ಶನಿವಾರ, ಜನವರಿ 27, 2018

ಏನಿದು ’ಪೋತಿ.ಕಾಂ’? ಮತ್ತು ಅದರೊಂದಿಗೆ ಒಂದು ಅನುಭವ


ನಿಮ್ಮಲ್ಲಿ ಒಳ್ಳೆಯ ಬರವಣಿಗೆ ಕಲೆ ಇದೆ. ಹಲವಾರು ಬಿಡಿಬಿಡಿ ಬರಹಗಳನ್ನು, ಕತೆಗಳನ್ನು ಪತ್ರಿಕೆಗಳಲ್ಲಿ, ಮ್ಯಾಗಜೀನುಗಳಲ್ಲಿ ಪ್ರಕಟಿಸಿಯೂ ಇರಬಹುದು. ಅದೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡಬೇಕು ಅಂತ ಮನಸ್ಸಾಗುತ್ತದೆ. ಒಂದು ಕಾದಂಬರಿಯನ್ನು ಬರೆದಿಟ್ಟಿದ್ದೀರಿ. ಅದನ್ನು ಪುಸ್ತಕ ಮಾಡಿ ಪ್ರಕಟಣೆ ಮಾಡಬೇಕು ಅಂತ ನಿಮ್ಮ ಆಸೆ.  ಆದರೆ ಅದನ್ನು ಸಾಂಪ್ರದಾಯಿಕವಾಗಿ ಸಾವಿರಾರು ಕಾಪಿ ಪ್ರಿಂಟ್ ಹಾಕಿಸಿ ಪಬ್ಲಿಷ್ ಮಾಡಿ ಮಾರಾಟ ಮಾಡಲು ಕಾರಣಾಂತರಗಳಿಂದ ಸಾಧ್ಯವಿಲ್ಲ. ಆಗ ಏನು ಮಾಡಬಹುದು? ಒಂದು ದಾರಿಯೆಂದರೆ ಇ-ಬುಕ್ ಮಾಡಬಹುದು. ಇ-ಬುಕ್ ಓದುವ ಅನುಕೂಲ, ಅಭ್ಯಾಸ, ಇಷ್ಟ ಇರುವವರು ಓದಿಕೊಳ್ಳುತ್ತಾರೆ. ಆದರೆ ಪ್ರಿಂಟ್ ರೂಪದಲ್ಲೇ ಬೇಕು ಅನ್ನುವ ಓದುಗರಿಗೆ ಏನು ಮಾಡಬಹುದು? ಪ್ರಿಂಟಿಂಗ್ ಪ್ರೆಸ್ಸುಗಳು ಪುಸ್ತಕ ಮಾಡಲು ಒಂದು ಕನಿಷ್ಠ ಸಂಖ್ಯೆಯಷ್ಟು ಕಾಪಿಗಳು ಬೇಕೇಬೇಕು ಎನ್ನುತ್ತವೆ. ಸಾಮಾನ್ಯವಾಗಿ ಕನಿಷ್ಠ ಸಾವಿರ ಕಾಪಿ  ಹಾಕಿಸಬೇಕಾಗುತ್ತದೆ. ಇದಾದಮೇಲೆ ಅದನ್ನು ಶೇಖರಣೆ, ಮಾರಾಟ ಇದೆಲ್ಲಾ ತಲೆಬಿಸಿಗಳು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ..

ಹಾಗಿದ್ದಲ್ಲಿ ಪುಸ್ತಕ ಆನ್ ಲೈನಲ್ಲಿ ಪಬ್ಲಿಷ್ ಮಾಡಿ ಮಾರಾಟಕ್ಕಿಟ್ಟು ಮುದ್ರಣ ರೂಪದಲ್ಲೇ ಬೇಕು ಅಂದವರಿಗೆ ಮಾತ್ರ ಪ್ರಿಂಟ್ ಹಾಕಿಸಿ ಕೊಡುವ ವ್ಯವಸ್ಥೆ ಇದ್ದರೆ ಹೇಗೆ? ಅಂತಹ ಒಂದು ಸೌಲಭ್ಯವೇ ಈ ಪೋತಿ.ಕಾಂ. ಇದು ಸ್ವತಃಪ್ರಕಟಣೆ (self publishing) ಕೆಲಸ. ಪೋತಿ.ಕಾಂ ಇದಕ್ಕೆ ವೇದಿಕೆ ಒದಗಿಸುವುದರ ಜೊತೆಗೆ ಪುಸ್ತಕ ಮುದ್ರಿಸಿಕೊಡುತ್ತದೆ. ಇಲ್ಲಿ ಕನಿಷ್ಠ ಎಂದರೆ ಕೇವಲ ಒಂದು ಕಾಪಿ ಬೇಕಾದರೂ ಮುದ್ರಿಸಿ ತರಿಸಿಕೊಳ್ಳಲು ಸಾಧ್ಯ.  ಲೇಖಕರು ಅಥವಾ ಪ್ರಕಾಶಕರು ಇಲ್ಲಿ ತಮ್ಮ ಪುಸ್ತಕವನ್ನು ತಮಗೆ ಬೇಕಾದ ವಿನ್ಯಾಸ, ರಕ್ಷಾಪುಟಗಳೊಂದಿಗೆ ಅಪ್ಲೋಡ್ ಮಾಡಿರಬೇಕಾಗುತ್ತದೆ. ಓದುಗರು ಇಂತಹ ಪುಸ್ತಕಗಳನ್ನು ಇ-ಬುಕ್ ಗಳಾಗಿ ಅಥವಾ ಪ್ರಿಂಟ್ ರೂಪದಲ್ಲಿ ಕೊಳ್ಳಬಹುದಾಗಿರುತ್ತದೆ.  ಹಾಗಂತ ಇದನ್ನು ಹೊಸಲೇಖಕರು ಅಥವಾ ಸಾಂಪ್ರದಾಯಿಕವಾಗಿ ಪಬ್ಲಿಶ್ ಮಾಡದ ಲೇಖಕರು ಮಾತ್ರವೇ ಬಳಸಿಕೊಳ್ಳಬೇಕಂತಿಲ್ಲ. ಮುದ್ರಿತ ಪುಸ್ತಕಗಳನ್ನು ತಾವೇ ಅಥವಾ ಬೇರೆ ಪ್ರಕಾಶನದಲ್ಲಿ ಪ್ರಕಟಿಸಿದವರು ಕೂಡ ಪೋತಿಯಲ್ಲಿ ತಮ್ಮ ಪುಸ್ತಕವನ್ನು ಪಬ್ಲಿಶ್ ಮಾಡಬಹುದು. 

ಪೋತಿ.ಕಾಂ. ಬೆಂಗಳೂರಿನದೇ ಒಂದು ಕಂಪನಿ. ನಾನು 2012ರಲ್ಲೇ ಅದರಲ್ಲೊಂದು ಖಾತೆ ಮಾಡಿಕೊಂಡಿದ್ದೆ. ಅನಂತರ ಅದರಲ್ಲಿ ಒಂದೆರಡು ಇಬುಕ್ ಗಳನ್ನು ಕೊಂಡಿದ್ದೆ. ಇತ್ತೀಚಿನ ದಿನಗಳಲ್ಲಿ ಅದನ್ನು ಬಳಸಿರಲಿಲ್ಲ. ಇತ್ತೀಚೆಗೆ ಹಿರಿಯ ಲೇಖಕ ನಾಗೇಶ್ ಕುಮಾರರು ತಮ್ಮ ಒಂದು ಸಸ್ಪೆನ್ಸ್ ಕಾದಂಬರಿಯನ್ನು ಪೋತಿ.ಕಾಂ.ನಲ್ಲಿ ಮಾರಾಟಕ್ಕಿಟ್ಟಿರುವ ಬಗ್ಗೆ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದರು. ಪ್ರಿಂಟ್ ರೂಪದಲ್ಲಿ ಬೇಕಾದರೂ ಅದನ್ನು ತರಿಸಿಕೊಳ್ಳಬಹುದಿತ್ತು. ಒಂದು ಪ್ರಯತ್ನ ಮಾಡೋಣ ಅಂತ ಅನಿಸಿತು. ಪೋತಿಯಲ್ಲಿರುವ ಆ ಪುಸ್ತಕದ ಮುನ್ನೋಟ, ಸ್ಯಾಂಪಲ್ ಪರಿಶೀಲಿಸಿ ಒಂದು ಪುಸ್ತಕಕ್ಕಾಗಿ ಆರ್ಡರ್ ಮಾಡಿದೆ. ನಾಲ್ಕೈದು ದಿನಗಳೊಳಗೆ ಕೊರಿಯರ್ ಮೂಲಕ ಮುದ್ರಿತ ಪುಸ್ತಕ ನನ್ನ ಕೈಸೇರಿತು. ಚೆನ್ನಾಗಿ ಅಂದವಾಗಿ ಮುದ್ರಿಸಿ ಕಳಿಸಿಕೊಟ್ಟಿದ್ದರು.  ಕಾಗದದ ಗುಣಮಟ್ಟ ಕೂಡ ಒಳ್ಳೆಯದಿತ್ತು. ಮುದ್ರಿತ ಪುಸ್ತಕದ ರೂಪದಲ್ಲಿ ಆ ಥ್ರಿಲ್ಲರ್ ಓದಿದ ತೃಪ್ತಿ ಸಿಕ್ಕಿತು.

’ನಾಳೆಯನ್ನು ಗೆದ್ದವನು’ ಎಂಬುದು ಆ ಕಿರುಕಾದಂಬರಿಯ ಹೆಸರು. ಭೂಮಿಯಿಂದ ಒಂದೂಮುಕ್ಕಾಲು ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಿಂದ ಬಂದ ನಮಗಿಂತ ಬಹಳ ಮುಂದುವರೆದಿರುವ ಅನ್ಯಗ್ರಹಜೀವಿಗಳು ’ಅಭಿಮನ್ಯು’ ಎಂಬ ವ್ಯಕ್ತಿಯನ್ನು ಅಪಹರಿಸುತ್ತಾರೆ. ತಾವು ಕಾಲರೇಖೆಯಲ್ಲಿ ಕಂಡ ಅವತ್ತು ಆಗುವುದರಲ್ಲಿದ್ದ ಒಂದು ಭಯೋತ್ಪಾದಕ ದಾಳಿಯ ದುಷ್ಕೃತ್ಯವನ್ನು ಆತನ ಮೂಲಕ ವಿಫಲಗೊಳಿಸಿ ತಡೆಯುವುದು ಅವರ ಉದ್ದೇಶ. ಅದಕ್ಕಾಗಿಯೇ ಯೋಜನೆ ರೂಪಿಸಿ ಭೂತಕಾಲಕ್ಕೆ ಆತನನ್ನು ಕಳಿಸಿ ದುರಂತವನ್ನು ತಪ್ಪಿಸುವಂತೆ ಮಾಡುವ ಕತೆ ಅದು. ಸ್ವಲ್ಪ ಸಿನಿಮೀಯ ಅಂಶಗಳು ಹಾಗೂ ಚಿತ್ರಣಗಳು ಆ ಕಾದಂಬರಿಯಲ್ಲಿದ್ದರೂ ಸಹ ಮುಖ್ಯಕಥಾವಸ್ತುವನ್ನು ಲೇಖಕರು ತಾರ್ಕಿಕವಾಗಿ ಹೆಣೆದುಕೊಟ್ಟಿದ್ದಾರೆ. ಅದಕ್ಕಾಗಿ fictitious’ಹುಳುಹಾದಿ’ (ವರ್ಮ್ ಹೋಲ್), ಟೈಮ್ ಟ್ರಾವೆಲ್, ದೇಶಕಾಲ (ಸ್ಪೇಸ್ ಟೈಮ್) ನಂತಹ ಸಂಗತಿಗಳನ್ನು ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ. ಕತೆಯಲ್ಲೇ ಅವುಗಳ ವಿವರಣೆಯನ್ನೂ ತಂದು ಅದನ್ನು ಸರಳವಾಗಿ ಅರ್ಥವಾಗುವಂತೆ ಹೇಳಿರುವುದು ಇದರ ವಿಶೇಷ. ನಂದಿಬೆಟ್ಟದಲ್ಲಿ ಶುರುವಾಗಿ ಅಲ್ಲೇ ಕೊನೆಯಾಗುವ ಈ ೮೧ ಪುಟಗಳ ಕಿರುಕಾದಂಬರಿಯು ಎರಡುತಾಸುಗಳ ಥ್ರಿಲ್ ಅನುಭವ ನೀಡುವುದರ ಜೊತೆ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತಳೆಯುವಂತೆ ಮಾಡುತ್ತದೆ..

ಪೋತಿಯಲ್ಲಿ ’ನಾಳೆಯನ್ನು ಗೆದ್ದವನು’ ಪುಸ್ತಕ ಇಲ್ಲಿದೆ.
ಮುದ್ರಿಸಿ ತರಿಸಿಕೊಳ್ಳಬಹುದಾದಂತಹ ಇತರ ಕನ್ನಡ ಪುಸ್ತಕಗಳು ಕೂಡ ಲಭ್ಯ. ಇಲ್ಲಿ ಕ್ಲಿಕ್ಕಿಸಿ

ಸೋಮವಾರ, ಅಕ್ಟೋಬರ್ 30, 2017

Kannada T Shirts / ಕನ್ನಡ ಟಿ ಶರ್ಟುಗಳು / ಕನ್ನಡ ಅಂಗಿಗಳು


ಇತ್ತೀಚಿನ ವರ್ಷಗಳಲ್ಲಿ ಕನ್ನಡ ಟಿ ಶರ್ಟುಗಳು ಟ್ರೆಂಡಿಂಗ್ ಆಗಿವೆ. ಮೊದಲು ಕನ್ನಡ ಸಂಬಂಧಿತ ಸಭೆ ಸಮಾರಂಭಗಳಿಗೆ ಸೀಮಿತವಾಗಿದ್ದ ಕನ್ನಡ ಟೀ ಶರ್ಟುಗಳು ಈಗ ದಿನ ನಿತ್ಯದ ಕ್ಯಾಶುವಲ್ ಬಳಕೆಗೂ ಬಂದಿವೆ. ರಾಜ್ಯೋತ್ಸವದ ಆಚರಣೆಗೆ, ಕಂಪನಿಗಳ ಕನ್ನಡ ಸಂಘಗಳಿಗೆ, ಸಮಾರಂಭಗಳಿಗೆ ಕನ್ನಡ ಅಭಿಮಾನದ, ಕನ್ನಡಿಗರ ಅಸ್ಮಿತೆಯ ಟೀ ಶರ್ಟುಗಳ ಜೊತೆ ಕನ್ನಡ ಸಿನೆಮಾಗಳ ಡೈಲಾಗುಗಳು, ಪ್ರಸಿದ್ದ ಸಾಹಿತ್ಯದ ಸಾಲುಗಳು, ಪಂಚ್ ಲೈನುಗಳು, ಸ್ಲೋಗನ್ ಗಳು, ಕೂಲ್ ಐಟಂಗಳು, ಚಿತ್ರಗಳು ಮುಂತಾದವುಗಳನ್ನು ಹೊಂದಿರುವ ಟಿ-ಶರ್ಟುಗಳು ದೊರೆಯುತ್ತಿವೆ.

ಈ ಕೆಳಗಿನ ತಾಣಗಳಲ್ಲಿ ಇಂತಹ ಹಲವಾರು ವಿನ್ಯಾಸಗಳ ಟಿ-ಶರ್ಟುಗಳು ಆನ್ ಲೈನ್ ಖರೀದಿಗಿವೆ. ನೋಡಿ , ಇಷ್ಟವಾದವುಗಳನ್ನು ಕೊಳ್ಳಿ. ಈ ರಾಜ್ಯೋತ್ಸವಕ್ಕೆ ಒಂದು ಟಿ-ಶರ್ಟ್ ನಿಮ್ಮ ಕೈಸೇರಲಿ. ಕನ್ನಡ ಟಿ-ಶರ್ಟ್ ಮಾರುಕಟ್ಟೆ ಬೆಳೆಯಲಿ. ಕರ್ನಾಟಕದ ಯುವಕಯುವತಿಯರ ಟ್ರೆಂಡ್ ಆಗಲಿ.

ಬುಧವಾರ, ಅಕ್ಟೋಬರ್ 18, 2017

ಕನ್ನಡದಲ್ಲಿ 'ನ್ಯಾವಿಗೇಶನ್' ಹಾಗೂ 'ದನಿಯಿಂದ ಪಠ್ಯ' ತಂತ್ರಾಂಶಗಳು

ಮಾಹಿತಿ ತಂತ್ರಜ್ಞಾನ ದಿನದಿನಕ್ಕೂ ಹೊಸಹೊಸದನ್ನು ಹೊತ್ತು ತರುತ್ತಿರುವ ಕಾಲ ಇದು. ಕಂಪ್ಯೂಟರ್, ಅಂತರ್ಜಾಲ, ಸ್ಮಾರ್ಟ್ ಫೋನುಗಳು, Appಗಳು ಹೀಗೆ ಕಾಲಕಾಲಕ್ಕೆ ಗ್ಯಾಜೆಟ್ ಹಾಗೂ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಲೇ ಹೋಗುತ್ತಿದೆ. ಭಾಷೆಯ ಬಳಕೆ, ಬೆಳವಣಿಗೆಗೆ ಅದನ್ನು ಮಾಹಿತಿತಂತ್ರಜ್ಞಾನದಲ್ಲಿ ಅಳವಡಿಸುವುದೂ ಬಹಳ ಮುಖ್ಯವಾಗಿದೆ. ಹಾಗಾಗಿ ಈ ಹಿನ್ನೆಲೆಯಲ್ಲಿ ಇದರಲ್ಲಿ ಕನ್ನಡ ಭಾಷೆ ಅಳವಡಿಕೆಯಲ್ಲಾದ ಇತ್ತೀಚಿನ ಎರಡು ಬಹುಮುಖ್ಯ ಮೈಲಿಗಲ್ಲು ಎನ್ನಬಹುದಾದಂತಹ ಪ್ರಗತಿಯ ವಿಷಯಗಳನ್ನು ದಾಖಲಿಸಬೇಕಿದೆ.

೧. ಲಿಪಿಕಾರ್: ಇದೊಂದು ಧ್ವನಿಯಿಂದ ಪಠ್ಯ ಪರಿವರ್ತನಾ (speech to text) ತಂತ್ರಾಂಶ. ಅಂದರೆ ನಾವು ಮಾತಾಡಿದ್ದನ್ನು ಗ್ರಹಿಸಿ ಅದನ್ನು ಪಠ್ಯ ರೂಪಕ್ಕೆ ಪರಿವರ್ತಿಸಿ ಕೊಡುವುದು ಇದರ ಕೆಲಸ. ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಿಗಾಗಿ 2017ಜುಲೈಯಲ್ಲಿ ಬಿಡುಗಡೆಯಾಯ್ತು. ಆಂಡ್ರಾಯ್ಡ್ ಫೋನುಗಳಲ್ಲಿ ಈ ಕೀಬೋರ್ಡನ್ನು ಸಕ್ರಿಯಗೊಳಿಸಿಕೊಂಡು ಇದರಲ್ಲಿರುವ ಮೈಕ್ ಬಟನ್ ಆನ್ ಮಾಡಿಕೊಂಡು ನಮಗೆ ಏನು ಬರೆಯಬೇಕಿರುತ್ತದೋ ಅದನ್ನು ಮಾತಾಡಿದರೆ ಅಕ್ಷರ ರೂಪದಲ್ಲಿ ಟೈಪ್ ಮಾಡಿ ತೆರೆಯಮೇಲೆ ತೋರಿಸುತ್ತದೆ. ಇಂಗ್ಲೀಷ್ ಮುಂತಾದ ಭಾಷೆಗಳಿಗೆ ಈ ಸ್ಪೀಚ್ ಟು ಟೆಕ್ಸ್ಟ್ ತಂತ್ರಾಂಶಗಳು ಮೊದಲೇ ತಯಾರಾಗಿವೆ. ಆದರೆ ಕನ್ನಡಕ್ಕೆ ಇಷ್ಟು ನಿಖರತೆಯಿಂದ ಕೆಲಸ ಮಾಡುವ ತಂತ್ರಾಂಶ ಇದೇ ಮೊದಲು ಅಂತ ಹೇಳಬಹುದು. ಸ್ಪಷ್ಟವಾಗಿ ಮಾತಾಡಿದರೆ ಮತ್ತು ಪುಸ್ತಕರೂಪದ ಭಾಷೆಯಲ್ಲಿ ಮಾತಾಡಿದರಂತೂ ಇದರ ನಿಖರತೆ ಶೇ. ೯೫ ಕ್ಕೂ ಹೆಚ್ಚಿರುವುದು ಇದರ ವಿಶೇಷ. ಆ ಆಪ್ ಇಲ್ಲಿದೆLipikaar Kannada Keyboard.

೨. ವೇಜ್: ಜಿಪಿಎಸ್ ಆಧರಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಕಾಶೆಯಲ್ಲಿ ದಾರಿ ತೋರುವ ತಂತ್ರಾಂಶ ಇದು. ಇದು ಕೂಡ ಆಂಡ್ರಾಯ್ಡ್ ಫೋನುಗಳಿಗಾಗಿ ಇರುವ ಕಿರುತಂತ್ರಾಂಶವಾಗಿದ್ದು ನ್ಯಾವಿಗೇಶನ್ App ಎನ್ನುತ್ತಾರೆ. ಗೂಗಲ್ ಮ್ಯಾಪ್ ಹೆಚ್ಚಾಗಿ ಜನರಿಗೆ ಪರಿಚಿತ. ಈ ವೇಜ್ ಕೂಡ ಅದರಂತೆಯೇ ಕಾರ್ಯನಿರ್ವಹಿಸುವ ತಂತ್ರಾಂಶ.  2017ಜುಲೈಯಲ್ಲಿ ಇದರ ಕನ್ನಡ ಆವೃತ್ತಿ ಬಿಡುಗಡೆಯಾಯಿತು. ಇದರೊಂದಿಗೆ ಕನ್ನಡವು ನ್ಯಾವಿಗೇಶನ್ ತಂತ್ರಜ್ಞಾನಕ್ಕೂ ಕೂಡ ಯಶಸ್ವಿಯಾಗಿ ಅಳವಡಿಕೆಯಾಗಬಹುದೆಂಬುದು ಕೂಡ ಸಿದ್ಧಪಡಿಸಲ್ಪಟ್ಟಿತು. ದಾರಿ ಮತ್ತು ದೂರ ಮಾಹಿತಿ, ರಸ್ತೆಯಲ್ಲಿ ಚಲಿಸುವಾಗ ಎಲ್ಲಿ ತಿರುಗಬೇಕು, ಎಷ್ಟು ದೂರ ಹೋಗಬೇಕು ಮುಂತಾದ ಸೂಚನೆಗಳನ್ನು ಕನ್ನಡದ ಪಠ್ಯ ಮತ್ತು ದನಿಯಲ್ಲೇ ಪಡೆಯುತ್ತಾ ನ್ಯಾವಿಗೇಶನ್ ಮಾಡಲು ಇದರಲ್ಲಿ ಸಾಧ್ಯ. ಈ ತಂತ್ರಾಂಶವು ಜಗತ್ತಿನ ಹಲವಾರು ಭಾಷೆಗಳಲ್ಲಿದೆ. ಹೀಗೆ ವಿವಿಧ ಭಾಷೆಗಳಲ್ಲಿ ತಯಾರಾಗಲು ಅವರು Translifex ವೇದಿಕೆ ಮೂಲಕ ಕ್ರೌಡ್ ಸೋರ್ಸಿಂಗ್ ಮಾಡಿದ್ದಾರೆ. ಅಂದರೆ ಆಯಾ ಭಾಷೆಯ ಬಳಕೆದಾರರು ತಮ್ಮ ಭಾಷೆಯ ಆವೃತ್ತಿಗಳನ್ನು ತರಲು ಅನುವಾದಗಳ ಕೊಡುಗೆ ಮಾಡಬಹುದು, ಉತ್ತಮಗೊಳಿಸಬಹುದು. ಕನ್ನಡದ ಉತ್ಸಾಹಿ ಗೆಳೆಯರ ಸತತ ಪರಿಶ್ರಮದಿಂದ ಇದರ ಕನ್ನಡ ಆವೃತ್ತಿ ತಯಾರಾಗಿದೆ. ಅದು ಇಲ್ಲಿದೆ: Waze - Maps & Navigation


ಇದಾದ ಒಂದು ತಿಂಗಳ ನಂತರ, ಸೆಪ್ಟೆಂಬರಲ್ಲಿ ಗೂಗಲ್ ಮ್ಯಾಪ್ ನ್ಯಾವಿಗೇಶನ್ ಕೂಡ ಕನ್ನಡದಲ್ಲಿ ಸಾಧ್ಯವಾಗಿದೆ. ತಮ್ಮ ಫೋನ್ ಭಾಷೆಯನ್ನು ಕನ್ನಡವನ್ನಾಗಿ ಮಾಡಿಕೊಂಡವರಿಗೆ ನ್ಯಾವಿಗೇಶನ್ ಕೂಡ ಕನ್ನಡದಲ್ಲಿಯೇ ದೊರೆಯುತ್ತಿದೆ. ಗೂಗಲ್ ಕೂಡ ತನ್ನ ಅನೇಕ ಸೇವೆಗಳನ್ನು ಕ್ರೌಡ್ ಸೋರ್ಸ್ ಮಾಡಿರುವುದು ಮತ್ತು ಅದರಿಂದಲೇ ವಿವಿಧ ಭಾಷೆಗಳ ಆವೃತ್ತಿಗಳು ತಯಾರಾಗಿಬರುತ್ತಿರುವುದು ಇಲ್ಲಿ ಗಮನಾರ್ಹ.

ಮತ್ತೊಂದೆರಡು ಬೆಳವಣಿಗೆಗಳೆಂದರೆ,
  • ೨೦೧೭ಆಗಸ್ಟ್ ತಿಂಗಳಲ್ಲಿ ಗೂಗಲ್ 'ದನಿ ಹುಡುಕಾಟ'ವು (Google Voice Search) ಕನ್ನಡದಲ್ಲೂ ಸಾಧ್ಯವಾಗಿದೆ
  • ೨೦೧೭ಸೆಪ್ಟೆಂಬರಲ್ಲಿ ಬಿಡುಗಡೆಯಾದ ಐ ಓಸ್ ೧೧ ಆವೃತ್ತಿಯಲ್ಲಿ ಇನ್ ಬಿಲ್ಟ್ ಕನ್ನಡ ಕೀಬೋರ್ಡ್ ಒದಗಿಸಲಾಗಿದೆ. ಇದರಿಂದ ಐ ಫೋನ್ ಮತ್ತು ಐಪ್ಯಾಡ್ ಗಳಲ್ಲಿ ಯಾವ ಹೊರತಂತ್ರಾಂಶದ ಅಗತ್ಯವಿಲ್ಲದೇ ಕನ್ನಡ ಟೈಪಿಂಗ್ ಸಾಧ್ಯ.

ಇದರಿಂದ  ತಿಳಿಯುವುದೇನೆಂದರೆ, ಭಾಷೆಯ ಬಳಕೆ ಹೆಚ್ಚಿದಷ್ಟೂ ಬೆಳವಣಿಗೆಯೂ ಸಾಧ್ಯ. ಹಾಗಾಗಿ ಆಸಕ್ತಿಯಿರುವವರು  ಕನ್ನಡಕ್ಕಾಗಿ ಈ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. (ಇಲ್ಲಿ ನೋಡಿ: ಕನ್ನಡ ಅನುವಾದಗಳ ಕ್ರೌಡ್ ಸೋರ್ಸಿಂಗ್)ಆಗದಿದ್ದವರು ಕೊನೇಪಕ್ಷ ತಾವು ಬಳಸುವ ಜಾಲತಾಣ, ಆಪ್ ಮುಂತಾದ ತಂತ್ರಜ್ಞಾನಗಳಲ್ಲಿ ಭಾಷೆಯನ್ನು ಕನ್ನಡಕ್ಕೆ ಮಾಡಿಕೊಂಡು ಬಳಸುವುದರ ಮೂಲಕ ಬಳಕೆದಾರರ ಸಂಖ್ಯೆ ಹೆಚ್ಚಿಸಿ ಬೆಳವಣಿಗೆಗೆ ಕಾರಣರಾಗಬಹುದು. 

ಶನಿವಾರ, ಏಪ್ರಿಲ್ 29, 2017

ಮರೀನಾ ಬೇ ಸ್ಯಾಂಡ್ಸ್ ಸ್ಕೈಪಾರ್ಕ್ - ಬಾನೆತ್ತರದಿಂದ ಸಿಂಗಾಪುರ ನೋಟ



ಅದು ಭ್ರಾಮಕತೆಯನ್ನು ಮೀರಿಸುವ ವಾಸ್ತವ ಜಗತ್ತು. ನಕಾಶೆಯ ಗೆರೆಗಳಂತೆ ಕಾಣುವ ರಸ್ತೆಗಳು, ಆಟಿಕೆಗಳಂತೆ ಕಾಣುವ ವಾಹನಗಳು, ಒಂದು ಬದಿಯಲ್ಲಿ ದಿಗಂತದವರೆಗೆ ವ್ಯಾಪಿಸಿದ ವಿಶಾಲ ಕಡಲು, ತೇಲುತ್ತಿರುವ ಹಾಯಿದೋಣಿಗಳು, ದೂರದಲ್ಲಿ ಲಂಗರು ಹಾಕಿರುವ ಹಡಗುಗಳು, ಮತ್ತೊಂದು ಕಡೆ ಒಂದಕ್ಕೊಂದು ಹೆಗಲು ಕೊಟ್ಟು ನಿಂತಿರುವ ರಟ್ಟಿಗೆ ಪೆಟ್ಟಿಗೆಗಳಂತೆ ತೋರುವ ಮುಗಿಲೆತ್ತರದ ಕಟ್ಟಡಗಳು, ಹಸಿರೇ ಮೈದಳೆದಂತ ಉದ್ಯಾನವನ, ಸರೋವರ, ಕಾರಂಜಿಗಳು, ಮುಗಿಯುವುದೇ ಇಲ್ಲವೇನೋ ಎಂಬಂತೆ ಕಾಣುವ ದೂರಕ್ಕೆ ಹಬ್ಬಿದ ವಿಸ್ಮಯ ನಗರಿಯ ಬಣ್ಣದ ಬೆಳಕುಗಳು ನಮ್ಮನ್ನು ಮೋಹಕಗೊಳಿಸಿ ಮನಸನ್ನು ಸೆಳೆದು ಹಿಡಿದಿಟ್ಟುಬಿಡುತ್ತವೆ.

ಸಿಂಗಾಪುರದಲ್ಲಿನ ವೈಭವೋಪೇತ ೫೫ ಮಹಡಿಗಳ ಈ ಕಟ್ಟಡವೇ ಮರೀನಾ ಬೇ ಸ್ಯಾಂಡ್ಸ್ ಎನ್ನುವ ಹೊಟೆಲ್. ದೂರದಿಂದ ನೋಡಿದರೆ ಕ್ರಿಕೆಟ್ಟಿನ ಮೂರು ವಿಕೆಟ್ ಗಳನ್ನು ಒಂದರ ಪಕ್ಕದಲ್ಲೊಂದು ಹುಗಿದಿಟ್ಟಂತೆ ಕಾಣುವ ಇದು ಹತ್ತಿರ ಹೋಗುತ್ತಿದ್ದಂತೆಯೇ ಜಗಮಗಿಸುವ ಗಾಜಿನ ಸುಂದರ ಕಟ್ಟಡವಾಗಿ ಗೋಚರಿಸುತ್ತದೆ. ಇದರ ಟೆರೇಸಿನಲ್ಲಿರುವುದು ಮರೀನಾ ಬೇ ಸ್ಯಾಂಡ್ಸ್ ಸ್ಕೈ ಪಾರ್ಕ್. ನೂರಾರು ಜನರು ನಿಂತು ವೀಕ್ಷಿಸಲು ಸಾಕಾಗುವಷ್ಟು ವಿಶಾಲವಾಗಿದೆ. ನೆಲಮಹಡಿಯಿಂದ ಕೆಲವೇ ಸೆಕೆಂಡುಗಳಲ್ಲಿ ಲಿಫ್ಟ್ ಮೂಲಕ ಈ ಸ್ಕೈಪಾರ್ಕ್ ತಲುಪಿದರೆ ತೇಲಿಸಿ ಕರೆದೊಯ್ಯುವಂತಹ ಗಾಳಿಯೊಂದಿಗೆ ಆಗಸದಲ್ಲಿ ಇದ್ದ ಅನುಭವ. ನಾವು ಅಲ್ಲಿ ತಲುಪಿದಾಗ ಸಂಜೆಯಾಗಿತ್ತು. ಇನ್ನೂ ಸೂರ್ಯ ಪೂರ್ತಿ ಮುಳುಗಿರಲಿಲ್ಲ. ಈ ತೆರೆದ ಟೆರೇಸ್ ಅಷ್ಟು ಎತ್ತರದಲ್ಲಿದ್ದರೂ ಭಯವಾಗದಂತೆ ಸುರಕ್ಷಿತವಾಗಿತ್ತು.

ಬಾನೆತ್ತರದ ಟೆರೇಸ್ ಪಾರ್ಕಿನಲ್ಲಿ ನಾವು ತಿರುಗಾಡುತ್ತಾ ಸ್ವಲ್ಪ ಸಮಯ ಕಳೆಯುತ್ತಿದ್ದಂತೇ ದೂರದಲ್ಲಿ ವಿಮಾನಗಳ ಸದ್ದು ಕೇಳಿಸಿತು. ಯುದ್ಧವಿಮಾನಗಳಂತಹ ವಿಮಾನಗಳು ಶರವೇಗದಲ್ಲಿ ನಾವಿದ್ದ ಟೇರೇಸಿನ ಮೇಲೆ ಹತ್ತಿರದಲ್ಲೇ ಹಾದುಹೋದವು. ಅದರ ಹಿಂದೆ ಮತ್ತೊಂದಿಷ್ಟು ವಿಮಾನಗಳು ಸಾಲಾಗಿ, ವಿವಿಧ ಆಕಾರಗಳಲ್ಲಿ ಒಂದು ಮಿನಿ ಏರ್ ಶೋ ನಡೆಸಿದವು. ಆನಂತರ ಹೆಲಿಕಾಪ್ಟರುಗಳು ಸಿಂಗಾಪುರದ ಬಾವುಟವನ್ನು ಪ್ರದರ್ಶಿಸುತ್ತಾ ನಿಧಾನಕ್ಕೆ ಹಾರಿದವು. ಪ್ರವಾಸೋದ್ಯಮವೇ ಮುಖ್ಯವಾಗಿರುವ ಸಿಂಗಾಪುರದಲ್ಲಿ ಪ್ರವಾಸಿಗರಿಗೋಸ್ಕರ ಇಂತಹ ಪ್ರದರ್ಶನಗಳಿರುತ್ತವೆಯಂತೆ. ನಿಧಾನಕ್ಕೆ ಕತ್ತಲಾಗುತ್ತಿದ್ದಂತೆ ಸುತ್ತಲಿನ ಕಟ್ಟಡಗಳ ದೀಪಗಳೆಲ್ಲಾ ಹತ್ತಿಕೊಳ್ಳುತ್ತಿದ್ದವು. ನೋಡನೋಡುತ್ತಲೇ ಅರ್ಧಗಂಟೆಯಲ್ಲಿ ಸುತ್ತಲಿನ ಜಗತ್ತು ಬಿಳಿ, ಕೆಂಪು, ನೀಲಿ, ಹಸಿರು ಬಣ್ಣದ ಕೋರೈಸುವ ದೀಪಗಳಿಂದ ತುಂಬಿತು. ದೂರದ ಯಾವುದೋ ಕಟ್ಟಡದಿಂದ ಸುತ್ತಲೂ ತಿರುಗುತ್ತಿರುವ ಲೇಸರ್ ಕಿರಣಗಳು, ಅಲ್ಲೇ ಅನತಿ ದೂರದಲ್ಲಿ ಸುತ್ತುತ್ತಿರುವ ದೈತ್ಯಾಕಾರದ ಜೈಂಟ್ ವ್ಹೀಲ್, ಸರೋವರಲ್ಲೆಲ್ಲಾ ಚಿಮ್ಮುತ್ತಿರುವ ಬಣ್ಣದ ಕಾರಂಜಿಗಳು, ಜಾಹೀರಾತು ಫಲಕಗಳು ಮುಂತಾದ ಬೆಳಕುಗಳಿಂದ ಇಡೀ ನಗರಿ ದೀಪಗಳ ಜಗತ್ತಾಗಿ ಪರಿವರ್ತನೆಗೊಂಡಿತ್ತು.

ಈ ಹೋಟೆಲ್ ಕಟ್ಟಡ ಇರುವ ಗಾರ್ಡನ್ಸ್ ಬೈ ದ ಬೇ ಎನ್ನುವ ಪ್ರದೇಶವೇ ಒಂದು ಸುಂದರ ಉದ್ಯಾನವನ. ನೂರಾರು ಎಕರೆ ಪ್ರದೇಶದ ಈ ಉದ್ಯಾನವನ ಸಮುದ್ರವನ್ನು ಹಿಂದಕ್ಕೆ ತಳ್ಳಿ ನಿರ್ಮಿಸಿದ್ದಂತೆ. ಸಮುದ್ರವನ್ನು ಸ್ವಲ್ಪ ಭಾಗ ಒಳತಂದಿರುವ ಕೊಲ್ಲಿಯ ಪಕ್ಕದಲ್ಲೇ ಹರಡಿಕೊಂಡಿದೆ. ಪೂರ್ತಿ ಕತ್ತಲಾವರಿಸುತ್ತಿದ್ದಂತೆ ಇತ್ತಕಡೆ ಉದ್ಯಾನವನವೂ ಕೂಡ ಹೊಳೆಯುತ್ತಿತ್ತು. ಅದು ಕಣ್ಣಿಗೆ ಹಬ್ಬ. ಈ ಮಾನವ ನಿರ್ಮಿತ ಸೌಂದರ್ಯ ಲೋಕ ಪ್ರಕೃತಿ ಮತ್ತು ಆಧುನಿಕ ತಂತ್ರಜ್ನಾನಗಳ ಸಮ್ಮಿಳನ. ಪ್ರಕೃತಿ ಸೌಂದರ್ಯ ಒಂದು ಬಗೆಯದ್ದಾದರೆ ಈ ಮಾನವ ನಿರ್ಮಿತ ಸೌಂದರ್ಯ ಮತ್ತೊಂದು ಬಗೆ. ಕ್ಲೌಡ್ ಫಾರೆಸ್ಟ್ ಮತ್ತು ಫ್ಲವರ್ ಡೂಮ್ ಎಂದು ಕರೆಯಲ್ಪಡುವ ಎರಡು ದೊಡ್ಡ ಗಾಜಿನ ಗುಮ್ಮಟದಂತಹ ರಚನೆಗಳಲ್ಲಿ ಜಗತ್ತಿನ ವಿವಿಧ ಪ್ರದೇಶಗಳ ಸಸ್ಯರಾಶಿಗಳನ್ನು ಬೆಳೆಸಿಡಲಾಗಿದೆ. ಕೃತಕ ಜಲಪಾತದ ಜೊತೆ ಮಳೆಕಾಡುಗಳ ವಾತಾವರಣ ಸೃಷ್ಟಿಸಿಡಲಾಗಿದೆ. ಉದ್ಯಾನವನದಲ್ಲಿ ಸೂಪರ್ ಟ್ರೀಗಳೆಂದು ಕರೆಯಲ್ಪಡುವ ದೈತ್ಯಾಕಾರದ ಮರಗಳಂತಹ ಎತ್ತರ ರಚನೆಗಳು ವಿವಿಧ ಬಣ್ಣಗಳಿಂದ ಹೊಳೆಯುವುದನ್ನು ಮೇಲಿನಿಂದ ಆಸ್ವಾದಿಸಿದೆವು. ವಾತಾವರಣವೂ ಹಿತಕರವಾಗಿತ್ತು. ರಾತ್ರಿಯಾಗುವವರೆಗೂ ಅಲ್ಲೇ ಇದ್ದು ಒಲ್ಲದಮನಸ್ಸಿಂದ ಕೆಳಗೆ ಇಳಿದುಬಂದೆವು. ನಂತರ ಮುಂಭಾಗದ ಸರೋವರದ ನೀರಿನ ಮೇಲೆ ನಡೆಯುವ ಸೌಂಡ್ ಎಂಡ್ ಲೈಟ್ ಶೋ ನೋಡಿ ಊಟ ಮುಗಿಸಿ ತಿರುಗಾಡಿ ಮನೆಗೆ ಹೊರಟಾಗ ತಡರಾತ್ರಿಯಾಗಿದ್ದರೂ ಸಹ ಸಿಂಗಾಪುರದ ರಸ್ತೆಗಳಲ್ಲಿ ಜನರೇನೂ ಕಡಿಮೆಯಾಗಿರಲಿಲ್ಲ.

ಇಡೀ ಸಿಂಗಾಪುರವೇ ಪ್ರವಾಸೋದ್ಯಮದ ದೇಶ. ಭೇಟಿನೀಡುವಂತಹ ಹಲವಾರು ಆಕರ್ಷಣೆಗಳು, ಸ್ಥಳಗಳು ಇವೆ. ಝೂ, ರಿವರ್ ಸಫಾರಿ, ನೈಟ್ ಸಫಾರಿ, ಬರ್ಡ್ ಪಾರ್ಕ್, ಮ್ಯೂಸಿಯಂಗಳು, ಚೀನೀ ಟೆಂಪಲ್ ಗಳು, ಸೆಂಟೋಸಾ ದ್ವೀಪದ ಯುನಿವರ್ಸಲ್ ಸ್ಟೂಡಿಯೋ, ಅಂಡರ್ ವಾಟರ್ ವರ್ಲ್ಡ್, ಕೆಸಿನೋ ಹೀಗೆ ನೂರಾರು ಜಾಗಗಳಿವೆ. ಸಿಂಗಾಪುರದ ವಾಣಿಜ್ಯ ಪ್ರದೇಶಗಳು ದಿನದ ೨೪ಗಂಟೆ ತೆರೆದಿರುತ್ತದೆ. ಶಾಪಿಂಗ್ ಸೆಂಟರುಗಳು, ಮಾಲ್ ಗಳು ಸುತ್ತಾಡಿದಷ್ಟೂ ಮುಗಿಯುವುದಿಲ್ಲ. ಓಡಾಟಕ್ಕೆ ಮೆಟ್ರೋ ರೈಲು, ಸಿಟಿ ಬಸ್ಸುಗಳು, ಟ್ಯಾಕ್ಸಿಗಳು ಇವೆ. ಲಿಟಲ್ ಇಂಡಿಯಾ ಎಂಬ ಪ್ರದೇಶದಲ್ಲಿ ಭಾರತೀಯ ಆಹಾರದ ಹೋಟೆಲುಗಳು, ಅಂಗಡಿಗಳು ತುಂಬಿವೆ. ಲಕ್ಷಾಂತರ ಪ್ರವಾಸಿಗರು ಭೇಟಿಕೊಡುವ ಈ ದೇಶದಲ್ಲಿ ಪ್ರತಿಯೊಂದು ತಾಣಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿಟ್ಟಿರುವುದು ಸಂತೋಷವುಂಟುಮಾಡುತ್ತದೆ.

ಹೋಗುವುದು ಹೇಗೆ?
ಬೆಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನಗಳಿವೆ. ಮೂರ್ನಾಲ್ಕು ತಾಸಿನ ಪ್ರಯಾಣವಷ್ಟೆ.


‘ಪತ್ರಿಕೆಗೆ ಬರೆಯೋದು ಹೇಗೆ?’ - ಪುಸ್ತಕ ಪರಿಚಯ


ಬರೆವಣಿಗೆ ಒಂದು ಕಲೆ. ಹಲವರಿಗೆ ಆ‌ ಕಲೆ ಇರುತ್ತದೆ. ಇಲ್ಲೇ ಫೇಸ್ಬುಕ್ಕಲ್ಲೇ ನೋಡಿರಬಹುದು, ಎಷ್ಟೊಂದು ಜನ ಚೆನ್ನಾಗಿ ಬರೆಯುವವರಿರುತ್ತಾರೆ. ಆದರೆ ಅವರಲ್ಲಿ ಹಲವರು ತಮ್ಮ ಪ್ರತಿಭೆಯನ್ನು ಫೇಸ್ಬುಕ್ಕಿಗೇ ಸೀಮಿತಮಾಡಿಕೊಂಡುಬಿಟ್ಟಿರುತ್ತಾರೆ. ಬರೆದು ನಾವೇ ಇಟ್ಟುಕೊಳ್ಳುವುದಕ್ಕಿಂತ ಪತ್ರಿಕೆ/ಮ್ಯಾಗಜೀನುಗಳಲ್ಲಿ‌ ಪ್ರಕಟಿಸಿದರೆ ಅದು ಸಾವಿರಾರು ಜನರನ್ನು ತಲುಪುತ್ತದೆ. ಆದರೆ ಪ್ರಕಟಣೆಗೆ ಸ್ವೀಕಾರವಾಗಲು ವಿಷಯದ ಆಯ್ಕೆಯಿಂದ ಹಿಡಿದು‌‌ ಪದಮಿತಿಯಲ್ಲಿ ಅದರ‌‌ ಪ್ರಸ್ತುತಪಡಿಸುವಿಕೆ ಬಹಳ ಮುಖ್ಯ. ಎಷ್ಟೋ ಬರಹಗಾರರು‌ ಈ ಹಂತದಲ್ಲಿ ಎಡವಬಹುದು. ಆಸಕ್ತ ಹೊಸಬರು ಒಂದು ಲೇಖನ ಹೇಗೆ ಬರೆಯುವುದು ಎಂಬ ಗೊಂದಲಕ್ಕೆ ಬೀಳಬಹುದು. ನಿಮ್ಮಲ್ಲೂ ಅನೇಕರು ಇದನ್ನು ಅನುಭವಿಸಿರಬಹುದು. ನೀವು ಬರೆದು‌ ಕಳಿಸಿದ್ದು ಪ್ರಕಟಣೆಗೆ ಸ್ವೀಕಾರವಾಗದೇ ಇದ್ದಿರಬಹುದು.‌ ಪತ್ರಿಕೆಗಳಲ್ಲಿ ಕೆಲಸ ಮಾಡುವವರ ಅನುಭವದ ಪ್ರಕಾರ ಪ್ರಕಟಣೆಗೆ ಬರುವ ಲೇಖನಗಳಲ್ಲಿ ಹಲವಾರು ಇಂತಹ ಕಾರಣಕ್ಕೇ ತಿರಸ್ಕೃತವಾಗುತ್ತವೆ. ಬರೆವಣಿಗೆ ಎಂಬುದು ಯಾರೂ ಕಲಿಸಲಾಗದ ಪ್ರತಿಭೆಯಾದರೂ ಕೂಡ ಅದರ ಕ್ರಮವನ್ನು ತಿಳಿದುಕೊಂಡಿದ್ದರೆ ಒಳ್ಳೆಯದು.


‘ಪತ್ರಿಕೆಗೆ ಬರೆಯೋದು ಹೇಗೆ?’ ಎಂಬ‌ ಈ ಪುಸ್ತಕದಲ್ಲಿ ಇಂತಹ ವಿಷಯಗಳನ್ನು ಬಹಳ ಚೆನ್ನಾಗಿ ತಿಳಿಸಿಕೊಡಲಾಗಿದೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅಂಕಣ, ಲೇಖನಗಳನ್ನು ಬರೆಯುತ್ತಿರುವ ಯುವಬರಹಗಾರರು ಮತ್ತು ನಾಡಿನ ಪತ್ರಿಕೆಗಳ ಪುರವಣಿಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರೇ ಇಲ್ಲಿ ಮಾರ್ಗದರ್ಶೀ ಲೇಖನಗಳನ್ನು ಬರೆದಿರುವುದು ಇದರ ವಿಶೇಷ‌. ಮಿಥಿಲಾ ಪ್ರಕಾಶನದ ಈ ಪುಸ್ತಕವನ್ನು ಒಮ್ಮೆ ಸಾದ್ಯಂತವಾಗಿ ಓದಿ ಆನಂತರ ಬರೆಯಲು ಕುಳಿತರೆ ಆ ವ್ಯತ್ಯಾಸವನ್ನು ಸ್ವತಃ ಅನುಭವಿಸಬಹುದು. ವಿದ್ಯಾರ್ಥಿಗಳಿಗೆ, ಫ್ರೀಲ್ಯಾನ್ಸ್ ಲೇಖಕರಾಗಬಯಸುವವರಿಗೆ ಇದು ಒಳ್ಳೆಯ ಕೈಪಿಡಿ. ಸಂಗ್ರಹಯೋಗ್ಯ ಪುಸ್ತಕ.