸಾಧ್ಯ. ಹೆಚ್ಚು ಅನುಭವವಿದ್ದು ಹೆಚ್ಚು ವಿಷಯವಿದ್ದರೆ ಮೂರು ಪುಟಗಳಷ್ಟು ಬರೆಯಿರಿ. ಪಿ.ಡಿ.ಎಫ್ ಫಾರ್ಮಾಟಿನಲ್ಲಿದ್ದರೆ ಉತ್ತಮ. ಸಣ್ಣ ಪಾಸ್ ಪೋರ್ಟ್ ಸೈಜಿನ ಫೋಟೋ ಒಂದನ್ನು ಶುರುವಿನ ಒಂದು ಬದಿಯಲ್ಲಿ ಹಾಕಿ. ಇದರಿಂದ ಕಳಿಸುವವರ ವಿವರ ಇನ್ನಷ್ಟು ಆಪ್ತವಾಗುತ್ತದೆ. ಮೊದಲೆರೆಡು ಸಾಲುಗಳು, ಸಂಪೂರ್ಣ ಹೆಸರು, ಫೋನ್ ನಂಬರ್, ಇಮೇಲ್ ಐಡಿ ಇವಿಷ್ಟೇ ಸಾಕು. ವಿಳಾಸ ಹಾಗು ಇತರ ವ್ಯಯಕ್ತಿಕ ವಿವರಗಳನ್ನು ಕೊನೆಯಲ್ಲಿ ಬರೆಯಬಹುದು.

ಅನುಭವ ಹಾಗೂ ವಿದ್ಯಾರ್ಹತೆಗೆ ಹೊಂದದ ಕೆಲಸಗಳಿಗೆ ಕಳಿಸುವುದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮ ಗೆಳೆಯರು ರೆಫರ್ ಮಾಡುತ್ತಿದ್ದರೂ, ಇಂತಹ ಕೆಲಸಕ್ಕೆ ನನಗೆ ಇಷ್ಟು ಅನುಭವ ಹಾಗು ವಿದ್ಯಾರ್ಹತೆ ಇದೆ ಎನ್ನುವ ಬಗ್ಗೆ ಸಣ್ಣ ಟಿಪ್ಪಣಿ ಒಂದನ್ನು ಬರೆಯಿರಿ. ಇದರಿಂದ ನಿಮ್ಮ ರೆಸ್ಯೂಮೆಯನ್ನು ಹೆಚ್.ಆರ್. ಗಳಿಗೂ, ಮ್ಯಾನೇಜರ್ ಗಳಿಗೂ ಕಳಿಸಲು ಅನುಕೂಲವಾಗುತ್ತದೆ.

ರೆಸ್ಯೂಮೆ ಕಳಿಸುವಲ್ಲಿನ ಉಡಾಫೆತನ

14 ಅಕ್ಟೋಬರ್: ಫೇಸ್ಬುಕ್ ಪೋಸ್ಟ್ 

ನಾನು ಆಗಾಗ ನಮ್ಮ ಕಂಪನಿಯಲ್ಲಿ ಅಥವಾ ಬೇರೆ ಕಂಪನಿಗಳಲ್ಲಿ ನನಗೆ ನೇರವಾಗಿ ಗೊತ್ತಿರುವಲ್ಲಿ ಉದ್ಯೋಗಾವಕಾಶಗಳಿದ್ದಲ್ಲಿ ಆ ಮಾಹಿತಿ ಹಂಚಿಕೊಂಡು ಆಸಕ್ತರು ರೆಸ್ಯೂಮೆ ಕಳಿಸಲು ಹೇಳುತ್ತಿರುತ್ತೇನೆ. ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರಯೋಜನವಾಗಲಿ ಮತ್ತು ಯೋಗ್ಯ ಅಭ್ಯರ್ಥಿಗಳು ಸಿಗಲಿ ಎಂಬುದು ಅದರ ಉದ್ದೇಶ. ಆದರೆ ಹಲವರು ಎಷ್ಟು ಉಡಾಫೆಯಿಂದ ರೆಸ್ಯೂಮೆ ಕಳಿಸುತ್ತಾರೆ ಅಂದರೆ ಅದು ಬೇಸರ ತರಿಸುತ್ತದೆ. ಯಾವ ಹುದ್ದೆಗಳಿವೆ, ಅದರ ಅಗತ್ಯಗಳೇನು ಎಂಬುದನ್ನು ಗಮನಿಸದೇ, ತಾವು ಯಾವ ಹುದ್ದೆಗೆ ಅರ್ಜಿ ಹಾಕಲು ಬಯಸುತ್ತೇವೆ ಎಂಬುದನ್ನೂ ಬರೆಯದೇ ಒಟ್ನಲ್ಲಿ ತಗೊಂಡ್ರೆ ತಗೊಳ್ಲಿ ಎನ್ನುವಂತೆ ಕಳಿಸುತ್ತಾರೆ. ಅಂತಹ ರೆಸ್ಯೂಮೆ ತೆಗೆದು ನೋಡಲೂ ಮನಸ್ಸಾಗುವುದಿಲ್ಲ. ಬರುವ ಹತ್ತಾರು ಇಮೇಲುಗಳನ್ನು ತೆಗೆದು ಅದರಲ್ಲಿ ರೆಸ್ಯೂಮೆ ಪರಿಶೀಲಿಸಿ ಅವರು ಯಾರು, ಏನು ಓದಿದ್ದಾರೆ, ಯಾವ ಉದ್ಯೋಗಕ್ಕೆ ಅವರ ಅನುಭವ, ಸ್ಕಿಲ್ ಸೆಟ್ ಹೊಂದಿಕೆಯಾಗುತ್ತದೆ ಅಂತೆಲ್ಲಾ ನೋಡಿಕೊಂಡು ಕೂರಲು ಖಂಡಿತ ಆಗುವುದಿಲ್ಲ. ನನ್ನ ಕ್ಷೇತ್ರದ್ದಲ್ಲದ ಉದ್ಯೋಗಗಳಿದ್ದಲ್ಲಿ ಅದೆಲ್ಲಾ ನನಗೆ ತಿಳಿಯುವುದೂ ಇಲ್ಲ. ಉದಾಹರಣೆಗೆ ಇದರೊಂದಿಗಿರುವ ಚಿತ್ರದಲ್ಲಿ ಎರಡು ಇಮೇಲುಗಳನ್ನು ನೋಡಬಹುದು, ಒಂದರಲ್ಲಿ ಏನು ಎತ್ತ ಯಾವುದಕ್ಕೆ ಅರ್ಜಿ ಎಂಬ ಯಾವ ಮಾಹಿತಿ ಇಲ್ಲ, ಇನ್ನೊಂದರಲ್ಲಿ ಒಬ್ಬ ಒಂದು ಫೇಕ್ ರೆಸ್ಯೂಮೆ ರೆಡಿಮಾಡಿ ಅದನ್ನು 'ಫೇಕ್' ಅಂತಲೇ ಹೆಸರಿಟ್ಟು ಕಳಿಸಿದ್ದಾನೆ. ಇವತ್ತೊಂದು ಇಮೇಲ್ ಬಂದಿದೆ. ಅದರಲ್ಲಿ ಒಬ್ಬ ರೆಸ್ಯೂಮ್ ಕಳಿಸಿ "ನಿಮಗೆ ಇದು relevant ಇದೆಯಾ ನೋಡಿಕೊಳ್ಳಿ" ಎಂಬಂತೆ ಬರೆದು ಕಳಿಸಿದ್ದಾನೆ. ಮೆಕ್ಯಾನಿಕಲ್ ಫೀಲ್ಡಿನವನಾದ ನಾನು ಕಾಮರ್ಸ್ ಫೀಲ್ಡಿನ ರಿಲೆವೆನ್ಸ್ ಚೆಕ್ ಮಾಡಿ ಅವನನ್ನು ಕರೆಯಲು ನನಗ್ಯಾವ ಕರ್ಮ!




ಇನ್ನೊಂದಿಷ್ಟು ಜನ ಯಾರೋ ಹೇಳಿದರು ಅಂತ ರೆಸ್ಯೂಮೆಯನ್ನು ಸುಮ್ಮನೇ ಫಾರ್ವರ್ಡ್ ಮಾಡುತ್ತಾರೆ. ಅದಕ್ಕೆ ಹಿಂದಿರುವುದಿಲ್ಲ, ಮುಂದಿರುವುದಿಲ್ಲ, ಸಬ್ಜೆಕ್ಟ್ ಲೈನಿನಲ್ಲಿ FWD: ಎಂದೇ ಇರುತ್ತದೆ. ರೆಸ್ಯೂಮೆ ಫೈಲಿನ ಹೆಸರು resume ಅಂತಲೊ, resume_updated ಅಂತಲೊ ಇರುತ್ತದೆ. ಇಂತಹ ಹಲವು ಬಗೆಬಗೆಯ ಉಡಾಫೆಯ ಇಮೇಲುಗಳು, ರೆಸ್ಯೂಮೆಗಳು ಬರುತ್ತವೆ. ಇಷ್ಟೂ ಸೀರಿಯಸ್ನೆಸ್ ಇಲ್ಲದ ಒಬ್ಬ unknown personನನ್ನು ಉದ್ಯೋಗ ಸಂದರ್ಶನಕ್ಕೆ ಪರಿಗಣಿಸುವುದಾದರೂ ಹೇಗೆ?! ಆದ್ದರಿಂದ ಅವರಿಗೆ ಅರ್ಹತೆ ಇದ್ದರೂ ಸಹ ಕಳಿಸಿದ್ದು ವ್ಯರ್ಥವಾಗುತ್ತದೆ. ಪರಿಣಾಮವೆಂದರೆ, ಎಲ್ಲಾ ಹುದ್ದೆಗಳಿಗೂ ಬೇರೆರಾಜ್ಯದ ಅಭ್ಯರ್ಥಿಗಳು ಹೆಚ್ಚು ಆಯ್ಕೆಯಾಗುತ್ತಾರೆ. ಎಲ್ಲೂ ಕನ್ನಡವರನ್ನ ತಗೊಳ್ಳಲ್ಲ ಅಂತ ನಾವು ಹೊಯ್ಕೊತಿರಬೇಕಷ್ಟೆ.

ನಮ್ಮ ಕರ್ನಾಟಕದ ಹಲವಾರು ಅಭ್ಯರ್ಥಿಗಳು, ಅದರಲ್ಲೂ ಜೂನಿಯರ್ ಗಳು, ಕಡಿಮೆ ಅನುಭವವಿರುವವರು, ಹೊಸಬರು ಉದ್ಯೋಗಾವಕಾಶಗಳಿಗೆ ರೆಸ್ಯುಮೆ ಕಳಿಸುವುದು ಹೇಗೆ ಎನ್ನುವ ಬೇಸಿಕ್ ತಿಳುವಳಿಕೆ ಹೊಂದುವ, ಈ ಒಂದು ಸೌಜನ್ಯವನ್ನು ಕಲಿಯುವ ಅವಶ್ಯಕತೆ ಬಹಳ ಇದೆ.

*****
ಇದೆಲ್ಲಾ ಸೇರಿಸಿ, ಒಂದಿಷ್ಟು HRಗಳನ್ನೂ ಮಾತಾಡಿಸಿ, 'ಉದ್ಯೋಗಗಳಿಗೆ ರೆಸ್ಯೂಮೆ ಕಳಿಸುವುದು ಹೇಗೆ' ಎಂಬ ಲೇಖನ ಬರೆಯಬೇಕೆನಿಸುತ್ತಿದೆ.. ನೋಡೋಣ.

ಶನಿವಾರ, ಸೆಪ್ಟೆಂಬರ್ 19, 2020

ಒಂದಿಷ್ಟು ಮಾಹಿತಿಗಳು

ಫೇಸ್ಬುಕ್ಕಲ್ಲಿ ಬರೆದಿದ್ದ ಒಂದಿಷ್ಟು ಮಾಹಿತಿಗಳನ್ನು ದಾಖಲಿಸಿಡುತ್ತಿದ್ದೇನೆ.

ಡಿಸೆಂಬರ್ ೨೦೧೯: https://kn.quora.com ಕನ್ನಡದಲ್ಲಿ 'ಕೋರಾ' ಪೂರ್ಣಪ್ರಮಾಣದಲ್ಲಿ ಬಿಡುಗಡೆಗೊಂಡು ಕೆಲಸ ಮಾಡುತ್ತಿದೆ. ಹೆಚ್ಚುಹೆಚ್ಚು ಕನ್ನಡಿಗರು ನೊಂದಾಯಿಸಿಕೊಂಡು ಪ್ರಶ್ನೋತ್ತರ-ಮಾಹಿತಿಗಳನ್ನು ಹಂಚಿಕೊಳ್ಳೋಣ. ತೊಡಗುವಿಕೆ ಜಾಸ್ತಿ ಇದ್ದಾಗಲಷ್ಟೆ ಕನ್ನಡದ ಬಗ್ಗೆ ಕಂಪನಿಗಳು ಗಮನ ಕೊಡುತ್ತವೆ. ಅದು ಕನ್ನಡ-ಕನ್ನಡಿಗರ ಬೆಳವಣಿಗೆಗೆ ಸಹಾಯವಾಗುತ್ತೆ. ಈಗಾಗಲೇ ಕೋರಾ ಖಾತೆ ಇದ್ದವರು ಅದರಲ್ಲೇ 'ಕನ್ನಡ' ಲ್ಯಾಂಗ್ವೇಜ್ ಸೇರಿಸಿಕೊಳ್ಳಬಹುದು.

https://storyweaver.org.in/ ಇದರಲ್ಲಿ ಮಕ್ಕಳಿಗೋಸ್ಕರ ನೂರಾರು ಸಚಿತ್ರ ಕತೆಗಳಿವೆ. ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಇವೆ. ವಿಶೇಷವೆಂದರೆ ಇದರಲ್ಲಿ ನೋಂದಾಯಿಸಿಕೊಂಡು ನಾವು ಕೂಡ ಕತೆ ರಚನೆ ಮತ್ತು ಮುಖ್ಯವಾಗಿ ಅನುವಾದದಲ್ಲಿ ಪಾಲ್ಗೊಳ್ಳಬಹುದು. ಒಂದು ವೇಳೆ ಯಾವುದಾದರೂ ಕತೆ ಈಗಾಗಲೇ ಅನುವಾದವಾಗಿದ್ದರೆ ಅದರದ್ದೇ ಮತ್ತೊಂದು ಆವೃತ್ತಿ ರಚಿಸಬಹುದು ಅಥವಾ ಬೇರೆ ಹೊಸ ಕತೆ ಆರಿಸಿಕೊಳ್ಳಬಹುದು. ಚಿಕ್ಕ ಚಿಕ್ಕ ಕತೆಗಳು, ಸರಳ ಮಾತುಗಳಿರುವುದರಿಂದ ಅನುವಾದ ಕಷ್ಟವಾಗಲಾರದು. ಈಗಾಗಲೇ ಚಿತ್ರಗಳಿರುವುದರಿಂದ ಅದಕ್ಕೆ ಕನ್ನಡ ಮಾತುಗಳನ್ನು ಜೋಡಿಸುವುದು ಖುಷಿಯಾಗುತ್ತದೆ. ಕತೆಗಳು educative ಆಗಿಯೂ ಇವೆ. ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಪುಸ್ತಕಗಳು ಪ್ರಿಂಟ್ ರೂಪದಲ್ಲೂ ಸಿಗುತ್ತವೆ. ಆಸಕ್ತಿ ಇರುವವರು ಪಾಲ್ಗೊಳ್ಳಬಹುದು. ಕನ್ನಡದಲ್ಲಿ ಒಟ್ಟು ೬೦೦ಕ್ಕೂ ಹೆಚ್ಚು ಕತೆಗಳಿವೆ: https://storyweaver.org.in/stories?language=Kannada&query=&sort=Relevance ನಾನೂ ಇದರಲ್ಲಿ ಕೆಲವು ಕತೆಗಳನ್ನ ಅನುವಾದಿಸಿದ್ದೇನೆ.

ಜನವರಿ 12, 2018 : ಕನ್ನಡದಲ್ಲಿ ದನಿಯಿಂದ ಪಠ್ಯ ಪರಿವರ್ತನೆಗೆ (speech to text) ಮತ್ತೊಂದು ಟೂಲ್ ಬಿಡುಗಡೆಯಾಗಿದೆ. ಲ್ಯಾಪ್ ಟಾಪನ್ನು ನಿಮ್ಮ ಮುಂದಿಟ್ಟುಕೊಂಡು ಆರಾಮಾಗಿ ಕೂತು ಮಾತಾಡುತ್ತಾ ಹೋದರೆ ಈ ವಾಯ್ಸ್ ನೋಟ್ ಪ್ಯಾಡ್ ಅದನ್ನ ಶಿಸ್ತಾಗಿ ಪಠ್ಯಕ್ಕೆ ಇಳಿಸಿಕೊಡುತ್ತದೆ. ಗೂಗಲ್ ಸ್ಪೀಚ್ ರೆಕಗ್ನಿಶನ್ ಬಳಸಿಕೊಂಡು ಕೆಲಸ ಮಾಡುವ ಈ ಟೂಲ್ ಒಳ್ಳೆಯ ನಿಖರತೆ ಹೊಂದಿದೆ. ಇದು ಗೂಗಲ್ ಕ್ರೋಮ್ ಬ್ರೌಸರಿನಲ್ಲಿ ಕೆಲಸ ಮಾಡುತ್ತದೆ.
https://dictation.io/speech: ಈ ಕೊಂಡಿ ತೆರೆದು ಬಲ ಪಕ್ಕದಲ್ಲಿ 'ಕನ್ನಡ' ಆಯ್ಕೆ ಮಾಡಿಕೊಳ್ಳಿ. ಆಮೇಲೆ start ಅಂತ ಕೊಟ್ಟು ಮಾತಾಡುತ್ತಾ ಹೋದರೆ ಅದು ಅಕ್ಷರಗಳಾಗಿ ಪರದೆ ಮೇಲೆ ಮೂಡುತ್ತಾ ಹೋಗುತ್ತದೆ. ಯಾವುದೇ ಸಮಯ ಮಿತಿ ಇಲ್ಲ. ಮುಗಿದ ಮೇಲೆ stop ಮಾಡಿದರಾಯಿತು. ಅಂದಹಾಗೆ, ನೆನಪಿರಲಿ. ಇದು ಕೆಲಸ ಮಾಡಲು ಅಂತರಜಾಲ ಸಂಪರ್ಕ ಇರಬೇಕಾಗುತ್ತದೆ ಹಾಗೂ ಇದು ಲ್ಯಾಪ್‌ಟಾಪ್/ಡೆಸ್ಕ್ ಟಾಪ್ ಕಂಪ್ಯೂಟರಲ್ಲಿ ಮಾತ್ರ ಕೆಲಸ ಮಾಡುತ್ತದೆ.
ವಿವರಗಳಿಗಾಗಿ ಈ ತಾಣ ನೋಡಬಹುದು: https://www.labnol.org/internet/speech-recognition/30967/

ಡಬ್ಬಿಂಗ್: ಸಿನೆಮಾ & ಟೀವಿವಾಹಿನಿ - ಒಂದಿಷ್ಟು ಸಂಗತಿಗಳು

ಆಯಾ ಕಾಲಘಟ್ಟದಲ್ಲಿ ಫೇಸ್ಬುಕ್ಕಲ್ಲಿ ಬರೆದಿದ್ದ ಕೆಲವು ಮುಖ್ಯ ಸಂಗತಿಗಳನ್ನು ಇಲ್ಲಿ ದಾಖಲಿಸಿಡುತ್ತಿದ್ದೇನೆ. ಕನ್ನಡದಲ್ಲಿ ಡಬ್ಬಿಂಗ್ ತೆರೆದುಕೊಳ್ಳಬೇಕೆಂದು ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಕಾನೂನಾತ್ಮಕ ಹೋರಾಟವು ಯಶಸ್ವಿಯಾದ ನಂತರ ಹಲವು ತೊಡಕುಗಳನ್ನು ದಾಟಿ ಬಂದಿದ್ದರಿಂದ ಈ ಸಂಗತಿಗಳು ಮುಖ್ಯವಾಗಿವೆ.

ನವೆಂಬರ್ 1, 2019 · ಭದ್ರಾವತಿ, ಕರ್ನಾಟಕ
: ನವೆಂಬರಲ್ಲಿ ಹಾಲಿವುಡ್ದಿನ ಖ್ಯಾತ 'ಟರ್ಮಿನೇಟರ್ ಡಾರ್ಕ್ ಫೇಟ್' ಸಿನೆಮಾ ಕನ್ನಡದಲ್ಲೂ ಬಿಡುಗಡೆ ಆಯಿತು. ಭಾರತದಲ್ಲಿ ಇತರ ಭಾಷೆಗಳ ಜೊತೆಯಲ್ಲೇ ಏಕಕಾಲಕ್ಕೆ ಕನ್ನಡದಲ್ಲೂ ಬಿಡುಗಡೆಯಾಗ್ತಿರೋ ಮೊಟ್ಟಮೊದಲ ಹಾಲಿವುಡ್ ಸಿನೆಮಾ ಇದು. ಭದ್ರಾವತಿಯಲ್ಲಿ ಈ ಸಿನೆಮಾವನ್ನು ನೋಡಿದೆ. ಸಣ್ಣವನಿದ್ದಾಗಿನಿಂದ ಹಲವು ಇಂಗ್ಲೀಶ್ ಸಿನೆಮಾಗಳನ್ನು ಅನಿವಾರ್ಯವಾಗಿ ಇಂಗ್ಲೀಶಲ್ಲಿ ನೋಡಿದ್ದೆ. ಟೈಟಾನಿಕ್, ಜುರಾಸಿಕ್ ಪಾರ್ಕ್ ನಂತಹ ಜನಪ್ರಿಯ ಸಿನೆಮಾಗಳು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದ್ದಾಗ ಇವೆಲ್ಲಾ ಕನ್ನಡದಲ್ಲಿ ಏಕೆ ಬರುವುದಿಲ್ಲ ಎಂಬಂತಹ ಪ್ರಶ್ನೆ ಮತ್ತು ಅಸಮಾಧಾನ ಚಿಕ್ಕಂದಿನಿಂದಲೂ ಇತ್ತು.  ಅದಾಗಿ ದಶಕಗಳ ನಂತರ ಅಂತೂ ಕನ್ನಡದಲ್ಲಿದ್ದ ಡಬ್ಬಿಂಗ್ ಬ್ಯಾನ್ ತೊಡೆದುಹಾಕಿ ಹಾಲಿವುಡ್ ಸಿನೆಮಾಗಳೂ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಸಾಧ್ಯವಾಗಿಸಿದ್ದು ಸಂತೋಷದ ಸಂಗತಿ.

  


ಅಕ್ಟೋಬರ್ 6, 2019 · ಬೆಂಗಳೂರು: 'ಸೈರಾನರಸಿಂಹರೆಡ್ಡಿ' ಅನ್ನುವ ಸಿನೆಮಾ ನೋಡಿದೆ. ಮೂಲತಃ ತೆಲುಗು ಚಿತ್ರವಾದರೂ ಇದು ನಾಲ್ಕೈದು ಭಾಷೆಗಳಲ್ಲಿ ಒಂದೇ ಸಲಕ್ಕೆ ಬಿಡುಗಡೆಯಾಗಿದೆ‌. ಕನ್ನಡದಲ್ಲಿ ಇದರ ಡಬ್ಬಿಂಗ್ ಕ್ವಾಲಿಟಿ ಅದ್ಭುತವಾಗಿದೆ‌. ಮೂಲ ತೆಲುಗು ಸಿನೆಮಾ ಎಂಬುದು ನೆನಪಿಗೇ ಬಾರದಂತೆ ಕನ್ನಡ ಸಂಭಾಷಣೆಗಳು ಮತ್ತು ಲಿಪ್ ಟೈಮಿಂಗ್ ಹೊಂದಿಕೆಯಾಗಿದೆ. ಇಷ್ಟು ವರ್ಷ‌ ದೊಡ್ಡ ಬಜೆಟ್ಟಿನ ಚಿತ್ರಗಳು ಕರ್ನಾಟಕದಾದ್ಯಂತ ತೆಲುಗು ಭಾಷೆಯಲ್ಲೇ ಇನ್ನೂರು ಮುನ್ನೂರು‌ ಕಡೆ ಬಿಡುಗಡೆಯಾಗುತ್ತಿದ್ದವು. ಕನ್ನಡ ಚಿತ್ರರಂಗದ ಕೆಲವರ ಸ್ವಾರ್ಥದಿಂದ ಈಸ್ಥಿತಿ ಬಂದಿತ್ತು.ಈ ಹಿಂದೆ ಕೆಲವು ಸಿನೆಮಾಗಳು ಏಕಕಾಲಕ್ಕೆ ಕನ್ನಡದಲ್ಲೂ ಬಂದಾಗ ಅದಕ್ಕೆ ಟಾಕೀಸ್ ಸಿಗದಂತೆ ಮಾಡಲಾಗಿತ್ತು. ನರಸಿಂಹರೆಡ್ಡಿ ಸಿನೆಮಾದ ಕನ್ನಡ ಆವೃತ್ತಿಗೂ ಶೋಗಳು ಸಿಗದಂತೆ ಮಾಡಲು ಪ್ರಯತ್ನಗಳು ನಡೆದರೂ ಸಹ ಈ ಬಾರಿ ಹೆಚ್ಚು ತೆರೆಗಳಲ್ಲಿ ಪ್ರದರ್ಶನ ಸಾಧ್ಯವಾಗಿ ಜನರು ನೋಡುತ್ತಿದ್ದಾರೆ. ಸಿನೆಮಾ ಬಗ್ಗೆ ಹೇಳುವುದಾದರೆ, ಬ್ರಿಟಿಷರ ವಿರುದ್ಧ ಹೋರಾಡಿದ ಮತ್ತು ಅದನ್ನು ಪ್ರಜಾಂದೋಲನದಂತೆ ಮಾಡಿದ ನರಸಿಂಹ ರೆಡ್ಡಿಯ ಹೋರಾಟ ಕಥನ. ಸ್ವಲ್ಪ ಹೀರೋಯಿಸಂ ವೈಭವೀಕೃತವಾಗಿ, ನಾಟಕೀಯ ಸನ್ನಿವೇಶಗಳಿದ್ದರೂ ಸಿನೆಮಾ ಅದ್ದೂರಿಯಾಗಿದೆ ಮತ್ತು ದೃಶ್ಯಗಳು ರೋಚಕವಾಗಿವೆ. ಮುಖ್ಯಪಾತ್ರವೊಂದರಲ್ಲಿ ಸುದೀಪ ಇರುವುದು ಪ್ಲಸ್ ಪಾಯಿಂಟ್. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಒಂದು ಮಜಲನ್ನು ಯಶಸ್ವಿಯಾಗಿ ತೋರಿಸಿದೆ ಈ ಸಿನೆಮಾ. ನವೆಂಬರಲ್ಲಿ 'ಟರ್ಮಿನೇಟರ್'‌ ಸಿನೆಮಾಕೂಡ ಕನ್ನಡದಲ್ಲಿ ಬರಲಿದೆ. ಕನ್ನಡಿಗರಿಗೆ ಎಲ್ಲವೂ ಕನ್ನಡದಲ್ಲಿ ಸಿಗುವಂತಾಗಿ ಭಾಷೆ ಸಮೃದ್ದ, ಸಶಕ್ತವಾಗಬೇಕೆಂಬ ಡಬ್ಬಿಂಗ್ ಪರ ಆಶಯಕ್ಕ ಗೆಲುವಾಗಲಿ. ನಿಮ್ಮೂರಿನ ಟಾಕೀಸ್ ಗಳಲ್ಲಿ ಕನ್ನಡ ಆವೃತ್ತಿಗಳನ್ನೇ ಹಾಕಲು ಆಗ್ರಹಿಸಿ. ಕನ್ನಡ ಆವೃತ್ತಿಯಲ್ಲೇ ಸಿನೆಮಾ ನೋಡಿ ಪ್ರೋತ್ಸಾಹಿಸಿ. 
(ಹಿಂದಿಯ 'ದಬಾಂಗ್ ೩' ಸಿನೆಮಾ ಕೂಡ ಇದೇ ಸಮಯದಲ್ಲಿ ಕನ್ನಡದಲ್ಲೂ ಬಿಡುಗಡೆಯಾಗಿ ಟಾಕೀಸುಗಳಲ್ಲಿ ಪ್ರದರ್ಶನಗೊಂಡಿತು.)

ಜೂನ್ ೨೧, ೨೦೧೯: ಇನ್ನು ಕೆಲವು ದಿನಗಳಲ್ಲಿ 'ಡಿಸ್ಕವರಿ' ಮತ್ತು 'ಡಿಸ್ಕವರಿ ಕಿಡ್ಸ್' ಚಾನಲ್ ಗಳಿಗೆ 'ಕನ್ನಡ' ಫೀಡ್ ಶುರುವಾಗಲಿದೆ. ನಿಕೆಲೊಡಿಯೋನ್, ಸೋನಿಕ್ ಚಾನಲ್ ಗಳ ನಂತರ ಇವು ಕನ್ನಡ ಫೀಡ್ ಹೊಂದಿರುವ ಚಾನಲ್ ಗಳ ಪಟ್ಟಿಗೆ ಸೇರಲಿವೆ. 'ಸ್ಟಾರ್ ಸ್ಫೋರ್ಟ್ ಕನ್ನಡ' ಚಾನಲ್ ಅಂತೂ ಯಶಸ್ವಿಯಾಗಿ ನಡೆಯುತ್ತಿರುವುದು ಗೊತ್ತಿರುವ ವಿಚಾರ. ನಮ್ಮದೇ ಭಾಷೆಯಲ್ಲಿ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಸುಲಭ ಮತ್ತು ಪರಿಣಾಮಕಾರಿ. ಇದರೊಂದಿಗೆ ಕನ್ನಡ ಇನ್ಫೋಟೈನ್ ಮೆಂಟ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಲಿವೆ. ಒಂದು ಭಾಷೆ ಗಟ್ಟಿಯಾಗಿ ನೆಲೆ ನಿಲ್ಲಬೇಕಾದರೆ, ಜನರು ಭಾಷೆಯ ಕಲಿಕೆಗೆ ಆಸಕ್ತಿ ಹೊಂದಬೇಕಾದರೆ ಈಗಿನ ಕಾಲದಲ್ಲಿ ಅದಕ್ಕೆ ಆರ್ಥಿಕ ಕೋನ ಇರಲೇಬೇಕು. ಕನ್ನಡ ಉದ್ಯೋಗ ಕೊಡುವ ಭಾಷೆಯಾಗಿಯೂ ಮುಂದುವರೆಯಬೇಕು. ಚೆನ್ನಾಗಿ ಕನ್ನಡ ಗೊತ್ತಿರುವವರಿಗೆ, ಕನ್ನಡ ಬರಹಗಾರರಿಗೆ ಮತ್ತು ಆಯಾ ಕ್ಷೇತ್ರದ ಅನುಭವಿಗಳಿಗೆ, ಪರಿಣಿತರಿಗೆ ಬೇಡಿಕೆ ಒದಗಿಸುವಂತಹ ಇಂತಹ ಹಲವು ಯೋಜನೆಗಳಿಗೆ ನಾವು ಬೆಂಬಲ ಕೊಡಬೇಕಾಗಿದೆ.
(2019 ರಲ್ಲಿ ಡಿಸ್ಕವರಿ ಕನ್ನಡ ಆಡಿಯೋ ಫೀಡ್ ಶುರುವಾಗಿದೆ)

******

 ಸೆಪ್ಟೆಂಬರ್ ೨೦, ೨೦೨೦: ೨೦೨೦ರಲ್ಲಿ ಮೊದಲ ಬಾರಿಗೆ ಉದಯ ಟೀವಿಯು ಕನ್ನಡ ಕ್ಕೆ ಡಬ್ ಆದ ಕೆಲವು ತಮಿಳು ಸಿನೆಮಾಗಳನ್ನು ಪ್ರಸಾರ ಮಾಡಿತು. ಅತ್ಯುತ್ತಮ ಡಬ್ಬಿಂಗ್ ಕ್ವಾಲಿಟಿ ಹೊಂದಿದ್ದ ಅವುಗಳಿಗೆ  ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ೨೦೨೦ ರ   ಮಾರ್ಚ್ ನಂತರ ಕೊರೊನಾ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಶೂಟಿಂಗ್  ಸ್ಥಗಿತಗೊಂಡಿದ್ದರಿಂದ  ಅನೇಕ ಟೀವಿ ವಾಹಿನಿಗಳು ಕನ್ನಡಕ್ಕೆ ಡಬ್ ಆದ  ಧಾರಾವಾಹಿಗಳನ್ನು ಪ್ರಸಾರ ಮಾಡಲು ಆರಂಭಿಸಿದವು. ಮಹಾಭಾರತ, ಸೀತೆಯರಾಮ, ಮಾಲ್ಗುಡಿ ಡೇಸ್, ಮಹಾನಾಯಕ ಅಂಬೇಡ್ಕರ್, ರಾಧಾಕೃಷ್ಣ, ಅಲಾದ್ದಿನ್ ಮುಂತಾದ  ಹಲವು ಧಾರಾವಾಹಿ, ಕಾರ್ಯಕ್ರಮಗಳು  ಮತ್ತು ಸಿನೆಮಾಗಳು ಪ್ರಸಾರವಾದವು / ಆಗುತ್ತಿವೆ.  ಡಬ್ಬಿಂಗ್ ಸಿನೆಮಾ/ಕಾರ್ಯಕ್ರಮಗಳನ್ನೇ ಮುಖ್ಯವಾಗಿ ಪ್ರಸಾರ ಮಾಡುವ  ಒಂದು ಟೀವಿ ಚಾನಲ್  Dangal Kannada ಕೂಡ  ಸೆಪ್ಟೆಂಬರಲ್ಲಿ ಪ್ರಾಯೋಗಿಕ ಪ್ರಸಾರ  ಶುರುಮಾಡಿದೆ. 


ಗುರುವಾರ, ಸೆಪ್ಟೆಂಬರ್ 10, 2020

ಡಬ್ಬಿಂಗ್: ತೆರೆದಿದೆ ಆಯ್ಕೆ ಸ್ವಾತಂತ್ರ್ಯದ ಬಾಗಿಲು

ಡಬ್ಬಿಂಗ್ ಇಂದ ಕನ್ನಡ ಸಂಸ್ಕೃತಿಗೆ ಧಕ್ಕೆ, ನಮ್ಮ ಜಾಯಮಾನಕ್ಕೆ ತಕ್ಕುದಲ್ಲ ಎಂಬೆಲ್ಲಾ ಹಳೆ ವಾದವನ್ನು ಇನ್ನೂ ಮಾಡುತ್ತಿರುವ, ಪಾಳೆಗಾರಿಕೆ ಧೋರಣೆಯಲ್ಲಿರುವ 'ಗಣ್ಯ'ರಿಗೆ ನನ್ನದೊಂದು ಚುಟುಕಾದ ಉತ್ತರ. (20 ಜುಲೈ 2020 ಪ್ರಜಾವಾಣಿಯಲ್ಲಿ)


ಜುಲೈ ೧೮, ೨೦೨೦ ರ ವಾಚಕರವಾಣಿಯಲ್ಲಿ ಹಲವು ಗಣ್ಯರು ಡಬ್ಬಿಂಗ್ ಕಾರ್ಯಕ್ರಮಗಳ ಪ್ರಸಾರಕ್ಕೆ ವಿರೋಧಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದಿನ ಹಲವಾರು ವರ್ಷಗಳಿಂದ ಡಬ್ಬಿಂಗ್ ಇಲ್ಲದೇ ಕರ್ನಾಟಕದ ಹಿರಿತೆರೆಯು ಪರಭಾಷೆ ಚಿತ್ರಗಳ ಹಾವಳಿ, ರೀಮೇಕ್ ಹಾವಳಿಗಳಿಂದ ನಲುಗಿದೆ. ಅದೇ ಸಂಸ್ಕೃತಿಯು ಕನ್ನಡ ಕಿರುತೆರೆಗೂ ಬಂದಿತ್ತು. ಪ್ರಸಾರವಾಗುತ್ತಿದ್ದ ಬಹಳಷ್ಟು ಧಾರಾವಾಹಿಗಳು ಹಿಂದಿ, ತಮಿಳು, ಮರಾಠಿ ಧಾರಾವಾಹಿಗಳ ರೀಮೇಕ್ ಆಗಿದ್ದು ಅಲ್ಲಿಂದ ಉಡುಪು, ಸಂಪ್ರದಾಯಗಳನ್ನೂ ನಕಲು ಮಾಡಲಾಗುತ್ತಿತ್ತು. ಹಾಗಾಗಿ ಇಲ್ಲಿ ಕನ್ನಡ ಸಂಸ್ಕೃತಿಯ ಕಾಳಜಿಯು ವಿರೋಧಾಭಾಸವಾಗಿದೆ. ಇನ್ನು ಮಹಾಭಾರತದಂತಹ ಧಾರಾವಾಹಿಗಳನ್ನು ಕನ್ನಡ ಪ್ರೇಕ್ಷಕ ನೋಡಲು ಸಾಧ್ಯವಾಗಿಸಿದ್ದು ಈ ಡಬ್ಬಿಂಗ್. ವೀಕ್ಷಕರಿಗೆ ಕಿರಿಕಿರಿಯೆನಿಸಿದಲ್ಲಿ ಟಿ ಆರ್ ಪಿ ಬಿದ್ದುಹೋಗಿ ವಾಹಿನಿಗಳು ತಾವೇ ನಿಲ್ಲಿಸುತ್ತಾರೆ. ನಮ್ಮ ಶಂಕರನಾಗ್ ನಿರ್ಮಿಸಿದ ಮಾಲ್ಗುಡಿ ಡೇಸ್ ಇಷ್ಟು ವರ್ಷ ಕನ್ನಡದಲ್ಲಿ ನೋಡಲು ಸಾಧ್ಯವಿಲ್ಲದಿದ್ದುದ್ದು ವಿಪರ್ಯಾಸವಾಗಿತ್ತು. ಈಗ ಅದು ಕನ್ನಡದಲ್ಲಿ ಪ್ರಸಾರವಾಗುತ್ತಿರುವುದು ನಮಗೆ ಅತ್ಯಂತ ಖುಷಿ ತಂದಿದೆ. ಇದರಿಂದ ಕನ್ನಡ ಪ್ರೇಕ್ಷಕನಿಗೆ ಹೊಸ ಆಯ್ಕೆ ಸ್ವಾತಂತ್ರ್ಯದ ಬಾಗಿಲು ತೆರೆದಿದ್ದು, ಪರಭಾಷೆಗಳ ಮೇಲೆ ಅವಲಂಬಿತನಾಗಬೇಕಾದ ಅನಿವಾರ್ಯತೆಗಳನ್ನು ಈ ಡಬ್ಬಿಂಗ್ ಹೋಗಲಾಡಿಸಿದೆ. ಆದ್ದರಿಂದ ಕನ್ನಡ ಸಂಸ್ಕೃತಿ, ಜಾಯಮಾನ ಎಂಬುದನ್ನು ಒಂದಿಷ್ಟೇ ಜನರು ತೀರ್ಮಾನಿಸುವುದು ಅಸಾಂವಿಧಾನಿಕವಾಗುತ್ತದೆ ಮತ್ತು ನಾವು ಕೊಟ್ಟಿದ್ದನ್ನೇ ನೋಡಬೇಕೆನ್ನುವ ಏಕಮುಖ ಧೋರಣೆಯಿಂದ ವೀಕ್ಷಕನ ಆಯ್ಕೆ ಸ್ವಾತಂತ್ರದ ಹರಣವಾದಂತಾಗುತ್ತದೆ. ಈಗ ಕೊರೊನಾ ಕಾರಣದಿಂದ ಶೂಟಿಂಗ್ ಸ್ಥಗಿತವಾಗಿ ಮೂಲಕನ್ನಡ ಕಾರ್ಯಕ್ರಮಗಳ ಕೊರತೆಯಿಂದ ತಾತ್ಕಾಲಿಕವಾಗಿ ಡಬ್ಬಿಂಗ್ ಕಾರ್ಯಕ್ರಮಗಳು ಹೆಚ್ಚು ಪ್ರಸಾರವಾಗುತ್ತಿರಬಹುದು. ವಾಹಿನಿಗಳಿಗೂ ಸಹ ಇದು ಕೆಲಕಾಲ ಅನಿವಾರ್ಯವಾಗಿದೆ ಮತ್ತು ಪ್ರೇಕ್ಷಕರೂ ಅದಕ್ಕೆ ಸ್ಪಂದಿಸಿದ್ದಾರೆ. ಇದರಿಂದ ಪಾಠ ಕಲಿತಾದರೂ ಮುಂದೆ ಕನ್ನಡ ಸಿನೆಮಾ ಮತ್ತು ಧಾರಾವಾಹಿ ತಯಾರಕರು ಕನ್ನಡ ಸೊಗಡಿನ, ಕನ್ನಡ ನೆಲದ ಕತೆಗಳನ್ನುಳ್ಲ, ಪಾತ್ರಗಳನ್ನುಳ್ಳ ಉತ್ತಮ ಧಾರಾವಾಹಿಗಳ ತಯಾರಿಕೆಗೆ ಗಮನ ಹರಿಸಿದಲ್ಲಿ ಆತಂಕ ಪಡಬೇಕಿರುವುದಿಲ್ಲ. ಕಲಾವಿದರು, ನಿರ್ಮಾಪಕರು ಮತ್ತು ವಾಹಿನಿಗಳು ಚರ್ಚಿಸಿ ಒಂದು ಹಾದಿಯನ್ನು ಕಂಡುಕೊಂಡರೆ ನಮ್ಮ ಅಸ್ಮಿತೆಗೆ ಡಬ್ಬಿಂಗ್ ಯಾವುದೇ ತೊಂದರೆ ಕೊಡುವುದಿಲ್ಲ.

-----

ವೈಯಕ್ತಿಕವಾಗಿ ನಾನು ಕೂಡ ಸಾಮಾಜಿಕ, ಕೌಟುಂಬಿಕ, ಸಮಕಾಲೀನ ಧಾರಾವಾಹಿಗಳ ಡಬ್ಬಿಂಗ್ ಇಷ್ಟ ಪಡುವುದಿಲ್ಲ. ಆದರೆ ಅವುಗಳನ್ನೇ ಬೇರೆ ಭಾಷೆಗಳಿಂದ ರೀಮೇಕ್ ಮಾಡಿ ಕೆಟ್ಟದಾಗಿ ಪ್ರೇಕ್ಷಕನಿಗೆ ಬಡಿಸುತ್ತಿರುವಾಗ ಕನ್ನಡ ಸಂಸ್ಕೃತಿ, ಜಾಯಮಾನದ ಹೆಸರಿನಲ್ಲಿ ಡಬ್ಬಿಂಗ್ ವಿರೋಧಿಸುವುದು ಸಮರ್ಥನೀಯವಲ್ಲ. ಒಟ್ಟಿನಲ್ಲಿ ವೀಕ್ಷಕನ ಆಯ್ಕೆ ಸ್ವಾತಂತ್ರ್ಯ ಮುಖ್ಯ. ನಮ್ಮದು ಉದಾರವಾದ. ಯಾವುದು ಮಾಡಬೇಕು, ಯಾರು ಮಾಡಬಾರದು, ಏನು ಮಾಡಬೇಕು/ ಬಾರದು, ಎಂತದ್ದು ನೋಡಬೇಕು/ಬಾರದು ಎಂಬುದನ್ನು ಯಾವ ಹತೋಟಿಕೂಟಗಳು, ಯಾವ ವ್ಯಕ್ತಿಗಳು ನಿಯಂತ್ರಿಸಬಾರದು. ಜನರ ಆಯ್ಕೆಗೆ ಬಿಡಬೇಕು. ಅಂತಹ ಸಮಕಾಲೀನ ಧಾರಾವಾಹಿಗಳು ವೀಕ್ಷಕರಿಗೆ ಇಷ್ಟವಾಗದಿದ್ದಲ್ಲಿ ಅವು ತಿರಸ್ಕೃತಗೊಳ್ಳುತ್ತವೆ. ಎಲ್ಲವನ್ನೂ ನಮ್ಮಲ್ಲಿ ಮಾಡಲು ಆಗುವುದಿಲ್ಲ, ಹಾಗಾಗಿ ನಾವು ಮಾಡುವುದಷ್ಟನ್ನೇ ನೋಡಲು ಕೊಡುತ್ತೇವೆ, ಬೇರೆ ಬೇಕಾದಲ್ಲಿ ಬೇರೆ ಭಾಷೆಗಳ ಮೊರೆಹೋಗಿ ಎಂದು ಪರೋಕ್ಷವಾಗಿ ಕನ್ನಡ ವೀಕ್ಷಕರನ್ನು ಹೊರತಳ್ಳುತ್ತಿರುವುದು ಕೆಲವರ ಸ್ವಾರ್ಥ ತುಂಬಿದ ಈ ಡಬ್ಬಿಂಗ್ ವಿರೋಧೀ ನೀತಿ. ಹಾಗಾಗಿ ಒಂದು ಹೊಸ ಅಲೆ ಬರುವಾಗ ಕೊಂಚಕಾಲ ಈ ಚರ್ಚೆಗಳು ನಡೆಯಬೇಕು. ಅನಂತರ ಒಂದು ನಡುಹಾದಿ ತೆರೆದುಕೊಳ್ಳಬಹುದು. ಧನ್ಯವಾದಗಳು.

ಸೋಮವಾರ, ಏಪ್ರಿಲ್ 20, 2020

ಕನ್ನಡ ಯುನಿಕೋಡ್ ಅಕ್ಷರಶೈಲಿ/ಫಾಂಟ್'ಗಳು - Kannada Unicode Fonts

ಕನ್ನಡದ ಹಲವು ಯುನಿಕೋಡ್ ಅಕ್ಷರ ಶೈಲಿಗಳು (ಫಾಂಟ್ಸ್) ಲಭ್ಯ ಇವೆ. ನನಗೆ ಗೊತ್ತಿರುವಷ್ಟು ಈ ಕೆಳಗೆ ಪಟ್ಟಿಮಾಡಿದ್ದೇನೆ. ಕೆಲವು ಫಾಂಟುಗಳು ಬೇರೆ ಫಾಂಟುಗಳ derived ಆವೃತ್ತಿಗಳಾದ್ದರಿಂದ ನೋಡಲು ಸ್ವಲ್ಪ ಒಂದೇ ತರ ಕಾಣುತ್ತವೆ. ಬಹುತೇಕ ಫಾಂಟುಗಳಲ್ಲಿ ಮೂರು  ಬಗೆ (ಸಾಮಾನ್ಯ, ಓರೆ, ದಪ್ಪ - Normal, Bolt, Italic ಮತ್ತು ಇವುಗಳ ಕಾಂಬಿನೇಶನ್) ಇವೆ.
'ಗೋದಾ', 'ವಾಗೀಶ' ಇವು ಸಂಪಿಗೆ ಮತ್ತು ಕೇದಗೆ ಫಾಂಟನ್ನು ಆಧರಿಸಿವೆ. ಅರ್ಥಾತ್ ಅವನ್ನು ಸುಧಾರಿಸಿದ ಫಾಂಟ್‌ಗಳು. ಇವುಗಳ ವಿಶೇಷವೆಂದರೆ ಇವುಗಳಲ್ಲಿ ಕನ್ನಡ ಲಿಪಿಯಲ್ಲಿ ಮಂತ್ರ, ವೇದ, ಸಂಸ್ಕೃತ ಶ್ಲೋಕಗಳನ್ನು ಬರೆಯಲು ಬೇಕಾದ ಚಿಹ್ನೆಗಳಿವೆ.

ಮೇಲಿನ ಎಲ್ಲಾ ಫಾಂಟುಗಳ ಡೌನ್ಲೋಡ್ ಕೊಂಡಿ, ಪರವಾನಗಿ (ಗೊತ್ತಾದರೆ) ಮುಂತಾದ ಹೆಚ್ಚಿನ ಮಾಹಿತಿಗಳನ್ನು ಮುಂದೆ ನವೀಕರಿಸುತ್ತೇನೆ.

ಶನಿವಾರ, ಫೆಬ್ರವರಿ 1, 2020

ಕೈಲಾಸ ಮಾನಸ ಸರೋವರ ಯಾತ್ರೆಗೆ ಸಹಾಯಧನ


ಭಾರತದಲ್ಲಿ ಕೆಲವು ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ಕೈಲಾಸ ಮಾನಸ ಸರೋವರ ಮತ್ತು ಚಾರ್ ಧಾಮ್ ಯಾತ್ರೆ ಕೈಗೊಂಡವರಿಗೆ ಸಹಾಯಧನ ಕೊಡುತ್ತಿವೆ. ಅದರಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ಸರ್ಕಾರವು ಕೈಲಾಸ ಯಾತ್ರೆಗೆ ಮೂವತ್ತು ಸಾವಿರ ಮತ್ತು ಚಾರ್ ಧಾಮ್ ಯಾತ್ರೆಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ಕೊಡುತ್ತಿದೆ. ನನ್ನ ತಾಯಿಯವರು ಆಗಸ್ಟ್ ೨೦೧೯ರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿ ಬಂದರು. ಅದರ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದೆವು. ಈ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಯಾರು ಅರ್ಜಿಸಲ್ಲಿಸ ಬಹುದು?
  • ಯಾತ್ರೆ ಕೈಗೊಂಡ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. 
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. (ಪಾಸ್ ಪೋರ್ಟ್/ ವೋಟರ್ ಐಡಿ/ ರೇಶನ್ ಕಾರ್ಡ್ ದಾಖಲೆ)
  • ಖಾಸಗಿ ಟೂರ್ ಏಜೆನ್ಸಿ ಅಥವಾ ಸರ್ಕಾರದ ಯಾತ್ರಾ ವ್ಯವಸ್ಥೆ ಮೂಲಕ ಹೋದವರು ಅಥವಾ ಸ್ವತಂತ್ರವಾಗಿ ಹೋದವರು.
  • ಯಾವುದೇ ಆದಾಯದ, ಆರ್ಥಿಕ ಮಟ್ಟದ ಮಿತಿಯಿಲ್ಲ.
ಯಾವಾಗ ಸಲ್ಲಿಸಬೇಕು?
ಸಾಮಾನ್ಯವಾಗಿ ಈ ಯಾತ್ರೆಗಳು ಮೇ ಇಂದ ಪ್ರಾರಂಭವಾಗಿ ಆಗಸ್ಟ್ ಸೆಪ್ಟೆಂಬರ್ ವರೆಗೆ ನಡೆಯುತ್ತವೆ. ಅಕ್ಟೋಬರಿನಲ್ಲಿ ಪ್ರಾರಂಭವಾಗಿ ಈ ಸಹಾಯದಧನ ಅರ್ಜಿಗಳನ್ನು ಸಲ್ಲಿಸಬಹುದು.  ಡಿಸೆಂಬರ್ ೧೫ರ ವರೆಗೆ ಕಾಲಾವಕಾಶವಿರುತ್ತದೆ. (೨೦೧೯ರ ಮಾಹಿತಿ)

ಎಲ್ಲಿ ಅರ್ಜಿ ಸಲ್ಲಿಸಬೇಕು?
ಬೆಂಗಳೂರಿನಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಚಾಮರಾಜಪೇಟೆಯಲ್ಲಿರುವ ಟಿಪ್ಪು ಅರಮನೆಯ ರಸ್ತೆಯಲ್ಲಿ ಈ ಕಛೇರಿ ಇದೆ. ಅರಮನೆಯ ಪಕ್ಕದಲ್ಲಿ AIMS ಕಟ್ಟಡ, ಅದರ ಪಕ್ಕದ ಸರ್ಕಾರಿ ಕಟ್ಟಡದಲ್ಲಿ ಈ ಕಛೇರಿ ಎರಡನೇ ಮಹಡಿಯಲ್ಲಿದೆ. ಬೆಂಗಳೂರಲ್ಲಿ ಅರ್ಜಿ ಸಲ್ಲಿಸಲು ಆಗದವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಅರ್ಜಿ ತುಂಬಿ, ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.  ಆನ್ ಲೈನ್ ಕೊಂಡಿಗಳು ಇಂತಿವೆ:
೧. ಕೈಲಾಸ ಯಾತ್ರೆ:http://nemaka.kar.nic.in/manasa_2019/
೨. ಚಾರ್ ಧಾಮ್ ಯಾತ್ರೆ: http://nemaka.kar.nic.in/chardham_2019/
(ಕೊನೇ ದಿನಾಂಕ ಮುಗಿದಿದೆ. ಈ ಕೊಂಡಿಗಳು ಮುಂದಿನ ವರ್ಷಕ್ಕೆ ಬದಲಾಗಬಹುದು. ಇಲಾಖೆಯ ವೆಬ್ ಸೈಟ್ ನೋಡಿದರೆ ಅದರಲ್ಲಿ ಪ್ರಸಕ್ತ ವರ್ಷದ ಕೊಂಡಿಗಳಿರುತ್ತವೆ. ಜಾಲತಾಣ: https://temples.karnataka.gov.in/)

ಕೈಲಾಸ ಯಾತ್ರೆಯ ಸಹಾಯಧನ ಅರ್ಜಿಗೆ ಏನೇನು ದಾಖಲೆಗಳು ಬೇಕಾಗುತ್ತವೆ?
೧. ಭರ್ತಿಮಾಡಿದ ಅರ್ಜಿ (ಒಂದೇ ಪುಟ, ಕೆಲವು ಸಾಮಾನ್ಯ ವಿವರಗಳನ್ನು ಕೇಳಲಾಗಿರುತ್ತದೆ)
೨. ಒಂದು ಪಾಸ್ ಪೂರ್ಟ್ ಗಾತ್ರದ ಫೋಟೋ
೩. ಯಾತ್ರಿಯ ಪಾಸ್ ಪೋರ್ಟಿನ ಮೊದಲ, ಕೊನೆಯ ಪುಟಗಳ ಮತ್ತು ನೇಪಾಳ-ಚೀನಾ ಇಮ್ಮಿಗ್ರೇಶನ್ ಸೀಲ್ ಆಗಿರುವ ಪುಟದ ಬಣ್ಣದ ನೆರಳಚ್ಚು.  (ಕಲರ್ ಝೆರಾಕ್ಸ್)
೪. ಚೀನಾದ ಗ್ರೂಪ್ ವೀಸಾ ಮತ್ತು ಪರ್ಮಿಟ್ ಪ್ರತಿ
೫. ಬ್ಯಾಂಕ್ ಖಾತೆಯ ಪಾಸ್ ಬುಕ್ಕಿನ ಮೊದಲ ಪುಟದ ಪ್ರತಿ (ಹೆಸರು , ವಿಳಾಸ, ಖಾತೆ ಸಂಖ್ಯೆ, IFSC ಹೊಂದಿರುವಂತದ್ದು)
೮. ರದ್ದುಗೊಳಿಸಿದ ಒಂದು ಚೆಕ್  (ಖಾತೆದಾರರ ಹೆಸರು ಮತ್ತು IFSC ಇರುವಂತದ್ದು)
೯. ಈವರೆಗೆ ಈ ಯಾತ್ರೆಗೆ ಸರ್ಕಾರದಿಂದ ಯಾವುದೇ ಸಹಾಯಧನ ಪಡೆದಿಲ್ಲ ಎಂಬ ಸ್ವಯಂಘೋ‍ಷಣೆಯ ಪತ್ರ. (ಅಫಿಡವಿಟ್). ಇದು ೨೦ ರೂಪಾಯಿಯ ಇ-ಸ್ಟ್ಯಾಂಪ್ ಕಾಗದದ ಮೇಲೆ ಆಗಬೇಕು. ಇದಕ್ಕೆ ನೋಟರಿ ಸಹಿ ಹಾಕಿಸುವ ಅಗತ್ಯವಿಲ್ಲ. ಅರ್ಜಿದಾರರು ಸಹಿ ಹಾಕಿದರೆ ಸಾಕು. ಏನು ಬರೆಯಬೇಕೆಂಬ ಮಾಹಿತಿಯಿರುವ ಪ್ರತಿಯೊಂದನ್ನು ಅರ್ಜಿಯ ಜೊತೆ ಕೊಡುತ್ತಾರೆ.
೧೦. CIPSC Document ಪ್ರತಿ (ಇದು ಯಾತ್ರೆಗೆ ಕೊಡುವ ಪ್ರಮಾಣಪತ್ರ, ಚೀನೀ ಭಾಷೆಯಲ್ಲಿರುತ್ತದೆ. ಯಾತ್ರೆಗೆ ಕರೆದುಕೊಂಡ ಹೋದ ಟ್ರಾವೆಲ್ ಏಜೆನ್ಸಿಯವರಲ್ಲಿ ಪಡಯಬಹುದು )
೧೧. ಕೇಂದ್ರ ಸರ್ಕಾರದ ಪ್ರಮಾಣಪತ್ರ. (ಇದು ಸರ್ಕಾರದಿಂದ ಆಯೋಜಿಸಲ್ಪಟ್ಟ ಯಾತ್ರೆಯ ಮೂಲಕ ಹೋದವರಿಗೆ ಮಾತ್ರ)

ನನ್ನ ಅನುಭವ
ನಾನು ನವೆಂಬರಲ್ಲಿ ಮೇಲೆ ಹೇಳಿದ ಇಲಾಖೆಯ ಕಛೇರಿಗೆ ಇದರ ಬಗ್ಗೆ ವಿಚಾರಿಸಲು ಹೋದೆ. ಅದಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿತ್ತು. ಕೈಲಾಸಯಾತ್ರೆಗೆ ಮತ್ತು ಚಾರ್ ಧಾಮ್ ಯಾತ್ರೆಗೆ ಪ್ರತ್ಯೇಕ ಕೌಂಟರ್ ಗಳನ್ನು ಮಾಡಿದ್ದರು. ಎರಡರಲ್ಲೂ ಸಿಬ್ಬಂದಿ ಅರ್ಜಿಯನ್ನು ಕೊಟ್ಟು ಅಗತ್ಯ ಮಾಹಿತಿ ಒದಗಿಸುತ್ತಿದ್ದರು. ಅರ್ಜಿಯನ್ನು ಮನೆಗೆ ತಂದು ಭರ್ತಿಮಾಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಕೊಂಡು ಒಂದು ವಾರದ ನಂತರ ಎಲ್ಲವನ್ನೂ ಸಲ್ಲಿಸಿದೆ. ತೆಗೆದುಕೊಳ್ಳುವಾಗ ಎಲ್ಲಾ ಫೋಟೋಕಾಪಿಗಳ (ಝೆರಾಕ್ಸ್) ಮೂಲಪ್ರತಿಗಳನ್ನು ಪರಿಶೀಲನೆ ಮಾಡಿದರು. ಯಾವ ತೊಂದರೆ ತೊಡಕು ಇಲ್ಲದೇ ಮೇಜಿನಿಂದ ಮೇಜಿಗೆ ಓಡಾಡುವ ಪ್ರಮೇಯ ಇಲ್ಲದೇ ಕೆಲಸ ಆಯಿತು. ಕಛೇರಿಯು ನೀಟಾಗಿ ಇತ್ತು ಮತ್ತು ಸಿಬ್ಬಂದಿಯೂ ತಾಳ್ಮೆಯಿಂದ ವ್ಯವಹರಿಸುತ್ತಿದ್ದರು. ಸಾಮಾನ್ಯ 'ಸರ್ಕಾರಿ ಕಛೇರಿ'ಯಂತಿರದೇ  ವ್ಯವಸ್ಥಿತವಾಗಿ ನಡೆಯುತ್ತಿದ್ದಂತೆ ಕಂಡುಬಂತು. ಒಮ್ಮೆ ಅರ್ಜಿ ತರಲು, ಒಮ್ಮೆ ಅರ್ಜಿ ಸಲ್ಲಿಸಲು, ಒಟ್ಟು ಎರಡು ಬಾರಿ ಕಛೇರಿಗೆ ಹೋಗಬೇಕಾಯಿತು. ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರೆ ಮೊದಲ ದಿನವೇ ಅರ್ಜಿ ಸಲ್ಲಿಸಬಹುದಿತ್ತು. ಬೇಕಿದ್ದಲ್ಲಿ ಅಫಿಡವಿಟ್ ಮಾಡಿಸಲು ಅಲ್ಲೇ ಪಕ್ಕದ ಪಂಪಮಹಾಕವಿ ರಸ್ತೆಯಲ್ಲಿ ಸ್ಟ್ಯಾಂಪ್ ಪೇಪರ್ ಮತ್ತು ಟೈಪ್ ಮಾಡಿಕೊಡುವ ಜನ ಇದ್ದಾರೆ. ದತ್ತಿ ಇಲಾಖೆಯ ಸಿಬ್ಬಂದಿಗೆ ಕೇಳಿದರೆ ಆ ಮಾಹಿತಿ ಕೊಡುತ್ತಾರೆ.

ಅರ್ಜಿ ಸಲ್ಲಿಸಲು ಆದ ಒಟ್ಟು ಖರ್ಚು(ತಿರುಗಾಟ ಹೊರತುಪಡಿಸಿ):
  • ಸ್ಟ್ಯಾಂಪ್ ಪೇಪರ್ : ಮೂವತ್ತು ರೂಪಾಯಿ (೨೦ ರೂ ಬೆಲೆ + ೧೦ ರೂ ಕಮಿಶನ್) - ನಾನೇ ಟೈಪ್ ಮಾಡಿ ಪ್ರಿಂಟ್ ಹಾಕಿಕೊಂಡಿದ್ದರಿಂದ  ಟೈಪಿಂಗ್  ಮಾಡಿಸುವ ಖರ್ಚು ಉಳಿಯಿತು.
  • ಪಾಸ್ ಪೋರ್ಟಿನ ಮೂರು ಪುಟ ಗಳ ಕಲರ್ ಝೆರಾಕ್ಸಿಗೆ ಮೂವತ್ತು ರೂ
  • ಬೇರೆಲ್ಲಾ ದಾಖಲೆಗಳ ಝೆರಾಕ್ಸಿಗೆ ಒಟ್ಟು ೧೦ ರೂ.
ಇತರ ಒಂದಿಷ್ಟು ಮಾಹಿತಿಗಳು:
  • ಯಾತ್ರಿಗಳ ಪರವಾಗಿ ಬೇರೆಯವರು ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ ಯಾತ್ರಿಯ ಸಹಿ ಮತ್ತು ಎಲ್ಲಾ ದಾಖಲೆಗಳ ಮೂಲಪ್ರತಿಗಳನ್ನು ತೆಗೆದುಕೊಂಡು ಹೋಗುವುದು ಕಡ್ಡಾಯ. (ನನ್ನ ತಾಯಿಯವರ ಸಹಿಯನ್ನು ಹಾಕಿಸಿಕೊಂಡು ಅವರ ಪರವಾಗಿ ಹೋಗಿ ನಾನು ಅರ್ಜಿ ಸಲ್ಲಿಸಿದ್ದೇನೆ)
  • ಚಾರ್ ಧಾಮ್ ಯಾತ್ರೆಗೆ ಮುಖ್ಯವಾಗಿ ಪಿಲಿಗ್ರಿಮೇಜ್ ಕಾರ್ಡ್ ಜೊತೆಗೆ ಮೇಲೆ ಹೇಳಿದ ಕೆಲವು ದಾಖಲೆಗಳು ಸಾಕಾಗುತ್ತವೆ.
  • ಸಹಾಯಧನಕ್ಕೆ ಅಂತ ಇಂತಿಷ್ಟು ಬಜೆಟ್ ನಿಗದಿಯಾಗಿರುವುದರಿಂದ ಹೆಚ್ಚು ಜನ ಅರ್ಜಿ ಸಲ್ಲಿಸಿದರೆ ಸಾಮಾನ್ಯವಾಗಿ ಲಾಟರಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. (ಸುಮಾರು ೧೫೦೦ ಕೈಲಾಸ ಯಾತ್ರಿಕರಿಗೆ ಸಿಗಬಹುದು)
  • ಜನವರಿಯಲ್ಲಿ ಈ ಪ್ರಕ್ರಿಯೆ ನಡೆದು ಅರ್ಜಿದಾರದ ಖಾತೆಗೆ ಹಣ ಜಮೆಯಾಗುತ್ತದೆ ಎಂದು ತಿಳಿಸಲಾಗಿದೆ.  (ಜನವರಿ ತಿಂಗಳ ಕೊನೆಯ ದಿನವಾದ ಇಂದಿವರೆಗೆ ಬಂದಿಲ್ಲ, ಮುಂದೆ ಮಾಹಿತಿ ನವೀಕರಿಸುತ್ತೇನೆ)
ಫೆಬ್ರವರಿ ಹದಿಮೂರನೇ ತಾರೀಖು ಮೂವತ್ತು ಸಾವಿರ ರೂಪಾಯಿಗಳ ಸಹಾಯಧನವು ಸರ್ಕಾರದಿಂದ ನಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆ.