ಶುಕ್ರವಾರ, ಅಕ್ಟೋಬರ್ 19, 2012

ಸಿಂಗಾರೆವ್ವ ಮತ್ತು ಅರಮನೆ

ನೋಡನೋಡುತ್ತಲೇ ಮತ್ತೆ ಒಂದೂವರೆ ತಿಂಗಳು ಕಳೆದು ಹೋಯಿತು. ಈ ನಡುವೆ ತಿರುಗಾಟಗಳು ಹೆಚ್ಚಾಗಿ ಬರೆಯಲು ಆಗಲಿಲ್ಲ ಅಂತ ನೆಪ ಹೇಳಬಹುದಾದರೂ ಸಮಯಕ್ಕೇನೂ ಕೊರತೆಯಂತೂ ಇಲ್ಲ.

****

ನನಗೆ ಇತ್ತೀಚಿನವರೆಗೂ ಚಂದ್ರಶೇಖರ ಕಂಬಾರರ ಕಾದಂಬರಿಗಳ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಅವರು ಹೆಚ್ಚಾಗಿ ನಾಟಕಗಳನ್ನು ಬರೆಯುತ್ತಾರೆ ಅಂದುಕೊಂಡಿದ್ದೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಮೇಲೆ ಹಲವು ಪತ್ರಿಕೆಗಳಲ್ಲಿ ಅವರ ಪರಿಚಯ ಮತ್ತು ಅವರ ಬರವಣಿಗೆಯ ವಿವರಗಳನ್ನು ಓದಿದ್ದೆ. ಆಮೇಲೆ ಅವರ ಹಲವು ಕಾದಂಬರಿಗಳ ಬಗ್ಗೆ ಗೊತ್ತಾಯ್ತು. ಅದರಲ್ಲಿ ಹೆಚ್ಚು ಕಂಡು ಬಂದ ಹೆಸರು 'ಸಿಂಗಾರೆವ್ವ ಮತ್ತು ಅರಮನೆ'. ಹಾಗಾಗಿ ಈ ಪುಸ್ತಕ ಕೊಂಡು ಓದೋಣವೆಂದು ಹುಡುಕಿದರೆ ಒಂದೇ ಸಲಕ್ಕೆ ಫ್ಲಿಪ್ ಕಾರ್ಟಲ್ಲೇ ಸಿಕ್ಕಿತು. ತರಿಸಿಕೊಂಡೆ.

ಮೊದಲನೆಯದಾಗಿ ಅದರಲ್ಲಿ ಕತೆಯ ನಿರೂಪಣೆಯ ತಂತ್ರವೇ ಚೆನ್ನಾಗಿದೆ. ಕಂಬಾರರು ಅಲ್ಲಿ ತಾವೇ ತಮ್ಮ ಊರಿಗೆ ಹೋಗಿ ಶೀನಿಂಗಿ ಎಂಬ ಮುದುಕಿಯಿಂದ ಕತೆ ಕೇಳುತ್ತಿರುವಂತೆ ನಿರೂಪಿಸಿರುವುದರಿಂದ ಇದು ನಿಜವಾಗಿ ನಡೆದದ್ದು ಎಂಬ ಭಾವನೆ ಮೂಡಿಸುತ್ತದೆ. ನಡುನಡುವೆ ಕತೆಗೆ ಪೂರಕ ಹಿನ್ನೆಲೆಗಳನ್ನು ಲೇಖಕರು ತಾವೇ ಕಂಡ ತಮ್ಮ ಊರಿನ ನೆನಪುಗಳು ಎಂಬಂತೆ ವಿವರಿಸುತ್ತಾ, ಓದುಗರನ್ನೇ ಉದ್ದೇಶಿಸಿ ಮಾತನಾಡುತ್ತಾ, ವಿರಾಮ ಕೊಡುತ್ತಾ ಮತ್ತೆ ಕತೆ ಮುಂದುವರೆಸುತ್ತಾರೆ. ಕಂಬಾರರು ಅದರಲ್ಲಿನ ಪಾತ್ರಗಳನ್ನು, ಊರುಗಳನ್ನು ಶೀನಿಂಗಿ ಮೂಲಕ ವಿವರಿಸಿದ ಪರಿ ಇಷ್ಟವಾಯಿತು. ಸಿಂಗಾರೆವ್ವ, ದೇಸಾಯಿ, ಗೌಡ, ಮರೆಪ್ಪ, ಶೆಟ್ಟಿ, ಹುಚ್ಚಯ್ಯ ಮುಂತಾದ ಪಾತ್ರಗಳೆಲ್ಲಾ ಶೀನಿಂಗಿ ವಿವರಿಸುತ್ತಾ ಹೋದಂತೆ ಮನಸ್ಸು ಅದನ್ನು ಕಲ್ಪಿಸಿಕೊಳ್ಳುತ್ತಾ ಹೋಗುತ್ತದೆ. ನಾನಿಲ್ಲಿ ಪುಸ್ತಕದ ಕತೆಯ ಬಗ್ಗೆ ಹೇಳಲು ಹೋಗುವುದಿಲ್ಲ. ದೇಸಗತಿ ಬಂಗಲೆಯ ದಿವಾಳಿತನದ, ಖಾಲಿತನದ ವರ್ಣನೆ, ಹುಣಸೆ ಮೆಳೆಯ ವಿವರಣೆ, ಅದರ ಭಯಾನಕತೆಯ ಹಿಂದಿನ ಆ ನಿಗೂಢ ಕತೆಗಳು, ತಿಕ್ಕಲುತನಗಳು, ಹಾದರಗಳು, ಭಕ್ತಿ, ಬಡತನ, ಬೆಳಗಾವಿ ಸೀಮೆಯ ಮಾತುಗಳು, ಬೈಗುಳಗಳು ಎಲ್ಲಾ ಸೇರಿ ಒಟ್ಟಾಗಿ ಒಂದು ಸಮಗ್ರ ಚಿತ್ರಣವನ್ನು ಮನಸ್ಸಿನಲ್ಲಿ ತಂದು ಅಷ್ಟೇ ಕುತೂಹಲದಿಂದ ಚೆನ್ನಾಗಿ ಓದಿಸಿಕೊಂಡ ಪುಸ್ತಕ. 

ಇದು ನಾಗಾಭರಣರಿಂದ ಸಿನೆಮಾ ಕೂಡ ಆಗಿದೆಯಂತೆ. ನೋಡಬೇಕು.

ಫ್ಲಿಪ್ ಕಾರ್ಟಲ್ಲಿ ಧ್ವನಿ ಪುಸ್ತಕವೂ ಸಿಗುತ್ತದೆ :  'ಸಿಂಗಾರೆವ್ವ ಮತ್ತು ಅರಮನೆ'

6 ಕಾಮೆಂಟ್‌ಗಳು:

prashasti ಹೇಳಿದರು...

ಸಿಂಗಾರೆವ್ವ ಮತ್ತು ಅರಮನೆ ನಾಟಕ ತುಂಬಾ ಪ್ರಸಿದ್ದವಾಗಿದ್ದು ಹೌದು..

Parisarapremi ಹೇಳಿದರು...

ಕಂಬಾರರ ಪುಸ್ತಕ ಓದುವ ಶಕ್ತಿಯೇ ಇಲ್ಲ ಅನ್ನಿಸಿಬಿಟ್ಟಿತು ನನಗೆ ಈ ಹಿಂದೆ ಅಂಗಡಿಯಲ್ಲಿ ಅವರ ಪುಸ್ತಕಗಳ ಮೇಲೆ ಕೈಯಾಡಿಸಿದಾಗ. :-(
ಆದರೂ ಪ್ರಯತ್ನ ಮಾಡಬೇಕು ಇನ್ನು ಮೇಲೆ - ಇನ್ನೊಂದಷ್ಟು ಓದಿಕೊಂಡು!

ನೀವು ತಿರುಗಾಟ ಹೆಚ್ಚಾಗಿ ಬರೆಯಲು ಆಗಿಲ್ಲ ಎಂಬ ನೆಪ ಕೊಟ್ಟರೆ ನಾನು ತಿರುಗಾಟವೇ ಇಲ್ಲವಾದ್ದರಿಂದ ಬರೆಯಲು ಆಗಿಲ್ಲ ಎಂಬ ನೆಪ ಕೊಡುತ್ತಿದ್ದೇನೆ!

Subrahmanya ಹೇಳಿದರು...

Nice.

ಅಮಿತಾ ರವಿಕಿರಣ್ ಹೇಳಿದರು...

ನಾನು ಚಿತ್ರ ನೋಡಿದ್ದೇ ಪ್ರೇಮ ಸಿಂಗಾರೆವ್ವ ಣ ಅಭಿನಯ ತುಂಬಾ ಚನ್ನಾಗಿ ಮಾಡಿದ್ದಾರೆ ,ಅವಿನಾಶ್ ಕೂಡ ತಮ್ಮ ಅಭಿನಯದಿಂದ ಇಷ್ಟ ಆಗ್ತಾರೆ, ಹಾಡು ಗಳು ಸುಂದರ ಮತ್ತು ನೆನಪಲ್ಲಿ ಉಳಿವಂಥವು,,,

ಬಾಲು ಹೇಳಿದರು...

ಒಳ್ಳೆ ಕೆಲಸ ಮಾಡಿದ್ದಿ ಬಿಡಿ.
ನಾನು ಇಲ್ಲಿ ವರೆಗೆ ಕಂಬಾರದದ್ದು ಓದಿದ್ದು ಅಂದ್ರೆ "ಮರೆತೇನೆಂದರೆ ಮರೆಯಲಿ ಹ್ಯಾಂಗ!?" ಒಂದೇ.
ಅವರಿರುವುದು ಕತ್ರಿಗುಪ್ಪೆ ಲಿ. ಒಂದಿಷ್ಟು ಓದಿದ್ರೆ, ಭೆಟ್ಟಿ ಮಾಡಬಹುದಿತ್ತು.

ವಿ.ರಾ.ಹೆ. ಹೇಳಿದರು...

ಅಮಿತಾ, ಹಾಂ.. ನೋಡ್ತೀನಿ ಸಿನೆಮಾ. ಥ್ಯಾಂಕ್ಸ್ ;)

ಬಾಲು, ಓದು, ಯಾವಾಗಾದ್ರೂ ಭೇಟಿ ಮಾಡೋಣ!

ಸುಬ್ರಹ್ಮಣ್ಯ, ಪ್ರಶಸ್ತಿ, ಧನ್ಯವಾದಗಳು.

ಪರಿಸರಿಪ್ರೇಮಿ, ಮೇಸ್ಟ್ರೆ, ನೀವೇ ಹಿಂಗಂದ್ರೆ ಹೆಂಗೆ!! ನಾನೇ ಓದಿದಿನಿ ಅಂದ್ಮೇಲೆ ನಿಮಗೆ ಯಾವ ತೊಂದರೆಯೂ ಆಗಲ್ಲ. ! :)