ಭಾನುವಾರ, ಅಕ್ಟೋಬರ್ 17, 2021

ಕಾಡುಗಳನ್ನು ಗೌರವಿಸೋಣ

ಹಿಂದಿನವಾರ ಬಿಳಿಗಿರಿರಂಗನ ಬೆಟ್ಟದ ಹುಲಿಸಂರಕ್ಷಿತ ಕಾಡಿನಲ್ಲಿ ನಮ್ಮ‌ ಸ್ವಯಂಸೇವಕ ತಂಡ (Eco Volunteers India Trust) ಅರಣ್ಯ‌ ಇಲಾಖೆಯೆ ಜೊತೆ ಸೇರಿ ಒಂದಿಷ್ಟು ಚಟುವಟಿಕೆಗಳನ್ನು ಮಾಡಿದೆವು.‌ ಅದರಲ್ಲಿ ಮುಖ್ಯವಾಗಿ ಸ್ವಚ್ಛತಾ ಕಾರ್ಯಗಳು, ಜನಜಾಗೃತಿ ,‌ ಪ್ರವಾಸಿಗರಿಗೆ ತಿಳುವಳಿಕೆ, ಜನಸಂದಣಿ ನಿರ್ವಹಣೆ, ಅರಣ್ಯ ರಸ್ತೆಯ ಗಸ್ತು ಮುಂತಾದವು ಇರುತ್ತವೆ.‌ ಇಂತಹ ಚಟುವಟಿಕೆಗಳನ್ನ ಆಗಾಗ ಬೇರೆಬೇರೆ ಕಡೆ ಮಾಡುತ್ತಿರುತ್ತೇವೆ.🍀🌿

🚗🚗 ಕೋವಿಡ್ ಕಡಿಮೆಯಾಗುತ್ತಿದ್ದಂತೆ ಪ್ರವಾಸಿಗರ ದಂಡು ನಾಡಿನ ಎಲ್ಲೆಡೆ ಕಂಡುಬರುತ್ತಿದೆ. ವಿಶೇಷವಾಗಿ ಮಲೆನಾಡು, ಕಾಡಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಾಗಿದ್ದು ಪ್ರವಾಸಿಗರ ವರ್ತನೆಗಳು ಹಲವೆಡೆ ಸ್ಥಳೀಯರ ಅಸಮಾಧಾನಕ್ಕೂ ಕಾರಣವಾಗಿವೆ. ಪರಿಸರಕ್ಕೂ ಸಹ ವಿವಿಧ ರೀತಿಯಲ್ಲಿ ತೊಂದರೆ ಉಂಟುಮಾಡುತ್ತಿದೆ. ನಮ್ಮಲ್ಲಿ ಬಹಳ ಜನ ಪ್ರವಾಸವನ್ನು ಒಂದು ಹೊಣೆಗಾರಿಕೆಯಿಂದ ಮಾಡದೇ ಬರೀ ಮೋಜಿಗಾಗಿ ಮತ್ತು ಬಳಸಿಬಿಸಾಡುವ ತರಹ ಮಾಡುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದಟ್ಟಾರಣ್ಯಗಳಲ್ಲೂ ಸಿಗುವ ಪ್ಲಾಸ್ಟಿಕ್ ತ್ಯಾಜ್ಯ ದಂಗುಬಡಿಸುವಷ್ಟಿರುತ್ತದೆ ಅಂದರೆ ಇದರ ಆಳ ತಿಳಿಯಬಹುದು.

🌴🌴ರಕ್ಷಿತಾರಣ್ಯಗಳು ಬಹಳ ಸೂಕ್ಷ್ಮ ಪ್ರದೇಶಗಳಾಗಿದ್ದು ಪ್ರಾಣಿಪಕ್ಷಿಗಳ ನೆಲೆಗಳಾಗಿರುತ್ತವೆ.‌ ಹಲವೆಡೆ ರಕ್ಷಿತಾರಣ್ಯಗಳ ಮೂಲಕ ಹಾದುಹೋಗುವ ರಸ್ತೆಗಳು ಇದ್ದು ಅರಣ್ಯ ಇಲಾಖೆಯ ಉಸ್ತುವಾರಿ ಮತ್ತು ಕಾವಲು ಇರುತ್ತದೆ. ಬಿಳಿಗಿರಿರಂಗನ ಬೆಟ್ಟ, ಬಂಡಿಪುರ, ನಾಗರಹೊಳೆ, ಭದ್ರಾ, ಶರಾವತಿಯಂತಹ ಅಭಯಾರಣ್ಯಗಳಲ್ಲಿ ರಸ್ತೆಯ ಬದಿಯಲ್ಲೇ ಪ್ರಾಣಿಗಳು ಕಾಣಸಿಗುವುದು ಸಾಮಾನ್ಯ. 🐘 🐒🐃 🐗 ಅಲ್ಲಿ ಹಾದುಹೋಗುವ ರಸ್ತೆಗಳ‌ಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಂತ‌ಹ ರಕ್ಷಿತ ಅರಣ್ಯಗಳಲ್ಲಿ, ಇನ್ನಿತರ ಕಾಡಿನ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಒಂದಿಷ್ಟು ಹೊಣೆಗಾರಿಕೆ ಅರಿತಿರುವುದು ಮತ್ತು ಅದರಂತೆ ನಡೆದುಕೊಳ್ಳುವುದು ಮುಖ್ಯ. ಮೀರಿದಲ್ಲಿ ದಂಡ/ಶಿಕ್ಷೆ‌ಯೂ ಆಗಬಹುದು.

❌ ವಾಹನಗಳನ್ನು ನಿಲ್ಲಿಸಬಾರದು. (ರಸ್ತೆಗೆ ಅಡ್ಡಲಾಗಿ ಪ್ರಾಣಿಗಳಿದ್ದಲ್ಲಿ ದೂರದಲ್ಲಿ ವಾಹನ ನಿಲ್ಲಿಸಿ ಅವಾಗಿಯೇ ಹೋಗುವವರೆಗೆ ಸುಮ್ಮನೇ ಕಾಯಬೇಕು).
❌ ವೇಗವಾಗಿ ವಾಹನ ಚಾಲನೆ ಮಾಡಬಾರದು.
❌ ಹಾರ್ನ್ ಮಾಡಬಾರದು. 
❌ ಜೋರಾದ ಸಂಗೀತ, ಕೂಗಾಟ ಕೇಕೆ ಇರಬಾರದು.
❌ ವಾಹನದಿಂದ ಕೆಳಗಿಳಿಯುವುದು, ಕಾಡಿನೊಳಗೆ ಹೋಗುವುದು ನಿಷಿದ್ಧ.
❌ ಫೋಟೊಗ್ರಫಿ, ವೀಡಿಯೊಗ್ರಫಿ ಮಾಡುವಂತಿಲ್ಲ. 
❌ ಪ್ರಾಣಿಗಳಿಗೆ ಆಹಾರ ಹಾಕುವಂತಿಲ್ಲ. 
❌ ಧೂಮಪಾನ, ಮದ್ಯಪಾನ ಮಾಡುವಂತಿಲ್ಲ.
❌ ಪ್ಲಾಸ್ಟಿಕ್ ಮುಂತಾದ ಕಸಗಳನ್ನು ಕಾಡಿನಲ್ಲಿ ಹಾಕಲೇಬಾರದು. 

ಸಾಮಾನ್ಯ ತಿಳುವಳಿಕೆ ಇರುವ ಯಾವ ವ್ಯಕ್ತಿಗಾದರೂ ಇದೆಲ್ಲಾ ಗೊತ್ತಿರುತ್ತದೆ ಅಂತ ನೀವನ್ನಬಹುದು. ಆದರೆ ಪರಿಸ್ಥಿತಿ ಹಾಗಿಲ್ಲ. ಪ್ರವಾಸಿಗರು, ಭಕ್ತರು ಎಂದು ಬರುವ ಅನೇಕರಿಗೆ ಈ ಪ್ರಜ್ಞೆ ಅವರ ರಕ್ತದಲ್ಲೇ ಬಂದಿರುವುದಿಲ್ಲ. ಕೆಲವರಂತೂ ಕಾಡುಗಳು ಪಿಕ್ ನಿಕ್ ಜಾಗ ಎಂದುಕೊಂಡು ನೀರಿರುವ ಕಡೆ ಊಟಕ್ಕೆ ಕೂತುಬಿಡುವುದುಂಟು. ಹುಲಿ ಚಿರತೆ ಆನೆ ಕಾಟಿಗಳಿರುವ ಕಡೆ ಇದು ಬಹಳ ಅಪಾಯ. ಪ್ರಾಣಿ ಕಂಡಾಕ್ಷಣ ಫ್ಲ್ಯಾಷ್ ಬಳಸಿ ಫೋಟೋ ತೆಗೆಯುವುದರಿಂದ‌ ಹಿಡಿದು ಕಾಡಿನೊಳಗೆ ಕೂಗಾಡುವುದು, ಚಿಪ್ಸ್ ಪ್ಯಾಕ್,‌ ಪ್ಲಾಸ್ಟಿಕ್ ಬಾಟಲ್ ಬಿಸಾಡುವಷ್ಟು ಹೊಣೆಗೇಡಿತನವಿರುತ್ತದೆ.😡 ಇದರಿಂದ ಕಾಡು ಮತ್ತು ಪ್ರಾಣಿಗಳು ತೊಂದರೆಗೊಳಗಾಗುತ್ತವೆ. ಅದರ ಮುಂದಿನ ಹಂತದ ಪರಿಣಾಮಗಳನ್ನು ಅನುಭವಿಸುವವರು ಮನುಷ್ಯರೇ ಆಗಿರುತ್ತಾರೆ. ಹಾಗಾಗಿ ಒಂದು ಜವಾಬ್ದಾರಿಯುತ ಪ್ರವಾಸವನ್ನು ರೂಢಿಸಿಕೊಳ್ಳೋಣ. ಕಾಡುಗಳನ್ನು ಗೌರವಿಸೋಣ.👍

ಕಾಮೆಂಟ್‌ಗಳಿಲ್ಲ: