'ಭಾಷೆ' ಎನ್ನುವುದು ನನಗೆ ಮೊದಲಿಂದಲೂ ಆಸಕ್ತಿಯ ವಿಷಯ. ಇವತ್ತಿಗೂ ಯಾವುದಾದರೂ ದೇಶದ ಬಗ್ಗೆ, ಪ್ರದೇಶದ ಬಗ್ಗೆ ತಿಳಿದುಕೊಳ್ಳುವಾಗ ಅಲ್ಲಿನ ಭಾಷೆಗಳ ಬಗ್ಗೆ ಕುತೂಹಲವಿಟ್ಟುಕೊಂಡು ತಿಳಿದುಕೊಳ್ಳುತ್ತೇನೆ. ಸಣ್ಣವನಿದ್ದಾಗಿಂದಲೂ ಬೇರೆ ಬೇರೆ ಭಾಷೆಗಳ ಲಿಪಿಗಳನ್ನು ಬರೆಯಲು ಪ್ರಯತ್ನಿಸುವುದನ್ನು ಮಾಡಿಕೊಂಡೇ ಬಂದಿದ್ದೇನೆ. ಸಹಜವಾಗಿ ಕನ್ನಡ ನನಗೆ ಅತ್ಯಂತ ಪ್ರಿಯವಾದ ಭಾಷೆ. ನನ್ನ ತಾಯ್ನುಡಿಯಾದ್ದರಿಂದ ಅದು ನನಗೆ ಅತಿ ಸುಲಭವೆನಿಸುವ ಭಾಷೆಯೂ ಹೌದು. ನಮ್ಮ ಮನೆಮಾತು ಹವ್ಯಕ ಕನ್ನಡವಾಗಿದ್ದರೂ ಕೂಡ ನನಗೆ ಹಳೆಮೈಸೂರುಸೀಮೆಯ ಕನ್ನಡವೇ ಹೆಚ್ಚು ಸುಲಭದ ಆಡುಮಾತಾಗಿ ರೂಢಿಯಾಗಿ ಹೋಗಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಸ್ವರೂಪ ಇರುತ್ತದೆ, ವಿಶಿಷ್ಟತೆ ಇರುತ್ತದೆ, ವ್ಯಾಕರಣವಿರುತ್ತದೆ. ಭಾರತರ ಭಾಷಾವೈವಿಧ್ಯದ ಬಗ್ಗೆ ನನಗೆ ಅಚ್ಚರಿಯೂ ಹೆಮ್ಮೆಯೂ ಇದೆ. ಆದರೆ ಇಂಗ್ಲೀಷು, ಹಿಂದಿ ಸೇರಿದಂತೆ ಯಾವ ಭಾಷೆಯಾದರೂ ಅವು ಕರ್ನಾಟಕದಲ್ಲಿ ಕನ್ನಡದ ಮೇಲೆ ಸವಾರಿ ಮಾಡುವುದನ್ನು ವಿರೋಧಿಸುತ್ತೇನೆ. ಒಂದು ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಅದರ ಬಳಕೆ ಮತ್ತು ತಿಳುವಳಿಕೆ ಬಹಳ ಮುಖ್ಯ. ನಮ್ಮ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸ ಅಂದರೆ ಅದು ನಮ್ಮದೇ ನೆಲದ ಭಾಷೆಯಿಂದ ನಮ್ಮನ್ನು ವರ್ಷಾನುಗಟ್ಟಲೆ, ಮತ್ತು ಕೊನೆಯವರೆಗೂ ದೂರವಿಟ್ಟುಬಿಡುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೋದರಂತೂ ನಮ್ಮ ಭಾಷೆಗಳ ಅಗತ್ಯತೆ ಗೌಣವಾಗಿಬಿಡುತ್ತದೆ. ಅಗತ್ಯವಿರುವ ಕೆಲವರು ಫ್ರೆಂಚ್, ಜರ್ಮನ್, ಜಪಾನಿ ಮುಂತಾದ ಭಾಷೆಗಳನ್ನು ಕಲಿಯುತ್ತಾರೆ. ಅಗತ್ಯವಿರದ ಕೆಲವರೂ ಸುಮ್ಮನೇ ಆಸಕ್ತಿಗೆ ಕಲಿಯಲು ಹೊರಡುತ್ತಾರೆ. ಇರಲಿ.
ನನಗೆ ಆಡುಮಾತಾಗಿ, ನನ್ನ ಓದಿನ ಭಾಷೆಯಾಗಿ ಕನ್ನಡ ಚೆನ್ನಾಗಿ ರೂಢಿಯಾಗಿದ್ದರೂ ಕೂಡ ಇದುವರೆಗೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಲು ಆಗಿರಲಿಲ್ಲ. ಫ್ರೌಡಶಾಲೆಯಲ್ಲಿ, ಪಿ.ಯುಸಿ.ಯಲ್ಲಿ ಮೊದಲ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದರಿಂದ ಕನ್ನಡ ವ್ಯಾಕರಣದ ಓದು ಹೆಚ್ಚೇನೂ ಆಗಲಿಲ್ಲ. ಆಮೇಲೆ ವೃತ್ತಿಪರ ಶಿಕ್ಷಣಕ್ಕೆ ಹೋದಮೇಲೆ, ಮತ್ತು ಕೆಲಸಕ್ಕೆ ಸೇರಿದ ಮೇಲೆ ಭಾಷೆ, ವ್ಯಾಕರಣ ನೆನಪಿಗೇ ಬರದಷ್ಟು ದೂರವಾಗಿಬಿಟ್ಟಿತ್ತು. ಸುಮಾರು ವರ್ಷಗಳ ಅನಂತರ ಇತ್ತೀಚೆಗೆ ಮತ್ಯಾಕೋ ಕನ್ನಡ ವ್ಯಾಕರಣವನ್ನು ಓದಿ ತಿಳಿದುಕೊಳ್ಳುವ ಆಸಕ್ತಿ ಮತ್ತೆ ಚಿಗುರಿತ್ತು. ಎಲ್ಲೋ ದುಡ್ಡು ಸುರಿದು ಯಾವುದೋ ವಿದೇಶಿ ಭಾಷೆಯ ಕಲಿಕೆಗೆ ಹೊರಟು, ಕಲಿತು ಮರೆಯುವ ಬದಲು ಮೊದಲು ನಮ್ಮದೇ ಭಾಷೆಯನ್ನು ಸ್ವಲ್ಪ ಜಾಸ್ತಿ ತಿಳಿದುಕೊಳ್ಳುವುದು ಒಳ್ಳೆಯದು ಅಂತಲೂ ಅನ್ನಿಸಿತ್ತು.. ಸದ್ಯಕ್ಕಂತೂ ಯಾವ ತರಗತಿಯಲ್ಲಿ ಹೋಗಿ ಕೂತು ಕಲಿಯಲಿಕ್ಕಂತೂ ಆಗುವುದಿಲ್ಲ. ಆದ್ದರಿಂದ ನಾನೇ ಸ್ವಂತ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಅಂದುಕೊಂಡೆ.. ಕೆಲ ತಿಂಗಳುಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಳಿಗೆಗೆ ಹೋಗಿದ್ದಾಗ ಕನ್ನಡ ವ್ಯಾಕರಣ ಪುಸ್ತಕಗಳು ಕಾಣಿಸಿದ್ದವು. ಪಂಜೆ ಮಂಗೇಶರಾಯರು ಬರೆದ ‘ಕನ್ನಡ ಮೂಲ ವ್ಯಾಕರಣ‘, ರಂಗನಾಥ ಶರ್ಮರ ‘ಹೊಸಗನ್ನಡ ವ್ಯಾಕರಣ‘ ಪುಸ್ತಕಗಳನ್ನು ಕೊಂಡು ತಂದಿಟ್ಟಿದ್ದೆ. . ಮೊನ್ನೆ ಸಾಹಿತ್ಯ ಸಮ್ಮೇಳನ ಆದಾಗಿಂದ ಓದಲು ಶುರುಮಾಡಿದ್ದೇನೆ. ಮೊದಲಿಗೆ ‘ಕನ್ನಡ ಮೂಲ ವ್ಯಾಕರಣ‘ ಪುಸ್ತಕಕ್ಕೆ ಕೈಹಾಕಿದ್ದೇನೆ. ಇದು ಸಾಂಪ್ರದಾಯಿಕ ಶೈಲಿಯಲ್ಲಿಲ್ಲ. ಮೊದಲು ವಿಷಯ ವಿವರಿಸಿ ಆಮೇಲೆ ಉದಾಹರಣೆ ಕೊಡುವ ಬದಲು ಮೊದಲೇ ಉದಾಹರಣೆ, ಪ್ರಯೋಗಗಳನ್ನು ಕೊಟ್ಟು ವಿವರಿಸಿ ಅದರ ಮೂಲಕ ವ್ಯಾಕರಣದ ವಿಷಯಗಳನ್ನು ಹೇಳಿದ್ದಾರೆ. ನಾಮಪದ, ಕ್ರಿಯಾಪದ, ಲಿಂಗ, ವಚನ, ವಿಭಕ್ತಿ, ಪ್ರತ್ಯಯ, ಸಂಧಿ, ಸಮಾಸ, ಕರ್ತರಿ, ಕರ್ಮಣಿ ಪ್ರಯೋಗ....ಹ್ಮ್.... ಇನ್ನೂ ಏನೇನೋ ಇದೆ. ಒಂದೊಂದೇ ನಿಧಾನಕ್ಕೆ ಓದುತ್ತಿದ್ದೇನೆ. ಎರಡೂ ಪುಸ್ತಕಗಳೂ ಚಿಕ್ಕದಾಗಿ ಚೊಕ್ಕದಾಗಿವೆ. ಈ ಪುಸ್ತಕಗಳನ್ನು ಓದಾದ ಮೇಲೆ ಕನ್ನಡ ವ್ಯಾಕರಣವನ್ನು ಬೇರೆ ಆಯಾಮದಿಂದ ಹೇಳುವ ಶಂಕರಭಟ್ಟರ 'ಕನ್ನಡ ಸೊಲ್ಲರಿಮೆ' ಪುಸ್ತಕವನ್ನೂ ಓದಬೇಕಿದೆ. ಕನ್ನಡ ವ್ಯಾಕರಣ ಓದಿಗೆ ದಿನಾ ಅರ್ಧ-ಮುಕ್ಕಾಲು ತಾಸು ಎತ್ತಿಟ್ಟಿದ್ದೇನೆ. ಚೆನ್ನಾಗನಿಸುತ್ತಿದೆ. ವ್ಯಾಕರಣ & ಪುಸ್ತಕಗಳ ಬಗ್ಗೆ ಸಲಹೆಗಳೇನಾದರೂ ಇದ್ದರೆ ಕೊಡಿ..
ಗೆಳೆಯರಿಗೆ ಹೇಳಿದರೆ ಕೆಲವರು ಅದನ್ನೆಲ್ಲಾ ಓದಿ ಯಾಕೆ ಟೈಂವೇಸ್ಟ್ ಮಾಡ್ತೀಯಾ, ಟೆಕ್ನಿಕಲ್ ಬುಕ್ಸ್ ಓದು, ಅದರಿಂದ ಪ್ರಯೋಜನವಾಗುತ್ತೆ ಅನ್ನುತ್ತಾರೆ. ಅದು ನಿಜ. ಆದರೂ ಇರಲಿ. ಅದನ್ನೂ ಮಾಡೋಣ, ಇದನ್ನೂ ಮಾಡೋಣ. ಆಸಕ್ತಿ ಇರುವ ಎಲ್ಲವನ್ನೂ ಮಾಡೋಣ. ಎಲ್ಲದಕ್ಕೂ ಟೈಂ ಇದೆ. ಲೈಫು ಇಷ್ಟೇ ಏನಲ್ಲವಲ್ಲ!
****
ಈ ನಡುವೆ ಹಿಂದಿನ ವಾರ ದಾಂಡೇಲಿ, ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸ/ಚಾರಣ ಹೋಗಿಬಂದೆ. ಖುಷಿಯಾಯಿತು. ಆದರೆ ಎರಡು ದಿನ ಏನೇನೂ ಸಾಕಾಗಲಿಲ್ಲ. ಮೂಲತಃ ಉತ್ತರಕನ್ನಡ ಜಿಲ್ಲೆಯವನಾಗಿದ್ದರೂ ಶಿರಸಿಯ ಸುತ್ತಲಿನ ಕೆಲವು ಸ್ಥಳಗಳನ್ನು ಬಿಟ್ಟು ನನಗೆ ಆ ಜಿಲ್ಲೆಯನ್ನು ನೋಡಲು, ತಿರುಗಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಮತ್ತೆ ಹೋಗಬೇಕು.. ಮತ್ತೆ ಮತ್ತೆ ಹೋಗಬೇಕು.. explore ಮಾಡಬೇಕು...
ನನಗೆ ಆಡುಮಾತಾಗಿ, ನನ್ನ ಓದಿನ ಭಾಷೆಯಾಗಿ ಕನ್ನಡ ಚೆನ್ನಾಗಿ ರೂಢಿಯಾಗಿದ್ದರೂ ಕೂಡ ಇದುವರೆಗೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಲು ಆಗಿರಲಿಲ್ಲ. ಫ್ರೌಡಶಾಲೆಯಲ್ಲಿ, ಪಿ.ಯುಸಿ.ಯಲ್ಲಿ ಮೊದಲ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದರಿಂದ ಕನ್ನಡ ವ್ಯಾಕರಣದ ಓದು ಹೆಚ್ಚೇನೂ ಆಗಲಿಲ್ಲ. ಆಮೇಲೆ ವೃತ್ತಿಪರ ಶಿಕ್ಷಣಕ್ಕೆ ಹೋದಮೇಲೆ, ಮತ್ತು ಕೆಲಸಕ್ಕೆ ಸೇರಿದ ಮೇಲೆ ಭಾಷೆ, ವ್ಯಾಕರಣ ನೆನಪಿಗೇ ಬರದಷ್ಟು ದೂರವಾಗಿಬಿಟ್ಟಿತ್ತು. ಸುಮಾರು ವರ್ಷಗಳ ಅನಂತರ ಇತ್ತೀಚೆಗೆ ಮತ್ಯಾಕೋ ಕನ್ನಡ ವ್ಯಾಕರಣವನ್ನು ಓದಿ ತಿಳಿದುಕೊಳ್ಳುವ ಆಸಕ್ತಿ ಮತ್ತೆ ಚಿಗುರಿತ್ತು. ಎಲ್ಲೋ ದುಡ್ಡು ಸುರಿದು ಯಾವುದೋ ವಿದೇಶಿ ಭಾಷೆಯ ಕಲಿಕೆಗೆ ಹೊರಟು, ಕಲಿತು ಮರೆಯುವ ಬದಲು ಮೊದಲು ನಮ್ಮದೇ ಭಾಷೆಯನ್ನು ಸ್ವಲ್ಪ ಜಾಸ್ತಿ ತಿಳಿದುಕೊಳ್ಳುವುದು ಒಳ್ಳೆಯದು ಅಂತಲೂ ಅನ್ನಿಸಿತ್ತು.. ಸದ್ಯಕ್ಕಂತೂ ಯಾವ ತರಗತಿಯಲ್ಲಿ ಹೋಗಿ ಕೂತು ಕಲಿಯಲಿಕ್ಕಂತೂ ಆಗುವುದಿಲ್ಲ. ಆದ್ದರಿಂದ ನಾನೇ ಸ್ವಂತ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಅಂದುಕೊಂಡೆ.. ಕೆಲ ತಿಂಗಳುಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಳಿಗೆಗೆ ಹೋಗಿದ್ದಾಗ ಕನ್ನಡ ವ್ಯಾಕರಣ ಪುಸ್ತಕಗಳು ಕಾಣಿಸಿದ್ದವು. ಪಂಜೆ ಮಂಗೇಶರಾಯರು ಬರೆದ ‘ಕನ್ನಡ ಮೂಲ ವ್ಯಾಕರಣ‘, ರಂಗನಾಥ ಶರ್ಮರ ‘ಹೊಸಗನ್ನಡ ವ್ಯಾಕರಣ‘ ಪುಸ್ತಕಗಳನ್ನು ಕೊಂಡು ತಂದಿಟ್ಟಿದ್ದೆ. . ಮೊನ್ನೆ ಸಾಹಿತ್ಯ ಸಮ್ಮೇಳನ ಆದಾಗಿಂದ ಓದಲು ಶುರುಮಾಡಿದ್ದೇನೆ. ಮೊದಲಿಗೆ ‘ಕನ್ನಡ ಮೂಲ ವ್ಯಾಕರಣ‘ ಪುಸ್ತಕಕ್ಕೆ ಕೈಹಾಕಿದ್ದೇನೆ. ಇದು ಸಾಂಪ್ರದಾಯಿಕ ಶೈಲಿಯಲ್ಲಿಲ್ಲ. ಮೊದಲು ವಿಷಯ ವಿವರಿಸಿ ಆಮೇಲೆ ಉದಾಹರಣೆ ಕೊಡುವ ಬದಲು ಮೊದಲೇ ಉದಾಹರಣೆ, ಪ್ರಯೋಗಗಳನ್ನು ಕೊಟ್ಟು ವಿವರಿಸಿ ಅದರ ಮೂಲಕ ವ್ಯಾಕರಣದ ವಿಷಯಗಳನ್ನು ಹೇಳಿದ್ದಾರೆ. ನಾಮಪದ, ಕ್ರಿಯಾಪದ, ಲಿಂಗ, ವಚನ, ವಿಭಕ್ತಿ, ಪ್ರತ್ಯಯ, ಸಂಧಿ, ಸಮಾಸ, ಕರ್ತರಿ, ಕರ್ಮಣಿ ಪ್ರಯೋಗ....ಹ್ಮ್.... ಇನ್ನೂ ಏನೇನೋ ಇದೆ. ಒಂದೊಂದೇ ನಿಧಾನಕ್ಕೆ ಓದುತ್ತಿದ್ದೇನೆ. ಎರಡೂ ಪುಸ್ತಕಗಳೂ ಚಿಕ್ಕದಾಗಿ ಚೊಕ್ಕದಾಗಿವೆ. ಈ ಪುಸ್ತಕಗಳನ್ನು ಓದಾದ ಮೇಲೆ ಕನ್ನಡ ವ್ಯಾಕರಣವನ್ನು ಬೇರೆ ಆಯಾಮದಿಂದ ಹೇಳುವ ಶಂಕರಭಟ್ಟರ 'ಕನ್ನಡ ಸೊಲ್ಲರಿಮೆ' ಪುಸ್ತಕವನ್ನೂ ಓದಬೇಕಿದೆ. ಕನ್ನಡ ವ್ಯಾಕರಣ ಓದಿಗೆ ದಿನಾ ಅರ್ಧ-ಮುಕ್ಕಾಲು ತಾಸು ಎತ್ತಿಟ್ಟಿದ್ದೇನೆ. ಚೆನ್ನಾಗನಿಸುತ್ತಿದೆ. ವ್ಯಾಕರಣ & ಪುಸ್ತಕಗಳ ಬಗ್ಗೆ ಸಲಹೆಗಳೇನಾದರೂ ಇದ್ದರೆ ಕೊಡಿ..
ಗೆಳೆಯರಿಗೆ ಹೇಳಿದರೆ ಕೆಲವರು ಅದನ್ನೆಲ್ಲಾ ಓದಿ ಯಾಕೆ ಟೈಂವೇಸ್ಟ್ ಮಾಡ್ತೀಯಾ, ಟೆಕ್ನಿಕಲ್ ಬುಕ್ಸ್ ಓದು, ಅದರಿಂದ ಪ್ರಯೋಜನವಾಗುತ್ತೆ ಅನ್ನುತ್ತಾರೆ. ಅದು ನಿಜ. ಆದರೂ ಇರಲಿ. ಅದನ್ನೂ ಮಾಡೋಣ, ಇದನ್ನೂ ಮಾಡೋಣ. ಆಸಕ್ತಿ ಇರುವ ಎಲ್ಲವನ್ನೂ ಮಾಡೋಣ. ಎಲ್ಲದಕ್ಕೂ ಟೈಂ ಇದೆ. ಲೈಫು ಇಷ್ಟೇ ಏನಲ್ಲವಲ್ಲ!
****
ಈ ನಡುವೆ ಹಿಂದಿನ ವಾರ ದಾಂಡೇಲಿ, ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸ/ಚಾರಣ ಹೋಗಿಬಂದೆ. ಖುಷಿಯಾಯಿತು. ಆದರೆ ಎರಡು ದಿನ ಏನೇನೂ ಸಾಕಾಗಲಿಲ್ಲ. ಮೂಲತಃ ಉತ್ತರಕನ್ನಡ ಜಿಲ್ಲೆಯವನಾಗಿದ್ದರೂ ಶಿರಸಿಯ ಸುತ್ತಲಿನ ಕೆಲವು ಸ್ಥಳಗಳನ್ನು ಬಿಟ್ಟು ನನಗೆ ಆ ಜಿಲ್ಲೆಯನ್ನು ನೋಡಲು, ತಿರುಗಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಮತ್ತೆ ಹೋಗಬೇಕು.. ಮತ್ತೆ ಮತ್ತೆ ಹೋಗಬೇಕು.. explore ಮಾಡಬೇಕು...