ಗುರುವಾರ, ಮಾರ್ಚ್ 31, 2016

ಕೌಲಾಲಂಪುರ ತಿರುಗಾಟದಲ್ಲಿ…..


ಮಲೇಶಿಯಾದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಆ ದೇಶದ ರಾಜಧಾನಿ ಕೌಲಾಲಂಪುರವೂ ಒಂದು. ಪಶ್ಚಿಮ ತೀರದಲ್ಲಿರುವ ಪಿನಾಂಗ್ ಎಂಬ ದ್ವೀಪದಲ್ಲಿ ಒಂದು ದಿನದ ಪ್ರವಾಸ ಮುಗಿಸಿ ಬಸ್ಸಿನಲ್ಲಿ ಹೊರಟ ನಾವು ಕೌಲಾಲಂಪುರಕ್ಕೆ ಬಂದಿಳಿದಾಗ ರಾತ್ರಿ ೧೧ ಗಂಟೆಯಾಗಿತ್ತು. ಮೊದಲೇ ಕಾದಿರಿಸಿದ್ದ ಹೋಟೆಲನ್ನು ತಲುಪಿ ವಿಶ್ರಮಿಸಿದೆವು. ಮರುದಿನ ಬೆಳಗ್ಗೆ ನಾವು ತಂಗಿದ್ದ ಹೊಟೆಲಿನ ಎದುರಿನ ರಸ್ತೆಯಲ್ಲೇ ಭಾರತೀಯ ಹೋಟೆಲ್ ಇರುವುದು ತಿಳಿಯಿತು. ಅಲ್ಲಿ ಹೋಗಿ ನೋಡಿದರೆ ಅದು ಅಪ್ಪಟ ದಕ್ಷಿಣ ಭಾರತೀಯ ಶೈಲಿಯದೇ ಆಗಿತ್ತು. ಜೊತೆಗೆ ಅದೇ ರಸ್ತೆಯಲ್ಲಿ ಇನ್ನೂ ಅನೇಕ ಭಾರತೀಯ ಹೊಟೆಲುಗಳೂ ಇದ್ದವು. ಕೌಲಾಲಂಪುರದಲ್ಲಿ ತಮಿಳು ಮೂಲದ ಜನರು ಬಹಳ ಇರುವುದರಿಂದ ನಮ್ಮ ತಿನಿಸುಗಳೆಲ್ಲವೂ ಲಭ್ಯ ಎಂದು ತಿಳಿಯಿತು.  ರುಚಿಯಾದ ಉಪಾಹಾರದೊಂದಿಗೆ ನಮ್ಮ ಅವತ್ತಿನ ಪ್ರವಾಸ ಶುರುವಾಯಿತು.
  

ಅಲ್ಲಿಂದ ಸಿಟಿಬಸ್ಸಿನಲ್ಲಿ ಹೊರಟು 13 ಕಿ.ಮಿ. ದೂರದ ಗೊಂಬಾಕ್ ಪ್ರದೇಶದಲ್ಲಿರುವ ಬತು ಕೇವ್ಸ್ ಎಂಬ ಸ್ಥಳಕ್ಕೆ ಹೋದೆವು.  ಅಲ್ಲಿ ಇಳಿದೊಡನೆಯೇ ಕಂಡದ್ದು ಎತ್ತರೆತ್ತರ ಶಿಲಾಪರ್ವತಗಳು, ಅವುಗಳೆದುರಲ್ಲಿ ಬೃಹತ್ ಗಾತ್ರದ ಪ್ರಸನ್ನವದನ ಮುರುಗನ್ ಮೂರ್ತಿ! ಬಂಗಾರವರ್ಣದ ಆ ಮೂರ್ತಿ ದೂರದಿಂದಲೇ ಬಿಸಿಲಿಗೆ ಫಳ ಫಳ ಹೊಳೆಯುತ್ತಿತ್ತು. ಈ ಬತು ಗುಹೆಗಳು ಕೌಲಾಲಂಪುರದ ಪ್ರಸಿದ್ಧ ಪ್ರವಾಸಿ ಹಾಗೂ ಹಿಂದೂ ಧಾರ್ಮಿಕ ತಾಣ. ಹಾಗಾಗಿ ಅಲ್ಲಿ ದೇಶ ವಿದೇಶಗಳ ಜನರ ದಂಡೇ ನೆರೆದಿತ್ತು. ಇಲ್ಲಿನ ಪರ್ವತಗಳು ೪೦ ಕೋಟಿ ವರ್ಷಗಳಷ್ಟು ಹಳೆಯವೆಂದು ಅಂದಾಜಿಸಲಾದ ಸುಣ್ಣದ ಕಲ್ಲಿನ ರಚನೆಗಳು. ಇಲ್ಲಿ ಅನೇಕ ಗುಹೆಗಳಿದ್ದು ಮುಖ್ಯವಾಗಿ ಮೂರು ಗುಹೆಗಳಿವೆ. ಟೆಂಪಲ್ ಕೇವ್ ಎಂದು ಕರೆಯಲ್ಪಡುವ ದೊಡ್ಡ ಗುಹೆಯಲ್ಲಿ ಮುರುಗನ್ ದೇವಾಲಯವಿದೆ. ೧೯೮೨ರಲ್ಲಿ ತಂಬುಸಾಮಿ ಪಿಳ್ಳೈ ಅವರಿಂದ ಇಲ್ಲಿ ದೇವಾಲಯ ಸ್ಥಾಪಿಸಲ್ಪಟ್ಟಿತಂತೆ. ೨೦೦೬ರಲ್ಲಿ ೧೪೦ ಅಡಿಯ ಮುರುಗನ್ ಮೂರ್ತಿ ಸ್ಥಾಪಿಸಲ್ಪಟ್ಟಿತು. ಈ ಗುಹೆಗಳನ್ನು ಪ್ರವೇಶಿಸಲು ಸುಮಾರು ೨೮೦ ಮೆಟ್ಟಿಲುಗಳನ್ನು ಹತ್ತಬೇಕು. ಅಲ್ಲಿನ ಪುಂಡ ಮಂಗಗಳ ಕಾಟದ ನಡುವೆಯೇ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದೆವು. ಆ ಗುಹೆಯ ಪ್ರವೇಶದ್ವಾರ ಒಳಗೆ ದೊಡ್ಡ ಪ್ರಾಂಗಣದೊಳಕ್ಕೆ ತೆರೆದುಕೊಳ್ಳುತ್ತದೆ. ಎತ್ತರೆತ್ತರ ಕಲ್ಲಿನ ನೈಸರ್ಗಿಕ ರಚನೆಯ ಆ ಪ್ರಾಂಗಣ ಮೇಲ್ಭಾಗದಿಂದಲೂ ಆವೃತವಾಗಿದೆ. ಕರಗಿ ಬೀಳುತ್ತಿರುವ ಜ್ವಾಲಾಮುಖಿಯ ಲಾವಾ ಹಾಗೇ ಗಟ್ಟಿಯಾದಂತೆ ತೋರುವ ರಚನೆಗಳು ಕಾಣುತ್ತಿದ್ದವು. ಬತು ಗುಹೆಗಳ ಒಳಭಾಗವೆಲ್ಲವೂ ಇದೇ ರೀತಿಯ ಅದ್ಭುತ ರಚನೆಯಿಂದ ಕೂಡಿದೆ. ಒಳಗೆಲ್ಲಾ ಹಿಂದೂ ದೇವತೆಗಳ ಹಾಗೂ ಪುರಾಣ ಪಾತ್ರಗಳ ಮೂರ್ತಿಗಳನ್ನು ಹಾಗೂ ಸಣ್ಣ ಸಣ್ಣ ಗುಡಿಗಳನ್ನು ಮಾಡಿಟ್ಟಿದ್ದಾರೆ. ಹಾಗೇ ಆ ಪ್ರಾಂಗಣವನ್ನು ದಾಟಿ ಮತ್ತೆ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ  ಮುರುಗನ್ ಮುಖ್ಯ ಗುಡಿಯಿದೆ. ನಿತ್ಯ ಪೂಜೆ ನಡೆಯುತ್ತದೆ. ಅಲ್ಲಿ ಸ್ವಲ್ಪ ಹೊತ್ತು ಕಳೆದು ಗುಹೆಗಳಿಂದ ಹೊರಬರುವುದರೊಳಗಾಗಿ ಮಧ್ಯಾಹ್ನದ ಸಮಯವಾಗುತ್ತಿತ್ತು. ಅಲ್ಲಿಂದ ಮೆಟ್ರೋ ಟ್ರೇನಿನಲ್ಲಿ ಹೊರಟು ಪುನಃ ನಗರಕ್ಕೆ ಬಂದು ಊಟ ಮಾಡಿ ವಿಶ್ರಮಿಸಿದೆವು.

ಅಂದು ಸಾಯಂಕಾಲ 'ಲೇಕ್ ಗಾರ್ಡನ್' ಗೆ ಭೇಟಿಕೊಟ್ಟೆವು. ೯೨ ಎಕರೆ ಪ್ರದೇಶದಲ್ಲಿರುವ ಈ ಗಾರ್ಡನ್ ಒಂದು ಸುಂದರ ಉದ್ಯಾನವನ. ಕಾರಂಜಿಗಳು, ಸಣ್ಣ ಕೃತಕ ಜಲಪಾತಗಳು, ಹುಲ್ಲುಹಾಸು, ನೀರಿನ ಕೊಳಗಳಿರುವ ಸುಂದರ ವಿಶಾಲ ತಾಣ. ಇಲ್ಲಿ ಬರ್ಡ್ ಪಾರ್ಕ್, ಚಿಟ್ಟೆ ಪಾರ್ಕ್ ಕೂಡ ಇದೆ.  ಮಲೇಶಿಯಾದ ‘ರಾಷ್ಟ್ರೀಯ ಸ್ಮಾರಕವು ಇಲ್ಲಿದೆ. ಎರಡನೇ ವಿಶ್ವಯುದ್ಧದಲ್ಲಿ ಹೋರಾಡಿ ಮಡಿದ ಮಲೇಶಿಯಾದ ವೀರರ ಕಂಚಿನ ಸ್ಮಾರಕ ಮೂರ್ತಿಗಳಿವೆ.  ಈ ಪರಿಸರದಲ್ಲಿ ಕೆಲ ಗಂಟೆಗಳ ಕಾಲ ಕಳೆದೆವು. ಅಲ್ಲಿಂದ ಹೊರಟು ಹೊರಬರುತ್ತಿದ್ದಂತೇ ಮಳೆ ಶುರುವಾಯಿತು. ಇದ್ಯಾಕೋ ನಮ್ಮ ಅದೃಷ್ಟ ಸರಿ ಇಲ್ಲ ಎಂದುಕೊಳ್ಳುತ್ತಿರುವಾಗಲೇ ಸ್ವಲ್ಪ ಹೊತ್ತು ಸುರಿದು ಪುನಃ ವಾತಾವರಣ ತಿಳಿಯಾಯಿತು.

ಮಲೇಶಿಯಾದ ಪ್ರಸಿದ್ಧ ಅವಳಿ ಗೋಪುರಗಳು ನಮ್ಮ ಮುಂದಿನ ಗುರಿಯಾಗಿತ್ತು. ರಾಷ್ಟ್ರೀಯ ಸ್ಮಾರಕದಿಂದ ಹೊರಟು ಕೌಲಾಲಂಪುರ ಸಿಟಿ ಸೆಂಟರ್ ಪ್ರದೇಶ ತಲುಪಿದಾಗ ಸಂಪೂರ್ಣ ಕತ್ತಲಾಗಿತ್ತು. ಈ ಪ್ರದೇಶ ಕೌಲಾಲಂಪುರದ ಪ್ರಮುಖ ವಾಣಿಜ್ಯ ಪ್ರದೇಶ. ೧೪೮೩ಅಡಿ ಎತ್ತರದ ೮೮ ಮಹಡಿಗಳುಳ್ಳ ಅವಳಿ ಗೋಪುರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಪೆಟ್ರೋನಾಸ್ ಟವರ್ ಗಳೆಂದು ಕರೆಯಲ್ಪಡುವ ಈ ಎತ್ತರ ಗೋಪುರಗಳು ಕೌಲಾಲಂಪುರದ ಐಕಾನ್ ಗಳು. ಇವುಗಳನ್ನು ಕತ್ತಲಲ್ಲಿ ನೋಡಲು ಬಲು ಚಂದ. ಸಾವಿರಾರು ದೀಪಗಳಿಂದ ಕೂಡಿದ ಆಕಾಶದಿಂದ ಇಳಿಬಿಟ್ಟ ದೀಪದಕಂಬಗಳಂತೆ ಕಾಣುತ್ತವೆ. ವಿವಿಧ ಕೋನಗಳಲ್ಲಿ ಆ ಗೋಪುರಗಳ ಜೊತೆ ಫೋಟೋ ತೆಗೆಸಿಕೊಳ್ಳುವ ಕೆಲಸದಲ್ಲಿ ಪ್ರವಾಸಿಗರು ನಿರತರಾಗಿದ್ದರು. ಶುಲ್ಕ ಪಾವತಿಸಿ ಆ ಗೋಪುರಗಳನ್ನು ಹತ್ತಿ ಎತ್ತರದಿಂದ ನಗರವೀಕ್ಷಣೆ ಮಾಡುವ ಅವಕಾಶವಿರುವುದೂ ತಿಳಿಯಿತು.  ಆ ಗೋಪುರಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ಕೌಲಾಲಂಪುರ ಸಿಟಿಯಲ್ಲಿ ಒಂದಿಷ್ಟು ಓಡಾಡಿ ನಮ್ಮ ಹೊಟೆಲ್ ಗೆ ಹಿಂದಿರುಗಿದೆವು.  ಮರುದಿನ ಭೇಟಿ ಕೊಡಬೇಕಾದ ಹಲವು ತಾಣಗಳ  ಓಡಾಟದ ಯೋಜನೆ ಮಾಡಿ ಆ ದಿನ ಮುಗಿಸಿದೆವು.

***

ಕೌಲಾಲಂಪುರದಲ್ಲಿ ಪ್ರವಾಸಿಗರು ಭೇಟಿ ಕೊಡಲು ಆರ್ಟ್ ಗ್ಯಾಲರಿಗಳು, ಮ್ಯೂಸಿಯಂಗಳುಪಾರಂಪರಿ ಮಸೀದಿಗಳು, ಗುಡಿಗಳು, ಬರ್ಡ್ ಪಾರ್ಕ್, ಅಕ್ವೇರಿಯಂ, ಪಾರ್ಲಿಮೆಂಟ್ ಭವನ, ಅರಮನೆ ಮುಂತಾದ ಸ್ಥಳಗಳಿವೆ. ೧೯೨೮ರಲ್ಲಿ ಶುರುವಾದ ಕೌಲಾಲಂಪುರದ ಐತಿಹಾಸಿಕ ಸೆಂಟ್ರಲ್ ಮಾರ್ಕೆಟ್ ಅಲ್ಲಿನ ಪಾರಂಪರಿಕ ಸ್ಥಳಗಳಲ್ಲೊಂದಾಗಿದೆ. ಕುಶಲಕರ್ಮಿ ವಸ್ತುಗಳು, ಕಲಾತ್ಮಕ ಸಾಂಪ್ರದಾಯಿಕ ವಸ್ತುಗಳು ಮುಂತಾದವು ಅಲ್ಲಿ ದೊರೆಯುತ್ತವೆ. ಕೌಲಾಲಂಪುರದಿಂದ ಒಂದು ತಾಸು ಪ್ರಯಾಣದ ದೂರದಲ್ಲಿರುವ ಜೆಂಟಿಂಗ್ ಎಂಬ ಪ್ರದೇಶದಲ್ಲಿ ಪ್ರಸಿದ್ಧ ಅಮ್ಯೂಸ್ ಮೆಂಟ್ ಪಾರ್ಕ್ ಇದೆ. ಒಂದಿಡೀ ದಿನವನ್ನು ಅಲ್ಲಿ ಕಳೆಯಬಹುದು. ೨೫ ಕಿ.ಮೀ. ದೂರದಲ್ಲಿರುವ ಪುತ್ರಜಯ ಎನ್ನುವ  ಪ್ರದೇಶ  ಆ ದೇಶದ ಸುಂದರ ನಿರ್ಮಾಣ ಶೈಲಿಯ ಆಡಳಿತ ಕಟ್ಟಡಗಳಿರುವ ಉಪನಗರ.

ಕೌಲಾಲಂಪುರಕ್ಕೆ ಭಾರತದ ಅನೇಕ ನಗರಗಳಿಂದ  ಹಾಗೂ ಅಕ್ಕಪಕ್ಕದ ದೇಶಗಳಿಂದ ನೇರ ವಿಮಾನ ಸಂಪರ್ಕವಿದೆ. ನಗರದಲ್ಲಿ ಓಡಾಟಕ್ಕೆ ಮೆಟ್ರೋ ಟ್ರೇನ್, ಸಿಟಿ ಬಸ್, ಟ್ಯಾಕ್ಸಿ ಸೌಕರ್ಯಗಳಿವೆ. ಭಾರತೀಯ ಆಹಾರದ ಲಭ್ಯತೆಗೆ ತೊಂದರೆಯಿಲ್ಲ.


೨೦ಮಾರ್ಚ್ ೨೦೧೬ ವಿಜಯಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ: ಗುಹಾಲೋಕ ಬತು ಕೇವ್ಸ್ 




-ವಿಕಾಸ್ ಹೆಗಡೆ