ಶನಿವಾರ, ಆಗಸ್ಟ್ 6, 2022

'ರಾಕೆಟ್ರಿ - ದ ನಂಬಿ ಎಫೆಕ್ಟ್'

ದೇಶ ಹೆಮ್ಮೆಪಡುವಂತಹ ವಿಜ್ಞಾನಿಯನ್ನೂ ಕ್ಷುಲ್ಲಕ ರಾಜಕೀಯಕ್ಕಾಗಿ, ಯಾವುದೋ ಕಾಣದ ಕೈಗಳ ಪಿತೂರಿಗಾಗಿ ಬಲಿಮಾಡಿ ಅವರ ಜೀವನವನ್ನೇ ಹಾಳುಮಾಡಿದ್ದಲ್ಲದೇ ದೇಶಕ್ಕೂ ದೊಡ್ಡ ನಷ್ಟವಾಗುವಂತೆ ಮಾಡುವ ದುಃಸ್ಥಿತಿಗಿಳಿದಿದ್ದು ನಮ್ಮ ಸಮಾಜದ‌, ಆಡಳಿತ ವ್ಯವಸ್ಥೆಯ ಅಧೋಗತಿ. ಬರೀ ನೆಗೆಟಿವ್ ಸುದ್ದಿಗಳನ್ನೇ ಮೆರೆದಾಡಿಸುವ ಮಾಧ್ಯಮಗಳ ಈ ಕಾಲದಲ್ಲಿ‌ ಈ ಸಿನೆಮಾ ಕಾರಣದಿಂದಾದರೂ ಅವರ ಸಾಧನೆ ಬಗ್ಗೆ ಒಂದಿಷ್ಟು ಜನ ತಿಳಿದುಕೊಂಡು ಹೆಮ್ಮೆಪಡುವಂತೆ ಆಯಿತಲ್ಲ‌, ಅದೇ ಈ ಸಿನೆಮಾದ ಸಾರ್ಥಕತೆ. "ನಂಬಿ ನಾರಾಯಣನ್" ಅಂತ ಗೂಗಲ್ಲಲ್ಲಿ ಹುಡುಕಿದರೆ ಬರುವ ಹೆಚ್ಚಿನ ಸುದ್ದಿಕೊಂಡಿಗಳು ಬರೀ ಅವರ ಸ್ಪೈ ಕೇಸಿಗೆ ಸಂಬಂಧಿಸಿದ್ದು. ಇಸ್ರೋದ ಉನ್ನತ ವಿಜ್ಞಾನಿಯಾಗಿ ರಾಕೆಟ್ ಎಂಜಿನ್ನುಗಳ ತಯಾರಿಕೆಯಲ್ಲಿ ಭಾರತವನ್ನು ಇನ್ನೂ ಸಶಕ್ತಗೊಳಿಸಿದ ವ್ಯಕ್ತಿಯನ್ನು ಸುಳ್ಳು‌ ದೇಶದ್ರೋಹದ ಕೇಸಿನಲ್ಲಿ ಸಿಲುಕಿಸಿ ಜೈಲು ಸೇರಿಸಿದ್ದಲ್ಲದೆ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದು ಅಕ್ಷಮ್ಯ. ನಾಸಾದ ಅವಕಾಶವನ್ನೇ ತಿರಸ್ಕರಿಸಿ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿ ಮಾಡಲು ಕೆಲಸ ಮಾಡಿದ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ತಂತ್ರಜ್ಞಾನ ಮಾರಿದ್ದಾರೆಂಬ ಆರೋಪ ಹೊರಿಸಿ ಕೆಳಗೆಳೆದುಹಾಕಿದ್ದು ದೊಡ್ಡ ದುರಂತ. 


 
'ರಾಕೆಟ್ರಿ - ದ ನಂಬಿ ಎಫೆಕ್ಟ್' : ಈ ಸಿನೆಮಾ ಇವೆಲ್ಲವನ್ನು ಅನಾವರಣಗೊಳಿಸಿಟ್ಟಿದೆ‌. ಸಿನೆಮಾ ಕೊನೆಯಲ್ಲಿ ಉಸಿರುಭಾರವಾಗುವ ಜೊತೆಗೆ ನಂಬಿನಾರಾಯಣರ ಕಣ್ಣಿನಲ್ಲಿ ಈಗಲೂ ಕಾಣುವ ಆ ನೋವು ನಮ್ಮದೂ ಆಗಿಬಿಡುತ್ತದೆ. ಅಗತ್ಯದ ಒಂದಿಷ್ಟು ಸನ್ನಿವೇಶಗಳಲ್ಲಿ ತಕ್ಕ ಹಿನ್ನೆಲೆ ಶಬ್ದ/ಸಂಗೀತ ವರ್ಕೌಟ್ ಮಾಡಿದ್ದರೆ ಸಿನೆಮಾ ಇನ್ನೂ ತಾಗಬಹುದಿತ್ತು ಅನಿಸಿತು. ಇರಲಿ, ಅದರಲ್ಲಿನ ವಿಷಯದ ಗಂಭೀರತೆಯ ಮುಂದೆ ಅದೇನು ದೊಡ್ಡದಲ್ಲ.  ಸಿನೆಮಾ ಅಮೇಜಾನ್ ಪ್ರೈಮ್ ನಲ್ಲಿ ಇದೆ, ಕನ್ನಡದ ಆಡಿಯೊ ಫೀಡ್ ಕೂಡ ಇದೆ.

ನಂಬಿನಾರಾಯಣರೆ, ಈ ದೇಶವನ್ನು ಕ್ಷಮಿಸಿಬಿಡಿ.

1 ಕಾಮೆಂಟ್‌:

sunaath ಹೇಳಿದರು...

ಈ ಪ್ರಸಂಗದಲ್ಲಿ ಪರದೇಶದ ಕೈವಾಡವಿದೆ.