ಭಾನುವಾರ, ಏಪ್ರಿಲ್ 28, 2024

ಬೆಂಗಳೂರು ನಗರದಲ್ಲಿ ಮತದಾನದ‌‌ ಪ್ರಮಾಣ ಕಡಿಮೆ ಏಕೆ?

ಮೇ 26, 2024ರಂದು ಲೋಕಸಭಾ ಚುನಾವಣೆಗೆ ಮತದಾನ ಆಯಿತು. ಕರ್‍ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಸುಮಾರು ಶೇ.55 ರಷ್ಟು ಮತದಾನದ ಪ್ರಮಾಣ ವರದಿಯಾಗಿದೆ.

ಬೇರೆ ಕ್ಷೇತ್ರಗಳಿಗಿಂತ ಬೆಂಗಳೂರಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಮತದಾನದ‌‌ ಪ್ರಮಾಣ ಕಡಿಮೆ ಅಂತ ಪ್ರತಿಬಾರಿಯೂ ಹೇಳ್ತಾರೆ. ಅದಕ್ಕೆ ಕಾರಣಗಳು ಹೀಗಿರಬಹುದು ಅಂತ ನನ್ನ ಅನಿಸಿಕೆ.

೧. ಮತದಾರರ ಪಟ್ಟಿ ಪರಿಷ್ಕರಣೆ ಆಗಿರುವುದಿಲ್ಲ. ನಗರ ಅಂದಮೇಲೆ ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಾಸಸ್ಥಳ ಬದಲಾಯಿಸುತ್ತಿರುತ್ತಾರೆ. ಬೇರೆ ಬೇರೆ ಊರುಗಳಿಂದ ಬಂದವರಿರುತ್ತಾರೆ, ಬೇರೆ ಊರುಗಳಿಗೆ ಹೋಗುವವರಿಗುತ್ತಾರೆ. ಬಹಳ ಜನ ತಾವು ಇರುವಲ್ಲಿ ಹೆಸರು ಸೇರಿಸಿದರೆ, ಹಿಂದಿನ ಪಟ್ಟಿಯಲ್ಲಿ ಹೆಸರು ತೆಗೆಸುವ ಗೋಜಿಗೆ ಹೋಗುವುದಿಲ್ಲ. ನಗರದ ಸುತ್ತಮುತ್ತಲಿನ ಊರಿನವರು ಅವರವರ ಊರಿಗೆ ಹೋಗಿ ಮತಚಲಾಯಿಸುತ್ತಾರೆ. ಬೆಂಗಳೂರಲ್ಲಿನ ಪಟ್ಟಿಯಲ್ಲೂ ಅವರ ಹೆಸರಿರುತ್ತದೆ. ನಿಧನರಾದವರ ಹೆಸರುಗಳೂ ಹಾಗೇ ಇರುತ್ತವೆ. ನಗರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಬಹಳ ಶ್ರಮ, ಸಿಬ್ಬಂದಿ, ಸಮಯ ಬೇಕಿರುವುದರಿಂದ ಆ ಕೆಲಸ ಮಾಡುವುದಿಲ್ಲ. ಕೋಟಿಗಟ್ಟಲೇ ಮತದಾರರಿರುವ ಬೆಂಗಳೂರಿನಂತಹ ನಗರದಲ್ಲಿ ಅದು ಸುಲಭದ ಕೆಲಸ ಅಲ್ಲ. 

೨. ಬೆಂಗಳೂರಲ್ಲಿ ಪರರಾಜ್ಯಗಳ ವಲಸಿಗರು ಜಾಸ್ತಿ. ಅವರಲ್ಲೂ ಅನೇಕರು ಪಾಸ್ ಪೋರ್ಟ್, ಪಡಿತರ ಮುಂತಾದ ಬೇರೆ ಬೇರೆ ಕಾರಣಗಳಿಗಷ್ಟೆ ಮತದಾರದ ಪಟ್ಟಿಗೆ ಹೆಸರು ಸೇರಿಸಿಕೊಂಡರೂ ಅವರಿಗೆ ಇಲ್ಲಿನ ರಾಜಕೀಯ, ಅಭ್ಯರ್ಥಿಗಳ ಬಗ್ಗೆ ಏನೂ ಗೊತ್ತಿರದ ಕಾರಣ ಮತದಾನಕ್ಕೆ ಹೋಗದೇ ಇರುವವರು ಹೆಚ್ಚಿರಬಹುದು. ಹಲವರು ಇಲ್ಲೇ ನೆಲೆಯೂರಿ ಬಹಳ ವರ್ಷಗಳಾಗಿದ್ದರೂ ಹೊರಗಿನವರಂತೆಯೇ ಇದ್ದು ಮತದಾನಕ್ಕೆ ಆಸಕ್ತಿ ಹೊಂದಿರುವುದಿಲ್ಲ.  

೩. ಇಲ್ಲಿನ ಬಹುತೇಕ ಯುವಜನಾಂಗಕ್ಕೆ ರಾಜಕೀಯ ಪ್ರಜ್ಞೆ ಕಡಿಮೆ.  ಬಹಳ ಮಕ್ಕಳಿಗೆ ರಾಜಕೀಯ, ಆಡಳಿತ, ಚುನಾವಣೆ ಬಗ್ಗೆ, ಅಧಿಕಾರದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಯೇ ಗೊತ್ತಿರುವುದಿಲ್ಲ.  ಇಂತಹವರಲ್ಲಿ ಬಹಳಷ್ಟು ಜನ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡರೂ ಮನೆಯಲ್ಲಿ ಯಾರೂ ಹೇಳದಿದ್ದರೆ ಮತದಾನಕ್ಕೆ ಹೋಗದಿರಬಹುದು.  

೪. ಓಡಾಟದ ಕೆಲಸದಲ್ಲಿರುವವರು, ರಾತ್ರಿಪಾಳಿಯವರು ಹಲವು ಜನ ಮತದಾನ ತಪ್ಪಿಸಿಕೊಳ್ಳಬಹುದು. ಹಲವರು ವಿದೇಶಗಳಿಗೆ ಹೋಗಿರುತ್ತಾರೆ. ಅಂತಹ ಉದ್ಯೋಗಿಗಳು ನಗರಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುತ್ತಾರೆ. 

೫. ಹಿರಿಯನಾಗರಿಕರು ನಿರಾಸಕ್ತಿ ಹೊಂದಿರಬಹುದು. "ಯಾವ್ ಪಕ್ಷ ಬಂದ್ರೂ ಅಷ್ಟೇ ಬಿಡ್ರಿ. ಏನಾದ್ರೂ ಮಾಡ್ಕಳ್ಲಿ.." ಅನ್ನೋದು ಸಾಮಾನ್ಯ. ಆದರೆ ಬೇರೆ ಊರುಗಳಲ್ಲಿ ಮುದುಕರು ಹುಡುಗರು ಎಲ್ಲರೂ ಎದ್ದುಬಂದು ಓಟ್ ಮಾಡೋದಿದೆ. ಕಾರಣ ಹಲವಿರಬಹುದು.

೬. ಇದಿಷ್ಟೂ ಕಾರಣಗಳ ಹೊರತಾಗಿಯೂ ನಿಜವಾಗಿಯೂ ನಗರದಲ್ಲಿ ಮತದಾನದ ಬಗ್ಗೆ ನಿರಾಸಕ್ತಿ ಇರುವವರ, ಅದರ ಮಹತ್ವವನ್ನು ತಿಳಿಯದವರ, ನಿರ್ಲಕ್ಷ್ಯ ಮಾಡುವವರ, ಆ ಪ್ರಜ್ಞೆ ಇರದವರ ಸಂಖ್ಯೆ ಗಣನೀಯವಾಗಿದೆ.  ವಾರಾಂತ್ಯದಲ್ಲಿ ಮತದಾನದ ದಿನ ಬಂದಾಗ ಹಲವರು ಪ್ರವಾಸ ಹೋಗಿಬಿಡುತ್ತಾರೆ ಎಂಬ ಆರೋಪವು ಈ ಅಂಶದಲ್ಲಿ ಸೇರುತ್ತದೆ. ಈ ಬಾರಿಯ ಮತದಾನವು ಶುಕ್ರವಾರ ಬಂದಿತ್ತು. ಹಾಗಾಗಿ ಮೂರು ದಿನ ರಜೆ ಸಿಗುವಂತಾಗಿತ್ತು.  ಇದನ್ನು ತಪ್ಪಿಸಲು ಹೋಂಸ್ಟೇ , ರೆಸಾರ್ಟುಗಳಲ್ಲಿ ಬುಕಿಂಗ್ ತೆಗೆದುಕೊಳ್ಳದಂತೆ ಜಿಲ್ಲಾಡಳಿತಗಳು ನಿರ್‍ದೇಶನ ಕೊಟ್ಟಿದ್ದವು ಎಂದು ವರದಿಯಾಗಿತ್ತು. ಅದು ಪಾಲನೆ ಆಯಿತೊ ಇಲ್ಲವೊ ಗೊತ್ತಿಲ್ಲ.

ಆದರೆ ಮುಖ್ಯಕಾರಣ ಮೇಲೆ ಹೇಳಿರುವ ಅಂಶಗಳಲ್ಲಿ ಮೊದಲನೆಯದ್ದೇ ಆಗಿದೆ ಅಂತ ನನ್ನ ಅನಿಸಿಕೆ.