ಮಂಗಳವಾರ, ಫೆಬ್ರವರಿ 22, 2011

ಕನ್ನಡ ವ್ಯಾಕರಣಕ್ಕೆ ಕೈಯಿಟ್ಟಿದ್ದೇನೆ..

'ಭಾಷೆ' ಎನ್ನುವುದು ನನಗೆ ಮೊದಲಿಂದಲೂ ಆಸಕ್ತಿಯ ವಿಷಯ. ಇವತ್ತಿಗೂ ಯಾವುದಾದರೂ ದೇಶದ ಬಗ್ಗೆ, ಪ್ರದೇಶದ ಬಗ್ಗೆ ತಿಳಿದುಕೊಳ್ಳುವಾಗ ಅಲ್ಲಿನ ಭಾಷೆಗಳ ಬಗ್ಗೆ ಕುತೂಹಲವಿಟ್ಟುಕೊಂಡು ತಿಳಿದುಕೊಳ್ಳುತ್ತೇನೆ. ಸಣ್ಣವನಿದ್ದಾಗಿಂದಲೂ ಬೇರೆ ಬೇರೆ ಭಾಷೆಗಳ ಲಿಪಿಗಳನ್ನು ಬರೆಯಲು ಪ್ರಯತ್ನಿಸುವುದನ್ನು ಮಾಡಿಕೊಂಡೇ ಬಂದಿದ್ದೇನೆ. ಸಹಜವಾಗಿ ಕನ್ನಡ ನನಗೆ ಅತ್ಯಂತ ಪ್ರಿಯವಾದ ಭಾಷೆ. ನನ್ನ ತಾಯ್ನುಡಿಯಾದ್ದರಿಂದ ಅದು ನನಗೆ ಅತಿ ಸುಲಭವೆನಿಸುವ ಭಾಷೆಯೂ ಹೌದು. ನಮ್ಮ ಮನೆಮಾತು ಹವ್ಯಕ ಕನ್ನಡವಾಗಿದ್ದರೂ ಕೂಡ ನನಗೆ ಹಳೆಮೈಸೂರುಸೀಮೆಯ ಕನ್ನಡವೇ ಹೆಚ್ಚು ಸುಲಭದ ಆಡುಮಾತಾಗಿ ರೂಢಿಯಾಗಿ ಹೋಗಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಸ್ವರೂಪ ಇರುತ್ತದೆ, ವಿಶಿಷ್ಟತೆ ಇರುತ್ತದೆ, ವ್ಯಾಕರಣವಿರುತ್ತದೆ. ಭಾರತರ ಭಾಷಾವೈವಿಧ್ಯದ ಬಗ್ಗೆ ನನಗೆ ಅಚ್ಚರಿಯೂ ಹೆಮ್ಮೆಯೂ ಇದೆ. ಆದರೆ ಇಂಗ್ಲೀಷು, ಹಿಂದಿ ಸೇರಿದಂತೆ ಯಾವ ಭಾಷೆಯಾದರೂ ಅವು ಕರ್ನಾಟಕದಲ್ಲಿ ಕನ್ನಡದ ಮೇಲೆ ಸವಾರಿ ಮಾಡುವುದನ್ನು ವಿರೋಧಿಸುತ್ತೇನೆ. ಒಂದು ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಅದರ ಬಳಕೆ ಮತ್ತು ತಿಳುವಳಿಕೆ ಬಹಳ ಮುಖ್ಯ. ನಮ್ಮ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸ ಅಂದರೆ ಅದು ನಮ್ಮದೇ ನೆಲದ ಭಾಷೆಯಿಂದ ನಮ್ಮನ್ನು ವರ್ಷಾನುಗಟ್ಟಲೆ, ಮತ್ತು ಕೊನೆಯವರೆಗೂ ದೂರವಿಟ್ಟುಬಿಡುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೋದರಂತೂ ನಮ್ಮ ಭಾಷೆಗಳ ಅಗತ್ಯತೆ ಗೌಣವಾಗಿಬಿಡುತ್ತದೆ. ಅಗತ್ಯವಿರುವ ಕೆಲವರು ಫ್ರೆಂಚ್, ಜರ್ಮನ್, ಜಪಾನಿ ಮುಂತಾದ ಭಾಷೆಗಳನ್ನು ಕಲಿಯುತ್ತಾರೆ. ಅಗತ್ಯವಿರದ ಕೆಲವರೂ ಸುಮ್ಮನೇ ಆಸಕ್ತಿಗೆ ಕಲಿಯಲು ಹೊರಡುತ್ತಾರೆ. ಇರಲಿ.

ನನಗೆ ಆಡುಮಾತಾಗಿ, ನನ್ನ ಓದಿನ ಭಾಷೆಯಾಗಿ ಕನ್ನಡ ಚೆನ್ನಾಗಿ ರೂಢಿಯಾಗಿದ್ದರೂ ಕೂಡ ಇದುವರೆಗೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಲು ಆಗಿರಲಿಲ್ಲ. ಫ್ರೌಡಶಾಲೆಯಲ್ಲಿ, ಪಿ.ಯುಸಿ.ಯಲ್ಲಿ ಮೊದಲ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದರಿಂದ ಕನ್ನಡ ವ್ಯಾಕರಣದ ಓದು ಹೆಚ್ಚೇನೂ ಆಗಲಿಲ್ಲ. ಆಮೇಲೆ ವೃತ್ತಿಪರ ಶಿಕ್ಷಣಕ್ಕೆ ಹೋದಮೇಲೆ, ಮತ್ತು ಕೆಲಸಕ್ಕೆ ಸೇರಿದ ಮೇಲೆ ಭಾಷೆ, ವ್ಯಾಕರಣ ನೆನಪಿಗೇ ಬರದಷ್ಟು ದೂರವಾಗಿಬಿಟ್ಟಿತ್ತು. ಸುಮಾರು ವರ್ಷಗಳ ಅನಂತರ ಇತ್ತೀಚೆಗೆ ಮತ್ಯಾಕೋ ಕನ್ನಡ ವ್ಯಾಕರಣವನ್ನು ಓದಿ ತಿಳಿದುಕೊಳ್ಳುವ ಆಸಕ್ತಿ ಮತ್ತೆ ಚಿಗುರಿತ್ತು. ಎಲ್ಲೋ ದುಡ್ಡು ಸುರಿದು ಯಾವುದೋ ವಿದೇಶಿ ಭಾಷೆಯ ಕಲಿಕೆಗೆ ಹೊರಟು, ಕಲಿತು ಮರೆಯುವ ಬದಲು ಮೊದಲು ನಮ್ಮದೇ ಭಾಷೆಯನ್ನು ಸ್ವಲ್ಪ ಜಾಸ್ತಿ ತಿಳಿದುಕೊಳ್ಳುವುದು ಒಳ್ಳೆಯದು ಅಂತಲೂ ಅನ್ನಿಸಿತ್ತು.. ಸದ್ಯಕ್ಕಂತೂ ಯಾವ ತರಗತಿಯಲ್ಲಿ ಹೋಗಿ ಕೂತು ಕಲಿಯಲಿಕ್ಕಂತೂ ಆಗುವುದಿಲ್ಲ. ಆದ್ದರಿಂದ ನಾನೇ ಸ್ವಂತ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಅಂದುಕೊಂಡೆ.. ಕೆಲ ತಿಂಗಳುಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಳಿಗೆಗೆ ಹೋಗಿದ್ದಾಗ ಕನ್ನಡ ವ್ಯಾಕರಣ ಪುಸ್ತಕಗಳು ಕಾಣಿಸಿದ್ದವು. ಪಂಜೆ ಮಂಗೇಶರಾಯರು ಬರೆದ ‘ಕನ್ನಡ ಮೂಲ ವ್ಯಾಕರಣ‘, ರಂಗನಾಥ ಶರ್ಮರ ‘ಹೊಸಗನ್ನಡ ವ್ಯಾಕರಣ‘ ಪುಸ್ತಕಗಳನ್ನು ಕೊಂಡು ತಂದಿಟ್ಟಿದ್ದೆ. . ಮೊನ್ನೆ ಸಾಹಿತ್ಯ ಸಮ್ಮೇಳನ ಆದಾಗಿಂದ ಓದಲು ಶುರುಮಾಡಿದ್ದೇನೆ. ಮೊದಲಿಗೆ ‘ಕನ್ನಡ ಮೂಲ ವ್ಯಾಕರಣ‘ ಪುಸ್ತಕಕ್ಕೆ ಕೈಹಾಕಿದ್ದೇನೆ. ಇದು ಸಾಂಪ್ರದಾಯಿಕ ಶೈಲಿಯಲ್ಲಿಲ್ಲ. ಮೊದಲು ವಿಷಯ ವಿವರಿಸಿ ಆಮೇಲೆ ಉದಾಹರಣೆ ಕೊಡುವ ಬದಲು ಮೊದಲೇ ಉದಾಹರಣೆ, ಪ್ರಯೋಗಗಳನ್ನು ಕೊಟ್ಟು ವಿವರಿಸಿ ಅದರ ಮೂಲಕ ವ್ಯಾಕರಣದ ವಿಷಯಗಳನ್ನು ಹೇಳಿದ್ದಾರೆ. ನಾಮಪದ, ಕ್ರಿಯಾಪದ, ಲಿಂಗ, ವಚನ, ವಿಭಕ್ತಿ, ಪ್ರತ್ಯಯ, ಸಂಧಿ, ಸಮಾಸ, ಕರ್ತರಿ, ಕರ್ಮಣಿ ಪ್ರಯೋಗ....ಹ್ಮ್.... ಇನ್ನೂ ಏನೇನೋ ಇದೆ. ಒಂದೊಂದೇ ನಿಧಾನಕ್ಕೆ ಓದುತ್ತಿದ್ದೇನೆ. ಎರಡೂ ಪುಸ್ತಕಗಳೂ ಚಿಕ್ಕದಾಗಿ ಚೊಕ್ಕದಾಗಿವೆ. ಈ ಪುಸ್ತಕಗಳನ್ನು ಓದಾದ ಮೇಲೆ ಕನ್ನಡ ವ್ಯಾಕರಣವನ್ನು ಬೇರೆ ಆಯಾಮದಿಂದ ಹೇಳುವ ಶಂಕರಭಟ್ಟರ 'ಕನ್ನಡ ಸೊಲ್ಲರಿಮೆ' ಪುಸ್ತಕವನ್ನೂ ಓದಬೇಕಿದೆ. ಕನ್ನಡ ವ್ಯಾಕರಣ ಓದಿಗೆ ದಿನಾ ಅರ್ಧ-ಮುಕ್ಕಾಲು ತಾಸು ಎತ್ತಿಟ್ಟಿದ್ದೇನೆ. ಚೆನ್ನಾಗನಿಸುತ್ತಿದೆ. ವ್ಯಾಕರಣ & ಪುಸ್ತಕಗಳ ಬಗ್ಗೆ ಸಲಹೆಗಳೇನಾದರೂ ಇದ್ದರೆ ಕೊಡಿ..

ಗೆಳೆಯರಿಗೆ ಹೇಳಿದರೆ ಕೆಲವರು ಅದನ್ನೆಲ್ಲಾ ಓದಿ ಯಾಕೆ ಟೈಂವೇಸ್ಟ್ ಮಾಡ್ತೀಯಾ, ಟೆಕ್ನಿಕಲ್ ಬುಕ್ಸ್ ಓದು, ಅದರಿಂದ ಪ್ರಯೋಜನವಾಗುತ್ತೆ ಅನ್ನುತ್ತಾರೆ. ಅದು ನಿಜ. ಆದರೂ ಇರಲಿ. ಅದನ್ನೂ ಮಾಡೋಣ, ಇದನ್ನೂ ಮಾಡೋಣ. ಆಸಕ್ತಿ ಇರುವ ಎಲ್ಲವನ್ನೂ ಮಾಡೋಣ. ಎಲ್ಲದಕ್ಕೂ ಟೈಂ ಇದೆ. ಲೈಫು ಇಷ್ಟೇ ಏನಲ್ಲವಲ್ಲ!

****

ಈ ನಡುವೆ ಹಿಂದಿನ ವಾರ ದಾಂಡೇಲಿ, ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸ/ಚಾರಣ ಹೋಗಿಬಂದೆ. ಖುಷಿಯಾಯಿತು. ಆದರೆ ಎರಡು ದಿನ ಏನೇನೂ ಸಾಕಾಗಲಿಲ್ಲ. ಮೂಲತಃ ಉತ್ತರಕನ್ನಡ ಜಿಲ್ಲೆಯವನಾಗಿದ್ದರೂ ಶಿರಸಿಯ ಸುತ್ತಲಿನ ಕೆಲವು ಸ್ಥಳಗಳನ್ನು ಬಿಟ್ಟು ನನಗೆ ಆ ಜಿಲ್ಲೆಯನ್ನು ನೋಡಲು, ತಿರುಗಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಮತ್ತೆ ಹೋಗಬೇಕು.. ಮತ್ತೆ ಮತ್ತೆ ಹೋಗಬೇಕು.. explore ಮಾಡಬೇಕು...

15 ಕಾಮೆಂಟ್‌ಗಳು:

Subrahmanya ಹೇಳಿದರು...

ಇದು ಒಳ್ಳೆಯ ಬೆಳವಣಿಗೆ. ನಿಮ್ಮ ಉತ್ಸಾಹ ಕಂಡು ಸಂತಸವಾಯಿತು. (Software ಉದ್ಯೋಗಿಗಳೆಲ್ಲಾ ನಿಮ್ಮಂತೆ ಮನಸು ಮಾಡಿದರೆ ಕನ್ನಡವನ್ನು ಕಂಗ್ಲಿಷ್ ನಿಂದ ರಕ್ಷಿಸಬಹುದೇನೋ !) ಮುಂದುವರಿಯಿರಿ ಶುಭವಾಗಲಿ.

ಸಲಹೆ ಕೇಳಿದ್ದಕ್ಕೆ ಹೇಳ್ತೇನೆ...ಶಂಕರಭಟ್ಟರ ಹೊಸಗನ್ನಡವನ್ನು ಓದಿ, ಉಪಯೋಗಕ್ಕೆ ಅದು ಬೇಡವೆನ್ನುತ್ತೇನೆ.

ಇದೆಲ್ಲಕ್ಕಿಂತಲೂ ಕೊನೆಯದ್ದೇ ಸೂಪರ್ ಆಗಿದೆ. ಇನ್ನೂ ಜಾಸ್ತಿ explore ಮಾಡಿ .

ತೇಜಸ್ವಿನಿ ಹೆಗಡೆ ಹೇಳಿದರು...

ಉತ್ತಮ ಬೆಳವಣಿಗೆ... ಈಗ ಸರಿಯಾದ ರೀತಿಯಲ್ಲಿ ವಿಕಾಸ-ವಾದ ಮುನ್ನೆಡೆಯುತ್ತಿದೆ :)

ಅದೆಲ್ಲಾ ಓಕೆ... ಕೊನೆಯಲ್ಲಿ "explore" ಪದ ಯಾಕೆ?!:) (ಕನ್ನಡ ಪದ ಸಿಗಲಿಲ್ಲವೇ?:-p)

ಶಾನಿ ಹೇಳಿದರು...

ನಿಮ್ಮ ವ್ಯಾಕರಣೋತ್ಸಾಹಕ್ಕೆ ಜೈ!

sunaath ಹೇಳಿದರು...

ವಿಕಾಸ,
ನಿಮಗೆ ಅಭಿನಂದನೆಗಳು. ಕನ್ನಡ ವ್ಯಾಕರಣದ ಅಧ್ಯಯನವು ನಿಜಕ್ಕೂ ಖುಶಿ ಕೊಡುವ ಸಂಗತಿಯಾಗಿದೆ. ಶಂಕರ ಭಟ್ಟರ ಪುಸ್ತಕಗಳ ಬಗೆಗೆ ನಿಮಗೆ ಮುನ್ನೆಚ್ಚರಿಕೆ ಕೊಡುವದು ಒಳ್ಳೆಯದು. ಅವರ ’ಕನ್ನಡ ಬರಹ’ ಪುಸ್ತಕವನ್ನು ಓದಿದ ಮೇಲೆ ನಾನು ಹದಿನೈದು ದಿನಗಳವರೆಗೆ ಅನಾರೋಗ್ಯದಿಂದ, ತಲೆನೋವಿನಿಂದ ಬಳಲಿದೆ.

Sandeepa ಹೇಳಿದರು...

ತುಂಬಾ ತುಂಬಾ ಸಂತೋಷದ ವಿಷಯ :-)

ಹಾಗೆಯೆ,

ತಾವು ಕಲಿಯುವುದರ ಜೊತೆಜೊತೆಗೆ, ಬ್ಲಾಗಿನಲ್ಲಿ ಬರೆದು ಹಂಚಿಕೊಂಡರೆ, ನಾವು ತಿಳಿದುಕೊಂಡತ್ತಾಗುತ್ತದೆ.

ಅಷ್ಟೇ ಅಲ್ಲ, ಕನ್ನಡ ವ್ಯಾಕರಣದ ಬಗ್ಗೆ ಕುತೂಹಲವಿರುವವರ ಕಲಿಯುವ ಆಸೆಗೊಂದಿಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ.

Shree ಹೇಳಿದರು...

ನಂದೂ ನಿಮ್ಮ ಕೇಸೇ, ವ್ಯಾಕರಣಕ್ಕೆ ನಾನೂ ಕೈಹಾಕಬೇಕಂದುಕೊಂಡು ತುಂಬಾ ದಿನವಾಯಿತು.. ಒಂದು ದಿನ ಶುರುಮಾಡಬೇಕು! :-)

Chaithrika ಹೇಳಿದರು...

ಪಾ. ವೆಂ. ಆಚಾರ್ಯರ "ಪದಾರ್ಥ ಚಿಂತಾಮಣಿ".

ಸೋಗಿಕೋರರ ಮನೆಹಾಳಾಗ ಹೇಳಿದರು...

ಶಂಕರಭಟ್ಟರ ಹೊತ್ತಗೆಯನ್ನು ಓದಿ, ಅವರನ್ನು ತಮ್ಮ 'ಪ್ರಾರಬ್ಧ'ಗಳಿಂದ ಹಳಿಯುವ ಯಾವ ದೊಡ್ಡಸ್ತಿಕೆಯೂ ಬೇಡ. ತಾವು ತಮ್ಮ ಹೊಗಳಬಟ್ಟರೊಂದಿಗೆ ಓಲಾಡುವ, ಟೀಕೆಗಾರರೇ ಇಲ್ಲದ ಈ ಸೋಗು-ಲೋಕದಲ್ಲಿ ತೇಲಾಡುವ ಸು'ಸಂಸ್ಕೃತ' ಕನ್ನಡದ ವ್ಯಾಕರಣವನ್ನೇ 'ಅಧ್ಯಯನ' ಮಾಡಿ, ಈ ರೀತಿಯಾಗೇ 'ಅತಿ ಸುಲಭ'ವಾದ ಶಿಷ್ಟ-ಕನ್ನಡದಲ್ಲೇ ವಾಂತಿ ಮಾಡಿ.

ಅಂದ ಹಾಗೆ ಶಂಕರಬಟ್ಟರು ಹವ್ಯಕ-ಕನ್ನಡದ ಬಗ್ಗೆ ಸಾಕಶ್ಟು ಬರಹಗಳನ್ನು ಬರೆದಿದ್ದಾರೆ. ಬೇಕಾದರೆ ಓದಬಹುದು.

ವಿ.ರಾ.ಹೆ. ಹೇಳಿದರು...

@ಸುಬ್ರಹ್ಮಣ್ಯ, ಧನ್ಯವಾದಗಳು

@ತೇಜಸ್ವಿನಿ, ಧನ್ಯವಾದಗಳು..exploreಗೆ ಕನ್ನಡ ಪದ ಸಿಕ್ತು... ಆದ್ರೆ ಯಾಕೋ ಅಲ್ಲಿಗೆ ಸರಿಹೊಂದಲ್ಲ ಅನ್ನಿಸಿ ಹಾಗೇ ಬರೆದುಬಿಟ್ಟೆ. :( ಅನಗತ್ಯ ಇಂಗ್ಲೀಷ್ ಪದಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡುತ್ತೇನೆ.

@ಶಾನಿ, ಜೈ.. :)

@ಕಾಕಾ, ಹ್ಹ ಹ್ಹ. . ಓ.ಕೆ.. ಧನ್ಯವಾದ

@ಸಂದೀಪ, ಸಲಹೆಗೆ ಧನ್ಯವಾದ. ಆದರೂ ಹಂಗೆಲ್ಲಾ ಜೊತೆಜೊತೆಗೇ ಬರೆಯೋದು ಆಗಲ್ಲ ಅನ್ಸುತ್ತೆ :-)

@ಶ್ರೀ, ಬನ್ನಿ ಶುರುಮಾಡಿ ನೀವೂ..

@ಚೈತ್ರಿಕಾ, ಧನ್ಯವಾದಗಳು.

@ಸೋಗಿಕೋರ.., ಹ್ಹ ಹ್ಹ ಚೆನ್ನಾಗಿದೆ ನಿಮ್ಮ ಕಮೆಂಟ್. ನಂಗೆ ಶಿಷ್ಟ ಕನ್ನಡ ಪರಿಶಿಷ್ಟ ಕನ್ನಡ ಯಾವುದೂ ಗೊತ್ತಿಲ್ಲ. ನಂಗೆ ನನ್ನ ಕನ್ನಡವಷ್ಟೆ ಗೊತ್ತಿರುವುದು. ಭಟ್ಟರ ಬರಹಗಳನ್ನು ಓದುತ್ತೇನೆ. thank you.

Arjun Sharma ಹೇಳಿದರು...

"ಕನ್ನಡ ವ್ಯಾಕರಣಕ್ಕೆ ಕೈಯಿಟ್ಟಿದ್ದೇನೆ.."

ನಿಮ್ಮ ಮೇಲೆ ಕೇಸ್ ಹಾಕೋದು ಗ್ಯಾರೆಂಟಿ.

ಶಿವಪ್ರಕಾಶ್ ಹೇಳಿದರು...

all the bestu.. :)

prabhamani nagaraja ಹೇಳಿದರು...

ಕನ್ನಡ ವ್ಯಾಕರಣ ಕಲಿಯುವ ಬಗೆಗಿನ ನಿಮ್ಮ ಉತ್ಸಾಹ ನಿಜಕ್ಕೂ ಅಭಿನ೦ದನೀಯ. ಯಾವುದು ಅಸಾಧ್ಯವಲ್ಲ. ನಾನೂ ನಿಮ್ಮ೦ತೆಯೆ ಸ೦ಸ್ಕ್ರುತವನ್ನು ಪ್ರಥಮ ಭಾಷೆಯಾಗಿ ಓದಿ ಕನ್ನಡ ವ್ಯಾಕರಣ ವ೦ಚಿತಳಾಗಿದ್ದೇನೆ. ನಿಮ್ಮ ಕಲಿಕೆಯನ್ನು ನಮ್ಮೊ೦ದಿಗೂ ಹ೦ಚಿಕೊಳ್ಳಿರಿ.

Sree ಹೇಳಿದರು...

how did I miss this!! wow great! n inspiring! do share ur progress( so that I put that inspiration into some use!:p)

ನವೀನ್ ಹೇಳಿದರು...

ನನಗೆ ಕನ್ನಡ ವ್ಯಾಕರಣವನ್ನು ತಿಳಿಯಬೇಕೆಂಬ ಆಸೆ ಅನೇಕ ದಿನಗಳಿಂದಲೂ ಇತ್ತು. ಕಲಿಕೆಗೆ ಪುಸ್ತಕಗಳನ್ನು ಹೆಸರಿಸಿದ್ದು ಅಭಿನಂದನೀಯ. ನೀವು ನನ್ನಂತ ಅನೇಕರಿಗೆ ಉತ್ಸಾಹವನ್ನು ತುಂಬಿದೀರ. ಧನ್ಯವಾದಗಳು.

ವಿ.ರಾ.ಹೆ. ಹೇಳಿದರು...

@Arjun, ;-)

@ಪ್ರಭಾಮಣಿ, ಶ್ರೀ, ಧನ್ಯವಾದಗಳು.

@ನವೀನ , ನಾ ಬರೆದದ್ದು ನಿಮಗೆ ಪ್ರೇರಣೆಯಾದರೆ ಅದೇ ಸಂತೋಷ. thnx