ಬುಧವಾರ, ಅಕ್ಟೋಬರ್ 6, 2010

ಭೈರಪ್ಪ ಎಂಬ STAR WRITER

ಪ್ರಕಟವಾದ ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ - ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ 'ಆವರಣ'ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.

ನಾನು ಓದಿದ ಇವರ ಮೊದಲ ಕಾದಂಬರಿ 'ಧರ್ಮಶ್ರೀ'. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು.

ಅವರು ಬರೆಯುವ ವಿಷಯಗಳು ಕೆಲವರ ಬುದ್ಧಿಗೆ ನಿಲುಕದೇ ಇರಬಹುದು, ಇಷ್ಟೇ ಅನ್ನಿಸಬಹುದು, ಒಪ್ಪಿಗೆಯಾಗದಿರಬಹುದು, ಕೆಲವರಿಗೆ ಎಲ್ಲಾ ಬಿಟ್ಟು ಬರೀ 'ಅದು' ಮಾತ್ರ ಕಾಣಬಹುದು, ಆ ವಾದಿ, ಈ ವಿರೋಧಿ ಎಂದೆಲ್ಲಾ ಹಣೆಪಟ್ಟಿ ಕಟ್ಟಿ ಲಬೋ ಲಬೋ ಎನ್ನಬಹುದು, ಪುಸ್ತಕ ಮಾರಾಟ, ಜನಪ್ರಿಯತೆ ಇವು ಗುಣಮಟ್ಟದ ಮಾನದಂಡವಲ್ಲ ಅಂತ ವಾದಿಸಬಹುದು, ಪೂರ್ವಗ್ರಹಗಳಿರಬಹುದು, ’ಆವರಣ’ದ ಆಫ್ಟರ್ ಎಫೆಕ್ಟುಗಳೂ ಇರಬಹುದು ಅಥವಾ ಅದು ನಿಜವೇ ಆಗಿರಬಹುದು. ಇರಲಿ. ಎಷ್ಟೋ ಜನಕ್ಕೆ 'ಪರ್ವ' ಇಷ್ಟವಾಗುವುದಿಲ್ಲ, ಮತ್ಯಾರಿಗೋ 'ಕವಲು' ಸಮಾಧಾನವಾಗುವುದಿಲ್ಲ. ಅದೆಲ್ಲಾ ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಒಟ್ಟಿನಲ್ಲಿ ಅವರ ವಿರೋಧಿಗಳೂ ಕೂಡ ನಿರ್ಲಕ್ಷಿಸಲಾಗದ ಬರಹಗಾರ. ನೀವು ರೈಟಿಸ್ಟ್ ಅನ್ನುವ ಆರೋಪವಿದೆಯಲ್ಲಾ ಅಂತ ಸಂದರ್ಶನದಲ್ಲಿ ಭೈರಪ್ಪನವರಿಗೆ ಕೇಳಿದ್ದಕ್ಕೆ, "ನನಗೆ ರೈಟು ಲೆಫ್ಟು ಅನ್ನುವುದರಲ್ಲಿ ನಂಬಿಕೆಯಿಲ್ಲ. ಆದರೆ ನೀವು ರೈಟ್ ಅಥವಾ ರಾಂಗ್ ಅನ್ನುವ ಅರ್ಥದಲ್ಲಿ ಕೇಳುತ್ತೀರೆಂದಾದರೆ, ಹೌದು ನಾನು ರೈಟಿಸ್ಟು" ಎಂದರು. ಹೌದು, ನನಗೂ ಸೇರಿದಂತೆ ಬಹುತೇಕ ಓದುಗರಿಗೆ ಈ ರೈಟು ಲೆಫ್ಟು ಬೇಡ, ನಮಗೆ ಬೇಕಾಗಿರುವುದು ರೈಟ್ ಆಗಿ ಬರೆಯುವ ರೈಟರ್ ಗಳು ಮಾತ್ರ.

ಯಾರೇ ಕನ್ನಡ ಪುಸ್ತಕ ಓದುವಿಕೆಯಲ್ಲಿ ಆಸಕ್ತಿ ತೋರಿಸಿದ್ದಾದರೆ ನಾನು ಅವರಿಗೆ ಮೊದಲು ಸಲಹೆ ಮಾಡುವುದು ಭೈರಪ್ಪ ಮತ್ತು ತೇಜಸ್ವಿಯವರ ಪುಸ್ತಕಗಳನ್ನು. ಅದನ್ನು ಓದಿದವ ತಾನಾಗೇ ಓದುವಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆಂದು ಗ್ಯಾರಂಟಿ ಹೇಳಬಹುದು. ಬೆಂಗಳೂರು ಮಂಗಳೂರು ಶಿವಮೊಗ್ಗದಂತಹ ಊರುಗಳಲ್ಲಿ ಬಿಟ್ಟರೆ ಬೇರೆ ಕಡೆಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಅದಕ್ಕೆ ಹಲವು ಕಾರಣಗಳಿವೆ. ನಮ್ಮ ಪತ್ರಿಕೆಗಳು ಕೂಡ ಇವತ್ತಿಗೂ ಸಾಹಿತ್ಯವನ್ನು ಸಪ್ಪೆಸಾರಿನಂತೆಯೇ ಬಡಿಸುತ್ತಾ ಬಂದಿವೆ. ನಮ್ಮಲ್ಲಿ ಬಹಳ ಜನ ಉತ್ತಮ ಬರಹಗಾರರಿದ್ದಾರೆ. ಇಷ್ಟೆಲ್ಲಾ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಇದ್ದರೂ ಪುಸ್ತಕಗಳ ಪ್ರಚಾರಕ್ಕೆ ಮತ್ತು ಓದುವಿಕೆಯನ್ನು ಜನಪ್ರಿಯಗೊಳಿಸಲು ಹೆಚ್ಚು ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ಈ ಪರಿಸ್ಥಿತಿಯಲ್ಲೂ ಒಬ್ಬ ಲೇಖಕನನ್ನು ಜನ ಅಷ್ಟು ಇಷ್ಟಪಟ್ಟು ಕಾದು ಓದುತ್ತಾರೆನ್ನುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಲೇಖಕರು ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆ.


ಅವರೊಬ್ಬ ಸ್ಟಾರ್ ರೈಟರ್ !

13 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ತಮ್ಮ ಮಾತು ಪ್ರತಿಶತ ೧೦೦ ರಷ್ಟು ಸತ್ಯ.
ಭೈರಪ್ಪನವರ ಲೇಖನವನ್ನೂ ಓದಲು ಎಲ್ಲರು ಕಾಯುತ್ತಾರೆ. ಮೊದಲು ಖರೀದಿಸುವರವರು ಅವರ ಕಟ್ಟಾ ವಿರೋಧಿಗಳೇ!
ಹೀಗಾಗಿ ಅವರು ಎಲ್ಲೆಡೆಯಲ್ಲೂ ಸಲ್ಲುವ ಸಾಹಿತಿ.

shivu.k ಹೇಳಿದರು...

ವಿಕಾಶ್,

ನಿಮ್ಮ ಮಾತು ನಿಜ. ಬೈರಪ್ಪ ಸ್ಟಾರ್ ರೈಟರ್. ಓದುಗರಿಗೆ ನಿಮ್ಮ ಸಲಹೆ ಸರಿಯೆನಿಸುತ್ತದೆ. ನನಗೂ ಇವರಿಬ್ಬರೇ ಮೆಚ್ಚಿನವರು. ಮತ್ತೆ ಪೇಪರಿನವರು ಏಕೆ ಬರಹಗಾರರ ವಿಚಾರದಲ್ಲಿ ಸಪ್ಪೆ ಸಾರು ಕೊಡುತ್ತಾರೆಂದರೆ, ಉತ್ತಮವಾದ ಹೊಸ ಬರಹಗಾರರನ್ನು ಹುಡುಕಿ ಪ್ರೋತ್ಸಾಹಿಸುವುದಕ್ಕಿಂತ ಅವರ ಮರ್ಜಿಗೆ ಸಿಕ್ಕವರ[ಸಪ್ಪೆಸಾರು]ಬರಹಗಾರರ ಪುಸ್ತಕಗಳು ಪರಿಚಯವಾಗುತ್ತಿರುತ್ತವೆ. ಎಲ್ಲೆಲ್ಲೂ ಮರ್ಜಿ..

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

ವಿಕಾಸ್, ಭೈರಪ್ಪ ನನ್ನ ಇಷ್ಟದ ಕಾದಂಬರಿಕಾರರು ಕೂಡ. I admire his writing!

Subrahmanya ಹೇಳಿದರು...

"ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು."

ಸರಿಯಾದ ಮಾತುಗಳು. ಭೈರಪ್ಪನವರು ಸ್ಟಾರ್ (ಇಮೇಜ್) ಬರಹಗಾರರು ಎನ್ನುವುದನ್ನು ಒಪ್ಪುತ್ತೇನೆ. ನನ್ನ ಮೆಚ್ಚಿನ ಲೇಖಕರು ಕೂಡ.

ಬಾಲು ಹೇಳಿದರು...

ಭೈರಪ್ಪ ಸಿಕ್ಕಾಪಟ್ಟೆ ಅಧ್ಯಯನ ಮಾಡಿ ಬರೀತಾರೆ. ಅದು ಕೆಲವರಿಗೆ ಅವರ ಬರಹದ ಶೈಲಿ ಇಷ್ಟ ವಾಗಬಹುದು, ಕೆಲವರಿಗೆ ಇಲ್ಲ. ಆದರೂ ಯಾರು ಕೂಡ ಅವರನ್ನು ಕಡೆಗಣಿಸಲು ಸಾದ್ಯವಿಲ್ಲ.

ಒಳ್ಳೆ ಬರಹ ವಿಕಾಸ್.

ಅನಿಕೇತನ ಸುನಿಲ್ ಹೇಳಿದರು...

Very true Vikas.

ವಿಜಯ್ ಜೋಶಿ ಹೇಳಿದರು...

Agree with you Vikas.

ಚಿತ್ರಾ ಹೇಳಿದರು...

ವಿಕಾಸ,
ಭೈರಪ್ಪನವರು ಉತ್ತಮ ಲೇಖಕರಲ್ಲೊಬ್ಬರು ಎನ್ನುವುದರಲ್ಲಿ ಮಾತಿಲ್ಲ .ಹಾಗೆಯೇ ಸಾಕಷ್ಟು ವಿವಾದಕ್ಕೊಳಗಾದವರೂ ಸಹ.
ನಾನು ಮೊದಲು ಓದಿದ ಭೈರಪ್ಪನವರ ಕಾದಂಬರಿ " ಪರ್ವ" . ಆ ನಂತರ , ಅವರ ಉಳಿದ ಕೃತಿಗಳನ್ನು ಓದುತ್ತಾ ಹೋದೆ. ಇತ್ತೀಚಿನ ಕೆಲ ಕಾದಂಬರಿಗಳನ್ನು ಓದಲಾಗಿಲ್ಲ.

ಶ್ರೀನಿಧಿ.ಡಿ.ಎಸ್ ಹೇಳಿದರು...

yes, i do agree..

ಸುಮ ಹೇಳಿದರು...

ನಿಜ ಭೈರಪ್ಪನವರು ಸ್ಟಾರ್ ರೈಟರ್ . ತೇಜಸ್ವಿ ಮತ್ತು ಭೈರಪ್ಪನವರ ಬರಹಗಳು ಆಸಕ್ತಿ ಹುಟ್ಟಿಸಿ ಸುಲಭವಾಗಿ ಓದಿಸಿಕೊಳುತ್ತವೆ.

ಮನಸು ಹೇಳಿದರು...

yes, nimma maatu

Chandra Kengatte ಹೇಳಿದರು...

ಭೈರಪ್ಪನವರು ತುಂಬಾ ಒಳ್ಳೇ ಬರಹಗಾರರು ಎನ್ನುವದಕ್ಕೆ ಯಾವುದೇ ರೀತಿಯ ಸಂದೇಹವಿಲ್ಲ. ಮೊನ್ನೆ ತಾನೇ ಅವರ ಕಾವಲು ಕಾದಂಬರಿಯನ್ನ
ಓದಿದೆ. ತುಂಬಾ ಚನ್ನಾಗಿ ಇವತ್ತಿನ ಸಮಾಜಾದ ಆಧುನಿಕ ಮಹಿಳೆಯ ವಿಚಾರಗಳು ಮತ್ತು ನ್ಯಾಯಾಲಯದಲ್ಲಿ ಮಹಿಳೆಯರ ಪರ ಇರುವ ಕಾನೂನಿನ ಬಗ್ಗೆ
ಚನ್ನಾಗಿ ತಿಳಿಸಿದ್ದಾರೆ. ಆದರೆ ಸಂಪೂರ್ಣ ಕಾದಂಬರಿ ಒಂದು ವರ್ಗದ ಹೆಣ್ಣಿನ ಬಗ್ಗೆ ಕೇಂದ್ರೀಕೃತವಾಗಿದೆ.
- ಚಂದ್ರು

Dr U B Pavanaja ಹೇಳಿದರು...

ನೂರಕ್ಕೆ ನೂಉರು ಸತ್ಯ. ನಾನೂ ಧರ್ಮಶ್ರೀಯಿಂದಲೇ ಭೈರಪ್ಪನವರನ್ನು ಓದಲು ಪ್ರಾರಂಭಿಸಿದ್ದು. ಅವರ ಎಲ್ಲ ಕಾದಂಬರಿಗಳನ್ನು ಕನಿಷ್ಠ ಒಂದು ಸಲ ಓದಿದ್ದೇನೆ. ಕೆಲವನು ೨-೫ ಸಲ ಓದಿದ್ದೇನೆ.